Tuesday, 8 November 2016

'ಅರ್ಥಕ್ರಾಂತಿ' ಇದು ವಿಶ್ವಗುರು ಭಾರತದ ಹೊಸ ಕ್ರಾಂತಿ



ಸ್ವಾತಂತ್ರ್ಯದ ನಂತರದಿಂದ ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಕುಸಿತ ಕಾಣದ ಉದಾಹರಣೆಯೇ ಇಲ್ಲ, ಕಾಂಗ್ರೆಸ್ಸೇತರ ಸರ್ಕಾರಗಳಲ್ಲಿ ದೇಶದ ಆರ್ಥಿಕ ಸ್ಥಿತಿ ತೀರಾ ಹದಗೆಡಲಿಲ್ಲವೆಂಬುದನ್ನು ಹೊರತುಪಡಿಸಿದರೆ ಭಾರತದ ಆರ್ಥಿಕ ಸ್ಥಿತಿ-ಗತಿಗಳೂ ಸಹ ತೀರಾ ಹೇಳಿಕೊಳ್ಳುವ ಸ್ಥಿಯಲ್ಲಂತೂ ಇಲ್ಲವೇ ಇಲ್ಲ.

ಅಂದು ಗ್ರಾಮ ರಾಜ್ಯದ ಕನಸು ಕಂಡಿದ್ದ ಗುರುವಿಗೇ ತಿರುಮಂತ್ರ ಹಾಕಿದ ಭಾರತದ ಪ್ರಥಮ ಪ್ರಧಾನಿ  ನೆಹರುರವರ ರಷ್ಯನ್ ಸೊಷಿಯಲಿಸ್ಟ್ ಸಿದ್ಧಾಂತದ ಹೊಡೆತಕ್ಕೆ ಸಿಲುಕಿದರ ಪರಿಣಾಮ ಇಂದು ಭಾರತದ ಅರ್ಥ ವ್ಯವಸ್ಥೆಯೇ ’ಅನ’ರ್ಥವಾಗಿಬಿಟ್ಟಿದೆ. ಕೊನೆಗೆ ರೂಪಾಯಿ ಮೌಲ್ಯ, ರಾಜಕಾರಣಿಗಳ ಅದರಲ್ಲೂ ಪ್ರಮುಖವಾಗಿ ದೇಶದ ವಿತ್ತ ಸಚಿವರ ಕುಟುಂಬ ನಡೆಸುತ್ತಿರುವ ಉದ್ಯಮಕ್ಕೆ ಅನುಕೂಲಕರವಾಗಿ ಪರಿವರ್ತನೆಗೊಳ್ಳುವ ಸ್ಥಿತಿಗೆ  ಬಂದು ನಿಂತಿದೆ ಎಂದರೆ ನಮ್ಮ ದೇಶದ ಅರ್ಥ ವ್ಯವಸ್ಥೆ ಯಾವ ಮಟ್ಟಕ್ಕೆ ತಲುಪಿದೆ ಎಂಬುದು ಸ್ಫಷ್ಟವಾಗುತ್ತದೆ.

ಸುಮ್ಮನೆ ಯಾರನ್ನಾದರೂ ಭಾರತದ ಆರ್ಥಿಕತೆ ಬಗ್ಗೆ ಮಾತಿಗೆಳೆದು ನೋಡಿ... ಅರ್ಥವ್ಯವಸ್ಥೆಗೆ ಮೂಲಭೂತ ಕಂಟಕಗಳಾಗಿರುವ ’ಕಪ್ಪು ಹಣ’, ’ದಾವೂದ್ ಇಬ್ರಾಹಿಂ’ ರಂತಹ ಹಫ್ತಾ ವಸೂಲಿ, ಹೆಚ್ಚಿನ ತೆರಿಗೆ ವಿಧಿಸುವುದು ಇತ್ಯಾದಿಗಳ ಬಗ್ಗೆ ಧಾರಾಳ ಆಕ್ರೋಶ ವ್ಯಕ್ತವಾಗುತ್ತದೆ. ಒಂದಷ್ಟು ಟೀಕೆ ಟಿಪ್ಪಣಿಗಳು ಬಂದು ಹೋಗುತ್ತವೆ. ಇಲ್ಲವೇ ಈ ದೇಶದ ಹಣೆಬರಹವೇ ಇಷ್ಟು ಎನ್ನುತ್ತಾ ಹತಾಶ ಭಾವನೆಯಿಂದ ಕೈಚೆಲ್ಲಿ ಕುಳಿತುಬಿಡುತ್ತಾರೆ. ಭಾರತದ ಮಟ್ಟಿಗೆ ಇದೆಲ್ಲವೂ ಪ್ರತಿಯೊಬ್ಬ ಪ್ರಜೆಯ ಜನ್ಮಸಿದ್ಧ ಹಕ್ಕು ಎಂಬಂತಾಗಿಬಿಟ್ಟಿದೆ.

ಅದೃಷ್ಟವಶಾತ್, 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೇಶವಾಸಿಗಳಿಗೆ, ಭಾರತದ ಭವಿಷ್ಯದ ಬಗ್ಗೆ ಹೊಸದೊಂದು ಭರವಸೆ ಮೂಡುತ್ತಿದೆ. ರಾಜಕೀಯ ಬದಲಾವಣೆಯಾಗುವುದಂತೂ 100ಕ್ಕೆ 100 ಖಾತ್ರಿ ಎಂಬಂತಾಗಿದೆ. ಆದರೆ ರಾಜಕೀಯ ಬದಲಾವಣೆಯಷ್ಟೇ ಸಾಕೇ? ದೇಶದ ಆರ್ಥಿಕ ಸ್ಥಿತಿ ಬದಲಾದರೆ ತಾನೆ ದೇಶದಲ್ಲಿ ಸರ್ವಾಂಗೀಣ ಬದಲಾವಣೆಯಾಗಲು ಸಾಧ್ಯ..... ಲೋಕಸಭಾ ಚುನಾವಣೆಯಾದ ಬಳಿಕ ಸರ್ಕಾರ ಈಗಿರುವ ಸರ್ಕಾರ ಬದಲಾವಣೆಯಾಗುವುದರಲ್ಲಿ ಅನುಮಾನವೇ ಬೇಡ ಎಂಬ ರೀತಿಯ ವಾತಾವರಣ ನಿರ್ಮಾಣವಾಗಿದೆ. ಅಂದರೆ ದೇಶಕ್ಕೆ ಅಂಟಿಕೊಂಡಿದ್ದ ಗಾಂಧಿ, ನೆಹರೂ ಕುಟುಂಬದ ಮುಕ್ತಿ ಪಡೆದು ರಾಜಕಾರಣಕ್ಕೆ ಕಾಯಕಲ್ಪ ನೀಡಿದಂತಾಯಿತು. ಆದರೆ ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ದೃಷ್ಠಿಯಿಂದ ಅದೇ ನೆಹರೂ ಖಾನ್ ದಾನ್ ಸೃಷ್ಠಿಸಿದ್ದ ಅರ್ಥವ್ಯವಸ್ಥೆಗೂ ಕಾಯಕಲ್ಪ ನೀಡುವುದೂ ಅತ್ಯಗತ್ಯ.... ರಾಜಕೀಯ ವಲಯದಲ್ಲೇನೋ ಹೊಸ ಕ್ರಾಂತಿಯುಂಟಾಗಿದ್ದಾಗಿದೆ ಆದರೆ ಅದರೊಂದಿಗೆ ಸಹಕರಿಸಬೇಕಾದ ಆರ್ಥಿಕ ವಲಯದಲ್ಲೂ ಕ್ರಾಂತಿಯಾಗಬೇಕಲ್ಲವೇ...?

ಇತ್ತೀಚಿನ ದಿನಗಳಲ್ಲಿ ಇಂಥದ್ದೊಂದು ಮನಸ್ಥಿತಿ ಗೋಚರವಾಗುತ್ತಿದೆ. ಭಾರತ ವಿಶ್ವಗುರು ಸ್ಥಾನವನ್ನಲಂಕರಿಸಲು ’ಅರ್ಥಕ್ರಾಂತಿ’ಯೇ ಸರಿಯಾದ ಮಾರ್ಗ ಎಂಬ ಮನೋಭಾವನೆ ಪ್ರಲೋಭಿಸತೊಡಗಿದೆ. ಆರ್ಥಿಕ ನೀತಿಗಳಿಗೆ ಕಾಯಕಲ್ಪವಿತ್ತು ದೇಶ ಹಿಂದೆಂದೂ ಕಂಡಿರದ ನೀತಿಗಳನ್ನು ರಚಿಸಬೇಕು ಇದು ಸಾಧ್ಯವಾಗುವುದು ಮುಂದಿನ ಸರ್ಕಾರ ಬಂದಾಗಲೇ ಇದಕ್ಕಾಗಿ ಈಗಾಗಲೇ ಸಿದ್ಧತೆ ನಡೆದಿದ್ದು ಜನತೆಗೆ ಇದರ ಉದ್ದೆಶ ತಲುಪಿಸುವ ನಿಟ್ಟಿನಲ್ಲಿ ಬೆಂಗಳೂರು ಹಾಗೂ ಮಂಗಳೂರುನಗರಗಳಲ್ಲಿ ಇಂಥದ್ದೊಂದು ಪ್ರಯೋಗಾತ್ಮಕ ಕಾರ್ಯಕ್ರಮ ನಡೆದಿದೆ.

ಅರ್ಥಕ್ರಾಂತಿ, ದೇಶಕ್ಕೆ ಶಾಂತಿ: ಅರ್ಥಕ್ರಾಂತಿಯ ದೇಶದ ಆರ್ಥಿಕ ವ್ಯವಸ್ಥೆಯ ತಳಹದಿಯಿಂದ ಉಲ್ಬಣವಾಗಿರುವ ಖಾಯಿಲೆಗೆ ಸಂಜೀವಿನಿ ಸ್ವರೂಪವೇ ಸರಿ.  ತೆರಿಗೆ ಪದ್ಧತಿ ಬದಲಾವಣೆ, ಹೆಚ್ಚಿನ ಮುಖಬೆಲೆ ನೋಟುಗಳ ನಿಷೇಧ, ಹಾಗೂ ನಗದು ವಹಿವಾಟನ್ನು ಅತ್ಯಂತ ಕಡಿಮೆ ಬೆಲೆಗೆ ಇಳಿಸುವುದು... ಇದಿಷ್ಟನ್ನೇ ಪ್ರಧಾನ ಅಂಶಗಳನ್ನಾಗಿ ಪರಿಗಣಿಸಿ ರೂಪುಗೊಂದಿರುವ ಒಂದು ವಿನೂತನ ಆರ್ಥಿಕ ವ್ಯವಸ್ಥೆ. ಮತ್ತೊಂದು ಅರ್ಥದಲ್ಲಿ 1000, 500 ನೋಟುಗಳೇ ಜೀವನ ಎಂದು ಭಾವಿಸಿರುವ ಜೀವನ ಶೈಲಿಯನ್ನು ಸಾಮಾನ್ಯನ ಸ್ಥಿತಿಗೆ ಬದಲಾಯಿಸುವ ಯೋಜನೆ...

ಪ್ರತಿನಿತ್ಯ ನೂರಿನ್ನೂರು ರೂಪಾಯಿಗಾಳನ್ನು ದುಡಿಯುವ ವರ್ಗದ ಜನರೇ ಹೆಚ್ಚಿರುವ ಭಾರತದಲ್ಲಿ ಬಹುತೇಕ ಜನಕ್ಕೆ 1000, 500 ಅನಿವಾರ್ಯವೇನೂ ಅಲ್ಲ, ಆದರೂ ಸಹ ಆರ್.ಬಿ.ಐ 1000 500 ನೋಟುಗಳನ್ನು ಪರಿಚಯಿಸಿದೆ. ಇದರಿಂದ ಆಗುತ್ತಿರುವ ಅನಾಹುತ ಎಂತದ್ದು ಗೊತ್ತೇ? ಯಾವಗ ಹೆಚ್ಚಿನ ಮುಖಬೆಲೆ ನೋಟುಗಳು ಲಭ್ಯವಾಗುತ್ತದೋ ಆಗ ಹಣ ಕಾಸಿನ ವ್ಯವಹಾರ ಬಹುತೇಕ ನಗದು ರೂಪದಲ್ಲೇ ನಡೆಯುತ್ತದೆ. 1000 ರೂ ಮುಖಬೆಲೆಯ 10-11 ನೋಟುಗಳಿದ್ದರೆ ಸಾಕು ಲಕ್ಷಗಟ್ಟಲೆ ವಹಿವಾಟು ನಡೆಸುವವರಿಗೆ, ಅನಾಯಾಸವಾಗಿ ಕೆಲಸ ನಡೆದುಹೋಗುತ್ತದೆ. ಯಾರ ಕೈಯಿಂದ ಯಾರಿಗೆ ದುಡ್ಡು ಹೋಯಿತು ಎಂಬುದರ ಬಗ್ಗೆ  ಅಧಿಕೃತ ಮಾಹಿತಿ ಸಿಗುವುದೇ ಕಷ್ಟ, ಹಲವು ಹಣಕಾಸಿನ ವ್ಯವಹಾರಗಳು ಲೆಕ್ಕಕ್ಕೇ ಸಿಗುವುದಿಲ್ಲ.

1000 ರೂಪಾಯಿ ಮುಖ ಬೆಲೆ ಹೊಂದಿರುವ ನೋಟುಗಳ ಕಂತೆ ಹೋಗಿ ಸಂತರಿಗಾದರೂ ಸೆರಬಹುದು, ಅಥವಾ ಮತಾಂಧ ಭಯೋತ್ಪಾದಿಗಳ ಕಿಸೆಯಲ್ಲೂ ಅಡಗಿ ಕೂರಬಹುದು. ನೋಟಿನ ಮುಖಬೆಲೆ ಹೆಚ್ಚಿದಷ್ಟೂ ಸಹ ಲಕ್ಷ ಲಕ್ಷ ರೂಪಾಯಿಗಳನ್ನು ಸಾಗಿಸುವುದು ಕಷ್ಟದ ಮಾತೇನಲ್ಲ. ಇದರಿಂದ ಮೊಟ್ಟಮೊದಲು ಲಾಭಪಡೆಯುವುದೇ ಭಯೋತ್ಪಾನೆ ಮತ್ತು ಭ್ರಷ್ಟಾಚಾರ. ಭಯೋತ್ಪಾದಕ ಚಟುವಟಿಕೆಗಳಿಗೆ ಬ್ಯಾಂಕ್ ಮೂಲಕವಾಗಲಿ ಅಥವಾ ಇನ್ನಾವುದೋ ಲೆಕ್ಕಕ್ಕೆ ಸಿಗುವಂತಹ ಮಾರ್ಗಗಳಿಂದಾಗಲಿ ಹಣ ಕಳಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ರೂಪಾಯಿಯ ಮುಖಬೆಲೆ ಭಯೋತ್ಪಾದನೆಗೆ ಸದ್ದಿಲ್ಲದೇ ಕುಮ್ಮಕ್ಕು ನೀಡುತ್ತಿದೆ. ಅಥವಾ ರೂಪಾಯಿ ಮುಖಬೆಲೆಯನ್ನು ಗರಿಷ್ಟ 50ರೂಪಾಯಿಗೆ ಇಳಿಕೆ ಮಾಡಬೇಕು ಜೊತೆಗೆ ನಗದು ವಹಿವಾಟಿಗೆ ಮಿತಿ ಹಾಕಬೇಕು   ಒಂದೇ ಬಾರಿ ಹೆಚ್ಚು ಹಣ ಸಾಗಣೆ ಮಾಡಲು ಸಾಧ್ಯವಾಗುವುದಿಲ್ಲ,  ಬೃಹತ್ ಮೊತ್ತದ ಹಣ ವರ್ಗಾವಣೆಗೆ ಬ್ಯಾಂಕ್ ಗಳ ಮೊರೆ ಹೋಗಬೇಕಾಗುತ್ತದೆ. ಸ್ವಾಭಾವಿಕವಾಗಿಯೇ ದೇಶದ್ರೋಹ ಚಟುವಟಿಕೆಗೆ ಕಡಿವಾಣ ಬೀಳುತ್ತದೆ.   ಭಯೋತ್ಪಾದನೆಯೊಂದೇ ಅಲ್ಲ ದೇಶ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯಾಗಿರುವ ಭ್ರಷ್ಟಾಚಾರದ ನಿರ್ಮೂಲನೆ,ನಕಲಿ ನೋಟುಗಳ ಚಲಾವಣೆ ತಡೆಗೂ ಸಹ ಇದೇ ಸೂತ್ರ ಅನ್ವಯಿಸುತ್ತದೆ.

ನಗದು ರೂಪದಲ್ಲಿ  ನೇರ ವಹಿವಾಟು ನಡೆಯುತ್ತಿರುವುದರಿಂದ ಬ್ಯಾಂಕ್ ಗಳ ಆದಾಯಕ್ಕೂ ಸಹ ಹೊಡೆತ ಬೀಳುತ್ತಿದೆ. ಅಂದರೆ ಬ್ಯಾಂಕ್ ಗಳ ಮೇಲೆ ಹೊಡೆದ ಬಿದ್ದರೆ ದೇಶದ ಆರ್ಥಿಕ ಸ್ಥಿತಿಯ ಮೆಲೂ ಪರೋಕ್ಷ ಪರಿಣಾಮ ಇದ್ದೇಇರುತ್ತದೆ.  ದೇಶದ ಆರ್ಥಿಕತೆಗೆ ಪುನರುಜ್ಜೀವನ ಕಲ್ಪಿಸಿಕೊಡಲು ಬ್ಯಾಂಕ್ ಗಳ ಅಭಿವೃದ್ಧಿಯಲ್ಲಿಯೂ ವಿಶೇಷ ಗಮನ ಹರಿಸಬೇಕಾಗುತ್ತದೆ.  ಬ್ಯಾಂಕ್ ಗಳಲ್ಲಿ ವಹಿವಾಟು ಹೆಚ್ಚಾದರೆ ತೆರಿಗೆ ವರಮಾನ, ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ. ಬ್ಯಾಂಕ್ ಗಳಲ್ಲಿನ ವಹಿವಾಟು ಅಧಿಕಗೊಳಿಸಲು ರೂಪಾಯಿಯ ಹೆಚ್ಚಿನ ಮುಖಬೆಲೆ ಇಳಿಕೆ ಮಾಡಿದರೆ ಸಹಜವಾಗಿ ಬೃಹತ್ ಮೊತ್ತ ಪಾವತಿಸಬೇಕಾದರೆ ಬ್ಯಾಂಕ್ ಗಳ ಮೊರೆ ಹೋಗಲೇ ಬೇಕು, ತಮ್ಮ ವಹಿವಾಟಿನ ಮೊತ್ತಕ್ಕೆ ಸರಿಯಾದ ತೆರಿಗೆ ನೀಡಲೇ ಬೇಕು ಎಂಬುದು ಅರ್ಥಕ್ರಾಂತಿಯ ಮುಖ್ಯೋದ್ದೇಶ. ಇದರೊಂದಿಗೆ  ಸಂಗ್ರಹಣೆಯಾದ ತೆರಿಗೆ ಹಣವನ್ನು ಬ್ಯಾಂಕುಗಳು ತನ್ನ ಹಣಕಾಸು ವ್ಯವಹಾರದ ಪಾಲನ್ನು ಕಡಿತಗೊಳಿಸಿ ಕೇಂದ್ರ,ರಾಜ್ಯ ಮತ್ತು ಸ್ಥಳೀಯ ಆಡಳಿತಗಳಿಗೆ ನಿಗದಿ ಪಡಿಸಿ ಪಾಲನ್ನು ವರ್ಗಾಯಿಸುವ ವ್ಯವಸ್ಥೆ ಜಾರಿಗೆಯಾಗಬೇಕಿದೆ. ಇವೆಲ್ಲವೂ ಭಾರತದ ಆರ್ಥಿಕತೆಯ ಪುನರುತ್ಥಾನಕ್ಕೆ ನಾಂದಿಯಾಗಲಿದೆ.

ಅಮೆರಿಕಾ ಮೇಲೆ ಭಯೋತ್ಪಾದಕರು ದಾಳಿ ಮಾಡಿದ ಸಂದರ್ಭದಲ್ಲಿ ರಾಷ್ಟ್ರಕ್ಕೆ ಮುಳುವಾಗಿದ್ದ ಭಯೋತ್ಪಾದನೆಯನ್ನು ನಿರ್ಮೂಲನ ಮಾಡುವ ಉದ್ದೇಶದಿಂದ ಅಮೆರಿಕಾ ಸಹ ಕೈಗೊಂಡಿದ್ದು ಹೆಚ್ಚಿನ ಮುಖ ಬೆಲೆಯ ನೋಟುಗಳನ್ನು ಹಿಂಪಡೆದುಕೊಳ್ಳುವುದು. ಇಂದಿಗೂ ಸಹ ಅಮೆರಿಕಾದಲ್ಲಿ 100 ಡಾಲರ್ ನ ಮುಖಬೆಲೆಯ ನೋಟೇ ಅಂತಿಮ. ಅಮೆರಿಕಾದ ಈ ನಿರ್ಧಾರದಿಂದ ಇಂದು ಅಷ್ಟಾಗಿ ಭಯೋತ್ಪಾದನೆಯ ಬಿಸಿ ತಟ್ಟುತ್ತಿಲ್ಲ.

ಇನ್ನು ತೆರಿಗೆ ವಿಷಯದಲ್ಲಿಯೂ ಭಾರತದ ದೇಶ ಸಾಕಷ್ಟು ಬದಲಾವಣೆ ತರುವುದು ’ಅರ್ಥಕ್ರಾಂತಿ’ಯೋಜನೆಯ ಮುಖ್ಯ ಉದ್ದೇಶ,ಪ್ರಸ್ತುತ 32 ಬಗೆಯ ತೆರಿಗೆ ಪದ್ಧತಿ ಹೊಂದಿರುವ ಭಾರತವನ್ನು ಏಕರೂಪ ತೆರಿಗೆ ಹೊಂದುವಂತೆ ಮಾಡಬೇಕು... ಬ್ಯಾಂಕ್ ನಲ್ಲಿ ಹಣ ತೆಗೆಯುವವರಿಂದ ಒಂದು ಮಿತಿಯವರೆಗೆ ಕನಿಷ್ಠ ತೆರಿಗೆ ವಿಧಿಸಿ ಉಳಿದಂತೆ ಅಂತಾರಾಷ್ಟ್ರೀಯ ವ್ಯಾಪಾರ ನಿಯಂತ್ರಣಕ್ಕಾಗಿ ಸೀಮಾ ಸುಂಕ ವಿಧಿಸುವ ಪದ್ಧತಿ ಮಾತ್ರ ಉಳಿಸಿಕೊಳ್ಳಬೇಕು. ಇವೆಲ್ಲದರ ಪರಿಣಾಮದಿಂದಾಗಿ ಭಾರತದ ಆರ್ಥಿಕತೆಯ ಪುನರುತ್ಥಾನ ಸಾಧ್ಯ. ಹ್ಹಾ... ಇಷ್ಟೆಲ್ಲಾ ಮಾಡಿದ ಮೇಲೆ ಭಾರತ ಸಂಪೂರ್ಣ ಭ್ರಷ್ಟ ಮುಕ್ತವಾಗುತ್ತದೆ ಎಂದು ಖಾತ್ರಿ ಕೊಡಲು ಸಾಧ್ಯವಿಲ್ಲ. ಕಳ್ಳತನ ಮಾಡಲೇ ಬೇಕು ಎಂದು ನಿರ್ಧಸಿದವರನ್ನು ತಡೆಯಲು ಎಷ್ಟು ಪೊಲೀಸರಿದ್ದರೆ ಏನು ಪ್ರಯೋಜನ ಹಾಗೆಯೇ ಭ್ರಷ್ಟಾಚಾರ ನಡೆಸಲೇ ಬೇಕು ಎಂದು ಪಣತೊಟ್ಟರೆ ಅದನ್ನು ತಡೆಗಟ್ಟಲು ಯಾವ ವ್ಯವಸ್ಥೆಯಿಂದಲೂ ಸಾಧ್ಯವಿಲ್ಲ. ಆದರೆ ಒಂದಂತೂ ಸ್ಪಷ್ಟ, ’ಅರ್ಥಕ್ರಾಂತಿ’ ಎಂಬ ಹೊಸ ಅಧ್ಯಾಯದ ಮೂಲಕ ಭಾರತದಲ್ಲಿ ತಲೆದೋರಿರುವ ಭ್ರಷ್ಟಾಚಾರವನ್ನು ಬಹುತೇಕ ನಿರ್ಮೂಲನೆ ಮಾಡಬಹುದು.

ಮತ್ತೊಂದು ಮಜಬೂತಾದ ಸಂಗತಿಯೆಂದರೆ  ರೂಪಾಯಿಯ ಮುಖಬೆಲೆಯನ್ನು ಕಡಿತಗೊಳಿಸುವುದು ಸೇರಿದಂತೆ ಕೆಲ ವಿಷಯಗಳನ್ನು ಹೊರಪಡಿಸಿದರೆ ತೆರಿಗೆ ವಿಷಯದಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಗದ್ದುಗೆ ಏರಲು ಸಿದ್ಧತೆ ನಡೆಸಿರುವ ಬಿಜೆಪಿಯೂ ಸಹ ’ಅರ್ಥಕ್ರಾಂತಿಯ’ ತೆರಿಗೆ ವಿಷಯದಲ್ಲಿ ಸಮಾನ ಮನಸ್ಥಿ ಹೊಂದಿದೆ.  ದೇಶದ ಅರ್ಥವ್ಯವಸ್ಥೆಯನ್ನು ಪುನರ್ ಸ್ಥಾಪಿಸುವ ಅರ್ಥಕ್ರಾಂತಿ ಎಂಬ ಹೊಸ ಪ್ರಸ್ತಾವನೆಯತ್ತ  2014ರ ಲೋಕಸಭೆ ಚುನಾವಣೆಯ ನಂತರ ಅಧಿಕಾರಕ್ಕೆ ಬರಲಿರುವ ಸರ್ಕಾರ ಗಮನ ಹರಿಸಬೇಕಿದೆ. ಕಳೆದ 60 ವರ್ಷಗಳಿಂದ ನೆಹರೂ ಖಾನ್ ದಾನ್ ನೀಡಿರುವ ಅರ್ಥವ್ಯವಸ್ಥೆಯನ್ನೇ ಮುನ್ನಡೆಸಿಕೊಂಡು ಅನರ್ಥ ಮಾಡುವುದಕ್ಕಿಂತಲೂ ಅರ್ಥ ವ್ಯವಸ್ಥೆಗೇ ಮೇಜರ್ ಸರ್ಜರಿ ಮಾಡುವುದು ಒಳಿತು, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಅರ್ಥಕ್ರಾಂತಿ ಬಗ್ಗೆ ನೀಡಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿಯೂ ಜನತೆ ಅರ್ಥಕ್ರಾಂತಿ ಭಾರತಕ್ಕೆ ಅರ್ಹವಾದದ್ದು ಎಂಬ ಅಭಿಪ್ರಾಯ ತಳೆದಿದ್ದಾರೆ. ಅಂದಹಾಗೆ ಅರ್ಥಕ್ರಾಂತಿ ಎಂಬ ಹೊಸ ಕ್ರಾಂತಿ ರುವಾರಿಯನ್ನು ಪರಿಚಯಿಸಿರುವುದು ನಮೋ ಬ್ರಿಗೇಡ್ ಸಂಸ್ಥೆ, ಅನಿಲ್ ಬೋಕಿಲ್ ಅರ್ಥಕ್ರಾಂತಿಯ ರುವಾರಿ.  ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಭಾರತಕ್ಕೆ 2-3  ವರ್ಷಗಳಲ್ಲಿ ಹೊಸ ಆರ್ಥಿಕ ನೀತಿ ಸಿಕ್ಕಿರುತ್ತದೆ .  ಭಾರತ ವಿಶ್ವಗುರು ಸ್ಥಾನದಲ್ಲಿ ನಿಲ್ಲಲು ಪೂರಕವಾಗಿ ಕೆಲಸ ಮಾಡುತ್ತದೆ.

No comments:

Post a Comment