Monday 12 November 2018

ಜನರ 'ಸಂತೋಷ' ನಡುರಾತ್ರಿಯಲ್ಲಿ ಕಸಿವವರು ಹೇಡಿಗಳಲ್ಲದೆ ಮತ್ತೇನು?

ಕರ್ನಾಟಕದ ರಾಜಕೀಯ ಪರಿಸ್ಥಿತಿ ಸಧ್ಯದ ಮಟ್ಟಿಗೆ "ಊದುವುದನ್ನು ಕೊಟ್ಟು ಬಾರಿಸುವುದನ್ನು ತೆಗೆದುಕೊಂಡರು" ಎಂಬಂತಾಗಿದೆ. ರಾಷ್ಟ್ರೀಯತೆಯ ಬಗ್ಗೆ ಬರೆಯುವವರನ್ನು ಟಾರ್ಗೆಟ್ ಮಾಡುತ್ತಿದ್ದ ಸಿದ್ದರಾಮಯ್ಯನವರ ಸರ್ಕಾರ, ದ್ವೇಷದಿಂದ ಸುಪಾರಿ ಕೊಡುತ್ತಿದ್ದ ಸಲಹೆಗಾರರು ಅಧಿಕಾರದಿಂದ ಕೆಳಗಿಳಿದದ್ದಕ್ಕೆ ಸಂತೋಷಪಡಬೇಕೋ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇಲ್ಲವಾಗಿಸಲು ಕೊಲೆ ಸುಪಾರಿ ಕೊಡದಿದ್ದರೂ, ಬಂಧನಕ್ಕೊಳಪಡಿಸುತ್ತಿದ್ದಾರಲ್ಲ ಎಂದು ಸಮಾಧಾನಪಟ್ಟುಕೊಳ್ಳಬೇಕೋ ಒಂದೂ ತಿಳಿಯುತ್ತಿಲ್ಲ. ಹಿಂದೆಲ್ಲಾ ಟಿಪ್ಪು, ಇಸ್ಲಾಂ ನ್ನು ಟೀಕಿಸಿದವರಿಗೆ ಕೊಲೆ ಬೆದರಿಕೆ ಹಾಕಲಾಗುತ್ತಿತ್ತು. ಈ ವರ್ಷ ಟಿಪ್ಪು ಜಯಂತಿಯನ್ನು ವಿರೋಧಿಸಿದ ಪತ್ರಕರ್ತ ಸಂತೋಷ್ ತಮ್ಮಯ್ಯ ಅವರನ್ನು ಬಂಧಿಸಲಾಗಿದೆ.  ಒಟ್ಟಿನಲ್ಲಿ ಸಿದ್ದರಾಮಯ್ಯ-ಕುಮಾರಸ್ವಾಮಿ ಇಬ್ಬರ ಸರ್ಕಾರಗಳ ಉದ್ದೇಶ ಮಾತ್ರ ಸ್ಪಷ್ಟ, ಅದು ರಾಷ್ಟ್ರೀಯವಾದಿ ಬರಹಗಾರರ ಧ್ವನಿ ಅಡಗಿಸಬೇಕೆಂಬುದು.

                                                         ಖ್ಯಾತ ಅಂಕಣಕಾರ ಸಂತೋಷ್ ತಮ್ಮಯ್ಯ

ಹಿಂದಿನ ಮುಖ್ಯಮಂತ್ರಿಗಳೇನೋ ತಾವು ಅಪ್ಪಟ್ಟ ಟಿಪ್ಪು ಅಭಿಮಾನಿ ಎಂದು ಘೋಷಿಸಿಕೊಂಡುಬಿಟ್ಟಿದ್ದರು. ಆದರೆ ಟಿಪ್ಪು ವಿಷಯದಲ್ಲಿ ಈಗಿನ ಮುಖ್ಯಮಂತ್ರಿಗಳದ್ದು ದ್ವಂದ್ವ. ಬೂಟಾಟಿಕೆ. ಅದು, 2015 ರ ಟಿಪ್ಪು ಜಯಂತಿ ಕಾರ್ಯಕ್ರಮ, ರಕ್ತಪಾತವಾದರೂ ಸರಿಯೇ ಟಿಪ್ಪು ಜಯಂತಿಯನ್ನು ನಡೆಸಲೇಬೇಕೆಂಬ ಜಿದ್ದಿಗೆ ಬಿದ್ದಿದ್ದ ಸಿದ್ದರಾಮಯ್ಯ ಸರ್ಕಾರ, ಟಿಪ್ಪು ಸುಲ್ತಾನನನ್ನು ಬಣ್ಣಿಸಲು "ಟಿಪ್ಪುವಿನ ಕನಸುಗಳು"ನ್ನು ಕಟ್ಟಿಕೊಟ್ಟಿದ್ದ ಸಾಹಿತಿ ಗಿರೀಶ್ ಕಾರ್ನಾಡ್ ಅವರನ್ನು ಆಹ್ವಾನಿಸಿತ್ತು. ತಮ್ಮ ಧಣಿಯ ಎದುರು ಅವರ ಕುಲದೈವವನ್ನು ಹೊಗಳಲು ನಿಂತ ಸರ್ಕಾರಿ ಪ್ರಾಯೋಜಿತ ಸಾಹಿತಿ ಗಿರೀಶ್ ಕಾರ್ನಾಡ್ ಮಾತಿನ ಓಘದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರೇಕೆಬೇಕು? ಟಿಪ್ಪು ಹೆಸರಿಡಬೇಕು, ಟಿಪ್ಪು ಬ್ರಿಟೀಷರ ವಿರುದ್ಧ ಹೋರಾಡಿದ್ದ, ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಕೆಂಪೇಗೌಡರ ಪಾತ್ರ ಇರಲಿಲ್ಲ ಎಂದುಬಿಟ್ಟಿದ್ದರು.

ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ಕೆಂಪೇಗೌಡರ ಪಾತ್ರ ಏನು?, ಮಹಾಭಾರತದ ಯುದ್ಧದಲ್ಲಿ ಅರ್ಜುನ ಕೌರವರ ವಿರುದ್ಧ ಏಕೆ ಬ್ಯಾಲಿಸ್ಟಿಕ್ ಮಿಸೈಲ್ ಪ್ರಯೋಗ ಮಾಡಲಿಲ್ಲ? ದನ್ಯಾಂಗ್-ಕುನ್ಶಾನ್ ಗ್ರ್ಯಾಂಡ್ ಬ್ರಿಡ್ಜ್ ನಿರ್ಮಾಣಕ್ಕೆ ಶ್ರೀರಾಮನ ಕೊಡುಗೆ ಏನು ಎಂಬಂಥಹ ಸೆನ್ಸಿಬಲ್ ಪ್ರಶ್ನೆಗಳು ಸೆಕ್ಯುಲರ್ ಸರ್ಕಾರಿ ಪ್ರಾಯೋಜಿತ ಬುದ್ಧಿಜೀವಿಗಳಿಗಷ್ಟೇ ಹೊಳೆಯುವುದಕ್ಕೆ ಸಾಧ್ಯ. ಇರಲಿ... ಈಗ ಗಿರೀಶ್ ಕಾರ್ನಾಡ್ ಅವರ ಹೇಳಿಕೆಗೆ ಮರಳೋಣ. "ಟಿಪ್ಪು ಬ್ರಿಟೀಷರ ವಿರುದ್ಧ ಹೋರಾಡಿದ್ದ, ಟಿಪ್ಪು ಹಿಂದೂವಾಗಿದ್ದರೆ ಆತನಿಗೆ ಶಿವಾಜಿ ಮಹಾರಾಜನಷ್ಟೇ ಗೌರವ ಸಲ್ಲುತ್ತಿತ್ತು, ಟಿಪ್ಪು ಕೆಂಪೇಗೌಡರಿಗಿಂತಲೂ ಶ್ರೇಷ್ಠ" ಎಂದಿದ್ದ ಕಾರ್ನಾಡರನ್ನು ಇಂದಿನ ಸಿಎಂ, ಅಂದಿನ ವಿಪಕ್ಷ ನಾಯಕ ಹೆಚ್ ಡಿ ಕುಮಾರಸ್ವಾಮಿ ಸರ್ಕಾರಿ ಪ್ರಾಯೋಜಿತ ಸಾಹಿತಿ ಇತಿಹಾಸದ ಪರಿಜ್ಞಾನವಿಲ್ಲ ಎಂದೆಲ್ಲಾ ಟೀಕಿಸಿದ್ದರು. ಕಾರ್ನಾಡರು ಕ್ಷಮೆ ಕೇಳಿದ ಹೊರತಾಗಿಯೂ ಸಹ ಕೆಂಪೇಗೌಡರ ಗೌರವಾದರಗಳಿಗೆ ಧಕ್ಕೆ ಉಂಟುಮಾಡಿದ್ದ ಕಾರ್ನಾಡರನ್ನು ತರಾಟೆಗೆ ತೆಗೆದುಕೊಳ್ಳದೇ ಬಿಟ್ಟಿರಲಿಲ್ಲ ಕುಮಾರಸ್ವಾಮಿ. ಆದರೆ ಇಂದು ಅದೇ ಕುಮಾರಸ್ವಾಮಿ ಅಧಿಕಾರಾಕ್ಕಾಗಿ ಕಾಂಗ್ರೆಸ್ ಜೊತೆ ಸೇರಿ, ಟಿಪ್ಪುವಿನ ವಿಮರ್ಶೆಗೆ ನಿಂತ ಕೊಡವರನ್ನು ಧರ್ಮ ನಿಂದನೆಯ ಆರೋಪದಡಿ ಜೈಲಿಗೆ ಕಳಿಸಿ ಟಿಪ್ಪು ಜಯಂತಿಯನ್ನು ಆಚರಿಸುವಷ್ಟು ದೈನೇಸಿ ಪರಿಸ್ಥಿತಿ ತಲುಪಿದ್ದಾರೆ!.

ಕೆಂಪೇಗೌಡರಿಗಿಂತ ಟಿಪ್ಪು ಶ್ರೇಷ್ಠ ಎಂದು ಹೇಳಿದ ಮಾತ್ರಕ್ಕೇ ಕುಮಾರಸ್ವಾಮಿಗಳ ಸಂವೇದನೆ ಜಾಗೃತವಾಗುವುದಾದರೆ, ಇನ್ನು ತಮ್ಮವರನ್ನು ತರಿದು, ಮತಾಂತರ ಮಾಡಿದ್ದ ಕೊಡವರನ್ನು ಲೆಕ್ಕಿಸದೇ ಟಿಪ್ಪು ಜಯಂತಿಯನ್ನು ಮಾಡಿದ್ದಾರಲ್ಲಾ, ಸಂವೇದನೆ, ಸ್ವಧರ್ಮ ಅಭಿಮಾನವೆಲ್ಲಾ ಅನ್ವಯಿಸುವುದು ನಿಮಗೊಬ್ಬರಿಗೇನಾ? ಕೊಡವರ ಭಾವನೆಗಳಿಗೆ ನಿಮ್ಮ ಸರ್ಕಾರದಲ್ಲಿ ಬೆಲೆಯೇ ಇಲ್ಲವಾ ಮುಖ್ಯಮಂತ್ರಿಗಳೇ? ಅಥವಾ ಅಂದಿನ ನಿಮ್ಮ ಸಂವೇದನೆ, ಆಕ್ರೋಶಗಳು ಬೂಟಾಟಿಕೆಯದ್ದಾ? ಯಾವಾಗಲೋ ಆಗಿ ಹೋದ ಕೆಂಪೇಗೌಡರ ಹೆಸರಿನ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರನ್ನು ಮರುನಾಮಕರಣ ಮಾಡಬೇಕು ಎಂದತಕ್ಷಣವೇ ನೀವು ದಿಢೀರನೆ ಎದ್ದು ಕುಳಿತು ನಖಶಿಖಾಂತ ಉರ್ಕೊಂಡಿದ್ದು ಪ್ರತಿಭಟಿಸಿದ್ದು ಸರಿ ಎನ್ನುವುದಾದರೆ ತಮ್ಮ ಸಂಸ್ಕೃತಿಯನ್ನು ನಾಮಾವಶೇಷ, ಮತಾಂತರ ಮಾಡಿ ಭೂಭಾಗಗಳನ್ನು ಮರು ನಾಮಕರಣ ಮಾಡಲು ಹವಣಿಸಿದ್ದ ಟಿಪ್ಪು ಹಾಗೂ ಆತನ ಜಯಂತಿಯನ್ನು ಕೊಡವರು ವಿರೋಧಿಸುವುದರಲ್ಲಿ ತಪ್ಪೇನು?

ನಿಮ್ಮ ಬೂಟಾಟಿಕೆ, ಯು-ಟರ್ನ್ ಗಳು ರಾಜ್ಯದ ಜನತೆಗೇನು ಹೊಸದೇನಲ್ಲ ಬಿಡಿ, ನೀವೇನೋ ಅಧಿಕಾರಕ್ಕೋಸ್ಕರ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದಕ್ಕಾಗಿ, ಸ್ವಾಭಿಮಾನವನ್ನು ಅಡ (ಒತ್ತೆ) ಇಟ್ಟು ಟಿಪ್ಪು ಜಯಂತಿಯನ್ನು ಸಹಿಸಿಕೊಳ್ಳಬಹುದು. ಈಗಿನ ಪರಿಸ್ಥಿತಿಯಲ್ಲಿ ನೀವೇ ಒಂದೊಮ್ಮೆ ಟಿಪ್ಪು ಕೆಂಪೇಗೌಡರಿಗಿಂತ ಶ್ರೇಷ್ಠ ಎಂದುಬಿಟ್ಟರೂ ಆಶ್ಚರ್ಯವೇನು ಇಲ್ಲ. ಆದರೆ ಕದನ ಕಲಿಗಳಾದ ಕೊಡವರೇಕೆ ತಮ್ಮ ಸ್ವಾಭಿಮಾನವನ್ನು ಒತ್ತೆ ಇಡಬೇಕು? ಯಾವ ಪುರುಷಾರ್ಥಕ್ಕಾಗಿ ಟಿಪ್ಪು-ಆತನ ಜಯಂತಿಯನ್ನು ಸಹಿಸಿಕೊಳ್ಳಬೇಕು ಹೇಳಿ? ಟಿಪ್ಪು ಜಯಂತಿ ವಿರುದ್ಧ ಮಾತನಾಡಿದರೆ ಹುಷಾರ್, ಇಷ್ಟ ಇಲ್ಲ ಅಂದ್ರೆ ಕಾರ್ಯಕ್ರಮಕ್ಕೆ ಬರ್ಬೇಡಿ ಮನೆಯಲ್ಲಿರಿ ಎನ್ನುತ್ತೀರಲ್ಲಾ.... ಗಿರೀಶ್ ಕಾರ್ನಾಡರು ವಿಮಾನ ನಿಲ್ದಾಣಕ್ಕೆ ಮರುನಾಮಕರಣದ ಪ್ರಸ್ತಾಪವನ್ನಿಟ್ಟಾಗ ನಿಮ್ಮ ಪ್ರತಿಭಟನೆಗೆ "ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವುದನ್ನು ವಿರೋಧಿಸಿದರೆ ಹುಷಾರ್, ಇಷ್ಟ ಇಲ್ಲ ಅಂದ್ರೆ ಆ ವಿಮಾನ ನಿಲ್ದಾಣಕ್ಕೆ ಬರಲೇಬೇಡಿ" ಎಂದು ಹೇಳಿದಷ್ಟೇ ಸೆನ್ಸಿಬಲ್ ಆಗಿದೆಯಲ್ಲವೇ ನಿಮ್ಮ ಇತ್ತೀಚಿನ ಎಚ್ಚರಿಕೆ ಕೂಡ! ಕೆಂಪೇಗೌಡರ ಕೊಡುಗೆಗಳನ್ನು ಪ್ರಶ್ನಿಸಿದ ಮಾತ್ರಕ್ಕೆ ನೀವು ಗಿರೀಶ್ ಕಾರ್ನಾಡರನ್ನು, ಅವರ ಮನಸ್ಥಿತಿಯನ್ನು ಸರ್ಕಾರಿ ಪ್ರಾಯೋಜಿತ ಸಾಹಿತಿ ಎಂದೆಲ್ಲಾ ವಿಮರ್ಶೆ ಮಾಡಬಹುದಾದರೆ, ತಮ್ಮ ಸಂಸ್ಕೃತಿ, ಸಂತತಿಗೇ ಕಂಟಕವಾಗಿದ್ದ ಟಿಪ್ಪುವನ್ನು ಹಾಗೂ ಆತನಿಗೆ ಮತಾಂತರ, ನರಮೇಧಗಳಿಗೆ ಪ್ರೇರಣೆ ನೀಡುತ್ತಿದ್ದ ಇಸ್ಲಾಂನ್ನು ಕೊಡವರು ವಿಮರ್ಶಿಸಬಾರದೇ? ಹಾಗೆ ವಿಮರ್ಶಿಸಿದ ಪತ್ರಕರ್ತ ಸಂತೋಷ್ ತಮ್ಮಯ್ಯರನ್ನು ಧರ್ಮ ನಿಂದನೆ ಪ್ರಕರಣದಲ್ಲಿ ಮಧ್ಯರಾತ್ರಿ ಬಂಧಿಸುತ್ತೀರಾ? ನಿಮ್ಮದ್ಯಾವ ಸೀಮೆ ರಾಜಧರ್ಮ ಸ್ವಾಮಿ? ಹಾಗಾದರೆ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರನ್ನು ಮರುನಾಮಕರಣ ಮಾಡಲು ಪ್ರತಿಭಟಿಸಿ ಅಲ್ಪಸಂಖ್ಯಾತರ ಭಾವನೆಗಳಿಗೆ ಘಾಸಿಯುಂಟುಮಾಡಿದ್ದ ನಿಮ್ಮ ಮೇಲೂ ಕೇಸ್ ಹಾಕಬಹುದಲ್ಲ!

ಘಟನೆ-2
ಟಿಪ್ಪು ದೇಶಭಕ್ತನಲ್ಲ ಎನ್ನುವ ಕೊಡವರು ಭಾರತೀಯರಲ್ಲ-ನಿರ್ದೇಶಕ ಸತ್ಯು, 2016 ನವೆಂಬರ್
ಕೊಡವರು ಇಲ್ಲಿನ ಸ್ಥಾನಿಕರಲ್ಲ. ಈ ನೆಲದ ಮೂಲದವರಲ್ಲ- ಕೋ.ಚೆನ್ನಬಸಪ್ಪ, 2013 ಡಿಸೆಂಬರ್

ಮುಖ್ಯಮಂತ್ರಿಗಳೇ ನಿಮಗೆ ಗೊತ್ತಿರಬಹುದು, ಅಲ್ಪಸಂಖ್ಯಾತರ ವ್ಯವಹಾರಗಳ ಖಾತೆ ಸಚಿವ ಕೆ. ರೆಹಮಾನ್ ಖಾನ್ ಯುಪಿಎ ಸರ್ಕಾರದಲ್ಲಿ ಟಿಪ್ಪು ವಿವಿ ಸ್ಥಾಪನೆ ಕುರಿತು ಮಾತನಾಡಿದಾಗಿನಿಂದ ಈ ಟಿಪ್ಪುವಿನ ನಿಜ ಸ್ವರೂಪದ ಬಗ್ಗೆ ಹೆಚ್ಚು ಸಾರ್ವಜನಿಕ
ವಲಯದಲ್ಲಿ ಚರ್ಚೆ ನಡೆಯಲು ಪ್ರಾರಂಭವಾಗಿತ್ತು. ಅಲೀಘರ್ ವಿವಿ ಮಾದರಿಯಲ್ಲಿ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಖ್ಯಾತ ವಿದ್ವಾಂಸ ಚಿದಾನಂದ ಮೂರ್ತಿಗಳೂ ಸಹ ತಮ್ಮ ಧ್ವನಿ ಎತ್ತಿ ಟಿಪ್ಪು ವಿವಿಯನ್ನು ವಿರೋಧಿಸಿದ್ದರು. ಅದೇ ವೇಳೆ ನಡೆದಿದ್ದ 79 ನೇಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ “ಶ್ರೀರಂಗಪಟ್ಟಣದಲ್ಲಿ  ಸ್ಥಾಪಿಸಲು ಉದ್ದೇಶಿಸಿರುವ ಕೇಂದ್ರೀಯ ವಿಶ್ವವಿದ್ಯಾನಿಲಯಕ್ಕೆ ಟಿಪ್ಪು ಹೆಸರಿಡುವುದನ್ನು ವಿರೋಧಿಸುವುದು ಖಂಡನೀಯ. ಕೆಲವರು ಹೇಳುವಂತೆ ಟಿಪ್ಪು ಕೊಡವರನ್ನು ಅಷ್ಟೊಂದು ಸಂಖ್ಯೆಯಲ್ಲಿ (೭೦ಸಾವಿರ) ಕೊಂದಿದ್ದರೆ ಇಂದು ಕೊಡಗಿನಲ್ಲಿ ಕೊಡವರ ಸಂಖ್ಯೆ ತುಂಬಾ ಕಡಿಮೆ ಇರಬೇಕಿತ್ತು. ಆದರೆ ಕೊಡಗಿನಲ್ಲಿ ಇಂದು ಕೊಡವರ ಸಂಖ್ಯೆ ಹೆಚ್ಚಿದೆ. ಟಿಪ್ಪು ಮತಾಂತರ ಮಾಡಿದ್ದಿದ್ದರೆ ಮುಸಲ್ಮಾನರ ಸಂಖ್ಯೆ ಕೊಡಗಿನಲ್ಲಿ ಹೆಚ್ಚಿರಬೇಕಿತ್ತು. ಆದರೆ ಇಂದು ಕೊಡಗಿನಲ್ಲಿ ಕೇವಲ ೧೪,೭೩೦ ಜನ ಮಾತ್ರ ಮುಸಲ್ಮಾನರಿದ್ದಾರೆ.” ಎಂದಿದ್ದರು.

ಚಿದಾನಂದ ಮೂರ್ತಿಗಳು ಹಾಕಿದ್ದ ಸವಾಲಿಗೆ ಉತ್ತರವೇ ಕೊಡಲು ಸಾಧ್ಯವಾಗದೇ ಕೊನೆಗೆ ಕೊಡವರು ಭಾರತೀಯರೇ ಅಲ್ಲ ಈ ನೆಲದ ಮೂಲದವರೇ ಅಂದುಬಿಟ್ಟರು ಕೋ.ಚೆ. ಅಧಿಕಾರಕ್ಕಾಗಿ ಸ್ವಾಭಿಮಾನವನ್ನು ಅಡ ಇಟ್ಟು, ಸಂಸ್ಕೃತಿಯನ್ನು ಹರಾಜು ಹಾಕಿ ಬದುಕುವ ರಾಜಕಾರಣಿಗಳಿಗೆ ಟಿಪ್ಪು-ಇಸ್ಲಾಂ ನಲ್ಲಿರುವ ಬರ್ಬರತೆಯ ಟೀಕೆ ಧರ್ಮ ನಿಂದನೆಯಾಗಿ ಕಾಣಿಸುತ್ತೆ. ಪ್ರಕರಣ ದಾಖಲಿಸಬೇಕು ಅಂತಲೂ ಅನಿಸುತ್ತೆ. ಆದರೆ ದೇಶವೇ ಹೆಮ್ಮೆ ಪಡುವಂತಹ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಹಾಗೂ ಜನರಲ್‌ ತಿಮ್ಮಯ್ಯನವರನ್ನು ನೀಡಿದ ಕೊಡವರನ್ನು ಭಾರತೀಯರೇ ಅಲ್ಲ ಅಂದಿದ್ದು ಕೊಡವರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎನಿಸುವುದಿಲ್ಲ. ಟಿಪ್ಪು ಜಯಂತಿ ವಿರೋಧಿಸಿದರೆ ಪ್ರಕರಣ ದಾಖಲಿಸುತ್ತೇವೆ ಎಂದು ಎಚ್ಚರಿಸಿ  ವಿರೋಧವನ್ನು ಖಂಡಿಸುವಷ್ಟು ದಾಷ್ಟ್ರ್ಯವನ್ನು ಅಪ್ಪಿತಪ್ಪಿಯೂ ಯಾವುದೇ ಸರ್ಕಾರ ಕೊಡವರ ಭಾವನೆಗಳಿಗೆ ಧಕ್ಕೆಯುಂಟಾದರೆ ಕ್ರಮ ಎದುರಿಸಬೇಕಾಗುತ್ತೆ ಎಂದು ಹೇಳುವುದಕ್ಕೆ ತೋರಿಸುವುದಿಲ್ಲ. ಇನ್ನು ನಿರ್ದೇಶಕ ಸತ್ಯು ಟಿಪ್ಪು ದೇಶಭಕ್ತನಲ್ಲ ಎನ್ನುವ ಕೊಡವರು ಭಾರತೀಯರೇ ಅಲ್ಲ ಅಂದಾಗ ಒಂದು ಇಡೀಯ ಸಂಸ್ಕೃತಿ, ಜನಾಂಗಕ್ಕೇ ಅವಮಾನ ಮಾಡಲಾಗುತ್ತಿದೆ ಉಂಟಾಗಿದೆ ಎಂಬ ಪ್ರಜ್ನೆ ಸ್ವಾಭಿಮಾನವನ್ನು ಒತ್ತೆ ಇಟ್ಟು ಬದುಕುವ ಸೆಕ್ಯುಲರ್ ರಾಜಕಾರಣಿಗೂ ಮೂಡುವುದಿಲ್ಲ!

5 ವರ್ಷಗಳ ಹಿಂದೆ ಸಿದ್ದರಾಮಯ್ಯ ಸರ್ಕಾರ ಶತಾಯ ಗತಾಯ ಟಿಪ್ಪು ಜಯಂತಿಯನ್ನು ಮಾಡಲೇಬೇಕೆಂಬ ಜಿದ್ದಿಗೆ ಬಿದ್ದ ಪರಿಣಾಮ ಹಲವರು ಜೀವ ಕಳೆದುಕೊಂಡಿದ್ದರು. ಈಗ ನಿಮ್ಮ ಮೈತ್ರಿ ಸರ್ಕಾರ ಟಿಪ್ಪು ಜಯಂತಿ ವಿರೋಧಿಸುವವರನ್ನು ಜೈಲಿಗೆ ಕಳಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ನಾಮ ಮಾಡುವ ಮೂಲಕವಾದರೂ ಟಿಪ್ಪು ಜಯಂತಿ ಮಾಡುತ್ತೇವೆ ಎಂಬ ಸಂದೇಶ ನೀಡಿದೆ. ಸಿದ್ದರಾಮಯ್ಯ ತಾವೊಬ್ಬ ಟಿಪ್ಪು ಅಭಿಮಾನಿ ಎಂದು ನೇರಾ ನೇರವಾಗಿ ಹೇಳಿಕೊಂಡು ಜಯಂತಿ ಆಚರಣೆಗೆ ಚಾಲನೆ ನೀಡಿದ್ದರು. ಈ ರೀತಿ ನೇರಾ ನೇರವಾಗಿರುವ ವಿರೋಧಿಗಳನ್ನು ಎದುರಿಸುವುದು ಯಾವುದೇ ಸಮಾಜಕ್ಕೆ ಆರೋಗ್ಯಕರವೇ ಹೌದು, ಆದರೆ ದೇವಾಲಯಗಳಿಗೆ ಭೇಟಿ ನೀಡುತ್ತಾ ಹೋಮ-ಹವನ ಮಾಡಿಸುತ್ತಾ ಒಳಗಿಂದಲೇ ಗೆದ್ದಲ ಹುಳುಗಳ ತರ ಪ್ರಜ್ಞಾಪೂರ್ವಕವಾಗಿಯೂ, ಅವಕಾಶವಾದಿತನಕ್ಕೋ ಒಟ್ಟಿನಲ್ಲಿ ಸಂಸ್ಕೃತಿಯನ್ನು ನಾಶ ಮಾಡುವವರ ಬಗ್ಗೆ ಯಾವುದಕ್ಕೂ ಎಚ್ಚರದಿಂದ ಇರಬೇಕಿದೆ. ಕೊನೆಯದಾಗಿ ಮಾತೆತ್ತಿದರೆ ದೇವಾಲಯಗಳನ್ನು ಸುತ್ತುತ್ತೀರಲ್ಲಾ ಮುಖ್ಯಮಂತ್ರಿಗಳೇ, ಮೇಲುಕೋಟೆ ಪ್ರಾಂತ್ಯದಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿದಾಗ ನಿಮಗೊಂದಷ್ಟು ವ್ಯವಧಾನವಿದ್ದರೆ ಕ್ಷೇತ್ರ ಪರಿಚಯ ಮಾಡಿಕೊಳ್ಳುತ್ತಾ, ಅಲ್ಲಿನ ಅರ್ಚಕರನ್ನು ಕೇಳಿ ಮಂಡ್ಯಂ ಅಯ್ಯಂಗಾರರು ದೀಪಾವಳಿಯೇ ಆಚರಿಸುವುದಿಲ್ಲವಂತೆ.. ಯಾಕೆ ಅಂತ, ಅವರು ನಿಮ್ಮ ಆರಾಧ್ಯ ದೈವ ಟಿಪ್ಪು ಈ ನಾಡಿನ ಸಂಸ್ಕೃತಿಗೆ ಕೊಟ್ಟ ಕೊಡುಗೆ ಬಗ್ಗೆ ವಿವರವಾಗಿ ತಿಳಿಸುತ್ತಾರೆ.  ಹ್ಹಾ... ಇಷ್ಟವಿಲ್ಲದಿದ್ದರೆ ಮಂಡ್ಯಂ ಅಯ್ಯಂಗಾರರ ಕಥೆಯನ್ನು ಕೇಳದೇ ಮನೆಯಲ್ಲಿಯೇ ಇದ್ದುಬಿಡಿ ಆದರೆ ಟಿಪ್ಪುವನ್ನು ವಿರೋಧಿಸಿದರೆಂದು ನೀವು ಅವರ ಮೇಲೂ ಕೇಸ್ ಹಾಕಬೇಡಿ.. ಸದಾ ಬೂಟಾಟಿಕೆಯನ್ನೇ ಮಾಡುವ ನಿಮ್ಮ ಸರ್ಕಾರದಿಂದ, ಸತ್ಯ ಹೇಳಿದ ರಾಷ್ಟ್ರೀಯವಾದಿ ಬರಹಗಾರರನ್ನು ಮಧ್ಯರಾತ್ರಿ ಬಂಧಿಸುವುದನ್ನು ಬಿಟ್ಟರೆ ಮತ್ತೇನು ನಿರೀಕ್ಷಿಸಲು ಸಾಧ್ಯ? ಈ ವರೆಗೂ ಮೊಘಲರ ಆಡಳಿತದಲ್ಲಿದ್ದ ನಿರಂಕುಶ ಪ್ರಭುತ್ವ, ಟಿಪ್ಪು ನಿರಂಕುಶ ಪ್ರಭುತ್ವವನ್ನು ಪಠ್ಯದಲ್ಲಷ್ಟೇ ಓದಿದ್ದೆವು, ಈಗ ಪ್ರತ್ಯಕ್ಷ ನೋಡುತ್ತಿದ್ದೇವೆ ಅಷ್ಟೇ..! 

Tuesday 26 June 2018

ಅಹಂ ನಿಂದ ಅಹಂ ಬ್ರಹ್ಮಾಸಿಯೆಡೆಗೆ ನಡೆದ ಸಂತ ಸದಾಶಿವ ಬ್ರಹ್ಮೇಂದ್ರ

ನವಾಬ ಸದಾಶಿವ ಬ್ರಹ್ಮೇಂದ್ರರ ಕೈ ಕತ್ತರಿಸುತ್ತಿರುವ ಕೆತ್ತನೆ

                                           
17-18 ನೇ ಶತಮಾನ. ಆಂಧ್ರದಿಂದ ಮೋಕ್ಷಯಿಂಟಿ ಸೋಮಸುಂದರ ಅವಧಾನಿ ಹಾಗೂ ಪಾರ್ವತಿ ದಂಪತಿಗಳು ಮಧುರೈ ಪ್ರಾಂತ್ಯಕ್ಕೆ ಬಂದು ನೆಲೆಸಿದ್ದರು. "ಗೃಹ್ಣಾಮಿ ತೇ ಸುಪ್ರಜಾಸ್ತ್ವಾಯ ಹಸ್ತಂ ಮಯಾ ಪತ್ಯಾ ಜರದಷ್ಠಿರ್ಯಥಾsಸಃ" ಎಂಬ ಪಾಣಿಗ್ರಹಣದ ಮಂತ್ರವನ್ನು ಜೀವಿಸಿದ್ದ ದಂಪತಿಗಳು. ಸೋಮಸುಂದರ ಅವಧಾನಿಗಳಂತೂ ಸದಾ ಯೋಗ ಸಾಧನೆಯಲ್ಲೇ ನಿರತರಾಗಿದ್ದ ಋಷಿತುಲ್ಯ ಗೃಹಸ್ಥರು. ಪುತ್ರ ಸಂತಾನಕ್ಕಾಗಿ ರಾಮನಾಥೇಶ್ವರನಲ್ಲಿ ಪ್ರಾರ್ಥಿಸಿದ್ದ ಆ ಋಷಿತುಲ್ಯ ಗೃಹಸ್ಥರಲ್ಲಿ ಶಿವರಾಮಕೃಷ್ಣನೆಂಬ ಹೆಸರಿನಲ್ಲಿ ಮಹಾನ್ ಬ್ರಹ್ಮಜ್ಞಾನಿಯೇ ಅವತರಿಸಿದ್ದ. ತರ್ಕಶಾಸ್ತ್ರ ನಿಷ್ಣಾತನಾಗಿ, ವಾಗ್ಗೇಯಕಾರನಾಗಿ ವಿಜೃಂಭಿಸಿದ ಅವರು ಕೊನೆಗೆ ಸಕಲವನ್ನೂ ತೊರೆದು "ಪಿಬರೇ ರಾಮ ರಸಂ... ನಂತಹ ಶುದ್ಧ ಆಧ್ಯಾತ್ಮ ಕೀರ್ತನೆಗಳನ್ನು ರಚಿಸಿ, ಸಂತನಾಗಿ, ಬ್ರಹ್ಮಜ್ಞಾನಿಗಳಿಗೆ ಇಂದ್ರಸಮಾನನಾಗಿ ಸದಾಶಿವ ಬ್ರಹ್ಮೇಂದ್ರನೆಂಬ ಅಭಿದಾನದಿಂದ ಜೀವನ್ಮುಕ್ತರಾದರು.

ಸದಾಶಿವ ಶಿವ ಬ್ರಹ್ಮೇಂದ್ರರ ವ್ಯಕ್ತಿತ್ವ ಹುಟ್ಟಿನಿಂದಲೇ ಸಾತ್ವಿಕವಾದ ವ್ಯಕ್ತಿತ್ವವಾದರೂ, ಜೀವನ್ಮುಕ್ತರಂತೇನೂ ಇರಲಿಲ್ಲ. ಅಥವಾ ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ಕೀರ್ತನೆಗಳನ್ನು ರಚಿಸುವ ವಾಗ್ಗೇಯಕಾರನ ಚರ್ಯೆಯೂ ತೀವ್ರವಾದದ್ದೇನು
ಆಗಿರಲಿಲ್ಲ. ವೇದಗಳನ್ನು ಅಭ್ಯಾಸ ಮಾಡಿದ್ದ ವಿದ್ವಾಂಸರಾದ ತಂದೆಯೇ ಶಿವರಾಮಕೃಷ್ಣನ ಮೊದಲ ಗುರುಗಳು. ತಿರುವಿಶೈನಲ್ಲೂರಿನ ರಾಮಭದ್ರ ದೀಕ್ಷಿತರಲ್ಲಿ ಶಾಸ್ತ್ರಾಧ್ಯಯನ. ಜೊತೆ ಜೊತೆಗೇ ಮರುದಾನಲ್ಲೂರು ಸದ್ಗುರು ಸ್ವಾಮಿಗಳು, ಬೋಧೇಂದ್ರ ಸರಸ್ವತಿಗಳು ಹಾಗೂ ಶ್ರೀಧರ ವೆಂಕಟೇಶ ಅಯ್ಯವಾಳರೆಂಬ ಸಂಕೀರ್ತನ ಸಂಪ್ರದಾಯದ ತ್ರಿಮೂರ್ತಿಗಳ ಸಂಪರ್ಕವೂ ಬೆಳೆಯಿತು. 17 ವರ್ಷದವನಾಗಿದ್ದಾಗ ವಿವಾಹವೂ ಆಯಿತು. ಅತ್ಯಂತ ಕಿರಿಯ ವಯಸ್ಸಿನಲ್ಲೇ
ಶಿವರಾಮಕೃಷ್ಣರಲ್ಲಿದ್ದ ಶಾಸ್ತ್ರಗಳ ಮೇಲಿನ ಅದ್ಭುತ ಪಾಂಡಿತ್ಯ, ಆಧ್ಯಾತ್ಮ ಜ್ಞಾನವನ್ನು ಕಂಡು ಆತನ ಗುರುಗಳೂ ಅಚ್ಚರಿಗೊಂಡಿದ್ದರು. ಪರಮ ಶಿವೇಂದ್ರರೆಂಬ ಪಂಡಿತರೂ, ಯತಿಗಳಿಂದ ಶಿಷ್ಯತ್ವ ಪಡೆದ ನಂತರದ ದಿನಗಳಲ್ಲಿ ಶಿವರಾಮಕೃಷ್ಣರ ಪಾಂಡಿತ್ಯ ಶಕ್ತಿ, ತರ್ಕ ಶಕ್ತಿ ಮತ್ತಷ್ಟು ತೀಕ್ಷ್ಣವಾಯಿತು. ವಾದಗಳಿಗೆ ಪ್ರತಿವಾದ ಹೂಡಿ ಎದುರಾಳಿ ವಿದ್ವಾಂಸರನ್ನು, ಪಂಡಿತರನ್ನು ಮಣಿಸುತ್ತಿದ್ದ ಶಿವರಾಮಕೃಷ್ಣರ ತರ್ಕ ಸಾಮರ್ಥ್ಯಕ್ಕೆ ಬೆರಗಾಗಿದ್ದ ಮೈಸೂರು ಮಹಾರಾಜರು ಅವರನ್ನು ತಮ್ಮ ಆಸ್ಥಾನ ವಿದ್ವಾಂಸರಾಗಲು ಆಹ್ವಾನವಿತ್ತರು. ಅಲ್ಲಿಯೂ ತಮ್ಮೊಂದಿಗೆ ವಾದ ಮಾಡಲು ಬರುತ್ತಿದ್ದ ಪಂಡಿತರು, ವಿದ್ವಾಂಸರುಗಳ ವಾದವನ್ನು ಆಪೋಷನ ತೆಗೆದುಕೊಳ್ಳುವ ಕಾರ್ಯ ಮುಂದುವರೆಯಿತು.

ಅಷ್ಟೇ ಅಲ್ಲ. ಬರುಬರುತ್ತಾ ಶಿವರಾಮಕೃಷ್ಣರೆದುರು ತಮ್ಮ ಪಾಂಡಿತ್ಯ ಪ್ರದರ್ಶನ ಮಾಡುವುದೇ ಪ್ರತಿಷ್ಠೆಯ ವಿಷಯವಾಯಿತು. ತಮ್ಮ ಪಾಂಡಿತ್ಯ ಪ್ರದರ್ಶನ ಮಾಡಿ ಪ್ರಶಸ್ತಿಗಳನ್ನು ಪಡೆಯಲು ಪಂಡಿತರು ಹೆಚ್ಚು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಥಾನಕ್ಕೆ
ಭೇಟಿ ನೀಡುತ್ತಿದ್ದರು. ಆದರೇನಂತೆ ಶಿವರಾಮಕೃಷ್ಣರ ಪಾಂಡಿತ್ಯದೆದುರು ಯಾರೂ ಸಮರ್ಥವಾಗಿ ವಾದ ಮಂಡಿಸಲು ಸಾಧ್ಯವಾಗುತ್ತಿರಲಿಲ್ಲ. ಸೋತವರಿಗೆಲ್ಲಾ ಶಿವರಾಮಕೃಷ್ಣರು ನಿಗದಿಪಡಿಸುತ್ತಿದ್ದ ವೇತನ (ಅಥವಾ ನಗದು)ವಷ್ಟೇ ಗಟ್ಟಿ. ಸಾಮಾನ್ಯವಾಗಿ ಅತಿ ಬುದ್ಧಿವಂತನ ವಿರುದ್ಧ ಉಳಿದವರು ತಿರುಗಿಬೀಳುವಂತೆ ಶಿವರಾಮಕೃಷ್ಣರ ಪ್ರಕರಣದಲ್ಲಿಯೂ ಆಯಿತು. " ಶಿವರಾಮಕೃಷ್ಣರಿಗೆ ಅವರ ಪಾಂಡಿತ್ಯದ ಬಗ್ಗೆ ಅಹಂಕಾರವಿದೆ, ಅವರ ಸಾಧನೆ ಮುಂದಿನ ಹಂತಕ್ಕೆ ಹೋಗಬೇಕೆಂದರೆ ಇದರಿಂದ ಹೊರತರಬೇಕು ಎಂದು ಪಾಂಡಿತ್ಯದ ಬಿಸಿಯನ್ನು ತಡೆಯಲಾಗದವರು ಪರಮ ಶಿವೇಂದ್ರರ ಬಳಿ ಉಸುರಿದರು. ಶಿವರಾಮಕೃಷ್ಣರನ್ನುದ್ದೇಶಿಸಿ "ವಾದದಲ್ಲಿ ಬೇರೆಯವರನ್ನು ಮೌನಿಯಾಗಿಸುವುದು ಹೇಗೆ ಎಂಬುದು ನಿನಗೆ ಚೆನ್ನಾಗಿಯೇ
ತಿಳಿದಿದೆ, ಆದರೆ ನೀನು ಮೌನಿಯಾಗಿ ಜ್ಞಾನಕ್ಕೆ ಪ್ರಯತ್ನಿಸುವುದು, ಸಾಕ್ಷಾತ್ಕಾರ ಪಡೆಯುವುದು ಯಾವಾಗ? ಇನ್ನೂ ಎಷ್ಟು ಅಂತ ವಾದ ಮಾಡುತ್ತೀಯ"? ಎಂದಿದ್ದರಂತೆ ಪರಮಶಿವೇಂದ್ರರರು. ಆ ಘಟನೆಯೇ ವಾಚಾಳಿಯಾಗಿದ್ದ ಶಿವರಾಮಕೃಷ್ಣರನ್ನು ಅಂತರ್ಮುಖಿ, ಮೌನಿ ಸದಾಶಿವ ಬ್ರಹ್ಮೇಂದ್ರರನ್ನಾಗಿ ಮಾಡಿದ್ದು. ಬ್ರಹ್ಮಜ್ಞಾನ ಪಡೆಯುವ ಹಾದಿಯನ್ನು ತೋರಿದ್ದು. ಗುರುವಿನ ಕೃಪೆಯ ನಂತರ ಶಿವರಾಮಕೃಷ್ಣ ಮತ್ತೆಂದೂ ಮಾತನಾಡಲಿಲ್ಲ. ಹುಟ್ಟುವಾಗ ಕಾಮ ಕ್ರೋಧಗಳಿರಲಿಲ್ಲ, ಲೋಭ, ಮತ್ಸರಗ, ಮದಗಳಿರಲಿಲ್ಲ. ವೇದ-ಶಾಸ್ತ್ರಜ್ಞಾನಗಳನ್ನು ಕಲಿತದ್ದರಿಂದ  ಜೊತೆ ಬಂದದ್ದು ಒಂದೇ, ಅದು ವಾದದ ಹುಚ್ಚು... ಆದೂ ಬಿಟ್ಟ ನಂತರ ಏನು ತಾನೆ ಉಳಿದೀತು?

ಜಗತ್ತೇ ಹಾಗೆ, ಜೀವಂತವಿದ್ದ ಮೇಲೆ ಅರಿಷಡ್ವರ್ಗಗಳಿಗೋ, ಅಥವಾ ಮತ್ತಾವುದಕ್ಕೋ ಜೋತು ಬಿದ್ದಿದರಬೇಕು. ಹಾಗಿದ್ದಾಗಲೇ ಸಮಾಜ 'ಸಹಜ'ವೆನ್ನುವಂತೆ ನೋಡುತ್ತದೆ. ಎಲ್ಲ ಬಂಧಗಳಿಂದ ಕಳಚಿಕೊಂಡವನನ್ನು ಹುಚ್ಚನೆಂಬಂತೆ ನೋಡುತ್ತದೆ. ಶುಕನಿಂದ ಮೊದಲುಗೊಂಡು ಆಗಿಹೋದ ಅದೆಷ್ಟೋ ಬ್ರಹ್ಮಜ್ಞಾನಿಗಳನ್ನೂ ಸಂಸಾರ ಸಾಗರದಲ್ಲಿ ಸಿಲುಕಿದ್ದ ಮರುಳರು ’ಅವರಿಗೆ’ ಮತಿಭ್ರಮಣೆಯಾಗಿದೆಯೆಂದೇ ಹೇಳಿದ್ದು.... ಗುರುವಿನ ಉಪದೇಶ ಪಡೆದು ಮೌನಿ, ಅಂತರ್ಮುಖಿಯಾದ ಸದಾಶಿವ ಬ್ರಹ್ಮೇಂದ್ರರನ್ನೂ ಅಂದಿದ ಸಮಾಜ ಎಂದಿನಂತೆಯೇ ಮರುಳ ಎಂದಿತು. ಅಲ್ಲವೇ?, ಎದುರು ವಾದ ಮಂಡಿಸಲು ಬಂದ ಶಾಸ್ತ್ರವೇತ್ತರನ್ನು, ವಿದ್ವಾಂಸರನ್ನು ಜಿತೋಸ್ಮಿ ಎನ್ನಿಸುತ್ತಿದ್ದ ಸಾಮರ್ಥ್ಯ, ಪಾಂಡಿತ್ಯದಿಂದ ಮನ್ನಣೆ, ಆಸ್ಥಾನ ವಿದ್ವಾಂಸನಾಗಿ ಧನ ಕನಕಗಳನ್ನು ಸಂಪಾದಿಸಿ ಸುಖವಾಗಿರಬಹುದಾಗಿದ್ದ ವ್ಯಕ್ತಿ, ಕಾಶಾಯವನ್ನೂ ಕಿತ್ತೊಗೆದು ಕೌಪೀನಧಾರಿಯಾಗಿ ಕಾಡು ಮೇಡುಗಳಲ್ಲಿ ಸಂಚರಿಸುತ್ತಿದ್ದರೆ ಮರುಳ ಎನ್ನದೇ ಮತ್ತೇನಂದಾರು?

ಸದಾಶಿವ ಬ್ರಹ್ಮೇಂದ್ರರ ಈ ಸ್ಥಿತಿಯನ್ನು ಕಂಡು ಪರಮ ಶಿವೇಂದ್ರರ ಬಳಿ ಓಡಿದ ಕೆಲವರು ಸದಾಶಿವ ಬ್ರಹ್ಮೇಂದ್ರರಿಗೆ ಮತಿಭ್ರಮಣೆಯಾಗಿದೆ, ತಲೆ ಕೆಟ್ಟಿದೆ ಎಂದಿದ್ದರಂತೆ. ಈ ಮಾತನ್ನು ಕೇಳಿದ ಪರಮಶಿವೇಂದ್ರರರು ಅಯ್ಯೊ... ಆತನಿಗೆ ಬಂದ ಮತಿಭ್ರಮಣೆ (ಬ್ರಹ್ಮಜ್ಞಾನ) ನನಗೆ ಉಂಟಾಗಲಿಲ್ಲವೇ...ಎಂದಿದ್ದರಂತೆ. ಬ್ರಹ್ಮಜ್ಞಾನ ಪಡೆದು ಅಲೆಯುತ್ತಿರುವವರಿಗೆ ಪ್ರಪಂಚದ ಅರಿವು ಇರುವುದಿಲ್ಲ. ಹೀಗೆ ಎಲ್ಲೆಂದರಲ್ಲಿ ಮೈ ಮೇಲೆ ವಸ್ತ್ರವೂ ಇಲ್ಲದೇ ಅಲೆದಾಡುತ್ತಿದ್ದ ಸದಾಶಿವ ಬ್ರಹ್ಮೇಂದ್ರರು ನವಾಬನ ಅಂತಃಪುರ ಪ್ರವೇಶಿಸುತ್ತಾರೆ. ರಾಣಿವಾಸದ ಮೂಲಕ ಹಾದುಹೋಗಿದ್ದ ಬ್ರಹ್ಮೇಂದ್ರರನ್ನು ಕಂಡ ನವಾಬ ಕೆಂಡಾಮಂಡಲನಾಗಿ ಬ್ರಹ್ಮೇಂದ್ರರ ಕೈ ಕತ್ತರಿಸುತ್ತಾನೆ. ಆದರೆ ದೇಹಧರ್ಮವನ್ನು ಮೀರಿದ್ದ ಸದಾಶಿವ ಬ್ರಹ್ಮೇಂದ್ರರು ಏನೂ ಆಗೇ ಇಲ್ಲವೆಂಬಂತೆ ತಮ್ಮ ಪಾಡಿಗೆ ತಾವು ಹೋಗುತ್ತಿದ್ದರು. ಸದಾಶಿವ ಬ್ರಹ್ಮೇಂದ್ರರ ಈ ನಿರ್ಲಿಪ್ತ ಸ್ಥಿತಿಯನ್ನು ಕಂಡು ನಡುಗಿದ ನವಾಬ ತುಂಡಾಗಿ ಬ್ರಹ್ಮೇಂದ್ರರ ಕ್ಷಮೆ ಕೇಳಿದ್ದ.

ಸದಾಶಿವಬ್ರಹ್ಮೇಂದ್ರರೇನೋ ಪತ್ನಿ-ಕುಟುಂಬದ ಆದಿಯಾಗಿ ತಮ್ಮ ಗತ ಜೀವನದಿಂದ ಕಳಚಿಕೊಂಡಿದ್ದರು ಸಂನ್ಯಾಸ ಸ್ವೀಕರಿಸಿ, ಆ ಸ್ಥಿತಿಯನ್ನೂ ದಾಟಿ, ಕಾಶಾಯವನ್ನೂ ಕಿತ್ತೊಗೆದು, ಪ್ರಪಂಚದ ಸಂಸರ್ಗವನ್ನು ಅವರು ಬಿಟ್ಟರೂ ಅವರನ್ನು ಈ ಪ್ರಪಂಚ ಬಿಡಲಿಲ್ಲ.  ಪೂರ್ವಾಶ್ರಮದಲ್ಲಿ ವಾದದಲ್ಲಿ ತಮ್ಮ ಬಳಿ ಸೋತಿದ್ದ ವಿದ್ವಾಂಸನೊಬ್ಬ ಇವರನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆಂಬ ಉದ್ದೇಶದಿಂದಲೇ ಇವರಿದ್ದಲ್ಲಿಗೇ ಬರುತ್ತಾನೆ. ಬ್ರಹ್ಮೇಂದ್ರರ ಮೌನಕ್ಕೆ ಭಂಗ ಉಂಟುಮಾಡುವುದೇ ಆತನ ಉದ್ದೇಶ, ಗುರುಗಳ ಬಗ್ಗೆ ಕೇಳಿ, ಮಾತನಾಡುವಂತೆ ಮಾಡುವುದು ಆತನ ಉದ್ದೇಶ. " ನೀನು ಸಂನ್ಯಾಸಿಯೇ? ನಿಮ್ಮ ಗುರುಗಳು ಶ್ರೇಷ್ಠ ಗುರುಗಳೋ? ಅವರು ಶ್ರೇಷ್ಠರಾಗಿದ್ದರೆ ಅವರ ಶ್ರೇಷ್ಠತೆಯನ್ನು ಹೇಳು ನೋಡೋಣ ಎನ್ನುತ್ತಾನೆ. ಆತನ ಮಾತನ್ನು ಕೇಳಿದ ಮೇಲೆಯೂ ಸದಾಶಿವ ಬ್ರಹ್ಮೇಂದ್ರರು ಮೌನ ಮುರಿಯುವುದಿಲ್ಲ, ಆದರೆ ಅವರಿದ್ದ ನದಿಯ ಪಕ್ಕದಲ್ಲೇ ಓರ್ವ ಬಟ್ಟೆ ಒಗೆಯುತ್ತಿದ್ದ ಅಗಸನನ್ನು ಕರೆದು ತಲೆ ಮೇಲೆ ಕೈ ಇಡುತ್ತಾರೆ. ಬಟ್ಟೆ ಒಗೆಯುತ್ತಿದ್ದವನ ಬಾಯಲ್ಲಿ ಸಂಸ್ಕೃತ ನಿರರ್ಗಳವಾಗಿ ಮೂಡುತ್ತದೆ. ನಿಂತಲ್ಲೇ  ಸದಾಶಿವ ಬ್ರಹ್ಮೇಂದ್ರರ ಗುರುಗಳ ಶ್ರೇಷ್ಠತೆಯನ್ನು ಸ್ತುತಿಸುವ ಆಶು ಶ್ಲೋಕ ಹೇಳಲು ಪ್ರಾರಂಭಿಸುತ್ತಾನೆ. ಈಗ ಮೌನಿಯಾಗುವ ಸರದಿ ಎರಡನೇ ಬಾರಿಗೆ ಸದಾಶಿವ ಬ್ರಹ್ಮೇಂದ್ರರ ಬಳಿ ಸೋತಿದ್ದ
ವಿದ್ವಾಂಸನದ್ದಾಗಿತ್ತು!. ಮಾನಸ ಸಂಚರರೇ... ಪಿಬರೇ ರಾಮ ರಸಂ.. ಖೇಲತಿ ಮಮ ಹೃದಯೇ... ತುಂಗಾ ತರಂಗೆ...  ಗಾಯತಿ ವನಮಾಲಿ.... ಸೇರಿದಂತೆ ಸದಾಶಿವ ಬ್ರಹ್ಮೇಂದ್ರರಿಂದ ಕರ್ನಾಟಕ ಸಂಗೀತ ಪದ್ಧತಿಗೆ ಹೊಂದುವಂತಹ ಕೀರ್ತನೆಗಳ ರಚನೆಯಾದದ್ದು ಈ ಘಟನೆಯ ನಂತರವೇ ಎನ್ನುತ್ತಾರೆ ಬ್ರಹ್ಮೇಂದ್ರರ ಕುರಿತು ತಿಳಿದಿರುವ ಅನೇಕ ವಿದ್ವಾಂಸರು. ಈ ಕೀರ್ತನೆಗಳ ರಚನೆಗಳಿಗೂ ಒಂದು ಸ್ವಾರಸ್ಯಕರವಾದ ಹಿನ್ನೆಲೆಯಿದೆ. ಸದಾಶಿವ ಬ್ರಹ್ಮೇಂದ್ರರು ಮೌನ ಸಾಧನೆ ಕೈಗೊಂಡು ಅದೆಷ್ಟೋ ವರ್ಷಗಳು ಕಳೆದಿರುತ್ತದೆ. ಗುರುಗಳೂ ಬ್ರಹ್ಮೈಕ್ಯರಾಗಿರುತ್ತಾರೆ. ಗುರುಗಳು ಮುಕ್ತರಾದರೂ ಅವರ ಉಪದೇಶದಂತೆಯೇ ಮೌನ ವ್ರತ ಮುಂದುವರೆಯುತ್ತಿರುತ್ತದೆ. ಈ ನಡುವೆ ಮತ್ತೋರ್ವ ಶ್ರೇಷ್ಠ ವಿದ್ವಾಂಸರಾಗಿದ್ದ ಶ್ರೀಧರ ಅಯ್ಯವಾಳ್ ಸ್ವಾಮಿ ಎಂಬುವವರು ಸದಾಶಿವ ಬ್ರಹ್ಮೇಂದ್ರರನ್ನು ಭೇಟಿಯಾಗಿ " ಧ್ಯಾನದಲ್ಲಿದ್ದಾಗ ನಿಮ್ಮ ಗುರುಗಳ ಪ್ರೇರಣೆಯಾಯಿತು. ನಿನಗೆ ಮಾತನಾಡಬೇಡ ಎಂದು ಹೇಳಿದ್ದು ವಾದ ಮಾಡಬೇಡ ಎಂದೇ ಹೊರತು ಸದಾ ಮೌನಿಯಾಗಿರು ಎಂದಲ್ಲ. ನೀನು ಕೀರ್ತನೆಗಳನ್ನು ರಚಿಸಬೇಕು, ಆದರೆ ನೀನು ಮಾತನಾಡದೇ ಇರುವುದರಿಂದ ಕೀರ್ತನೆಗಳು ಮೂಡುವುದಿಲ್ಲ ಎಂದು ಪ್ರೇರಣೆ ನೀಡುತ್ತಾರೆ. ಆ ಪ್ರೇರಣೆಯ ಮೂಲಕ ಸದಾಶಿವ ಬ್ರಹ್ಮೇಂದ್ರರ ಧ್ವನಿಯಿಂದ ಮೂಡಿದ ಮೊತ್ತ ಮೊದಲ ಕೀರ್ತನೆಯೇ ಪಿಬರೇ ರಾಮ ರಸಂ... ಎಂಬ ಅದ್ಭುತ ಹಾಡು... ಕೇಳುತ್ತಿದ್ದರೆ ಎಂತಹವನೂ ಒಮ್ಮೆ ವೈರಾಗ್ಯದ ಭಾವನ್ನು ಅನುಭವಿಸಿ ಬರುತ್ತಾನೆ...

ನೆರೂರಿನಲ್ಲಿರುವ ಸದಾಶಿವ ಬ್ರಹ್ಮೇಂದ್ರರ ಅಧಿಷ್ಠಾನಕ್ಕೆ ಪೂಜೆ ಸಲ್ಲಿಸುತ್ತಿರುವ ಶೃಂಗೇರಿ ಜಗದ್ಗುರುಗಳು

ಸದಾಶಿವ ಬ್ರಹ್ಮೇಂದ್ರರ ಮೌನದ ತಪಸ್ಸಿನ ಫಲವಾಗಿ ಕೀರ್ತನೆಗಳಷ್ಟೇ ಅಲ್ಲದೇ ಆತ್ಮ ವಿದ್ಯಾವಿಲಾಸ ಎಂಬ ಅದ್ವೈತ ಗ್ರಂಥವೂ ರಚನೆಯಾಗುತ್ತದೆ. ಅದೇ ಇಂದಿಗೂ ಅದ್ವೈತಿಗಳಿಗೆ, ಆತ್ಮಸಾಕ್ಷಾತ್ಕಾರಕ್ಕಾಗಿ ತಪಿಸುವವರಿಗೆ ದಾರಿ ದೀವಿಗೆಯಾಗಿದೆ. ಎಷ್ಟರ ಮಟ್ಟಿಗೆ ಅಂದರೆ ಅವಧೂತ ಸ್ಥಿತಿಗೆ ತಲುಪಿದ್ದ ಶೃಂಗೇರಿಯ ಚಂದ್ರಶೇಖರ ಭಾರತೀ ಸ್ವಾಮಿಗಳು ಸದಾಶಿವ ಬ್ರಹ್ಮೇಂದ್ರರ ಆತ್ಮ ವಿದ್ಯಾ ವಿಲಾಸವನ್ನು ಅನುಸಂಧಾನ ಮಾಡಿಕೊಂಡಿದ್ದರು. ಚಂದ್ರಶೇಖರ ಭಾರತಿ ಸ್ವಾಮಿಗಳಷ್ಟೇ ಅಲ್ಲ. ಅವರ ಗುರುಗಳಾಗಿದ್ದ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮಿಗಳವರೂ, ಉಗ್ರನೃಸಿಂಹ ಭಾರತೀ ಸ್ವಾಮಿಗಳೂ ಸಹ ಸದಾಶಿವ ಬ್ರಹ್ಮೇಂದ್ರರನ್ನು ಆರಾಧಿಸುತ್ತಿದ್ದರು. ಸಾಮಾನ್ಯವಾಗಿ ಶೃಂಗೇರಿಯ ಜಗದ್ಗುರುಗಳು ತಮ್ಮ ಪರಂಪರೆಯ ಗುರುಗಳ ಅಧಿಷ್ಠಾನಕ್ಕೆ ನಮಸ್ಕರಿಸಿ ಪೂಜೆ ಸಲ್ಲಿಸುವುದನ್ನು ಹೊರತುಪಡಿಸಿದರೆ ಪರಂಪರೆಗೆ ಸಂಬಂಧಪಡದ ಯತಿಗಳಾಗಲೀ, ಅವಧೂತರಿಗಾಗಲೀ ನಮಸ್ಕರಿಸುವ ಅಥವಾ ಅಧಿಷ್ಠಾನಗಳಿಗೆ ನಮಸ್ಕರಿಸುವ ಪದ್ಧತಿ ಹೊಂದಿಲ್ಲ.

ವಿಜಯ ಯಾತ್ರೆ ಕೈಗೊಂಡಾಗ ತಮಿಳುನಾಡಿನ ನೆರೂರಿನ ಆಸುಪಾಸಿನ ಪ್ರದೇಶಗಳಿಗೆ ಭೇಟಿ ನೀಡಿದರೆ ತಪ್ಪದೇ ನೆರೂರಿನಲ್ಲಿರುವ ಸದಾಶಿವಬ್ರಹ್ಮೇಂದ್ರರ ಸಮಾಧಿ(ಅಧಿಷ್ಠಾನ)ಕ್ಕೆ ತೆರಳಿ ಸ್ವತಃ ಪೂಜೆ ನೆರವೇರಿಸುತ್ತಾರೆ.

ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಸ್ವಾಮಿಗಳು ತಮಿಳುನಾಡಿನಲ್ಲಿ ವಿಜಯಯಾತ್ರೆಯ ವೇಳೆ ತಿರುಚ್ಚಿಯ ಸಮೀಪ ಪಯಣಿಸುತ್ತಿದ್ದಾಗ ಅವರ ಪಲ್ಲಕ್ಕಿ ಹಠಾತ್ತನೆ ನಿಂತು ಬಿಟ್ಟಿತು. ಪಲ್ಲಕ್ಕಿ ಹೊತ್ತವರು ತಮ್ಮನ್ಯಾವುದೋ ಶಕ್ತಿ ಎಳೆದು
ನಿಲ್ಲಿಸಿದೆ ಎಂದು ಅಳಲು ತೋಡಿಕೊಂಡಾಗ ಧ್ಯಾನಸ್ಥರಾದ ಗುರುಗಳಿಗೆ ಸದಾಶಿವ ಬ್ರಹ್ಮೇಂದ್ರರರ ಶಕ್ತಿ ಅರಿವಾಗುತ್ತದೆ. ಸಮಾಧಿಯ ದರ್ಶನ ಪಡೆದು ಮೂರು ದಿನ ಅಲ್ಲೇ ಉಪವಾಸವಿದ್ದು ಧ್ಯಾನಾವಸ್ಥೆಯಲ್ಲಿದ್ದರು. ಕೊನೆಗೆ ಸ್ವತಃ ಸದಾಶಿವ ಬ್ರಹ್ಮೇಂದ್ರರು ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಸ್ವಾಮಿಗಳೊಂದಿಗೆ ಮಾತನಾಡಿದ್ದರಂತೆ. ಅವರೊಂದಿಗೆ ಮಾತಾಡುತ್ತಿರುವ ದನಿ ಮಾತ್ರ ಕೇಳಿಸುತ್ತಿತ್ತು. ಆದರೆ ಯಾರೂ ಕಾಣಿಸುತ್ತಿರಲಿಲ್ಲ. ಹೀಗೆ ಬ್ರಹ್ಮೇಂದ್ರರ ದರ್ಶನ ಪಡೆದ ಶಿವಾಭಿನವ ನೃಸಿಂಹ ಭಾರತಿಗಳು ಸದಾಶಿವ ಬ್ರಹ್ಮೇಂದ್ರರನ್ನು ಕುರಿತು ಸದಾಶಿವೇಂದ್ರ ಸ್ತವ ಹಾಗೂ ಸದಾಶಿವೇಂದ್ರ ಪಂಚರತ್ನ ಎಂಬ ಶ್ಲೋಕಗಳನ್ನೂ ರಚಿಸಿಸಿದ್ದಾರೆ. ಶೃಂಗೇರಿಯ ಪರಂಪರೆಯಲ್ಲಿ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಸ್ವಾಮಿಗಳು ಅಭಿನವ ’ಶಂಕರ’ ಎಂದೇ ಖ್ಯಾತರಾದವರು, ಯತಿಶ್ರೇಷ್ಠರು, ಅಂತಹ ಯತಿಶ್ರೇಷ್ಠರೂ ಸದಾಶಿವ ಬ್ರಹ್ಮೇಂದ್ರರನ್ನು ಆರಾಧಿಸಿ ಮುಮುಕ್ಷತ್ವಕ್ಕಾಗಿ ಪ್ರಾರ್ಥಿಸಿ ಅವರ ಕುರಿತು ಶ್ಲೋಕಗಳನ್ನು ರಚಿಸಿದ್ದರೆಂದರೆ ಬ್ರಹ್ಮೇಂದ್ರರ ಜೀವನ್ಮುಕ್ತ ಸ್ಥಿತಿಯ ತೀವ್ರತೆ ನಮಗೆ ಅರಿವಾದೀತು. ಹಾಗಾಗಿಯೇ ಪ್ರಾರಂಭದಲ್ಲಿ ಹೇಳಿದ್ದು, ಸಂತನಾಗಿ, ಬ್ರಹ್ಮಜ್ಞಾನಿಗಳಿಗೆ ಇಂದ್ರಸಮಾನನಾಗಿ ಸದಾಶಿವ ಬ್ರಹ್ಮೇಂದ್ರನೆಂಬ ಅಭಿದಾನದಿಂದ ಜೀವನ್ಮುಕ್ತರಾದರೆಂದು. ಸದಾಶಿವ ಬ್ರಹ್ಮೇಂದ್ರರು
 ನೆರೂರಿನಲ್ಲಿ ಸಜೀವ ಸಮಾಧಿಯಾಗಿರಬಹುದು, ಆದರೆ ಜ್ಞಾನಕ್ಕಾಗಿ ಹಪಹಪಿಸುವವರಿಗೆ, ಮುಮುಕ್ಷತ್ವಕ್ಕಾಗಿ ಪ್ರಯತ್ನ ಮಾಡುವವರಿಗೆ ಇಂದಿಗೂ ದಾರಿದೀಪವಾಗಿದೆ.


(ಮಾಸಪತ್ರಿಕೆ ಅಸೀಮಾದಲ್ಲಿ ಪ್ರಕಟಿತ ಲೇಖನ)