Friday 22 May 2015

ಭಾರತಕ್ಕೆ ಅಪಮಾನ ಮಾಡಿದ್ದು ಮೋದಿಯೋ ಅಥವಾ ಕಾಂಗ್ರೆಸ್ಸೋ?

ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಜಿನೀವಾದಲ್ಲಿ ನಡೆಯಲಿದ್ದ ವಿಶ್ವಸಂಸ್ಥೆಯ ಶೃಂಗದಲ್ಲಿ ಭಾರತವನ್ನು ಖಂಡಿಸಿ ಗೊತ್ತುವಳಿಯೊಂದನ್ನು ಮಂಡಿಸಲು 1994ರಲ್ಲಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಸಿದ್ಧತೆ ನಡೆಸಲಾಗಿತ್ತು. 51 ಸದಸ್ಯ ರಾಷ್ಟ್ರಗಳ ‘ಆರ್ಗನೈಜೇಷನ್ ಆಫ್ ಇಸ್ಲಾಮಿಕ್ ಕಾನ್ಫೆರೆನ್ಸ್ (ಒ.ಐ.ಸಿ) ಬಹಿರಂಗವಾಗಿ ಬೆಂಬಲಿಸಿದ್ದ ಕಾರಣ  ಭಾರತಕ್ಕೆ ಮುಖಭಂಗವಾಗುವ ಎಲ್ಲ ಸಾಧ್ಯತೆಗಳಿತ್ತು. ಭಾರತವನ್ನು ಮುಖಭಂಗದಿಂದ ಪಾರು ಮಾಡಬೇಕಾದ ಬಹುದೊಡ್ಡ ಜವಾಬ್ದಾರಿ ಅಂದಿನ ಕಾಂಗ್ರೆಸ್ ಪ್ರಧಾನಿ ಪಿ.ವಿ ನರಸಿಂಹರಾವ್ ಅವರ ಹೆಗಲೇರಿತ್ತು. ಆಗ ಪಿ.ವಿ ನರಸಿಂಹ ರಾವ್ ಅವರ ಕಣ್ಣಿಗೆ ಕಂಡದ್ದು ವಿಪಕ್ಷ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು!  ಸ್ವಂತ ಪಕ್ಷದ ನಾಯಕರು, ಮಂತ್ರಿವರ್ಯರಿಗಿಂತ ವಿರೋಧ ಪಕ್ಷದ ನಾಯಕ ಅಟಲ್ ಬಿಹಾರಿ ವಾಜಪೇಯಿಯವರ ಮೇಲೆಯೇ ಹೆಚ್ಚು ವಿಶ್ವಾಸ, ನಂಬುಗೆ ತೋರಿಸಿಬಿಟ್ಟರು. ಅಟಲ್ ನೇತೃತ್ವದಲ್ಲಿ ವಿಶ್ವಸಂಸ್ಥೆಗೆ ತೆರಳಿದ್ದ ಭಾರತದ ನಿಯೋಗ ಭಾರತವನ್ನು ಸಂಭವನೀಯ ಮುಖಭಂಗದಿಂದ ಪಾರುಮಾಡಿತ್ತು. ಪರಸ್ಪರ ಹೊಂದಾಣಿಕೆ ಅಥವಾ ದೇಶಕ್ಕಾಗಿ ಒಗ್ಗಟ್ಟಿನಿಂದ ಇರುವ ಮನಸ್ಥಿತಿ ಭಾರತವನ್ನು ಅತ್ಯಂತ ಅಪಾಯಕಾರಿ ಸ್ಥಿತಿಯಿಂದ ಪಾರು ಮಾಡಿತ್ತು.

ಮತ್ತೊಮ್ಮೆ ಪಿ.ವಿ ನರಸಿಂಹ ರಾವ್ ಅವರು ಇಂತಹದ್ದೇ ಹೊಂದಾಣಿಕೆಗೆ ಮಾದರಿಯಾಗಿದ್ದರು. 1995 ರಲ್ಲಿ ಪೋಖ್ರಾನ್ ನಲ್ಲಿ ಅಣು ಪರೀಕ್ಷೆಯ ತಯಾರಿ ನಡೆಸುತ್ತಿದ್ದದ್ದು ಅಮೆರಿಕದ ಉಪಗ್ರಹಗಳ ಕಣ್ಣಿಗೆ ಬಿದ್ದ ಕಾರಣ ಅಂತಾರಾಷ್ಟ್ರೀಯ ಒತ್ತಡಕ್ಕೆ ನರಸಿಂಹರಾವ್ ಮಣಿದ ಕಾರಣ ಪರೀಕ್ಷೆ ನಿಂತುಹೋಯಿತು.  1996ರಲ್ಲಿ ಅಟಲ್ ಬಿಹಾರಿಯವರ ಅಲ್ಪಾವಧಿ ಸರ್ಕಾರ ಅಧಿಕಾರಕ್ಕೆ ಬಂತು. ಅಂದು ವಾಜಪೇಯಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುಕ್ಷಣವೇ,  ನರಸಿಂಹರಾವ್ ಅಣುಪರೀಕ್ಷೆಗೆ ಎಲ್ಲವೂ ಸಿದ್ಧವಾಗಿದೆ, ಕೂಡಲೇ ಮಾಡಿ ಮುಗಿಸಿಬಿಡಿ ಎಂದು ಗೌಪ್ಯ ಚೀಟಿಯೊಂದನ್ನು ಕಳಿಸಿಕೊಟ್ಟಿದ್ದರು. ಆಡಳಿತಾಕ್ಮಕ ದೃಷ್ಟಿ ಹಾಗೂ ದೇಶದ ಸಮಗ್ರತೆ ವಿಷಯದಲ್ಲಿ cohesiveness ಎಂಬುದು ಬಹುಪಕ್ಷೀಯ ರಾಜಕಾರಣದಲ್ಲಿ ತೀರಾ ಅಗತ್ಯ ಅನ್ನಿಸುವ ಸಂಗತಿ. ದೇಶದ ಅಭಿವೃದ್ಧಿಗೆ ಅಧಿಕಾರದಲ್ಲಿರುವ ಪ್ರಧಾನಿ ಶ್ರಮಿಸಿದರೆ ಸಾಲದು, ವಿರೋಧ ಪಕ್ಷಗಳೂ ಅದಕ್ಕೆ ಬೆಂಬಲ ನೀಡಬೇಕೆಂಬುದು ಅದೆಷ್ಟೋ ಬಾರಿ ಸಾಬೀತಾಗಿದೆ. ಹಾಗಾದರೆ ವಿರೋಧ ಪಕ್ಷಗಳು ಹೇಗೆ ನಡೆದುಕೊಳ್ಳಬೇಕಿತ್ತು? ಮೊದಲೇ ಅಧಿಕೃತ ವಿರೋಧ ಪಕ್ಷದ ಸ್ಥಾನವಿಲ್ಲ, ಇಂತಹ ಸ್ಥಿತಿಯಲ್ಲಿ ಸರ್ಕಾರದ ತಪ್ಪು ನಿರ್ಧಾರಗಳನ್ನು ಜನತೆಯ ಮುಂದಿಟ್ಟು ಜನರ ವಿಶ್ವಾಸ ಗಳಿಸುವ ಬದಲು ಕಾಂಗ್ರೆಸ್ ಹಿಡಿದಿರುವ ದಾರಿ ಎಂಥಹದ್ದು?

ಒಬ್ಬ ಪ್ರಧಾನಿ ಯಶಸ್ವಿಯಾಗಿ ವಿದೇಶ ಪ್ರವಾಸ ಮುಕ್ತಾಯಗೊಳಿಸಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಪ್ರಬಲ ರಾಷ್ಟ್ರವನ್ನಾಗಿ ಮಾಡಲು ಹಗಲಿರುಳು ಶ್ರಮಿಸುತ್ತಿರಬೇಕಾದರೆ, ಕಾಂಗ್ರೆಸ್ ಮಾತ್ರ ಎಳಸು ರಾಜಕೀಯ ಮಾಡುತ್ತಾ, ಕನಿಷ್ಠ ಸಂಸ್ಕಾರವನ್ನೂ ತೋರದೇ ಪ್ರಧಾನಿಯನ್ನು ಟೀಕಿಸಲು ತೊಡಗಿದೆ. ಪ್ರಧಾನಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ತರ್ಕಬದ್ಧವಾಗಿ ಮಾತನಾಡಲೂ ಯೋಗ್ಯತೆ ಇಲ್ಲದ ಕಾಂಗ್ರೆಸ್, ಮೋದಿ ಧರಿಸುವ ಬಟ್ಟೆ, ಬೂಟಿನ ಬಗ್ಗೆ ಎಳೆ ಮಕ್ಕಳಂತೆ ಅವಹೇಳನ ಮಾಡುತ್ತಾ ಭಾರತದ ಮರ್ಯಾದೆ ಹರಾಜು ಹಾಕುತ್ತಿದೆ. ಇಷ್ಟಾದರೂ ಭಾರತದ ಮರ್ಯಾದೆ ತೆಗೆಯುತ್ತಿರುವವರು ಪ್ರಧಾನಿ ಮೋದಿ ಎಂಬ ಆರೋಪ!

ಭಾರತದಲ್ಲೇನೋ ಕಾಂಗ್ರೆಸ್ ನವರ ಯೋಗ್ಯತೆ, ದುರಾಡಳಿತದ ಬಗ್ಗೆ ಎಲ್ಲರಿಗೂ ತಿಳಿದಿದ್ದಾರೆ, ಆದರೆ ಇತಿಹಾಸದ ಪಠ್ಯ ಪುಸ್ತಕಗಳು ಬದಲಾಗುವವರೆಗೆ ಹಾಗೂ ಜಾಗತಿಕ ಮಟ್ಟದಲ್ಲಿ ಸದ್ಯಕ್ಕೆ ಭಾರತದ ಬಗ್ಗೆ ಇರುವ ಪಾಶ್ಚಾತ್ಯ ದೃಷ್ಟಿಕೋನದ ಭಾವನೆ ಅಳಿದು, ವಾಸ್ತವದ ಭಾವನೆಯೊಂದು ಮೂಡುವವರೆಗಾದರೂ ಒಂದಷ್ಟು ಜನ 6 ದಶಕಗಳ ಕಾಲ ಆಳ್ವಿಕೆ ನಡೆಸಿರುವ, 120 ವರ್ಷಕ್ಕೂ ಮೀರಿದ ಇತಿಹಾಸ ಹೊಂದಿರುವ ಕಾಂಗ್ರೆಸ್ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೂ, ಸಂಪೂರ್ಣವಾಗಿ ಅಲ್ಲಗಳೆಯಲು ಸಾಧ್ಯವಿಲ್ಲ. ಹೀಗಿರುವಾಗ ಕಾಂಗ್ರೆಸ್ ನೀಡುತ್ತಿರುವ ಹೇಳಿಕೆ ಎಷ್ಟು ಸಮಂಜಸವಾಗಿದೆ?

ಭಾರತದ ಮರ್ಯಾದೆಯನ್ನು ಜಾಗತಿಕ ಮಟ್ಟದಲ್ಲಿ ಹರಾಜು ಹಾಕಿದವರು ಯಾರು? ಇಂಥದ್ದೊಂದು ಪ್ರಶ್ನೆ ಕೇಳಲೇಬೇಕಿದೆ. ಇದೇ ಕಾಂಗ್ರೆಸ್ ನ ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾಯರ ನೇತೃತ್ವದಲ್ಲಿ ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡಿದ ದೇಶ ಕಂಡ ಉತ್ತಮ ಅರ್ಥಶಾಸ್ತ್ರಜ್ನ ಡಾ.ಮನಮೋಹನ್ ಸಿಂಗ್ ಅವರನ್ನು ಕಾಂಗ್ರೆಸ್ ಮೇಡಂ ನ ಕೈಗೊಂಬೆಯಾಗಿಸಿದ್ದಾಗ ಭಾರತದ ಮರ್ಯಾದೆ ಹರಾಜಾಗಿರಲಿಲ್ಲವೇ? ಅಥವಾ ಅಂತಹ ಉತ್ತಮ ಅರ್ಥಶಾಸ್ತ್ರಜ್ನನಿಗೆ ಟೈಮ್ ಮ್ಯಾಗಜೀನ್ ನಲ್ಲಿ ಅಂಡರ್ ಅಚೀವರ್ ಎಂಬ ಪಟ್ಟ ಕೊಡಿಸಿದವರು, ಇಂದು ಅದೇ ಟೈಮ್ಸ್ ಮ್ಯಾಗಜೀನ್ ’ಮೋದಿ ಮೀನ್ಸ್ ಬಿಸಿನೆಸ್’ ಎಂದು ಹೊಗಳಿದ್ದ ವ್ಯಕ್ತಿ ಭಾರತದ ಮಾನ ಹರಾಜು ಹಾಕುತ್ತಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರಲ್ಲಾ, ಇವರ ಮಾನಸ್ಥಿಕ ಸ್ಥಿಮಿತತೆ ಬಗ್ಗೆ ಯಾರಿಗಾದರೂ ಅನುಮಾನ ಬರುವುದಿಲ್ಲವೇ ಹೇಳಿ? ಅದಿರಲಿ, ಇಂದು ಯಾವ ವ್ಯಕ್ತಿ ಭಾರತವನ್ನು ವಿದೇಶಗಳಲ್ಲಿ ಹೀಗಳೆಯುತ್ತಿದ್ದಾರೆ ಎಂದು ಎದೆ ಬಡಿದುಕೊಂಡು ಕೂಗುತ್ತಿದ್ದಾರಲ್ಲಾ, ಭಾರತದ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರಿಗೆ ಅಮೆರಿಕಾದೊಳಕ್ಕೆ ಪ್ರವೇಶ ನೀಡಬಾರದು ಎಂದು ಪತ್ರ ಬರೆದಿದ್ದ ಕಾಂಗ್ರೆಸ್ ಸಂಸದರು ಅಮೆರಿಕಾ ಅಧ್ಯಕ್ಷರ ಕಾಲು ಹಿಡಿದು ಮನವಿ ಮಾಡಿಕೊಂಡಿದ್ದಾಗ ಭಾರತದ ಗೌರವಕ್ಕೆ ಧಕ್ಕೆಯುಂಟಾಗಿರಲಿಲ್ಲವೇ? ಒಬ್ಬ ಪ್ರಧಾನಿ ಅಭ್ಯರ್ಥಿಗೆ ಕನಿಷ್ಠ ಗೌರವವನ್ನು ನೀಡದೇ ಇರುವಷ್ಟು ಸಂಸ್ಕಾರಹೀನರು ಈ ಕಾಂಗ್ರೆಸ್ಸಿನವರು!

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾಗಿದ್ದಾಗ ಕಾಂಗ್ರೆಸ್ ನವರು ಅವರ ವಿರುದ್ಧ ನಪುಂಕಸಕ, ನರಹಂತಕ, ಸಾವಿನ ವ್ಯಾಪಾರಿ ಇತ್ಯಾದಿಯಾಗಿ ಮಾಡಿದ್ದ ಅವಹೇಳನಗಳಿಗೆ ಲೆಕ್ಕವೇ ಇಲ್ಲ ಬಿಡಿ. ಭಾರತದ ಪ್ರಧಾನಿ ಹುದ್ದೆಗೆ ಸ್ಪರ್ಧಿಸಿದ್ದ ವ್ಯಕ್ತಿಯನ್ನು ತುಚ್ಛವಾಗಿ ಅವಹೇಳನ ಮಾಡಿದಾಗ ಆಗದ ಅವಮಾನ ಈಗ ತಮ್ಮನ್ನು ಹಾಗೂ ತಾವು ಮಾಡಿರುವ ಘನ ಕಾರ್ಯಗಳನ್ನು ಪರೋಕ್ಷವಾಗಿ ಟೀಕಿಸಿದರೆ ಮಾತ್ರ ಭಾರತಕ್ಕೆ ಅವಮಾನವಾಗಿಬಿಡುತ್ತದೆಯಂತೆ, ಇವರೇನು ಭಾರತವನ್ನು ಗುತ್ತಿಗೆ ಪಡೆದಿದ್ದಾರೋ ಅಥವಾ ತಾವೇ ಭಾರತ, ಭಾರತವೆಂದರೆ ತಾವು ಮಾತ್ರ ಎಂಬ ಅನ್ವರ್ಥವೆಂಬ ಭ್ರಮೆಯಲ್ಲಿದ್ದಾರೋ? ಭಾರತಕ್ಕೆ ಸ್ವಾತಂತ್ರ್ಯ ಬಂದು ಇನ್ನಷ್ಟ ಹೊಸ ಇತಿಹಾಸವನ್ನು ನಿರ್ಮಿಸಿ ಜಾಗತಿಕ ಮಟ್ಟದಲ್ಲಿ ವಿಶ್ವಾಸ ಮೂಡಿಸಬೇಕಿದ್ದ ಕಾಲದಲ್ಲಿ, ಕಾಂಗ್ರೆಸ್ ನ ಹಿರೋ, ನಮ್ಮ ದೇಶದ ಮೊದಲ ಪ್ರಧಾನಿ ಚೀನಾದ ವಿರುದ್ಧ ಯುದ್ಧ ಮಾಡಿ ಸೋತು ರಣಹೇಡಿ ಎಂಬ ಪಟ್ಟ ಗಿಟ್ಟಿಕೊಂಡು ವಿಶ್ವಸಂಸ್ಥೆಗೆ ಓಡಿಹೋಗಿದ್ದರಾಲ್ಲಾ ಆಗ, ಭಾರತದ ಮರ್ಯಾದೆ ಹರಾಜಾಗಿತ್ತೋ, ಉಜ್ವಲವಾಗಿ ಹೊಳೆದಿತ್ತೋ ಎಂಬ ಬಗ್ಗೆ ಕಾಂಗ್ರೆಸ್ ನವರು ಉತ್ತರಿಸಬೇಕಾಗುತ್ತದೆ. ಪಿ.ವಿ ನರಸಿಂಹ ರಾವ್ ಅವರನ್ನು ಹೊರತುಪಡಿಸಿ, ನೆಹರು ಯಿಂದ ಹಿಡಿದು ಪ್ರಧಾನಿ ಪಟ್ಟಕ್ಕೇ ಕಳಂಕ ತಂದ ಮನಮೋಹನ್ ಸಿಂಗ್ ವರೆಗೂ ಎಲ್ಲಾ ಪ್ರಧಾನಿಗಳು ಮಾಡಿದ ಭ್ರಷ್ಟಾಚಾರ, ದುರಾಡಳಿತದ ಒಂದೊಂದು ಘಟನೆಗೂ ಈ ದೇಶದ ಜನತೆಗೆ ಕಾಂಗ್ರೆಸ್ ನವರು ಉತ್ತರದಾಯಿಗಳಾಗಿದ್ದಾರೆ. ಹಾಗೆಯೇ ಮೂರನೇ ದರ್ಜೆ, ಕಳಪೆ ರಾಜಕಾರಣಕ್ಕೆ ಮೇಲ್ಪಂಕ್ತಿ ಹಾಕಿ ಕೊಟ್ಟು ಭಾರತದ ಕೀರ್ತಿಪಥಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸಿರುವುದಕ್ಕೂ ಕಾಂಗ್ರೆಸ್ ಕಾರಣವಾಗಿದೆ.

ಇವೆಲ್ಲವನ್ನೂ ಬಿಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ್ದ ಸುಭಾಷರನ್ನು ಅಮಾನವೀಯವಾಗಿ ನಡೆಸಿಕೊಂಡು, ನಿಗೂಢ ಕಣ್ಮರೆಯ ನಂತರವೂ ಅವರ ಕುಟುಂಬದವರ ಮೇಲೆ ನಿರಂತರ ಗೂಢಚಾರಿಕೆ ನಡೆಸಿದ್ದರು ಕಾಂಗ್ರೆಸ್ ನ ಪ್ರಧಾನಿ ನೆಹರು. ಆಗ ವಿದೇಶಿ ಮಾಧ್ಯಮಗಳು, ಸ್ವಾತಂತ್ರ್ಯ ಸೇನಾನಿಯ ನಿಗೂಢ ಸಾವಿನ ನಂತರವೂ ಗೂಢಾಚಾರಿಕೆ ನಡೆಸಿದ್ದ ಭಾರತದ ಪ್ರಧಾನಿ ಎಂಬ ಶೀರ್ಷಿಕೆ ಕೊಟ್ಟು ಸುದ್ದಿ ಮಾಡಿದಾಗ ತುಟಿ ಬಿಚ್ಚದ ನೈತಿಕತೆಯಿಲ್ಲದವರಿಂದ ಯಾವುದು ಭಾರತಕ್ಕೆ ಅವಮಾನ ಯಾವುದು ಭಾರತಕ್ಕೆ ಅವಮಾನವಲ್ಲ ಎಂಬುದನ್ನು ಕಲಿಯುವ ಹೀನಾಯ ಸ್ಥಿತಿ ಬಂದಿಲ್ಲ.

ತಾವು ನಡೆಸಿದ್ದ ಕೋಟಿ ಕೋಟಿ ರೂ ಮೌಲ್ಯದ ಹಗರಣಗಳಿಂದ ದೇಶದ ಬೊಕ್ಕಸಕ್ಕೆ ನಷ್ಟವಾದರೂ ಚಿಂತೆಯಿಲ್ಲ, ಅದರ ಬಗ್ಗೆ ಎಲ್ಲೂ ಮಾತನಾಡದೇ ಬಾಯಿ ಮುಚ್ಚಿಕೊಂಡಿದ್ದಿದ್ದರೆ ಪ್ರಧಾನಿ ಒಳ್ಳೆಯವರಾಗುತ್ತಿದ್ದರು, ಆದರೆ ಇವರು ನಡೆಸಿದ್ದ ಹಗರಣಗಳ ಬಗ್ಗೆ ಹೇಳುತ್ತಿರುವುದು ದೊಡ್ಡ ಅಪರಾಧವಾಗಿಬಿಟ್ಟಿದೆ. ನೈತಿಕ ಅಧಪಥನಕ್ಕೆ ಇದಕ್ಕಿಂತಲೂ ಉತ್ತಮ ಉದಾಹರಣೆ ಬೇಕೆ? ಕಾಂಗ್ರೆಸ್ ನ ದುರಾಡಳಿತ, ಸರ್ವಾಧಿಕಾರವನ್ನು ಮಟ್ಟಾ ಹಾಕುವ ಆವೇಗದಲ್ಲಿ, ಮಾಜಿ ಪ್ರಧಾನಿ ಮೋರಾರ್ಜಿ ದೇಸಾಯಿ ಸರ್ಕಾರ ಇಂದಿರಾಗಾಂಧಿಯನ್ನು ಜೈಲಿಗೆ ಕಳಿಸಿದಂತೆ, 10 ವರ್ಷಗಳ ಕಾಲ ಲೂಟಿ ಮಾಡುವವರಿಗಿಂತಲೂ ಕಡೆಯಾಗಿ ದೇಶದ ಖಜಾನೆಯನ್ನು ಕೊಳ್ಳೆ ಹೊಡೆದಿರುವ ಆಧುನಿಕ ಮಹಮದ್ ಘೋರಿ, ಘಜ್ನಿ ಮಹಮೂದ್ ಗಳನ್ನು, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕತ್ತು ಹಿಡಿದು ಜೈಲಿಗೆ ತಳ್ಳಿಲ್ಲವಲ್ಲ ಅದಕ್ಕೆ ಸಂತೋಷಪಡಬೇಕು. ದೇಶ ಕೊಳ್ಳೆಹೊಡೆದವರನ್ನು ಶಿಕ್ಷಿಸುವ ವಿಷಯದಲ್ಲೂ ರಾಜಕೀಯ ದ್ವೇಷ ತೋರದೇ ಕಾನೂನಿನ ಪ್ರಕಾರ ನಡೆದುಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ಅವಮಾನ ಮಾಡಲು ಸಾಧ್ಯವೇ?  ಗಡಿ ಭಾಗದಲ್ಲಿ ಸೈನಿಕರ ತಲೆ ಕಡಿದರೂ, ಜಾತ್ಯಾತೀತತೆಯ ಹೆಸರಿನಲ್ಲಿ ಭಯೋತ್ಪಾದಕರ ಪರವೇ ವಕಾಲತ್ತು ವಹಿಸಿ ದೇಶದ ಜನರಿಗೆ ಅವಮಾನ ಮಾಡುತ್ತಿದ್ದ ಇಂತಹವರ ಆಡಳಿತದಲ್ಲಿ ಬದುಕುತ್ತಿದ್ದ  ಜನತೆ ಭಾರತದಲ್ಲಿ ಹುಟ್ಟಿರುವುದು ದೌರ್ಭಾಗ್ಯ ಎಂದುಕೊಳ್ಳದೇ ಮತ್ತೇನು ಸೌಭಾಗ್ಯ ಎಂದುಕೊಳ್ಳಲು ಸಾಧ್ಯವೇ? ಕಳ್ಳರ ಆಳ್ವಿಕೆಗೆ ಒಳಪಟ್ಟ ಭೂಮಿಯ ಮೇಲೆ ಅಭಿಮಾನ ಮೂಡುವುದಾದರೂ ಹೇಗೆ?

ಮಾತೃಭೂಮಿ, ನನ್ನ ದೇಶ ಎಂಬ ಹೆಮ್ಮೆ ಪುಟಿದೇಳುವುದು, ಆ ಭೂಮಿಯನ್ನು ಶ್ರೀರಾಮ, ಕೃಷ್ಣ ದೇವರಾಯ, ರಾಣಾ ಪ್ರತಾಪ್ ಸಿಂಹ, ಶಿವಾಜಿಯಂತವರು ಆಳಿದರೆ ಮಾತ್ರ. ಅದನ್ನು ಬಿಟ್ಟು ದೇಶವನ್ನೇ ಕೊಳ್ಳೆ ಹೊಡೆಯುವ  ಮಹಮದ್ ಘೋರಿ, ಘಜ್ನಿ ಮಹಮೂದ್, ಬಾಬರ್, ಅಕ್ಬರ್ ನಂತಹ ದಾಳಿಕೋರರೆಲ್ಲಾ ದೇಶವನ್ನು ಆಳಿದಾಗ ತನ್ನ ಜನ್ಮಭೂಮಿಯ ಬಗ್ಗೆ ಯಾವ ಸತ್ಪ್ರಜೆ ತಾನೆ ಅಭಿಮಾನವಿಟ್ಟುಕೊಳ್ಳಬಲ್ಲ? ಇಂತಹವರ ಆಳ್ವಿಕೆಗೆ ಒಳಪಟ್ಟ ದೇಶದಲ್ಲಿ ಹುಟ್ಟಿರುವುದು ನಮ್ಮ ದೌರ್ಭಾಗ್ಯ ಎಂದುಕೊಳ್ಳದೇ ಹೇಗೆ ತಾನೆ ಇರಬಲ್ಲ? ಅದನ್ನೇ ಮೋದಿಯೂ ಹೇಳಿರುವುದು.

ಕೊನೆಯದಾಗಿ,  ಒಂದು ವರ್ಷದ ಹಿಂದೆಯೇ ಈ ದೇಶದ ಜನತೆ ಕಾಂಗ್ರೆಸ್ ಗೆ ತಮ್ಮ ಸ್ಥಾನವನ್ನು ತೋರಿಸಿ ನಿಮ್ಮ ಯೋಗ್ಯತೆ ಇಷ್ಟೇ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ವಾಸ್ತವದ ನೆಲೆಗಟ್ಟಿನಲ್ಲಿ ರಾಷ್ಟ್ರದ ಅಭ್ಯುದಯಕ್ಕೆ ಕಾರಣವಾಗುವಂತೆ ತರ್ಕಬದ್ಧವಾಗಿ ಮೋದಿ ಸರ್ಕಾರದ ಆಡಳಿತ ವೈಖರಿ ಬಗ್ಗೆ ಮಾತನಾಡುವುದು ಒಳಿತು ಇಲ್ಲವಾದರೆ, ಭಾರತ ಅತಿ ಶೀಘ್ರವಾಗಿ ಕಾಂಗ್ರೆಸ್ ಮುಕ್ತವಾಗುವುದಕ್ಕೆ ಕಾಂಗ್ರೆಸ್ಸೇ ಪ್ರಮುಖ ಕೊಡುಗೆ ನೀಡಿದಂತಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೇಕಿರುವುದೂ ಅದೇ.  

Friday 24 April 2015

ಶಂಕರಾಚಾರ್ಯರನ್ನು ಸ್ತುತಿಸಿದ್ದಾಯಿತು, ವಿದ್ಯಾರಣ್ಯರನ್ನೂ ಸ್ಮರಿಸೋಣ....



(ಚಿತ್ರ ಕೃಪೆ:http://www.sringeri.net)

                                             ||ಅವಿದ್ಯಾರಣ್ಯಕಾನ್ತಾರೇ ಭ್ರಮತಾಂ ಪ್ರಾಣಿನಾಂ ಸದಾ                                                                                         ವಿದ್ಯಾಮಾರ್ಗೋಪದೇಷ್ಟಾರಂ ವಿದ್ಯಾರಣ್ಯಗುರುಂ ಶ್ರಯೇ||


ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮಾರ್ಗದರ್ಶನ ನೀಡಿದರು. ದಕ್ಷಿಣಪಥದಲ್ಲಿ ಹಿಂದೂ ಧರ್ಮದ ಸಾಮ್ರಾಜ್ಯವನ್ನು ಸ್ಥಾಪಿಸುವ ಮೂಲಕ ಶೃಂಗೇರಿ ಪೀಠಾಧಿಪತಿಗಳ ಬಿರುದಾವಳಿಗೆ 'ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ’ ಎಂಬ ಬಿರುದನ್ನು ತಂದುಕೊಟ್ಟಿದ್ದೂ ಅವರೇ. ಶೃಂಗೇರಿಯ ಈಗಿನ ಪೀಠಾಧಿಪತಿಗಳಿಗೆ 'ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ' ಎಂದು ಬಿರುದಾವಳಿಗಳಲ್ಲಿ ಹೇಳಿದರೂ ನಮಗೆ ಆ ಯತಿಶ್ರೇಷ್ಠರೇ ನೆನಪಾಗುತ್ತಾರೆ. ಮನಸ್ಸು ಪುಟಿದೇಳುತ್ತದೆ. 'ವಿದ್ಯಾಶಂಕರ ಪಾದಪದ್ಮಾರಾಧಕ' ಎಂದಾಗಲೂ ವಿದ್ಯಾತೀರ್ಥರ ಶಿಷ್ಯರಾಗಿ-ಭಾರತೀ ತೀರ್ಥರ ಕರಕಮಲ ಸಂಜಾತರಾಗಿದ್ದ ಅವರನ್ನೇ ಮನಸ್ಸು ನೆನೆಯುತ್ತದೆ.

ವಿದ್ಯಾರಣ್ಯರು! ಶೃಂಗೇರಿಯ 12ನೇ ಪೀಠಾಧಿಪತಿಗಳೆಂದು ನೆನೆಸಿಕೊಳ್ಳುವುದಕ್ಕಿಂತಲೂ ಹೆಚ್ಚು ನಮ್ಮ ಮನಸ್ಸು, ಪ್ರಜ್ನಾವಂತ ಸಮಾಜ ಅವರನ್ನು ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯೊಂದಿಗೇ ಗುರುತಿಸುತ್ತೆ. ಸನ್ಯಾಸಾಶ್ರಮವನ್ನು ಲೋಕವಿಮುಖ, ನಿವೃತ್ತಮಾರ್ಗ, ಪಾರಮಾರ್ಥಿಕಕ್ಕಷ್ಟೇ ಸೀಮಿತ ಎಂದು ಕಾಣಲಾಗುತ್ತದೆ. ಧರ್ಮ ರಕ್ಷಣೆಗಾಗಿ ಸಾತ್ವಿಕ ಮಾರ್ಗವನ್ನು ಹೊರತುಪಡಿಸಿ ಕ್ಷಾತ್ರಗುಣವನ್ನು ಪ್ರಚೋದಿಸುವ ಯತಿಗಳನ್ನು ಕಾಣುವುದು ಅಪರೂಪ. ಅಂತಹ ಅಪರೂಪದ ಸಾಲಿಗೆ ವಿದ್ಯಾರಣ್ಯರು ಸೇರುತ್ತಾರೆ. ಶೃಂಗೇರಿಯಲ್ಲಿ ಅವರು ಪೀಠಾಧಿಪತಿಗಳಾಗಿದ್ದದ್ದು ಕೇವಲ 6 ವರ್ಷ ಮಾತ್ರ. ಸನಾತನ ಧರ್ಮದ ಮೌಲ್ಯವುಳ್ಳ ಸಾಮ್ರಾಜ್ಯ ಸ್ಥಾಪನೆಯಲ್ಲಿ ವಿದ್ಯಾರಣ್ಯರ ಕೊಡುಗೆ ಅನನ್ಯವಾದದ್ದು.  ಹಾಗೆಂದು ಆ ಸಾಮ್ರಾಜ್ಯ ಸ್ಥಾಪನೆಯ ಹಾದಿಯೇನು ಸುಗಮವಾಗಿರಲಿಲ್ಲ. ದಕ್ಷಿಣ ಭಾರತದ ಮೇಲೆ ಮೊದಲ ಬಾರಿಗೆ ದಂಡಯಾತ್ರೆ ಕೈಗೊಂಡ ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ (1296-1316) ಕ್ರೌರ್ಯ, ಹಿಂದೂ ರಾಜ್ಯಗಳ ಅಧಃಪತನ, ದೇವಾಲಯಗಳ ನಾಶ, ಮಸೀದಿಗಳ ನಿರ್ಮಾಣ, ಮತಾಂತರ ಮೊದಲಾದ ದೌರ್ಜನ್ಯಗಳೇ ಮೊದಲಾದ ಹೀನ ಕೃತ್ಯಗಳೊಂದಿಗೆ ಪರ್ಯವಸಾನ ಕಂಡಿತು. ಮುಂದೆ, ಖಿಲ್ಜಿ ವಂಶಸ್ಥರು ಅಳಿದು ಮಹಮ್ಮದ್-ಬಿನ್-ತುಘಲಕ್ ನ ಆಳ್ವಿಕೆ ಬಂತಾದರೂ (1325- 1351) ದುರಾಕ್ರಮಣ, ಅತ್ಯಾಚಾರ-ಅನಾಚಾರಗಳಿಗೆ, ಹಿಂದೂ ದೊರೆಗಳ ಮೇಲಿನ ದಬ್ಬಾಳಿಕೆ, ದೌರ್ಜನ್ಯಕ್ಕೆ ಯಾವುದೇ ರೀತಿಯಲ್ಲೂ ಕೊರತೆ ಉಂಟಾಗಲಿಲ್ಲ. ಒಟ್ಟಾರೆ ಸನಾತನ ಧರ್ಮದ ಮೇಲೆ ಬಲವಾದ ಪೆಟ್ಟು ಬಿದ್ದಿತ್ತು.

ವಿದ್ಯಾರಣ್ಯರು ಸ್ವತಂತ್ರ ಹಿಂದೂ ಸಾಮ್ರಾಜ್ಯವನ್ನು ನಿರ್ಮಿಸಬೇಕೆಂದು ಸಿದ್ಧತೆ ನಡೆಸಿಕೊಳ್ಳುತ್ತಿದ್ದ ಸಂದರ್ಭದ್ಲಲ್ಲಿ, ಹಿಂದೂರಾಜರು ಅಕ್ಷರಶಃ ನಾಮಾವಶೇಷವಾಗಿದ್ದರು.  ದಕ್ಷಿಣದ ರಾಜಮನೆತನಗಳೂ ಸಂಪೂರ್ಣವಾಗಿ ನಿಸ್ತೇಜವಾಗಿದ್ದವು, ಕ್ಷಾತ್ರ ಗುಣ ಸಂಪೂರ್ಣವಾಗಿ ಕುಗ್ಗಿತ್ತು. ಸಾಮ್ರಾಜ್ಯವನ್ನು ಮತ್ತೆ ಸ್ಥಾಪಿಸಿದರೂ, ಆ ಸಿಂಹಾಸನವನ್ನೇರಿ ಸಮರ್ಥವಾಗಿ ಮುನ್ನಡೇಸುವ ಪ್ರಭುವೇ ಇರಲಿಲ್ಲ. ಅಂಥಹ ವ್ಯಕ್ತಿಯನ್ನು ತಯಾರು ಮಾಡಬೇಕಿತ್ತು. ಇವೆಲ್ಲವನ್ನೂ ಒಗ್ಗೂಡಿಸುವ ಹೊತ್ತಿಗೆ ಸಂಪತ್ತಿನ ಕೊರತೆಯೂ ಎಥೇಚ್ಛವಾಗಿತ್ತು. ಇಂತಹ ನಿರ್ಜೀವ ಸ್ಥಿತಿಯಲ್ಲಿದ್ದ ಪ್ರದೇಶದಲ್ಲಿ ಹೊಸ ಸಾಮ್ರಾಜ್ಯವನ್ನು ಸ್ಥಾಪಿಸುವುದೇ ಅಸಾಮಾನ್ಯ ಸಂಗತಿ. ಇನ್ನು ಸ್ಥಾಪಿತವಾಗಿ ಅಲ್ಪಕಾಲದಲ್ಲೇ ಪರಕೀಯರ ಆಕ್ರಮಣವನ್ನು ಮೆಟ್ಟಿ, ರಾಷ್ಟ್ರದ ಜನತೆಗೆ ಸುವರ್ಣ ಯುಗವನ್ನು ಪರಿಚಯಿಸಿ, ಸುಮಾರು 310 ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯ ಆಳ್ವಿಕೆ ನಡೆಸಿತ್ತು ಎಂದರೆ ಅದಕ್ಕಾಗಿ ಮಾರ್ಗದರ್ಶನ ನೀಡಿದ ವಿದ್ಯಾರಣ್ಯರ ದೂರದೃಷ್ಠಿತ್ವದ ಬಗ್ಗೆ ಹೆಮ್ಮೆ ಎನಿಸುತ್ತದೆ.

ಭಾರತದಲ್ಲಿ ಇಂದಿಗೂ ಶ್ರೇಷ್ಠ ಆಡಳಿತಕ್ಕೆ ಎರಡು ಉಪಮೇಯಗಳನ್ನು ಕೊಡುವ ರೂಢಿಯಿದೆ. ಒಂದು ಯುಗಯುಗಗಳಷ್ಟು ಹಳೆಯ ಕಾಲದ ರಾಮರಾಜ್ಯ, ಮತ್ತೊಂದು ನಮ್ಮದೇ ಯುಗದ ಸ್ವಲ್ಪ ಪುರಾತನ ಕಾಲಘಟ್ಟದ 'ಸುವರ್ಣಯುಗ'ದ ವಿಜಯನಗರ ಸಾಮ್ರಾಜ್ಯ. ರಾಮರಾಜ್ಯ ಎಂದರೆ ಹೀಗೇ ಇದ್ದಿರಬಹುದು ಎಂದು ಸುವರ್ಣಯುಗದ ಜನರು ಹೇಳಿಕೊಳ್ಳುತ್ತಿದ್ದರೇನೋ, ಅಷ್ಟರಮಟ್ಟಿಗೆ ವಿಜಯನಗರ ಸಾಮ್ರಾಜ್ಯ, ಸಂಪತ್ತು, ಸಂಸ್ಕೃತಿಯ ಶ್ರೀಮಂತಿಕೆಗೆ ಅನ್ವರ್ಥವಾಗಿರುವುದು ಇತಿಹಾಸ ಪ್ರಸಿದ್ಧ. ಆದ್ದರಿಂದಲೇ ವಿಜಯನಗರ ಸಾಮ್ರಾಜ್ಯವಳಿದರೂ, ಭೌತಿಕವಾಗಿ ವಿದ್ಯಾರಣ್ಯರು ಇಲ್ಲದೇ ಅದೆಷ್ಟೋ ದಶಕಗಳು ಕಳೆದರೂ ಶ್ರೇಷ್ಠ ಸಾಮ್ರಾಜ್ಯದ ಸ್ಥಾಪನೆಯಲ್ಲಿ ಅವರ ಯೋಗದಾನ ಇಂದಿಗೂ ಅವರನ್ನು ನೆನೆಸಿಕೊಳ್ಳುವಂತೆ ಮಾಡಿದೆ. ಇಷ್ಟಕ್ಕೂ ಧರ್ಮಕ್ಕೆ ಗ್ಲಾನಿ ಬಂದಾಗವಲ್ಲದೇ ಆ ಯಾವ ಯತಿಗಳು ತಾನೇ ವೇದ-ಶಾಸ್ತ್ರ, ಪಾರಮಾರ್ಥಿಕ ಜೀವನವನ್ನು ಬಿಟ್ಟು, ಸಾಮ್ರಾಜ್ಯ ಕಟ್ಟುವುದಕ್ಕೆ ಕುರುಬ ಯುವಕರಲ್ಲಿ ಕ್ಷಾತ್ರ ಗುಣವನ್ನು ತುಂಬಿ ಪ್ರಚೋದಿಸುತ್ತಾರೆ ಹೇಳಿ? ಧರ್ಮ ರಕ್ಷಣೆ ಎಂದಾಗಲೆಲ್ಲಾ ನಾವು ಸಾಮಾನ್ಯವಾಗಿ ಸನಾತನ ಧರ್ಮದಲ್ಲಿದ್ದ ನ್ಯೂನತೆಗಳನ್ನು ಸರಿಪಡಿಸಿ ಉದ್ಧರಿಸಿದ ಆದಿ ಶಂಕರಾಚಾರ್ಯರನ್ನು ಮಾತ್ರ ಬಹುಬೇಗನೆ ನೆನೆಯುತ್ತೇವೆ. ಅದು ನಮ್ಮ ಕರ್ತವ್ಯ ಕೂಡ. ಆದರೆ ಕಾಲ ಉರುಳಿದಂತೆ ಇಸ್ಲಾಮ್ ಬರ್ಬರತೆ ತುತ್ತಾಗಿದ್ದ ಸನಾತನ ಧರ್ಮದ ಉಳಿವಿಗೆ  ಸಾಮ್ರಾಜ್ಯ ಸ್ಥಾಪನೆಯ ತುರ್ತು ಅಗತ್ಯವನ್ನು ಮನಗಂಡು, ಪರಕೀಯರ ದಾಳಿಗೆ ಸಿಲುಕಿ ನಶಿಸುತ್ತಿದ್ದ ಧರ್ಮವನ್ನು ಉಳಿಸಿದ ಯತಿವರೇಣ್ಯ ವಿದ್ಯಾರಣ್ಯರು ಗೌಣವಾಗಿ ನಮ್ಮ ಮನಸಿನಲ್ಲಿದ್ದಾರೆಯೇ ಹೊರತು ಯಾರಾದರೂ ಅವರನ್ನು ಸ್ಮರಿಸಿಕೊಳ್ಳುವ ಸಾರ್ವಜನಿಕರು ಆಚರಿಸುವ ದಿನವಿದೆಯೇ? ವಿದ್ಯಾರಣ್ಯರನ್ನು ಸ್ಮರಿಸುವುದೂ ಕಮ್ಮ ಆದ್ಯ ಕರ್ತವ್ಯಗಳಲ್ಲಿ ಒಂದು.  ಧರ್ಮದ ಉಳಿವಿಗಾಗಿ ಬ್ರಹ್ಮ-ಕ್ಷತ್ರ ಸಾಮರಸ್ಯವನ್ನು ನಮ್ಮ ಸನಾತನ ಧರ್ಮ ಪದೇ ಪದೇ ಸಾರಿದೆ. ಪಾಂಡವರು ಜಯಗಳಿಸುವ ಮೂಲಕ ಧರ್ಮದ ಪುನರುತ್ಥಾನಕ್ಕೆ ಶ್ರೀಕೃಷ್ಣ ಪರಮಾತ್ಮ, ಮಗಧ ಸಾಮ್ರಾಜ್ಯದಲ್ಲಿ ಯವನರ ದಾಳಿ ಮೇರೆ ಮೀರಿ ವೈದಿಕ ಧರ್ಮಕ್ಕೆ ಚ್ಯುತಿಬಂದಾಗ ಚಂದ್ರಗುಪ್ತನ ಮೂಲಕ ಇತಿಹಾಸ ಪ್ರಸಿದ್ಧ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ ಚಾಣಕ್ಯ ಈ ಎರಡು ಪ್ರಕರಣಗಳನ್ನು ಹೊರತುಪಡಿಸಿದರೆ ಧರ್ಮದ ಉಳಿವಿಗಾಗಿ ಇತಿಹಾಸ ಎಂದಿಗೂ ಮರೆಯದ ಸಾಮ್ರಾಜ್ಯವೊಂದರ ಉಗಮಕ್ಕೆ ಗುರುವೊಬ್ಬರು ಕಾರಣೀಭೂತರಾದ ಉದಾಹರಣೆ ಸಿಗುವುದು ವಿದ್ಯಾರಣ್ಯರಲ್ಲಿ ಮಾತ್ರ. ವಿದ್ಯಾರಣ್ಯರು-ವಿಜಯನಗರ ಸಾಮ್ರಾಜ್ಯದ ಬಳಿಕ ಈವರೆಗೂ ಅವರಂತಹ ಮಹಾಪುರುಷರು ನಮ್ಮ ನಾಡಿನಲ್ಲಿ ಜನಿಸಿಲ್ಲವಾದ್ದರಿಂದ ಧರ್ಮ ರಕ್ಷಣೆಯ ದೃಷ್ಟಿಯಿಂದ ವಿದ್ಯಾರಣ್ಯರ ಸ್ಥಾನವು ಶಂಕರಾಚಾರ್ಯರಷ್ಟೇ ಮಹತ್ವ, ಶಂಕರಿಗಷ್ಟೇ ಎರಡನೆಯದಾಗಿದೆ. ಶಂಕರರು ಸನಾತನ ಧರ್ಮ ಸಂಕಟದಲ್ಲಿದ್ದಾಗ ಧರ್ಮವನ್ನು ಉದ್ಧರಿಸಲು ಅವತರಿಸಿದರು. ವಿದ್ಯಾರಣ್ಯರು ಹಿಂದೂ ಸಾಮ್ರಾಜ್ಯ ಸಂಕಟದಲ್ಲಿದ್ದಾಗ, ಸನಾತನ ಸಾಮ್ರಾಜ್ಯವನ್ನು ಉದ್ಧರಿಸಲು ಅವತರಿಸಿದರು. ಕಾಲಘಟ್ಟಗಳು ಬೇರಾದರೂ ಸಾಧಿಸಿದ ಕಾರ್ಯಗಳು ಒಂದೇ.

ಪರಾಶರಮಾಧವೀಯ, ವ್ಯವಹಾರ ಮಾಧವೀಯ ಬೃಹದಾರಣ್ಯಕ ಭಾಷ್ಯವಾರ್ತಿಕಸಾರದಂತಹ ಭಾಷ್ಯಗಳು, ವೇದಾಂತ ಪಂಚದಶೀ ಜೀವನ್ಮುಕ್ರಿವಿವೇಕದಂತಹ ಗ್ರಂಥಗಳೂ ಸೇರಿದಂತೆ ಅವರು ರಚಿಸಿದ ಅದೆಷ್ಟೋ ಗ್ರಂಥಗಳು, ಭಾಷ್ಯಗಳ ಬಗ್ಗೆ ತಿಳಿಸಿದರೆ ಅವರೊಬ್ಬ ಅದ್ಭುತ ಪಂಡಿತರು, ವಿದ್ವಾಂಸರೆಂಬುದು ತಿಳಿಯುತ್ತದೆ. ಆದರೆ ವಿಜಯನಗರ ಸಾಮ್ರಾಜ್ಯೋದಯಕ್ಕೆ ಬೆಂಬಲವಿತ್ತ ಹೊಯ್ಸಳ ಸಾಮ್ರಾಜ್ಯದ ಮೂರನೆ ಬಲ್ಲಾಳ,ತುಳುನಾಡಿನ ಶ್ರೀವೀರಕೆಕ್ಕಾಯಿತಾಯಿ, ಕಂಪಿಲ ಸಾಮ್ರಾಜ್ಯದ ಅರಸರು ಮುಂತಾದ ಅನೇಕ ಪ್ರಮುಖರನ್ನು ಅವರವರ ಪ್ರಾಂತೀಯ ಅಭಿಮಾನಗಳಿಗೆ ಅತೀತರಾಗಿ ವಿಜಯನಗರ ಸಾಮ್ರಾಜ್ಯದ ಉಗಮಕ್ಕೆ ದುಡಿಯುವಂತೆ ಮಾಡಿದ ವಿದ್ಯಾರಣ್ಯರು, ರಕ್ತಪಾತವಿಲ್ಲದೇ ಸಾಮ್ರಾಜ್ಯವನ್ನು ಗೆಲ್ಲುವ ಚಾಣಕ್ಯನನ್ನು ಮತ್ತೆ ಮತ್ತೆ ನೆನಪಿಸುತ್ತಾರೆ. ಸಾಮ್ರಾಜ್ಯವೊಂದನ್ನು ಸ್ಥಾಪನೆ ಮಾಡುವುದಕ್ಕಿಂತ ಅತ್ಯಲ್ಪ ಕಾಲದಲ್ಲೇ ಅಳಿಯದಂತೆ ಎಚ್ಚರ ವಹಿಸುವುದೂ ಸವಾಲಿನ ವಿಷಯವೇ. ಅಧಿಕಾರ ಕೈಗೆ ಬಂದರೆ ಸಾಕು ಸೋದರ ಕಲಹ-ದಾಯಾದಿ ಮಾತ್ಸರ್ಯಗಳಲ್ಲಿ ಸಾಮ್ರಾಜ್ಯಗಳು ನಿರ್ನಾಣವಾಗಿರುವ ಅದೆಷ್ಟೋ ಉದಾಹರಣೆಗಳಿವೆ. ವಿಜಯನಗರದ ಅರಸ ಹರಿಹರ ಮತ್ತವನ ನಾಲ್ಕು ಸಹೋದರರ ನಡುವೆ ಸಾಮರಸ್ಯ ತುಂಬಿ, ಅದೇ ನಾಲ್ಕು ಸಹೋದರರನ್ನು ಪೂರ್ವ, ಪಶ್ಚಿಮ ಉತ್ತರದ ಗಡಿಗಳಲ್ಲಿ ದೃಢರಕ್ಷಣೆಗಾಗಿ ವಿನಿಯೋಗಿಸಿದ ವಿದ್ಯಾರಣ್ಯರು ಓರ್ವ ಅಪೂರ್ವ ರಾಜಗುರುಗಳಾಗಿಯೂ ವಿಜೃಂಭಿಸಿದರು. ಸ್ವತಃ ಅದ್ವೈತಿಗಳಾಗಿ, ಸಾಮ್ರಾಜ್ಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ ತಮ್ಮ ಮತವನ್ನು ಸಾಮ್ರಾಜ್ಯದ ಮೇಲೆ ಹೇರುವುದಾಗಲೀ, ಪರಮತ ಖಂಡನೆಯಾಗಲಿ ಮಾಡದೇ ಇದ್ದದ್ದು  ವಿದ್ಯಾರಣ್ಯರ ಉದಾರ ಧಾರ್ಮಿಕ ನೀತಿ ಹಾಗೂ ಹೃದಯ ವೈಶಾಲ್ಯಗಳನ್ನು ಸ್ಪಷ್ಟವಾಗಿಸುತ್ತವೆ.

ಬಹಮನಿ ಸಾಮ್ರಾಜ್ಯಸ್ಥಾಪಕ ಜಾಫರ್ ಖಾನ್ ಅಲ್ಲಾವುದ್ದೀನ್ ಹಸನ್ ಗಂಗೂ ಬಹಮನಿ ಎಂಬ ಹೆಸರಿನಲ್ಲಿ ಗದ್ದುಗೆಯೇರಿದಾಗ ವಿದ್ಯಾರಣ್ಯರ ಸಲಹೆ ಮೇರೆಗೆ ಬುಕ್ಕ ರಾಯ ಸ್ನೇಹಾಭಿಮಾನ ಸೂಚಕವಾಗಿ ಅಮೂಲ್ಯಮಾಣಿಕ್ಯವನ್ನು ಕಳಿಸಿಕೊಟ್ಟಿದ್ದ. ಇದು ವಿದ್ಯಾರಣ್ಯ ಪ್ರಣೀತ ವಿಜಯನಗರ ಸಾಮ್ರಾಜ್ಯದ ಹೃದಯ ವೈಶಾಲ್ಯತೆಯೂ ಹೌದು. ಪರಮತ ಖಂಡಿಸದೇ ಇರುವುದರಿಂದ ಸನಾತನ ಧರ್ಮವನ್ನು ಮೇಲೆ ಅವಹೇಳನ ಮಾಡುವುದು, ಪ್ರಹಾರ ಮಾಡುವುದು ಅತಿ ಸುಲಭದ ಕೆಲಸವಾಗಿದೆ ಆದ್ದರಿಂದಲೇ ಇಂದಿಗೂ ಹಿಂದೂಗಳಲ್ಲಿ ಕಂಡುಬರುವ ದೌರ್ಬಲ್ಯವೂ ಹೌದೆಂದು ತೋರುತ್ತದೆ. ಆದರೆ ಎಂತಹ ಸ್ಥಿತಿಯಲ್ಲೂ ಪರಮತ ಖಂಡನೆಗೆ ಅವಕಾಶ ನೀಡದ ಯತಿಶ್ರೇಷ್ಠ ವಿದ್ಯಾರಣ್ಯರ ತತ್ವಗಳು ಲೋಕಮಾನಿತ, ಪ್ರಶ್ನಾತೀತ. ಇನ್ನು ಭಾರತದ ರಾಜಪ್ರಭುತ್ವ-ಧರ್ಮವೆಂದರೆ ಮೂಲಭೂತವಾದಿಗಳೆಂಬ ಹಣೆಪಟ್ಟಿ ಕಟ್ಟಿಬಿಡುತ್ತಾರೆ. ರಾಜರನ್ನು ಶೋಷಣೆಯ ಪ್ರತೀಕವೆಂದೇ ಪುಕಾರು ಹಬ್ಬಿಸಲಾಗಿದೆ. ಅರಸನಾದವನು ಧರ್ಮಕ್ಕೆ ಅತೀತನಲ್ಲ, ಸಾಮ್ರಾಜ್ಯ ಬರಿಯ ಮರ್ತ್ಯರಾಜರದಲ್ಲವೆಂದು ಹೇಳಲು ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯದ ರಾಜಮುದ್ರೆಯನ್ನು ವಿರೂಪಾಕ್ಷನ ಹೆಸರಿನಲ್ಲೇ ರೂಪಿಸಿದರು. ಈ ಮೂಲಕ ರಾಜನೂ ಧರ್ಮದ ಚೌಕಟ್ಟಿನಲ್ಲೇ ಇರಬೇಕೆಂದು ಸಾರಿದರು. ಇನ್ನು ವಿಜಯನಗರ ಸಾಮ್ರಾಜ್ಯದ ವರಾಹಲಾಂಛನ ಮತ್ತು ವಿರೂಪಾಕ್ಷಾಂಕಿತಗಳು ಹರಿಹರ ಸಮನ್ವಯಕ್ಕೆ ಸುಂದರ ನಿದರ್ಶನ. ಸಾಮ್ರಾಜ್ಯದಲ್ಲಿ ಹರಿಹರರ ಸಮನ್ವಯವಿದ್ದ ಮೇಲೆ ಶೈವ ವೈಷ್ಣವ ಮತಗಳ ಕಲಹ ಎಲ್ಲಿಂದ ಬರಬೇಕು? ಶಾಸ್ತ್ರ, ವೇದ  ವಾಂಗ್ಮಯವೂ, ಸಾಮ್ರಾಜ್ಯ ಸ್ಥಾಪನೆ ಹೀಗೆ ಅದೆಷ್ಟು ಆಯಾಮಗಳಿಂದ ನೋಡಿದರು, ವಿದ್ಯಾರಣ್ಯರು ಯತಿಶ್ರೇಷ್ಟರಾಗಿ ಮಾತ್ರವಲ್ಲದೇ ಪ್ರತಿಯೊಬ್ಬರಿಗೂ ಆದರ್ಶ ಪುರುಷರಾಗಿ ಕಾಣುತ್ತಾರೆ. ವಿಜಯನಗರ ಸಾಮ್ರಾಜ್ಯವನ್ನು ಕೇವಲ ಒಂದು ಸಾಮ್ರಾಜ್ಯವನ್ನಾಗಿ ನಿರ್ಮಿಸದೇ ಭಾರತೀಯರ ರಾಜಕೀಯ-ಆರ್ಥಿಕ ಪುನರುತ್ಥಾನದ ಸಾಮ್ರಾಜ್ಯವನ್ನಾಗಿಸಿದ ವಿದ್ಯಾರಣ್ಯರದ್ದು ವರ್ಣನೆಗೆ ನಿಲುಕದ ಆದರ್ಶ ವ್ಯಕ್ತಿತ್ವ.

ವಿಪರ್ಯಾಸವೆಂದರೆ, ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಮಾಡಿದ್ದು ಇದೇ ವಿದ್ಯಾರಣ್ಯರ ಎಂಬ ಪ್ರಶ್ನೆಗಳೂ ಈಗಾಗಲೇ ಉದ್ಭವಿಸಿಯಾಗಿದೆ. ಚಿತ್ತ ಸ್ವಾಸ್ಥ್ಯವನ್ನು ಕಳೆದುಕೊಂಡವರು ಮಾತ್ರ ಇಂತಹ ಅಸಂಬದ್ಧ ಪ್ರಶ್ನೆಗಳನ್ನು ಮುಂದಿಡಲು ಸಾಧ್ಯ. ಸುವರ್ಣಯುಗವನ್ನು ಕಂಡ ಭವ್ಯ ಸಾಮ್ರಾಜ್ಯ ಅಧಃಪತನಗೊಳ್ಳಲು, ಸುಂದರ ಶಿಲ್ಪಕಲಾಕೃತಿಗಳು ನಾಶವಾಗಲು ಇದೇ ಶೈವ-ವೈಷ್ಣವರ ಕಲಹ ಕಾರಣ ಎಂದು ಕೆಲವರು ಷರಾ ಎಳೆದು ಸುಳ್ಳು ಪ್ರಮಾಣಪತ್ರಗಳನ್ನು ನೀಡಿದ್ದಾರೆ. ಇಂತಹ ಆಧುನಿಕ ಇತಿಹಾಸಕಾರರು ವಿದ್ಯಾರಣ್ಯರನ್ನು ಮರೆಸುವ ಜೊತೆಗೇ ಏನೆಲ್ಲಾ ಮಾಡಿದರು. ನಮ್ಮ ಸೂಪ್ತಪ್ರಜ್ನೆಯಿಂದ ವಿದ್ಯಾರಣ್ಯರನ್ನು ನಿಧಾನವಾಗಿ ಜಾರಿಸಿದರೆ, ವಿಜಯನಗರ ಸ್ಥಾಪನೆ ಮಾಡಿದ ವಿದ್ಯಾರಣ್ಯರು ಇವರೇನಾ? ಎಂದು ಪ್ರಶ್ನೆ ಮಾಡುತ್ತಿರುವವರು,  ನಾಳೆ ವಿಜಯನಗರ ಸಾಮ್ರಾಜ್ಯವೂ ಸೇರಿದಂತೆ  ವಿದ್ಯಾರಣ್ಯರೂ ಕಾಲ್ಪನಿಕ, ನಿಜವಾಗಿ ಅಂತಹ ವ್ಯಕ್ತಿಗಳೇ ಇರಲಿಲ್ಲ ಎಂದೂ ಷರಾ ಎಳೆಯುತ್ತಾರೆ ಎಚ್ಚರ. ಅಂದಹಾಗೆ ಇಂದು ವೈಶಾಖ ಶುದ್ಧ ಸಪ್ತಮಿ ವಿದ್ಯಾರಣ್ಯರ ಜಯಂತಿ. ಮೊನ್ನೆಯಷ್ಟೇ ಶಂಕರಾಚಾರ್ಯರ ಜಯಂತಿಯನ್ನು ಆಚರಿಸಿ ಶಂಕರರನ್ನು ಸ್ತುತಿಸಿದ್ದೇವೆ, ಇಂದು ವಿದ್ಯಾರಣ್ಯರನ್ನೂ ಸ್ಮರಿಸೋಣ.



Thursday 23 April 2015

ಶಂಕರಾಚಾರ್ಯರ ಜಯಂತಿ: ವಿಶ್ವಮಟ್ಟದಲ್ಲಿ ತತ್ವಜ್ನಾನಿಗಳ ದಿನಾಚರಣೆ ನಡೆಯಲಿ





ಅವರು ಹರಿದು ಹಂಚಿಹೋಗುತ್ತಿದ್ದ ಧರ್ಮವನ್ನು ಪುನರ್ ಪ್ರತಿಷ್ಠಾಪಿಸಿದರು, ವಾಹನಗಳ ಸೌಲಭ್ಯದ ಕಲ್ಪನೆಯೂ ಇಲ್ಲದ ಸಂದರ್ಭದಲ್ಲಿ ದೇಶದ ಉದ್ದಗಲ ಕಾಲ್ನಡಿಯಲ್ಲಿ ಸಂಚರಿಸಿ ವಿಘಟಿಸಿ ಹೋಗಿದ್ದ ಭೂಪಟಕ್ಕೆ ದೇಶವೆಂಬ ಕಾನ್ಸೆಪ್ಟ್ ನೀಡಿದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಸನಾತನ ಧರ್ಮವನ್ನು ರಕ್ಷಿಸಿ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ಜಗದ್ಗುರು ಶಂಕರಾಚಾರ್ಯರನ್ನು ಜನರು ತತ್ವಜ್ನಾನಿ ಎಂದು ಗೌರವಿಸಿ, ಶಂಕರನ ಅವತಾರವೆಂದೆ ಪೂಜಿಸಿದರು.

ವೈದಿಕ ಮತ ಪ್ರತಿಪಾದಕರಾದ ಶಂಕರಾಚಾರ್ಯರು, ಸನಾತನ ಧರ್ಮದಲ್ಲಿನ ಅನೇಕ ತಪ್ಪು ಆಚರಣೆಗಳನ್ನು ಸರಿಪಡಿಸಿ, ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗು ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು. ಆದಿಶಂಕರರು ಭಗವದ್ಗೀತೆ, ಉಪನಿಷತ್ ಹಾಗು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾದರು. ಶಂಕರಾಚಾರ್ಯರು ಭೇಟಿ ನೀಡಿದ ಸ್ಥಳಗಳೆಲ್ಲ ಇದೀಗ ಆಧ್ಯಾತ್ಮಿಕ ಕೇಂದ್ರಗಳಾಗಿ ಜಗತ್ತಿಗೇ ಮಾರ್ಗದರ್ಶನ ಮಾಡುವುದರ ಜತೆ ಜತೆಯಲ್ಲಿ ಅಪಾರವಾದ ಜ್ನಾನ ಸಂಪತ್ತನ್ನು, ವಿದ್ಯಾ ಸಂಪತ್ತನ್ನು, ತತ್ತ್ವ ಜ್ಞಾನವನ್ನು ಧಾರೆ ಎರೆಯುವ ಕೇಂದ್ರಗಳಾಗಿ ರೂಪುಗೊಂಡಿವೆ. ಶಂಕರರ ಹೆಸರು ತತ್ವಜ್ನಾನಕ್ಕೆ ಅನ್ವರ್ಥವಾಗಿ ಉಳಿದುಕೊಂಡಿದೆ.
ಜಗತ್ತಿನ ಅಂಧಕಾರವನ್ನು ತೊಡೆದು ಜ್ಞಾನದ ಬೆಳಕನ್ನು ಚೆಲ್ಲಿದ ದೇವತಾ ಸ್ವರೂಪಿಯಾದ ಶಂಕಾರಾಚಾರ್ಯರು ಇಂದಿಗೂ ಆರಾಧಿಸಲ್ಪಡುತ್ತಿರುವುದು ಇದೇ ಕಾರಣಕ್ಕಾಗಿ. ಮಹಾನ್ ದೈವಭಕ್ತರಾಗಿದ್ದ ಅವರು ಎಲ್ಲ ದೇವರುಗಳೂ ಒಂದೇ ಮಾನವಕುಲವೆಲ್ಲ ಒಂದೇ ಎನ್ನುವ ಮೂಲಕ ಸಾಮಾಜಿಕ ನ್ಯಾಯದ ಬಗ್ಗೆ ಜನತೆಗೆ ಸಾರಿ ಹೇಳಿದ್ದರು. ಯಾವ ಪಂಥವನ್ನೂ ಹುಟ್ಟುಹಾಕದೆ ಎಲ್ಲ ಜಾತಿ ವರ್ಗಗಳನ್ನು ಸಮನಾಗಿ ಕಾಣಿರಿ. ಭಗವಂತನ ನಾಮಸ್ಮರಣೆಯಲ್ಲಿ ಜಾತಿ, ಭೇದಗಳು ಕೂಡದು. ಎಲ್ಲರಿಗೂ ಭಗವಂತನ ಪ್ರಾರ್ಥಿಸುವ ಪ್ರೀತಿಸುವ ಹಕ್ಕಿದೆ ಎಂಬ ಮಂತ್ರವನ್ನು ಜಗತ್ತಿಗೆ ಸಾರಿದ್ದಾರೆ.

ಏಳನೇ ಶತಮಾನದಲ್ಲಿ ಜಾತಿ ಹಾಗೂ ದೇವರುಗಳ ಹೆಸರಿನಲ್ಲಿ ನಡೆಯುತ್ತಿದ್ದ ಕಲಹ, ಘರ್ಷಣೆ ಹಾಗೂ ನರಬಲಿಗಳನ್ನು ತಡೆಯುವ ನಿಟ್ಟಿನಲ್ಲಿ ಜನರಿಗೆ ತಿಳಿ ಹೇಳಿದ ಶಂಕರರು ಈ ಮೂಲಕ ಸಮಾಜೋದ್ಧಾರಕರಾಗಿಯೂ ಸಮಾಜ ಸುಧಾರಕರಾಗಿಯೂ ಗುರುತಿಸಿಕೊಳ್ಳುತ್ತಾರೆ. ನರಬಲಿ ನೀಡುತ್ತಿದ್ದ ಕಾಪಾಲಿಗಳನ್ನೂ ತಮ್ಮ ಜ್ನಾನದಿಂದ ಬದಲಿಸಿದ ಶಂಕರಾಚಾರ್ಯರು, ಅವರಿಗೆ ಅರಿವು ಮೂಡಿಸಿದ್ದಲ್ಲದೆ ಕಾಪಾಲಿಗಳಿಗೂ ಗುರುಗಳಾಗಿ ಜಗವನ್ನು ಬೆಳಗಿದರು. ಇಡೀ ವಿಶ್ವಕ್ಕೇ ಬೆಳಕನ್ನು ನೀಡಿ ಜಗದ್ಗುರುಗಳೆನಿಸಿಕೊಂಡ ಶಂಕರಾಚಾರ್ಯರು ಇಂದು ಏಕೆ ಯಾವುದೋ ಒಂದು ವರ್ಗಕ್ಕೆ, ಅಥವಾ ಒಂದು ದೇಶಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಅವರು ಸೀಮಿತಗೊಂಡಿಲ್ಲ, ಸೀಮಿತಗೊಳಿಸಲಾಗಿದೆ. ಅವಕಾಶ ಸಿಕ್ಕಾಗಲೆಲ್ಲಾ ಶಂಕರರನ್ನು ಅವಹೇಳನ ಮಾಡುವ ಮೂಲಕ ಅವರನ್ನು ಒಂದು ವರ್ಗಕ್ಕೆ ಮಾತ್ರ ಸೀಮಿತಗೊಳಿಸುವ ವ್ಯವಸ್ಥಿತ ಹುನ್ನಾರ ನಡೆದಿದೆ. ಇಂದಿಗೂ ಲೆಕ್ಕವಿಲ್ಲದಷ್ಟು ವಿದೇಶಿಗರು ತತ್ವಜ್ನಾನದ ಸಾರವನ್ನು ತಿಳಿಯಲು ಇದೇ ಶಂಕರಾಚಾರ್ಯರು ಸ್ಥಾಪಿಸಿರುವ ನಾಲ್ಕು ಆಮ್ನಾಯ ಪೀಠಗಳಿಗೆ ಭೇಟಿ ನೀಡುತ್ತಾರೆ. ತತ್ವಜ್ನಾನದ ಬಗ್ಗೆ ಶಂಕರರ ನಾಲ್ಕು ಆಮ್ನಾಯಪೀಠಗಳ ಪೀಠಾಧಿಪತಿಗಳನ್ನು ಸಂದರ್ಶಿಸಿ ಜ್ನಾನವೃದ್ಧಿಗೊಳಿಸಿಕೊಳ್ಳುತ್ತಿದ್ದಾರೆ. ಶಂಕರರಿಗೆ ಶರಣಾಗುತ್ತಿದ್ದಾರೆ. ಆದರೆ ಭಾರತದಲ್ಲೇ ಇರುವ ಮೂಢರಿಗೆ ಇನ್ನೂ ಜ್ನಾನೋದಯವಾಗಿಲ್ಲ. ಶಂಕರಾಚಾರ್ಯರ ಹೆಸರು ಕೇಳಿದರೇನೆ ಹೌಹಾರುತ್ತಾರೆ. ವಿನಾಕಾರಣ ಅವರ ವಿರುದ್ಧ ಮಾತನಾಡುತ್ತಾರೆ. ಬೌದ್ಧ ಧರ್ಮ ನಾಶವಾಗುವುದರಿಂದ ಹಿಡಿದು ಇಂದಿನ ಸಮಸ್ಯೆಗಳವರೆಗೆ ಪ್ರತಿಯೊಂದಕ್ಕೂ ಅವರೇ ಕಾರಣ ಎಂದು ದೂರಲಾಗುತ್ತದೆ. Don't answer the foolish arguments of fools, or you will become as foolish as they are ಎಂಬ ಮಾತಿನಂತೆ ಜಗತ್ತೇ ಪೂಜಿಸುವ ಶಂಕರಾಚಾರ್ಯರನ್ನು ನಿಂದಿಸುವವರ ಬಗ್ಗೆ ಪ್ರತಿಕ್ರಿಯೆ ನೀಡದೇ, ನಿರ್ಲಕ್ಷಿಸಿ, ಆಚಾರ್ಯರು ತೋರಿದ ಮಾರ್ಗದಲ್ಲೇ ಮುನ್ನಡೆದರೆ ಅದೇ ನಾವು ಶಂಕರಾಚಾರ್ಯರಿಗೆ ತೋರುವ ಗುರುಭಕ್ತಿಯಾಗಿದೆ.

ಇಷ್ಟಕ್ಕೂ ನಿಂದಿಸಿದರೆ ಅವರ ವಿದ್ವತ್ಪೂರ್ಣ ವ್ಯಕ್ತಿತ್ವಕ್ಕೆ ಕಿಂಚಿತ್ತೂ ಕುಂದುಂಟಾಗುವುದಕ್ಕೆ ಶಂಕರಾಚಾರ್ಯರೇನು ಸಾಮಾನ್ಯರೇ? ಅವರ ಕೀರ್ತಿ, ದೇಶೋವಿಶಾಲವಾದದ್ದು, ದೇಶೋವಿಶಾಲವೇ ವಿಶ್ವಕ್ಕೇ ತಿಳಿದಿರುವಂಥಹದ್ದು, ಆದರೂ ಏಕೆ ಆಚಾರ್ಯರು ಭಾರತಕ್ಕೆ ಸೀಮಿತಗೊಂಡಿದ್ದಾರೆ. ಈ ಹಿಂದಿನ ಸರ್ಕಾರವೇನೋ ಶೃಂಗೇರಿ ಗುರುಗಳ ಆಜ್ನೆಯಂತೆ ಕರ್ನಾಟಕದಲ್ಲಿ ಶಂಕರಾಚಾರ್ಯರ ಜನ್ಮದಿನವನ್ನು ತತ್ವಜ್ನಾನಿಗಳ ದಿನಾಚರಣೆ ಎಂದು ಆಚರಿಸಲು ಆದೇಶ ಹೊರಡಿಸಿ, ಇಂದಿಗೂ ಮುಂದುವರೆದುಕೊಂಡು ಬಂದಿದೆ. ಇದನ್ನು ವಿಶ್ವದ ಮಟ್ಟಲ್ಲೇಕೆ ಆಚರಿಸಬಾರದು? ಆ ಮೂಲಕ ಜಗತ್ತಿಗೇ ತತ್ವಜ್ನಾನದ ಬೆಳಕನ್ನು ನೀಡಿದ ಪ್ರಖರ ವ್ಯಕ್ತಿತ್ವವನ್ನು ಮತ್ತಷ್ಟು ಏಕೆ ಮೆರೆಸಬಾರದು? ಹೌದು, ಕಳೆದ ಬಾರಿಗಿಂತಲೂ ಸನಾತನ ಧರ್ಮಕ್ಕೆ ಸಂಬಂಧಿಸಿದ ವಿಶೇಷ ದಿನಗಳ ಆಚರಣೆಗಳಲ್ಲಿ ಹುರುಪು ಮೂಡಿದೆ.
ಅಂತಹ ನಾಯಕತ್ವ ದೇಶಕ್ಕೆ ದೊರೆತಿದೆ. ಈ ಬಾರಿಯಿಂದ ಪ್ರತಿ ಆಚರಣೆಯಲ್ಲೂ ಹೊಸ ಆಶಾಕಿರಣಗಳು ಮೂಡುತ್ತಿವೆ. ಭಾರತವೂ ಜಗದ್ಗುರುವಾಗಲು ತುದಿಗಾಲಲ್ಲಿ ನಿಂತಿದೆ. ಇತಿಹಾಸ ಮರುಕಳಿಸುವ ಸೂಚನೆ ದೊರೆತಿದೆ. ಭಾರತದ ಕೊಡುಗೆಯಾದ ಯೋಗವನ್ನು ವಿಶ್ವಮಟ್ಟದಲ್ಲಿ ಕೊಂಡೊಯ್ದು, ವಿಶ್ವ ಸಂಸ್ಥೆಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಘೋಷಿಸಿದ್ದಾಯಿತು. ಶಾಲೆಗಳಲ್ಲಿ ವೈದಿಕ ಗಣಿತ ಕಲಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಜರ್ಮನ್ ಭಾಷೆಗಿಂತಲೂ ಈ ವರ್ಷದಿಂದ ಸಂಸ್ಕೃತಕ್ಕೆ ಅದೇನೋ ಹೊಸ ಹೊಳಪು ಬಂದಂತೆ ಕಾಣುತ್ತಿದೆ. ದೇಶದ ನಾಯಕತ್ವ ಹೊತ್ತವರೂ ಹೋದಲ್ಲೆಲ್ಲಾ, ಭಾರತದ ಸನಾತನ ಸಂಶೋಧನೆಗಳು ಅತಿ ಪುರಾತನವಾದದ್ದು ಎಂದು ಮೌಲ್ಯಗಳನ್ನು ಕೊಂಡಾಡುತ್ತಿದ್ದಾರೆ. ರಾಜಕಾರಣಿಗಳಿಗೆ, ಎಡಪಂಥೀಯರಿಗೆ ವರ್ಜ್ಯವಾಗಿದ್ದ ಸಂತರನ್ನು ನೆನೆಸಿಕೊಳ್ಳುತ್ತಿದ್ದಾರೆ. ಸಂಸತ್ ನಲ್ಲೇ ನಿಂತು ದೇಶ ಕಟ್ಟಿರುವವರು ರಾಜಕಾರಣಿಗಳಲ್ಲಿ ಭಾರತದ ಋಷಿ ಮುನಿಗಳು, ಸಾಧು-ಸಂತರು ಎಂದು ನಿರ್ಬಿಢೆಯಿಂದ ಹೇಳುತ್ತಿದ್ದಾರೆ. ಅಲ್ಲದೇ ಏಕಂ ಸತ್ ವಿಪ್ರಾಃ ಬಹುದಾವದಂತಿಃ ಎಂಬಂತಹ ಸಂಸ್ಕೃತದ ಉದ್ಘಾರಗಳನ್ನು ಉದಾಹರಿಸುತ್ತಿದ್ದಾರೆ. ಕಾನ್ವೊಕೇಷನ್ ಗಳಿಗೆ ಹೋದರೆ, ಈ ಪದ್ಧತಿ ನಮ್ಮಲ್ಲಿ, ಅನ್ಯರಾಷ್ಟ್ರಗಳ ನಾಗರಿಕತೆ ಕಣ್ಣುಬಿಡುವುದಕ್ಕಿಂತಲೂ ಮೊದಲೇ ಇತ್ತು, ಬೇಕಾದರೆ ತೈತ್ತರೀಯ ಉಪನಿಷದ್ ಓದಿ ಎಂದು ವಿದ್ಯಾರ್ಥಿಗಳಿಗೆ ದೇಶಪ್ರೇಮವನ್ನು ತುಂಬುತ್ತಿದ್ದಾರೆ. ಎಷ್ಟೆಲ್ಲಾ ಸಕಾರಾತ್ಮಕ ಬೆಳವಣಿಗೆಗಳು! ಇದರಲ್ಲಿ ಶಂಕರಾಚಾರ್ಯರ ಜಯಂತಿಯನ್ನು ವಿಶ್ವಮಟ್ಟದಲ್ಲಿ ತತ್ವಜ್ನಾನಿಗಳ ದಿನವನ್ನಾಗಿ ಆಚರಿಸಲು ಘೋಷಣೆ ಮಾಡುವುದರತ್ತ ಕೇಂದ್ರ ಸರ್ಕಾರ ಗಮನ ಹರಿಸಲಿ, ಯೋಗವಾಯಿತು, ಶಂಕರಾಚಾರ್ಯರ ಜಯಂತಿಯನ್ನೂ ತತ್ವಜ್ನಾನಿಗಳ ದಿನವನ್ನಾಗಿ ಯು.ಎನ್ ಘೋಷಣೆ ಮಾಡಲಿ. ಹೇಗಿದ್ದರೂ ಭಾರತ ಜಗದ್ಗುರುವಾಗಬೇಕೆಂದು ಹೊರಟಿದೆ. ಜಗದ್ಗುರಿವಿನ ಜನ್ಮದಿನಾಚರಣೆಯ ಮೂಲಕವೇ ಇದು ಸಾಕಾರಗೊಳ್ಳಲಿ!

Monday 13 April 2015

ಶೃಂಗೇರಿ ಶಿವಗಂಗಾ ಶಾರದಾ ಪೀಠದ 'ಪುರುಷೋತ್ತಮ' ಭಾರತೀ ಸ್ವಾಮಿಗಳು




ಟಾರು ಕಾಣದ ರಸ್ತೆಗಳು, ವಾಹನಗಳ ಸೌಕರ್ಯ ಇರದಿದ್ದ 16ನೇ ಶತಮಾನದ ಕಾಲ.  ಬೆಂಗಳೂರು, ಮೈಸೂರು, ತುಮಕೂರು ಪ್ರದೇಶಗಳಲ್ಲಿದ್ದ ಕೆಲವರನ್ನು ಹೊರತುಪಡಿಸಿ ಎಲ್ಲಾ ಆಸ್ತಿಕ ಜನರಿಗೆ ಅದ್ವೈತ ಪ್ರತಿಪಾದನೆಯ ನೆಲೆಬೀಡಾಗಿರುವ ಶೃಂಗೇರಿಯ ಗುರುಗಳನ್ನು ದರ್ಶಿಸುವುದೆಂದರೆ ಕೊಂಚ ಪ್ರಯಾಸದ ಮಾತೇ ಆಗಿತ್ತು. ಶೃಂಗೇರಿ ಗುರುಗಳು ಅಲ್ಲಿಗೆ ಬಂದರಷ್ಟೇ ದರ್ಶನ ಭಾಗ್ಯ, ಇಲ್ಲದೇ ಇದ್ದರೆ ತಾವಾಗಿಯೇ ದೂರದ ಶೃಂಗೇರಿಗೆ ಹೋಗುವುದು ದಿನಗಟ್ಟಲೆಯ ಮಾತಾಗಿತ್ತು.

ಶೃಂಗೇರಿ ಜಗದ್ಗುರುಗಳು ತಮ್ಮ ಹತ್ತಿರದಲ್ಲೇ ಇದ್ದ ಶಿಷ್ಯ ಸಮೂಹವನ್ನು ಆಶೀರ್ವದಿಸುವಂತೆಯೇ, ತಮ್ಮ ಜಿಗ್ನಾಸೆಗಳನ್ನು ಬಗೆಹರಿಸಿ, ಧರ್ಮಮಾರ್ಗದಲ್ಲಿ ಮುನ್ನಡೆಸಿ ಆಶೀರ್ವದಿಸುವ ಯತಿಗಳಿಗಾಗಿ ಶೃಂಗೇರಿಗೆ ದೂರವಿದ್ದ ಬೆಂಗಳೂರಿನ ಸುತ್ತಮುತ್ತಲ ಪ್ರದೇಶದಲ್ಲಿರುವವರು ಕಾದಿದ್ದರು.  ಶೃಂಗೇರಿಯ 24ನೇ ಜಗದ್ಗುರುಗಳಾಗಿದ್ದ ಅಭಿನವ ನೃಸಿಂಹ ಭಾರತೀ ಸ್ವಾಮಿಗಳು 1615ರಲ್ಲಿ ಸಂಚಾರ ಕೈಗೊಂಡಿದ್ದಾಗ ಮೈಸೂರು ಅರಸರಾಗಿದ್ದ ರಾಜ ಒಡೆಯರು, ಮೈಸೂರು ಸಂಸ್ಥಾನದಲ್ಲಿ ಶೃಂಗೇರಿಯ ಒಂದು ಶಾಖಾಮಠವನ್ನು ಸ್ಥಾಪಿಸಬೇಕೆಂದು ಜಗದ್ಗುರುಗಳಲ್ಲಿ ಪ್ರಾರ್ಥಿಸಿದ್ದರು. ಮಹಾರಾಜರ ಪ್ರಾರ್ಥನೆಯನ್ನು ಒಪ್ಪಿದ ಗುರುಗಳು ತಮ್ಮ ಶಿಷ್ಯ ಪರಿವಾರದಲ್ಲಿದ್ದ ಶಂಕರ ಭಾರತಿಗಳೆಂಬ ಸಂನ್ಯಾಸಿಗಳನ್ನು ರಾಜರೊಂದಿಗೆ ಕಳಿಸಿ ಶಾಖಾಮಠವನ್ನು ಅನುಗ್ರಹಿಸಿದರು.

ಅಭಿನವ ನೃಸಿಂಹ ಭಾರತೀ ಸ್ವಾಮಿಗಳವರ ಅಪ್ಪಣೆಯಂತೆ ಶಂಕರ ಭಾರತೀ ಸ್ವಾಮಿಗಳು ಶೃಂಗೇರಿ ಶಿವಗಂಗಾ ಪೀಠದ ಪ್ರಥಮ ಪೀಠಾಧಿಪತಿಗಳಾಗಿ ಪೀಠಾರೋಹಣ ಮಾಡಿದರು. ಬೆಂಗಳೂರಿನ ನೆಲೆಮಂಗಲದ ಬಳಿಯ ಶಿವಗಂಗೆಯಲ್ಲಿ ಶೃಂಗೇರಿಯ ಶಾಖಾ ಮಠದ ಸ್ಥಾಪನೆಯಾಗಿದ್ದು ಹೀಗೆ. ಅಂದಿನಿಂದ ಇಂದಿನವರೆಗೂ ಶೃಂಗೇರಿ ಶಿವಗಂಗಾ ಮಠದ ಗುರುಪರಂಪರೆ ನಡೆದುಕೊಂಡುಬಂದಿದೆ. ಆದ್ದರಿಂದಲೇ ಶೃಂಗೇರಿ ಪರಂಪರೆಯಲ್ಲಿ ಶೃಂಗೇರಿ ಶಿವಗಂಗಾ ಪೀಠಕ್ಕೂ ವಿಶೇಷ ಸ್ಥಾನಮಾನಗಳಿವೆ. 1799ರಲ್ಲಿ ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರು ಅಪ್ರಾಪ್ತರಾದುದರಿಂದ ಪೂರ್ಣಯ್ಯನವರು ರಾಜಪ್ರತಿನಿಧಿಯಾಗಿ ರಾಜ್ಯದ ಚುಕ್ಕಾಣಿಯನ್ನು ಹಿಡಿದರು. ಶೃಂಗೇರಿ ಮಠಕ್ಕೆ ಗೌರವಾದರಗಳಿಂದ ನಡೆದುಕೊಳ್ಳುತ್ತಿದ್ದ ಪೂರ್ಣಯ್ಯನವರು, ಮೈಸೂರು ಸಂಸ್ಥಾನದಲ್ಲಿ ನಡೆಯುತ್ತಿದ್ದ, ಶುಭ-ಸಮಾರಂಭಗಳಲ್ಲಿ ಅಗ್ರ ತಾಂಬೂಲವನ್ನು ಮುಂಚಿತವಾಗಿ ಶೃಂಗೇರಿ ಮಠಕ್ಕೂ ತರುವಾಯ ಶೃಂಗೇರಿ ಶಿವಗಂಗೆ ಮಠಕ್ಕೂ ಕೊಡುವಂತೆ ಆಜ್ಞಾಪಿಸಿದ್ದರ ಬಗ್ಗೆ,  ಉಲ್ಲೇಖಗಳಿವೆ. ಶೃಂಗೇರಿಯ ಶಾಖಾಮಠಗಳಲ್ಲಿ  ಶಿವಗಂಗೆಪೀಠ ಹೆಚ್ಚು ಮಹತ್ವಪಡೆದಿದೆ ಎಂಬುದಕ್ಕೆ ಇಂತಹ ಅನೇಕ ಉದಾಹರಣೆಗಳಿವೆ. 

ಆಧ್ಯಾತ್ಮಿಕ ಶ್ರೀಮಂತಿಕೆಯನ್ನು ಒಡಲಲ್ಲಿಟ್ಟುಕೊಂಡತಹ ಶಿವಗಂಗೆ ಕ್ಷೇತ್ರ ಶೃಂಗೇರಿಯ ಶಾಖಾ ಮಠ ಸ್ಥಾಪನೆಯಾಗುವುಕ್ಕೂ ಮುನ್ನವೇ ದಕ್ಷಿಣ ಕಾಶಿ ಎಂದು ಸುಪ್ರಸಿದ್ಧ. ಅಗಸ್ತ್ಯರು ತಪಸ್ಸು ಮಾಡಿದ, ಅಗಸ್ತ್ಯ ತೀರ್ಥದ ಸುತ್ತ ನೂರೆಂಟು ಶಿವಲಿಂಗಳಿರುವ ಈ ಕ್ಷೇತ್ರದ ಪ್ರತಿಯೊಂದು ಚರಾಚರಗಳಲ್ಲೂ ಅದ್ವೈತವೇ ಗೋಚರಿಸುತ್ತದೆ.  ಪೂರ್ವಕ್ಕೆ ವೃಷಭಾಕೃತಿ, ಪಶ್ಚಿಮಕ್ಕೆ ಗಣಪತಿ, ಉತ್ತರಕ್ಕೆ ಸರ್ಪದ ಆಕೃತಿ, ದಕ್ಷಿಣಕ್ಕೆ ಲಿಂಗಾಕೃತಿ ಕಾಣುವುದು ಶಿವಗಂಗೆಯ ಬೆಟ್ಟದ ವೈಶಿಷ್ಟ್ಯ. ಗೆರೆ ಎಳೆದಂತೆ ಬೆಟ್ಟದ ಎದುರು ನಿಂತರೆ ಕಾಣುವುದೇ ಶೃಂಗೇರಿ ಶಿವಗಂಗಾ ಶಾರದಾಪೀಠ.  ಶೃಂಗೇರಿ ಪರಂಪರೆಯ ಯತಿಗಳನ್ನು ಭಗವಾನ್ ಶಂಕರನ ಸ್ವರೂಪವೆಂದೇ ತಿಳಿಯಲಾಗುತ್ತದೆ. ಶಿವಗಂಗಾ ಮಠದಲ್ಲಿ ನಿಂತು ಬೆಟ್ಟವನ್ನು ನೋಡಿದರೆ ಬೃಹದಾಕಾರದ ಬೆಟ್ಟ ನಂದಿಯ ಆಕಾರದಲ್ಲಿ ಕಾಣುತ್ತದೆ. ಹಾಗೆ ಕಂಡಾಗಲೆಲ್ಲಾ ಶಂಕರರ ಸ್ವರೂಪದಲ್ಲಿರುವ ಯತಿಗಳ ಮುಂದೆ ಶ್ರದ್ಧೆಯಿಂದ ಕುಳಿತ ನಂದಿ ಏನನ್ನೋ ಆಲಿಸುತ್ತಿದೆ ಎಂದೆನಿಸದೇ ಇರದು. ಆಧ್ಯಾತ್ಮ ಸಾಧನೆಗೆ ಪ್ರಶಸ್ತವೆಂಬಂತಿರುವ ಶೃಂಗೇರಿ ಶಿವಗಂಗಾ ಪೀಠ, ಶಂಕರ ಭಾರತೀ ಸ್ವಾಮಿಗಳಿಂದ, ಈಗಿನ ಪೀಠಾಧಿಪತಿಗಳಾದ ಪುರುಷೋತ್ತಮ ಭಾರತೀ ಸ್ವಾಮಿಗಳವರೆಗೆ ಸವಿಶೇಷ ಗುರು ಪರಂಪರೆಯನ್ನು ಹೊಂದಿದೆ.  ಲೋಕೋತ್ತರ ಪ್ರತಿಭಾ ಸಂಪನ್ನರನ್ನು, ತಪಶ್ಚಕ್ರವರ್ತಿಗಳನ್ನೂ ಕಂಡಿದೆ. ಈ ಪೀಠವನ್ನು ಅಲಂಕರಿಸಿದ್ದ ಈ  ಹಿಂದಿನ ಪೀಠಾಧಿಪತಿಗಳು, ಪುರುಶೋತ್ತಮ ಭಾರತೀ ಸ್ವಾಮಿಗಳ ಗುರುಗಳು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳಂತೂ ಸನ್ಯಾಸ ಧರ್ಮಕ್ಕೆ ಅನ್ವರ್ಥವೆಂಬಂತಿದ್ದರು.  ಶೃಂಗೇರಿಯ ಭಾರತೀ ತೀರ್ಥ ಸ್ವಾಮಿಗಳಿಂದ ತಪಶ್ಚಕ್ರವರ್ತಿ ಎಂಬ ಬಿರುದನ್ನು ಪಡೆದರು.  ಮಹಾಪ್ರಾಜ್ಞರೂ, ಔದಾರ್ಯಾದಿ ಗುಣಾನ್ವಿತರೂ ಆಗಿದ್ದ ಗುರುಗಳು, ಪುಂಖಾನುಪುಂಖ ವಿಷಯೇಕ್ಷಣ ತತ್ಪರೋಪಿ ಬ್ರಹ್ಮಾವಲೋಕನ ಧಿಯಂ ನ ಜಹಾತಿ ಯೋಗಿ ( ಲೌಕಿಕ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದರೂ ಜ್ಞಾನಿಗಳು ತಮ್ಮ ಲಕ್ಷ್ಯವನ್ನು ಸದಾ ಬ್ರಹ್ಮದ ಮೇಲೆಯೇ ಸ್ಥಿರೀಕರಿಸಿರುತ್ತಾರೆ ಎಂಬ ಮಾತಿನಂತೆ ಲೌಕಿಕ ವಿದ್ಯೆಯಲ್ಲೂ, ಅಲೌಕಿಕದಲ್ಲೂ ಅನನ್ಯ ಸಾಧನೆ ಮಾಡಿದ್ದರು.  

ಶೃಂಗೇರಿ ಶಿವಗಂಗಾ ಪೀಠಾಧಿಪತಿ ಪುರುಷೋತ್ತಮ ಭಾರತೀ ಸ್ವಾಮಿಗಳು:

ಇಂತಹ ಯತಿಪುಂಗವರಿದ್ದ ಗುರುಪರಂಪರೆಯಲ್ಲಿ 19ನೇ ಪೀಠಾಧಿಪತಿಗಳಾಗಿರುವವರು ಶ್ರೇಷ್ಠ ವಿದ್ವಾಂಸರಾದ ಪುರುಶೋತ್ತಮ ಭಾರತೀ ಸ್ವಾಮಿಗಳು. ಪೂರ್ವಾಶ್ರಮದಲ್ಲಿ  ಕಮ್ಮಂಬಾಟಿ ನಾಗೇಶ್ವರ ಅವಧಾನಿಗಳು. ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಜೀಕೊಂಡೂರು ಮಂಡಲಂನ ವೆಲ್ಲಟೂರು ಗ್ರಾಮದಲ್ಲಿ ಕಮ್ಮಂಬಾಟಿ ಸೇತುಮಾಧವ ಅವಧಾನಿ ಮತ್ತು ಜಗನ್ಮಂಗಳ ಕಲ್ಯಾಣಿ ಬಾಲಾ ತ್ರಿಪುರಸುಂದರಮ್ಮ ದಂಪತಿಗಳ ದ್ವಿತೀಯ ಪುತ್ರನಾಗಿ 9ನೇ ಸೆಪ್ಟೆಂಬರ್ 1953 ಜನಿಸಿದರು.  ವಿಜಯವಾಡಗಳಲ್ಲಿ ತಮ್ಮ ಲೌಕಿಕ ವಿದ್ಯಾಭ್ಯಾಸವನ್ನು ಪೂರೈಸಿದ ನಂತರ ವಿಜಯವಾಡದ ಶೃಂಗೇರಿ ಮಠದಲ್ಲಿ ತಮ್ಮ ತಂದೆಯವರಿಂದಲೇ ವೇದ ವಿದ್ಯೆಯನ್ನು ಅಭ್ಯಾಸ ಮಾಡಿದರು. ಕೃಷ್ಣ ಯಜುರ್ವೇದ, ಕ್ರಮಂತಗಳನ್ನು ಪೂರ್ಣಗೊಳಿಸಿ ರಾಜಮಹೇಂದ್ರಿ, ಶೃಂಗೇರಿ ಮುಂತಾದ ಕಡೆಗಳಲ್ಲಿ ನಡೆದ ಹಲವಾರು ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ವಿದ್ವಾನ್ ಮಂಕಾಬೂಡಿ ಸುಬ್ರಹ್ಮಣ್ಯ ಶಾಸ್ತ್ರಿಗಳು ಹಾಗೂ ವೇಮೂರಿ ವೆಂಕಟೇಶ್ವರ ಸಿದ್ಧಾಂತಿ ಅವರ ಮಾರ್ಗದರ್ಶನದಲ್ಲಿ ಪಂಚ ಕಾವ್ಯ, ಜೋತಿಷ್ಯ ಶಾಸ್ತ್ರವನ್ನು ಕರತಲಾಮಲಕಗೊಳಿಸಿಕೊಂಡರು.

ಇಂದು ಸನಾತನದ ಧರ್ಮದ ಗಣಿತ ಶಾಸ್ತ್ರದ (ವೇದಿಕ್ ಮ್ಯಾಥ್ಸ್) ಬಗ್ಗೆ ಅತಿ ಹೆಚ್ಚು ಚರ್ಚೆ ನಡೆಯುತ್ತಿದೆ. ಆದರೆ ಅದರ ಬಗ್ಗೆ ಅಧಿಕಾರಯುತವಾಗಿ ಮಾತನಾಡುವವರಾಗಲಿ, ಅದರ ಮೇಲೆ ಪ್ರಭುತ್ವ ಸಾಧಿಸಿದವರನ್ನು ಕಾಣುವುದು ಅತಿ ವಿರಳ.   ಲೀಲಾವತಿ ಗಣಿತ ಶಾಸ್ತ್ರದಲ್ಲಿ ಪ್ರಾವೀಣ್ಯತೆ ಹೊಂದಿರುವುದು ಪುರುಶೋತ್ತಮ ಭಾರತೀ ಸ್ವಾಮಿಗಳ ಮತ್ತೊಂದು ವೈಶಿಷ್ಟ್ಯ.  ಇನ್ನು ಶೃಂಗೇರಿ ಪೀಠದ ಶಾಖೆಗೆ ಪೀಠಾಧಿಪತಿಗಳಾಗುವವರಿಗೆ ತರ್ಕ ಶಾಸ್ತ್ರ, ವೇದಾಂತವೇ ಮೊದಲಾದ ವಿಷಯಗಳ ಬಗ್ಗೆ ಪಾಂಡಿತ್ಯವಿರಬೇಕು.  ಮಹಾಮಹೋಪಾಧ್ಯಾಯ ಮುದ್ದುಲಪಲ್ಲಿ ಮಾಣಿಕ್ಯಶಾಸ್ತ್ರಿಗಳ ಬಳಿ ತರ್ಕ ಪ್ರಕರಣ, ವೇದಾಂತ ಶಾಸ್ತ್ರ ಗ್ರಂಥ, ಗೀತಾ ಭಾಷ್ಯ, ಉಪನಿಷತ್ ಭಾಷ್ಯ, ಸೂತ್ರ ಭಾಷ್ಯ, ಪ್ರಸ್ಥಾನ ತ್ರಯ ಮುಂತಾದವುಗಳಲ್ಲಿ ಅದ್ಭುತ ಜ್ನಾನ ಸಂಪಾದಿಸಿಕೊಂಡಿರುವುದು ಪುರುಶೋತ್ತಮ ಭಾರತೀ ಸ್ವಾಮಿಗಳ ಹಿರಿಮೆ. ಜ್ಞಾನ ಸಂಪನ್ನರಾದ ಶ್ರೀಗಳು ಶ್ರೀ ಶೃಂಗೇರಿ ಶಂಕರ ಮಠದ ವೇದ ಪಾಠಶಾಲೆಯಲ್ಲಿ ವೇದ ವಿದ್ಯೆಯನ್ನು ಅನೇಕಾನೇಕ ವಿದ್ಯಾರ್ಥಿಗಳಿಗೆ ಕಲಿಸಿದರು. ಅಷ್ಟೇ ಅಲ್ಲದೇ ತಮ್ಮ ಪುತ್ರರಾದ ಕಮ್ಮಂಬಾಟಿ ಆಂಜನೇಯಶರ್ಮ ಘನಪಾಠಿ ಮತ್ತು ಕಮ್ಮಂಬಾಟಿ ಸೇತುಮಾಧವಶರ್ಮ ಅವಧಾನಿ ಅವರಿಗೂ ಸಹ ವೇದ, ಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಪ್ರವೀಣರಾಗುವಂತೆ ತರಬೇತಿ ನೀಡಿ ಸ್ಮಾರ್ತ ಪರೀಕ್ಷಾಧಿಕಾರಿಯಾಗಿ ಸಲ್ಲಿಸಿದ್ದಾರೆ. 

ಮೈಸೂರಿನೊಂದಿಗೆ ಉತ್ತಮ ಒಡನಾಟ:

ಪುರುಶೋತ್ತಮ ಭಾರತೀ ಸ್ವಾಮಿಗಳು ವಿಜಯವಾಡದವರಾಗಿದ್ದರೂ ಪೂರ್ವಾಶ್ರಮದಲ್ಲಿ ಶ್ರೀಗಳಿಗೂ ಮೈಸೂರಿಗೂ ಅವಿನಾಭಾವ ಸಂಬಂಧವಿದೆ. ಮೈಸೂರಿನಲ್ಲಿರುವ ಅವಧೂತ ದತ್ತಪೀಠಾಧಿಪತಿಗಳಾದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಅವರ ಉತ್ತರಾಧಿಕಾರಿಗಳಾಗಿರುವ ದತ್ತ ವಿಜಯಾನಂದತೀರ್ಥ ಸ್ವಾಮೀಜಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಶ್ರೀಗಳು ಅಲ್ಲಿನ ವೇದ ಪಾಠಶಾಲೆಯಲ್ಲಿ ಬೋಧನಾ ಕಾರ್ಯವನ್ನು ಸಫಲವಾಗಿ ಕೈಗೊಂಡಿದ್ದರು.  ಸನಾತನದ ಧರ್ಮಕ್ಕೆ ಅವಿಸ್ಮರಣೀಯ ಸೇವೆ ಸಲ್ಲಿಸಿ ವಿಷಯ ಸುಖಗಳಲ್ಲಿ ವಿರಕ್ತಿ ಹೊಂದಿ, ತುರೀಯಾಶ್ರಮವನ್ನು ಸ್ವೀಕರಿಸುವುದರ ಬಗೆಗೆ ಶೃಂಗೇರಿ ಜಗದ್ಗುರುಗಳಲ್ಲಿ ನಿವೇದಿಸಿಕೊಂಡರು. ಇತ್ತ ಶಿವಗಂಗೆಯ 18ನೇ ಪೀಠಾಧಿಪತಿಗಳಾಗಿದ್ದ ಸಚ್ಚಿದಾನಂದ ಭಾರತೀ ಸ್ವಾಮಿಗಳ ಆರೋಗ್ಯವೂ ಹದಗೆಟ್ಟೆತ್ತು. ಶ್ರೀಗಳು 2013ರ ಫೆ.23ರಂದು ಬ್ರಹ್ಮೈಕ್ಯರಾದರು. ಶೃಂಗೇರಿ ಜಗದ್ಗುರುಗಳಾದ ಭಾರತಿ ತೀರ್ಥ ಸ್ವಾಮಿಗಳು ವಿಶಾಖ ಪಟ್ಟಣದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳ ಮೂಲಕ 2014ರ ಮಾ.3ರಂದು ಕಮ್ಮಂಬಾಟಿ ನಾಗೇಶ್ವರ ಅವಧಾನಿಗಳಿಗೆ ತುರಿಯಾಶ್ರಮವನ್ನು ಅನುಗ್ರಹಿಸಿ, ಶ್ರೀ ಪುರುಶೋತ್ತಮ ಭಾರತೀ ಸ್ವಾಮಿಗಳೆಂಬ ಯೋಗಪಟ್ಟವನ್ನು ನೀಡಿದರು. ಪುರುಷೋತ್ತಮ ಭಾರತೀ ಸ್ವಾಮಿಗಳು ತಮ್ಮ ಪರಂಪರೆಯ ಗುರುಗಳಾದ ಸಚ್ಚಿದಾನಂದ ಭಾರತೀ ಸ್ವಾಮಿಗಳಿಂದ ವಿಧಿವತ್ತಾಗಿ ಸನ್ಯಾಸಾಶ್ರಮವನ್ನು ಸ್ವೀಕರಿಸಲು ಸಾಧ್ಯವಾಗದೇ ಇದ್ದರೂ, ತಮ್ಮ ಗುರುಗಳ ಅಭಿದಾನವನ್ನೇ ಪಡೆದಿದ್ದ ಯತಿಗಳಿಂದ ಸನ್ಯಾಸಾಶ್ರಮ ಸ್ವೀಕರಿಸಿದ್ದೂ ವಿಶೇಷ ಸಂಗತಿ. 2014ರ ಏಪ್ರಿಲ್ 24ರಂದು(ವಿಜಯ ಸಂವತ್ಸರ ಫಾಲ್ಗುಣ ಶುದ್ಧ ಬಿದಿಗೆ ) ಪುರುಶೋತ್ತಮ ಭಾರತೀ ಸ್ವಾಮಿಗಳಿಗೆ ಶೃಂಗೇರಿ ಶಿವಗಂಗಾಪೀಠದ 19ನೇ ಪೀಠಾಧಿಪತಿಗಳಾಗಿ ಪಟ್ಟಾಭಿಷೇಕ ನೆರವೇರಿತು. ನವಯತೀಶ್ವರರನ್ನು ಎದುರು ನೋಡುತ್ತಿದ್ದ ಶೃಂಗೇರಿ ಶಿವಗಂಗೆಯ ಶಾರದಾಪೀಠಕ್ಕೆ 'ಪುರುಷೋತ್ತಮ'ರಾದ ಪುರುಷೋತ್ತಮ ಭಾರತೀ ಸ್ವಾಮಿಗಳು ಪೀಠಾಧಿಪತಿಗಳಾದರು. ಅಂದು ಪುರುಶೋತ್ತಮ ಭಾರತೀ ಸ್ವಾಮಿಗಳ ಪೀಠಾರೋಹಣದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರೀಮಠದಲ್ಲಿ ನಡೆದಿತ್ತು. 2015ರ ಏ.14ಕ್ಕೆ ಈ ಅವಿಸ್ಮರಣೀಯ ಘಟನೆಗೆ ಒಂದು ವರ್ಷ. ವಾರ್ಷಿಕೋತ್ಸವದ ಅಂಗವಾಗಿ ಈ ವರ್ಷ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತವೃಂದ ಎದುರು ನೋಡುತ್ತಿದೆ.

Sunday 8 March 2015

ಭೂಸ್ವಾಧೀನ ಕಾಯ್ದೆಯಲ್ಲಿರುವ ಎರಡು ಅಂಶಗಳನ್ನೇ ಪ್ರಧಾನವಾಗಿಟ್ಟುಕೊಂಡು ರೈತವಿರೋಧಿ ಎಂದು ಶರಾ ಬರೆಯಬಹುದು ಆದರೆ....

ಕಾಂಗ್ರೆಸ್ ಬಗ್ಗೆ ರೈತರಿಗಿರುವ ಅಸಹನೆಯನ್ನು ತೋರಿಸುವಂತೆ ಭೂಸ್ವಾಧೀನ: ಕಾಂಗ್ರೆಸ್ ತೋರಬೇಕಿರುವ ನಿಜ ಕಾಳಜಿ ಎಂಬ ಶೀರ್ಷಿಕೆಯಡಿ ಮಾ.4ರಂದು 'ಕನ್ನಡ ಪ್ರಭ' ಪತ್ರಿಕೆಯಲ್ಲಿ ಪತ್ರವೊಂದು ಪ್ರಕಟವಾಗಿತ್ತು. ಅದೂ ನೊಂದ ರೈತರಿಂದ. ಕೇಂದ್ರದ ಭೂಸ್ವಾಧೀನ ಕಾಯ್ದೆ ತಿದ್ದುಪಡಿಗೆ ರೈತರಿಗಿಂತ ರಾಜಕೀಯ ಪಕ್ಷಗಳ ಮುಖಂಡರ ವಿರೋಧವೇ ಹೆಚ್ಚಾಗಿತ್ತು ಎಂಬುದು ಪ್ರಮುಖ ಆರೋಪ. ಈ ವಿಚಾರದಲ್ಲಿ ಮುಂಚೂಣಿಯಲ್ಲಿರುವ ಕಾಂಗ್ರೆಸ್ ಬಗ್ಗೆಯೂ ಆ ಪತ್ರದಲ್ಲಿ ಅಸಮಾಧಾನ ಧಾರಾಳವಾಗಿ ವ್ಯಕ್ತವಾಗಿತ್ತು. ಕಾಂಗ್ರೆಸ್ ಪಕ್ಷ, ಕೈಗಾರಿಕಾ ಉದ್ದೇಶಕ್ಕಾಗಿ ರಾಜ್ಯದಲ್ಲಿ ಭೂಸ್ವಾಧೀನಕ್ಕೊಳಪಟ್ಟ ಜಮೀನುಗಳ ರೈತರ ಪರಿಸ್ಥಿತಿಯನ್ನು ಪಕ್ಷದ ಸಂಸದೀಯ ನಾಯಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಿಯುವುದು ಒಳಿತು ಎಂದು ಬರೆಯಲಾಗಿತ್ತು. ಈ ಪತ್ರವನ್ನು ಓದಿದರೆ 'ಪರಿವಾರದ ವಿರೋಧವನ್ನು ಲೆಕ್ಕಿಸದೇ ಕಾಂಗ್ರೆಸ್ ದೂಷಣೆ ಏಕೆ' ಎಂಬ ಪ್ರಶ್ನೆಗೆ ಉತ್ತರ ದೊರೆತೀತು.

ಗುಜರಾತ್ ಭೂಸ್ವಾಧೀನ ಪರಿ, ಇದು ವಿಸ್ವಾಸ ಇಡಬಹುದಾದ ದಾರಿ ಲೇಖನಕ್ಕೆ ಭೂಸ್ವಾಧೀನ : ಪರಿವಾರದ ವಿರೋಧ ಮುಚ್ಚಿಟ್ಟು ಕಾಂಗ್ರೆಸ್ ದೂಷಣೆ ಏಕೆ ಲೇಖನದ ಮೂಲಕ ಪ್ರತಿಕ್ರಿಯೆ ನೀಡಿದ್ದ ಮಲ್ಲಿಕಾರ್ಜುನ ತಿಪ್ಪಾರ ಅವರು ಕೇವಲ ಹಣದಾಸೆಗೆ ಭೂಮಿ ನೀಡಿದ ರೈತರ ಸ್ಥಿತಿ ಬಗ್ಗೆ ಆಲಮಟ್ಟಿ ಅಣೆಕಟ್ಟೆ ಸಂತ್ರಸ್ತರ ಸ್ಥಿತಿಯನ್ನು ಗಮನಿಸಲು ತಿಳಿಸಿದ್ದಾರೆ. ಅಲ್ಲದೇ ಸರ್ಕಾರ ಭೂಮಿ ಪಡೆಯುವಾಗ ಮನೆಗೊಬ್ಬರಿಗೆ ಕೆಲಸ ಕೊಡುತ್ತೇವೆ ಆಸ್ಪತ್ರೆ ಕಟ್ಟಿಕೊಡುತ್ತೇವೆ ರಸ್ತೆ ಮಾಡುತ್ತೇವೆ ಎಂದು ಹೇಳಿದ್ದ ಭರವಸೆಗಳು ಈಡೇರಿಲ್ಲ ಎಂದೂ ಆರೋಪಿಸಿದ್ದಾರೆ. ನಿಜ ಆದರೆ ಈ ಸ್ಥಿತಿಗೆ ಕಾರಣ ಭೂಸ್ವಾಧೀನ ಕಾಯ್ದೆಯೋ ಅಥವಾ ಅದರಿಂದ ಉಂಟಾಗುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದ ನಮ್ಮನ್ನು ಆಳುವವರೋ ಹೇಳಿ? ಕಾಯ್ದೆಯಲ್ಲಿ ಪರಿಹಾರದ ರೂಪದಲ್ಲಿ ಸ್ವರ್ಗವನ್ನೇ ಧರೆಗಿಳಿಸಿ, ಜಮೀನುಗಳ ಪರಿಹಾರ ಮೊತ್ತವನ್ನೂ ನಿಗದಿ ಮಾಡದ ಅದೆಷ್ಟು ಪ್ರಕರಣಗಳು ನಮ್ಮ ಮುಂದಿಲ್ಲ?

ಕಾಂಗ್ರೆಸ್ ನೇತೃತ್ವದ ಸರ್ಕಾರವಾಗಲೀ ಅಥವಾ ಇನ್ನಿತರ ಸರ್ಕಾರಗಳಾಗಲಿ(65 ವರ್ಷಗಳಲ್ಲಿ ದೇಶದಲ್ಲಿ ಬಹುತೇಕ ಕಾಂಗ್ರೆಸ್ ಆಡಳಿತವೇ ಇತ್ತು) ರೂಪಿಸಿರುವ ಕಾಯ್ದೆಯಂತೆಯೇ ನಡೆದುಕೊಂಡಿವೆಯೇ? ಒಂದು ವೇಳೆ ರೈತರಿಗೆ ಹೆಚ್ಚು ನೋವುಂಟಾಗದಂತೆ ಕಾಯ್ದೆಯೊಂದನ್ನು ಜಾರಿಗೆ ತಂದ ನಂತರ ಅದಕ್ಕೆ ಯಾರೂ ವಿರೋಧ ವ್ಯಕ್ತಪಡಿಸುವುದಿಲ್ಲ. ಏಕೆಂದರೆ ಅದು ರೈತರ ಪರವಾಗಿರುತ್ತದೆ. ಆದರೆ  ಯೋಜನೆಗಳೆಲ್ಲಾ ಹಳತಾದರೂ, ವಶಪಡಿಸಿಕೊಂಡ ಭೂಮಿಯಲ್ಲಿ ಸ್ಥಾಪಿತವಾದ ಕೈಗಾರಿಕೆಗಳು ಹಳತಾದರೂ ಸಂತ್ರಸ್ತರ ನೋವು ಮಾತ್ರ ಹಾಗೆಯೇ ಉಳಿದರೆ ಆ ಕಾಯ್ದೆಯಿಂದಾಗುವ ಪ್ರಯೋಜನ? ರೈತರಿಗೆ ಬೇಕಾಗಿರುವುದು ಏನು? ತಮ್ಮ ಭೂಮಿ ವಶಪಡಿಸಿಕೊಂಡರೆ ಅದಕ್ಕೆ ತಕ್ಕ ಪರಿಹಾರವೇ ಅಲ್ಲವೇ? ಈ ಹಿಂದಿನ ಭೂಸ್ವಾಧೀನ ಕಾಯ್ದೆಯಿಂದ ಯೋಜನೆಗಳು ವಿಳಂಬವಾಗುತ್ತಿತ್ತು.  ಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಿದ ನಂತರವೂ ಅದೆಷ್ಟೋ ವರ್ಷಗಳು ಜಮೀನುಗಳ ಪರಿಹಾರ ಮೊತ್ತವನ್ನೂ ನಿಗದಿಪಡಿಸಲು ಸಾಧ್ಯವಾಗುತ್ತಿರಲಿಲ್ಲ.   ಭೂಸ್ವಾಧೀನ ಪ್ರಕ್ರಿಯೆಯನ್ನು ಸರಳಗೊಳಿಸುವುದರಿಂದ ಯೋಜನೆಗಳು ಶೀಘ್ರವೇ ಪ್ರಾರಂಭವಾಗುತ್ತವೆ.  ಭೂಮಿ ನೀಡುವ ರೈತರಿಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಂತ್ಯಂತ ಶೀಘ್ರದಲ್ಲೇ ಪರಿಹಾರ ನೀಡುವುದೂ ಸುಲಭವಾಗುತ್ತದೆ. ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಆದೆಷ್ಟೋ ವರ್ಷಗಳವರೆಗೆ ಪರಿಹಾರ ಮೊತ್ತ ನಿಗದಿ ಮಾಡದೇ ರೈತರನ್ನು ಸಂತ್ರಸ್ತರಾಗಿಯೇ ಉಳಿಸುವುದು ಸೂಕ್ತವೋ ಇಲ್ಲ ಶೀಘ್ರದಲ್ಲೇ ಪರಿಹಾರ ನೀಡಿ ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಸೂಕ್ತವೋ? ಈ ದೃಷ್ಟಿಯಿಂದಲೇ ರೈತರಿಗೆ ಪರಿಹಾರ ನೀಡುವ ವಿಷಯದಲ್ಲಿ ಗುಜರಾತ್ ನ್ನು ಮಾದರಿ ಎಂದು ಪರಿಗಣಿಸಬಹುದು. ಅಂದ ಹಾಗೆ ಭೂಮಿವಶಪಡಿಸಿಕೊಂಡ ಸಂದರ್ಭದಲ್ಲಿ ರೈತರಿಗೆ ಸೂಕ್ತ ಪರಿಹಾರ ನೀಡದೇ ಇರುವುದಕ್ಕಾಗಿಯೇ ಸುಪ್ರೀಂ ಕೋರ್ಟ್ ಗುಜರಾತ್ ನಿಂದ ಪರಿಹಾರ ನೀಡುವುದನ್ನು ಕಲಿಯಿರಿ ಎಂದು ಹೇಳಿರುವುದು. ಇನ್ನು ಭೂ ಸ್ವಾಧೀನ ಕಾಯ್ದೆಯನ್ನು ಕೃಷಿ ಕ್ಷೇತ್ರಕ್ಕೇ ಕಂಟಕ ಎಂದು ದಾರಿ ತಪ್ಪಿಸಲಾಗುತ್ತಿದೆ. ಆದರೆ ಆ ಕ್ಷೇತ್ರದ ಅಭಿವೃದ್ಧಿಗೆ ಸಹಾಯಕಾರಿಯಾಗಿರುವ  ಚೆಕ್ ಡ್ಯಾಂ, ವಿದ್ಯುತ್ ಸೌಲಭ್ಯ ಹಾಗೂ ಇನ್ನಿತರ ಯೋಜನೆಗಳಿಗಾದರೂ ಭೂಮಿ ಬೇಡವೇ? ಇಂದಿಗೂ ಚೆಕ್ ಡ್ಯಾಂ, ವಿದ್ಯುತ್ ಇಲ್ಲದೇ ಅದೆಷ್ಟೋ ರೈತರೋ ಭೂಮಿ ಇದ್ದರೂ ಬೆಳೆಯಲು ಸಾಧ್ಯವಾಗದೇ ಸಮಸ್ಯೆ ಎದುರಿಸುತ್ತಿದ್ದಾರೆ. ವಶಪಡಿಸಿಕೊಂಡಿರುವ ಭೂಮಿಯಲ್ಲಿ ಚೆಕ್ ಡ್ಯಾಂ, ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸಲು ವಿದ್ಯುತ್ ಯೋಜನೆಗಳನ್ನು ಕೈಗೊಳ್ಳುವುದರಿಂದ, ಅದೆಷ್ಟೋ ರೈತರಿಗೆ ಕೃಷಿ ಕ್ಷೇತ್ರದಲ್ಲಿ ಅತಿ ಹೆಚ್ಚು ಉತ್ಪಾದಿಸಲು ಸಾಧ್ಯವಾಗುತ್ತದೆ ಅಲ್ಲವೇ? ಕೊನೆಗೆ ಕೃಷಿ ಉತ್ಪನ್ನಗಳ ಟ್ರ್ಯಾನ್ಸ್ ಪೋರ್ಟ್ ವ್ಯವಸ್ಥೆಗೆ ಗೂಡ್ಸ್ ರೈಲು ಬೇಕೆಂದರೂ ರೈಲು ಹಳಿಗೆ ಭೂಸ್ವಾಧೀನ ಪಡಿಸಿಕೊಳ್ಳುವುದು ಅತ್ಯಗತ್ಯ ಹಾಗಾದರೆ ಭೂಸ್ವಾಧೀನ ಕಾಯ್ದೆ ಹೇಗೆ ರೈತವಿರೋಧಿಯಾಗುತ್ತದೆ?

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಯ ವಿಷಯದಲ್ಲಿ ಗುಜರಾತ್ ಬಗ್ಗೆಯೂ ಪ್ರತಾಪಿಸಲಾಗಿತ್ತು. ಏಕೆಂದರೆ ಶೇ.9.6ರಷ್ಟು ಕೃಷಿ ಜಿಡಿಪಿ ಬಗ್ಗೆ ಎಲ್ಲರೂ ಬೆರಗಿನಿಂದ ನೋಡುತ್ತೇವೆ. ಕಚ್ ನಂತಹ ಪ್ರದೇಶದಲ್ಲೂ ಅತ್ಯಧಿಕ ಕೃಷಿ ಉತ್ಪಾದನೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿಕೊಂಡಿದ್ದಿದೆ. ಅಲ್ಲಿನ ಕೃಷಿ ಅಷ್ಟು ಪ್ರಸಿದ್ಧಿಯಾಗುವುದಕ್ಕೆ ಕೀ ಫ್ಯಾಕ್ಟರ್ ಗಳೇನು ಗೊತ್ತೆ? ಕೃಷಿ ಕ್ಷೇತ್ರಕ್ಕೆ 8  ಗಂಟೆಗಳ ಕಾಲ ನಿರಂತರವಾದ ಅತ್ಯುನ್ನತ ಗುಣಮಟ್ಟದ  ವಿದ್ಯುತ್ ಪೂರೈಕೆ, ಕಡಿಮೆ ನೀರಿರುವ, ಗುಜರಾತ್ ನ ಪ್ರದೇಶಗಳಿಗೆ ಅತಿ ಹೆಚ್ಚು ನೀರಿರುವ ಪ್ರದೇಶಗಳಿಂದ ನೀರು ಪೂರೈಕೆ, ಚೆಕ್ ಡ್ಯಾಂ ನಿರ್ಮಾಣ ಹಾಗೂ ರೂರಲ್ ಇನ್ಫ್ರಾಸ್ಟ್ರಕ್ಚರ್ ನ್ನು ಅಭಿವೃದ್ಧಿಗೊಳಿಸುವುದು. ಇವೆಲ್ಲವೂ ರೈತರಿಂದ ಒಂದಿಚೂ ಭೂಮಿ ವಶಪಡಿಸಿಕೊಳ್ಳದೇ ಸಾಧ್ಯವಾಗುವುದಾದರೂ ಹೇಗೆ?, ಹಾಗೆಯೇ ರೈತರಿಂದ ಭೂಮಿ ವಶಪಡಿಸಿಕೊಂಡಾದ ನಂತರವೂ ರೈತರಿಗೆ ತೊಂದರೆಯಾಗದೇ ಕೃಷಿ ಕ್ಷೇತ್ರ ದೇಶದ ಇತರ ಭಾಗಗಳಿಗಿಂತಲೂ ಅಭಿವೃದ್ಧಿಯಾಗಿದೆಯಲ್ಲಾ ಇದಕ್ಕೆ ಏನು ಹೇಳುತ್ತೀರಿ?

ಶೇ.70ರಷ್ಟು ಒಪ್ಪುಗೆ ಹಾಗೂ ಸಾಮಾಜಿಕ ಪರಿಣಾಮದ ಅಂದಾಜು ತೆಗೆದುಹಾಕಿರುವ ಬಗ್ಗೆ ಮಾತನಾಡಿದ್ದೀರಿ, ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಸಂದರ್ಭದಲ್ಲಿ , ರೈತರಿಂದ ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕಾದರೆ ರಿಯಲ್ ಎಸ್ಟೇಟ್ ಧಂಧೆಯಲ್ಲಿ ತೊಡಗಿರುವವರು ಹೇಗೆ ಲಾಭ ಮಾಡಿಕೊಂಡರು ನೆನಪಿಸಿಕೊಳ್ಳಿ? ರೈತರ ಭೂಮಿಯನ್ನು ಮೊದಲೇ ಖರೀದಿ ಮಾಡಿ 70 ಒಪ್ಪುಗೆ ಹಾಗೂ ಎಸ್.ಐ.ಎ ಹೆಸರಿನಲ್ಲಿ ವಿಳಂಬ ಮಾಡಿ, ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡಿಕೊಂಡರು. ಅಂದು ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದ ಅದೆಷ್ಟೋ ರೈತರ ಮಕ್ಕಳು ಅತ್ತ ಪರಿಹಾರವೂ ಇಲ್ಲ, ಇತ್ತ ಭೂಮಿಯೂ ಇಲ್ಲ. ಇಂದು ರೈತವಿರೋಧಿ ಅಂಶಗಳ ಬಗ್ಗೆ ಮಾತನಾಡುವವರಿಗೆ ರೈತರಿಗೆ ಇದರಿಂದ ಉಂಟಾಗುವ ಅನ್ಯಾಯದ ಬಗ್ಗೆ ಅರಿವಾಗುವುದಿಲ್ಲವೇ?.

ಅದಿರಲಿ, ಪ್ರಧಾನಿ ಮೋದಿ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಕೈಗೊಳ್ಳುವ ಸಂದರ್ಭದಲ್ಲಿ ಭೂಸ್ವಾಧೀನ ಕಾಯ್ದೆ ಮಸೂದೆಯ ಬಗ್ಗೆ ಮಾತನಾಡುತ್ತಾ ಕಾಂಗ್ರೆಸ್ ಗೆ ಹಲವು ದಶಕಗಳಷ್ಟು ಹಳೆಯದಾದ ಕಾಯ್ದೆಯನ್ನು ಬದಲಾಯಿಸಲು 2013ರಲ್ಲಿ ಜ್ನಾನೋದಯವಾಯಿತಾ ಎಂದು ಪ್ರಶ್ನಿಸಿದ್ದರು. 6 ದಶಕಗಳಲ್ಲಿ ಬಹುತೇಕ ಅವಧಿಯಲ್ಲಿ ಕಾಂಗ್ರೆಸ್ಸೇ ಆಡಳಿತ ನಡೆಸಿದ್ದರೂ ರೈತರಿಗೆ ಅನ್ಯಾಯವಾಗುತ್ತಿರುವುದರ ಬಗ್ಗೆ ಅದಕ್ಕೆ ಜ್ನಾನೋದಯವಾಗಿದ್ದು 2013ರಲ್ಲೇ ಏಕೆ?  2012ರಲ್ಲಿ ಆಂಧ್ರಪ್ರದೇಶದ ಕಾಂಗ್ರೆಸ್ ಸಂಸದ ವಿ. ಹನುಮಂತ ರಾವ್ ಕಾಂಗ್ರೆಸ್ ನ ಸ್ಪೆಷಲ್ ಎಕೆನಾಮಿಕ್ ಜೋನ್ ದುರುಪಯೋಗವಾಗಿರುವ ಬಗ್ಗೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಆಂಧ್ರಪ್ರದೇಶದಲ್ಲಿ 110 ಸ್ಪೆಷಲ್ ಎಕೆನಾಮಿಕ್ ಜೋನ್ ಗಳ ಪೈಕಿ ಕಾರ್ಯನಿರ್ವಹಿಸುತ್ತಿದ್ದದ್ದು ಕೇವಲ 36 ಎಸ್.ಇ.ಝೆಡ್ ಗಳು ಮಾತ್ರ. 2006-11ರಲ್ಲಿ ಕಾಂಗ್ರೆಸ್ ಸರ್ಕಾರ, ರೈತರಿಂದ ವಶಪಡಿಸಿಕೊಂಡ 88492 ಎಕರೆ ಕೃಷಿ ಭೂಮಿಯನ್ನು ಖಾಸಗೀ ಕಂಪನಿಗಳಿಗೆ ನೀಡಿತ್ತು. ಸಿ.ಎ.ಜಿ ವರದಿ ಪ್ರಕಾರ ಅಲ್ಲಿನ ಶೇ.80ರಷ್ಟು ಭೂಮಿ ಯಾವುದೇ ಚಟುವಟಿಕೆಗೂ  ಉಪಯೋಗವಾಗಿರಲಿಲ್ಲ. ಹಾಗಾದರೆ ಅದಷ್ಟೂ ಭೂಮಿಯ ಕಥೆ ಏನಾಯಿತು? ಇದರಿಂದಾಗಿ ಉದ್ಯೋಗವೂ ಸೃಷ್ಟಿಯಾಗಲಿಲ್ಲ. ಅಭಿವೃದ್ಧಿಯೂ ಸಾಧ್ಯವಾಗಲಿಲ್ಲ, ರೈತರೂ ಭೂಮಿಯನ್ನು ಕಳೆದುಕೊಂಡರು, ಮಧ್ಯದಲ್ಲಿ ಯಾರೋ ರಿಯಲ್ ಎಸ್ಟೇಟ್ ನವರು ಉದ್ಧಾರವಾಗಿದ್ದಾರೆ ಎಂದು ಆರೋಪಿಸಿದ್ದರು. ಈಗ ಹೇಳಿ, ಶೇ.70ರಷ್ಟು ರೈತರಿಂದಲೇ ಒಪ್ಪಿಗೆ ಪಡೆದು, ಸಾಮಾಜಿಕ ಪರಿಣಾಮ ಅಂದಾಜು ಮಾಡಿಯೂ  ಈ ದುಸ್ಥಿತಿ ಎದುರಾಗುವುದಾದರೆ ಅದಕ್ಕೆ ಕಾರಣ ಕಾಯ್ದೆಯದ್ದೋ ಅಥವಾ ಆಡಳಿತ ನಡೆಸುತ್ತಿದವರ ಬದ್ಧತೆಯದ್ದೋ? ಪ್ರಧಾನಿ ನರೇಂದ್ರ ಮೋದಿ ಟ್ರ್ಯಾಕ್ ರೆಕಾರ್ಡ್ ಗಮನಿಸಿ, ಅವರು ಕೈಗಾರಿಕೋದ್ಯಮಿಗಳಿಗೆ ಕೃಷಿ ಭೂಮಿ ನೀಡಿದ್ದಾರೆ ನಿಜ, ಆದರೆ ಸಾವಿರಗಟ್ಟಲೆ ಭೂಮಿಯನ್ನು ನೀಡಿದ ನಂತರವೂ ಅಲ್ಲಿ ಭೂಮಿ ನೀಡಿದ್ದರ ಉದ್ದೇಶ ಸಫಲವಾಗಿದೆಯೋ ಇಲ್ಲವೋ ಎಂಬುದನ್ನೂ ಪರಿಶೀಲಿಸದೇ, ರೈತರಿಗೆ ಮೋಸ ಮಾಡಿ ರಿಯಲ್ ಎಸ್ಟೇಟ್ ನಲ್ಲಿರುವವರು ಉದ್ಧಾರವಾಗುವುದಕ್ಕೆ ಅವಕಾಶ ನೀಡಿರುವ ಉದಾಹರಣೆಗಳಿಲ್ಲ. ರೈತರಿಂದ ಎಗ್ಗಿಲ್ಲದೇ ಭೂಮಿ ಪಡೆದು ಕೊನೆಗೆ ಅದನ್ನು ಯಾವುದಕ್ಕೂ ಉಪಯೋಗಿಸದೇ ವ್ಯರ್ಥ ಮಾಡಿರುವ ಆರೋಪಗಳೂ ಕಾಂಗ್ರೆಸ್ ಗೆ ಹೋಲಿಸಿದರೆ ಕಡಿಮೆ. ಆದರೂ ರೈತರ ನರಹಂಕನಂತೇನಾದರೂ ಕಾಣುತ್ತಾರೋ ಏನೋ?

ಅಂದಹಾಗೆ ಎನ್.ಡಿ.ಎ ಸರ್ಕಾರದ ಕಾಯ್ದೆಗೆ ಬಿಜೆಪಿಯ ಮಾತೃ ಸಂಸ್ಥೆ ಆರ್.ಎಸ್.ಎಸ್ ನ ಭಾರತೀಯ ಕಿಸಾನ್ ಸಂಘ, ಭಾರತೀಯ ಮಜ್ದೂರ್ ಸಂಘ ಸ್ವದೇಶಿ ಜಾಗರಣ ಮಂಚ್ ಕೂಡ ವಿರೋಧ ವ್ಯಕ್ತಪಡಿಸಿತ್ತು ಎಂದು ಬರೆದಿದ್ದಾರೆ. ಆದರೆ ಯುಪಿಎ ಸರ್ಕಾರದ ರೈತಪರ ಕಾಯ್ದೆ ಸರಿಯಿಲ್ಲ. ಇದಕ್ಕೆ ತಿದ್ದುಪಡಿ ಮಾಡಲೇಬೇಕೆಂದು ಯುಪಿಎ ಸಚಿವರೇ ಆದ ಆನಂದ್ ಶರ್ಮಾ, ಜೈರಾಮ್ ರಮೇಶ್, ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿಯಾಗಿದ್ದ  ಪೃಥ್ವಿ ರಾಜ್ ಚೌವ್ಹಾಣ್, ಹರ್ಯಾಣದ ಅಂದಿನ ಸಿ.ಎಂ ಭೂಪೇಂದರ್ ಸಿಂಗ್ ಹೂಡಾ ಹಾಗೂ ನಮ್ಮ ಕರ್ನಾಟಕ ಸರ್ಕಾರವೂ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದರ ಬಗ್ಗೆ ಅದೇಕೆ ಉಲ್ಲೇಖಿಸಿಲ್ಲ? ಕಾಯ್ದೆಯಲ್ಲಿರುವ ಕೂಡಾ ಈ ಸೋ ಕಾಲ್ಡ್ ಶೇ.70ರಷ್ಟು ಹಾಗೂ ಸಾಮಾಜಿಕ ಪರಿಣಾಮದ ಅಂದಾಜು ತೆಗೆದುಹಾಕಲು ಇವರೆಲ್ಲರ ಸಮ್ಮತಿ ಇತ್ತಲ್ಲಾ ಅದಕ್ಕೇನು ಹೇಳುತ್ತೀರಾ? ತಾವೇ ರೂಪಿಸಿದ್ದ ಕಾಯ್ದೆಯಲ್ಲಿರುವ ಅಂಶಗಳನ್ನು ತಮ್ಮ ಪಕ್ಷದಲ್ಲಿದ್ದವರೇ ವಿರೋಧಿಸಿದ್ದರು. ಮುಂದಿನ ಸರ್ಕಾರ ಬಂದಾಗ ತಮ್ಮ ಪಕ್ಷದವರೇ ತೆಗೆಯಿರಿ ಎಂದಿದ್ದ ಅಂಶಗಳನ್ನು ತೆಗೆದರೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇಷ್ಟೇಲ್ಲಾ ಆದರೂ ಕಾಂಗ್ರೆಸ್ ನ್ನು ದೂಷಣೆ ಮಾಡದೇ ಮತ್ತೇನು ಮಾಡಬೇಕು?

ಭೂಸ್ವಾಧೀನ ಕಾಯ್ದೆಯಲ್ಲಿ ರೈತರ ಒಪ್ಪಿಗೆ  ಸಾಮಾಜಿಕ ಪರಿಣಾಮ ಅಂದಾಜು ಕೈಬಿಡಲಾಗಿದ್ದು  ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸುವವರು, ಆಳುತ್ತಿರುವ ನಾಯಕರ ಹಿಂದಿನ ಟ್ರ್ಯಾಕ್ ರೆಕಾರ್ಡ್, ಅಥವಾ ರೈತರ ಬಗೆಗಿನ ಬದ್ಧತೆಯನ್ನೇಕೆ ಪರಿಗಣಿಸುತ್ತಿಲ್ಲ. ಕಾಯ್ದೆಯಲ್ಲಿರುವ ಷೆಡ್ಯೂಲ್ ಗಳು ರೈತರ ಅನುಮತಿ ಬೇಕಿಲ್ಲ ಎಂದ ಮಾತ್ರಕ್ಕೆ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಶರಾ ಬರೆದು ಸಂಪೂರ್ಣ ಕಾಯ್ದೆಯನ್ನೇ ರೈತವಿರೋಧಿ ಎಂದು ಹೇಳುವುದು ಎಷ್ಟು ಸರಿ? ಇಷ್ಟೆಲ್ಲಾ ಆದರೂ ಒಂದು ವೇಳೆ ಕಾಯ್ದೆಯಲ್ಲಿ ರೈತವಿರೋಧಿ ಅಂಶಗಳಿದ್ದರೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಸರ್ಕಾರ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದರೆ, ಅದರ ವಿರುದ್ಧ ಸಿಡಿದೇಳುವುದು ಖಂಡಿತವಾಗಿಯೂ ತಪ್ಪಲ್ಲ, ಆದರೆ ವಾಸ್ತವ ಹಾಗಿಲ್ಲದಿದ್ದರೂ ಸಿಡಿದೇಳುವುದು ಎಷ್ಟು ಸರಿ?  

Monday 2 March 2015

ಗುಜರಾತ್ ಭೂ ಸ್ವಾಧೀನದ ಪರಿ, ಇದು ವಿಶ್ವಾಸ ಇಡಬಹುದಾದ ದಾರಿ

ಯುಪಿಎ ಸರ್ಕಾರದ 10 ವರ್ಷಗಳ ಅನಿರ್ಬಂಧಿತ ಆಡಳಿತದಲ್ಲಿ ದೇಶದ ಕೃಷಿ ಬೆಳವಣಿಗೆ( agricultural GDP) ಇದ್ದದ್ದು ಶೇ.3.6%ರಷ್ಟು. ಅತಿ ಹೆಚ್ಚು ಉತ್ಪಾದಿಸುತ್ತಿದ್ದ ರಾಜ್ಯಗಳಿದ್ದದ್ದು ಬಿಜೆಪಿ ಆಡಳಿತದಲ್ಲಿದ್ದರೆ, ಅತಿ ಕಡಿಮೆ ಜಿಡಿಪಿ ದಾಖಲಾಗಿದ್ದು ಮಾತ್ರ ಈಗ ಕೇಂದ್ರ ಸರ್ಕಾರದ ಭೂಸ್ವಾಧೀನ ಮಸೂದೆಯಿಂದ ರೈತರಿಗೆ ಅನ್ಯಾಯವಾಗುತ್ತದೆ ಎಂದು ಬೊಬ್ಬೆ ಹೊಡೆದು, ರೈತ ಪರರೆಂಬ ಪೋಸು ನೀಡುತ್ತಿರುವ ಕಾಂಗ್ರೆಸ್ ಪಕ್ಷದ ಆಡಳಿತಕ್ಕೆ ಒಳಪಟ್ಟಿದ್ದ ರಾಜ್ಯಗಳಲ್ಲಿ.

ಸ್ವಘೋಷಿತ ರೈತಪರರ ಪಕ್ಷದ ಆಡಳಿತವಿದ್ದ ರಾಜ್ಯಗಳಲ್ಲಿ ಕೃಷಿಯ ಅಭಿವೃದ್ಧಿ ಮೇಲೋತ್ಪಾಟನೆಯಾಗುತ್ತಿದ್ದರೆ, ಇಂದು ರೈತ ವಿರೋಧಿ ಭೂಸ್ವಾಧೀನ ಮಸೂದೆ ಮಂಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಗುಜರಾತ್, ಕಳೆದ ಒಂದು ದಶಕದಿಂದ ಶೇ.9ರಷ್ಟು ಕೃಷಿ ಉತ್ಪಾದನಾ ಬೆಳವಣಿಗೆ ದರವನ್ನು ಕಾಯ್ದುಕೊಂಡಿದೆ. ಕಚ್ ನಂತಹ ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲೂ ಅತ್ಯಧಿಕ ಉತ್ಪಾದನೆಯಾಗುತ್ತಿದೆ. ಮೋದಿ ರೈತ ವಿರೋಧಿಯಾಗಿದ್ದರೆ. ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚುವುದರ ಬದಲು ಕಾಂಗ್ರೆಸ್ ರಾಜ್ಯಗಳಂತೆಯೇ ಮೇಲೋತ್ಪಾಟನೆಯಾಗಬೇಕಿತ್ತು. ಹಾಗಾಗಲಿಲ್ಲ ಅಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಭೂಸ್ವಾಧೀನ ಮಾಡಿಕೊಂಡರೆ ರೈತರಿಗೆ ವಸ್ತುನಿಷ್ಠವಾದ ಪರಿಹಾರ ನೀಡಲಾಗುತ್ತಿತ್ತು. ಕೃಷಿಗೆ ಹಾನಿಯಾಗದಂತೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿತ್ತು. ಏಕೆಂದರೆ ಸರ್ಕಾರ ರೈತರ ಪರವಾಗಿದೆ, ಅನಿಲ್ ಅಂಬಾನಿ, ಅದಾನಿ ವಿರುದ್ಧವಾಗಿದೆ ಎಂದು ತೋರಿಸಿಕೊಳ್ಳಲು ವೈಜ್ನಾನಿಕವಾಗಿ ಪರಿಹಾರ ನೀಡದೇ, ಎಲ್ಲವನ್ನೂ ಈಡೇರಿಸಲಾಗದ ವಾಗ್ದಾನದ ಮೂಲಕವೇ ಕೊಳ್ಳೆ ಹೊಡೆಯುವ ಮನಸ್ಥಿತಿ ಮೋದಿಗೆ ಇಲ್ಲ.

ಎನ್.ಡಿ.ಎ ಸರ್ಕಾರದ ಭೂಸ್ವಾಧೀನ ಮಸೂದೆಯಲ್ಲಿ ರೈತ ವಿರೋಧಿ ಅಂಶಗಳಿವೆ, ಕೃಷಿ ಕ್ಷೇತ್ರಕ್ಕೆ ಹಾನಿಯಾಗಲಿದೆ ಎಂದೆಲ್ಲಾ ಬೊಬ್ಬೆ ಹೊಡೆಯುತ್ತಿರುವ ಕಾಂಗ್ರೆಸ್ಸಿಗರು, ಕೈಗೆ ಸಿಕ್ಕ ಭೂಮಿಗಳನೆಲ್ಲಾ ಸ್ಪೆಷಲ್ ಎಕೆನಾಮಿಕ್ ಜೋನ್ ಗಳಿಗಾಗಿ ನೀಡಿ ಕೃಷಿಭೂಮಿಗಳನ್ನು ನಿರ್ನಾಮ ಮಾಡಿದ್ದನ್ನು ಬಿಟ್ಟರೆ, ಕೃಷಿ ಜಿಡಿಪಿಯನ್ನು ಏರಿಕೆ ಮಾಡುವ ಒಂದಾದರೂ ಕ್ರಮ ಕೈಗೊಂಡಿದ್ದಾರಾ? ಅದಿರಲಿ 'Land Act a fraud, learn from Gujarat' (http://archive.indianexpress.com/news/land-act-a-fraud-learn-from-gujarat-says-sc/827449/) ಈ ಮಾತನ್ನು ಕೇಳಿದ್ದೀರಾ? ಇದು ಯಾರೋ ಬಿಜೆಪಿ ಸಂಸದನೋ, ಶಾಸಕನೋ, ಸಚಿವನೋ ಹೇಳಿದ ಮಾತಲ್ಲ. ಯುಪಿಎ ಸರ್ಕಾರವಿದ್ದಾಗ ಉತ್ತರ ಪ್ರದೇಶದಲ್ಲಿ ಲೆದರ್ ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್ ಗಾಗಿ 82 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದ ದಾಖಲಾರ್ಹ ಅಂಶ.

ಇಷ್ಟಕ್ಕೂ ಗುಜರಾತ್ ನಿಂದಲೇ ಏಕೆ ಕಲಿಯಬೇಕು ಎಂದರೆ, ಕೇಂದ್ರದಲ್ಲಿ 1894ರ ಭೂಸ್ವಾಧೀನ ಕಾಯ್ದೆ ಜಾರಿಯಲ್ಲಿರುವಾಗಲೇ ಗುಜರಾತ್ ನಲ್ಲಿ 2011ರ ವೇಳೆಗೆ ಹೊಸ ಭೂಸ್ವಾಧೀನ ಕಾಯ್ದೆ ಜಾರಿಗೆ ತರಲಾಗಿತ್ತು. ಆಗ ಗುಜರಾತ್ ನ ಮುಖ್ಯಮಂತ್ರಿಯಾಗಿದ್ದದ್ದು, ಇಂದಿನ ಪ್ರಧಾನಿ ನರೇಂದ್ರ ಮೋದಿ. ಇಷ್ಟೇ ಅಲ್ಲ ಅರ್ಜೆನ್ಸಿ ಪರ್ಪಸ್ (ತ್ವರಿತ ಉದ್ದೇಶಕ್ಕಾಗಿ) ಶೇ.70 ರೈತರ ಅನುಮತಿ ಇಲ್ಲದೇ ಭೂಸ್ವಾಧೀನ ಪಡಿಸಿಕೊಂಡು ರೈತರಿಗೆ ಸೂಕ್ತ ಪರಿಹಾರವನ್ನು ನೀಡುವ ಗುಜರಾತ್ ಕ್ರಮಕ್ಕೆ ಸುಪ್ರೀಂ ಕೋರ್ಟ್ ನ ನ್ಯಾ.ಹೆಚ್.ಎಲ್ ದತ್ತು ಅವರಿದ್ದ ಪೀಠ, "forcible acquisition" using an emergency clause under the Act had almost become a norm to Gujarat. "But there is one state from where we do not receive any such complaints. Look at Ahmedabad which is developing but there are no complaints from that place. ಎಂದು ಮೆಚ್ಚುಗೆ ವ್ಯಕ್ತಪಡಿಸಿತ್ತು. ಜೊತೆಗೆ ಭೂಸ್ವಾಧೀನ ಪ್ರಕ್ರಿಯೆ ಹಾಗೂ ರೈತರಿಗೆ ಪರಿಹಾರ ನೀಡುವ ಸಂಬಂಧ ಗುಜರಾತ್ ನಿಂದ ದೇಶದ ಇತರ ಭಾಗದ ಅಧಿಕಾರಿಗಳು ತರಬೇತಿ ಪಡೆಯುವುದು ಸೂಕ್ತ ಎಂದೂ ಸಲಹೆ ನೀಡಿತ್ತು.
ಇಂದಿನ ಕೇಂದ್ರ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರ ಒಪ್ಪಿಗೆ ಇಲ್ಲದೇ ಅರ್ಜೆನ್ಸಿ ಪರ್ಪಸ್ ಗಾಗಿ ಭೂಸ್ವಾಧೀನ ಪಡಿಸಿಕೊಳ್ಳಬಹುದೆಂದು ವಿಧಿಸಿರುವ ಷರತ್ತನ್ನು 2011ರಲ್ಲೇ ಗುಜರಾತ್ ಸರ್ಕಾರ ಮಾಡಿ ತೋರಿಸಿತ್ತು. ಹಾಗಾದರೂ ಅಲ್ಲಿ ಯಾವುದೇ ರೈತರು ದಂಗೆ ಏಳಲಿಲ್ಲ. ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿಲ್ಲ. ಒಬ್ಬನೇ ಒಬ್ಬ ರೈತ ಕೂಟ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತನಗೆ ಅನ್ಯಾಯವಾಗಿದೆ ಎಂದು ಕೋರ್ಟ್ ಮೆಟ್ಟಿಲು ಹತ್ತಲಿಲ್ಲ. ಯಾವ ಕೋರ್ಟೂ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿಲ್ಲ. ಏಕೆಂದರೆ ಸರ್ಕಾರಕ್ಕೆ, ರಾಜ್ಯದ ಅಭಿವೃದ್ಧಿಗೆ ಭೂಮಿ ನೀಡಿದ್ದ ರೈತರಿಗೆ ಅನ್ಯಾಯವಾಗಲು ಮೋದಿ ಬಿಡಲಿಲ್ಲ. ಕೃಷಿಭೂಮಿಯನ್ನು ಸ್ವಾಧೀನಪಡಿಸಿಕೊಂಡರೂ ಆ ಕ್ಷೇತ್ರಕ್ಕೆ ಕೈಗಾರಿಕೆಗಳಷ್ಟೇ ಆದ್ಯತೆ ನೀಡುವುದನ್ನೂ ಮರೆಯಲಿಲ್ಲ. ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗಲೇ ರೈತರಿಗೆ ಅನ್ಯಾಯವಾಗುವುದಕ್ಕೆ ಅವಕಾಶ ನೀಡದ ಮೋದಿ, ಇನ್ನು ಒಬ್ಬ ಪ್ರಧಾನಿಯಾಗಿದ್ದುಕೊಂಡು ಸಮಸ್ತ ದೇಶದ ರೈತರ ಹಿತಾಸಕ್ತಿಯನ್ನು ಬಲಿ ಕೊಡುವ ಸಾಧ್ಯತೆಗಳಿವೆಯೇ ಎಂಬುದು ಯೋಚಿಸಬೇಕಾದ ಸಂಗತಿ.

ಎನ್.ಡಿ.ಎ ಸರ್ಕಾರದ ಭೂಸ್ವಾಧೀನ ಮಸೂದೆಯಲ್ಲಿ ಯುಪಿಎ ಸರ್ಕಾರದ ಭೂಸ್ವಾಧೀನ ಕಾಯ್ದೆಯಲ್ಲಿ ಶೇ.70ರಷ್ಟು ರೈತರ ಒಪ್ಪುಗೆ, ಹಾಗೂ ಸೋಷಿಯಲ್ ಇಂಪ್ಯಾಕ್ಟ್ ಅಸೆಸ್ ಮೆಂಟ್ ನ್ನೇ ಕೈಬಿಟ್ಟಿರುವುದು ಭ್ರಷ್ಟಾಚಾರವನ್ನು. ರಿಯಲ್ ಎಸ್ಟೇಟ್ ಧಂಧೆಯಲ್ಲಿ ತೊಡಗಿರುವವರಿಗೆ ಹಣ ಮಾಡಲು ಅವಕಾಶವೇ ಇರುವುದಿಲ್ಲ ಎಂಬುದು ಅರಿವಾಗಿದ್ದರೂ, ಕಾಯ್ದೆಯನ್ನು ವಿರೋಧಿಸಲು ಭ್ರಷ್ಟಾಚಾರ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ಕಹಿ ಸತ್ಯ, ವ್ಯಥೆ ಕಾಂಗ್ರೆಸ್ ನ್ನು ಕಾಡುತ್ತಿರಬಹುದು. ಅಥವಾ ಎಲ್ಲವೂ ನೇರಾನೇರವಾಗಿದ್ದರೆ ದೇಶದ ಜನತೆಗೆ ಮೋಸ ಮಾಡಲು ಸಾಧ್ಯವಾಗುವುದಿಲ್ಲ ತಾನು ಕೊಳ್ಳೆ ಹೊಡೆಯಲು ಸಾಧ್ಯವಿಲ್ಲ ಎಂಬ ಕೊರತೆ ಕಾಡುತ್ತಿರಬಹುದು. ಎಷ್ಟೇ ಆದರೂ ಸುಳ್ಳು ಹೇಳಿ ಜನರನ್ನು ನಂಬಿಸುವುದು, ಈಡೇರಿಸಲು ಸಾಧ್ಯವಾಗದ ಭರವಸೆಗಳನ್ನು ನೀಡಿ ಮಂಗನನ್ನಾಗಿ ಮಾಡುವುದೇ ಕಾಂಗ್ರೆಸ್ ನ ತಲತಲಾಂತರದಿಂದ ನಡೆದುಕೊಂಡು ಬಂದಿರುವ ಸಿದ್ಧಾಂತ ಅಲ್ಲವೇ?

ಕಾಂಗ್ರೆಸ್ ಗೆ ಎನ್.ಡಿ.ಎ ಸರ್ಕಾರದ ಭೂಸ್ವಾಧೀನ ಮಸೂದೆಯನ್ನು ವಿರೋಧಿಸಲು ಮತ್ತೂ ಒಂದು ಕಾರಣವಿದೆ. ಏನೆಂದರೆ, ನರೇಂದ್ರ ಮೋದಿ ಮಾದರಿಯಲ್ಲಿ, ಕೃಷಿ ಹಾಗೂ ಕೈಗಾರಿಕೆ ಎರಡಕ್ಕೂ ಸಮಾನ ಆದ್ಯತೆ ನೀಡಿ, ಎರಡೂ ಕ್ಷೇತ್ರಗಳ ಅಭಿವೃದ್ಧಿ ಮೂಲಕ balancing ಮಾಡುವ ದೂರದೃಷ್ಟಿ ಇಲ್ಲ ಅನಿಸುತ್ತದೆ. ಇದ್ದಿದ್ದರೆ ಮೋದಿ ಸರ್ಕಾರದ ಭೂಸ್ವಾಧೀನ ಮಸೂದೆಗೆ ಖಂಡಿತ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ. ಕಾಂಗ್ರೆಸ್ ಗೆ ಬೇಕಿರುವುದು ದೇಶದ ಅಭಿವೃದ್ಧಿಯಲ್ಲ, ಬದಲಾಗಿ ಅದಕ್ಕೆ ಬೇಕಿರುವುದು ಅಭಿವೃದ್ಧಿ ಹೆಸರಿನಲ್ಲಿ ಕೊಳ್ಳೆ ಹೊಡೆಯುವುದು, ರೈತರ ಹೆಸರಿನಲ್ಲಿ ಕಣ್ಣೀರು ಹಾಕಿ ಒಳ್ಳೆಯ ಕೆಲಸಗಳಿಗೆ ವಿರೋಧವೊಡ್ಡುವುದು, ಕಾಂಗ್ರೆಸ್ಸೇತರ ರಾಜ್ಯಗಳಲ್ಲಿ ಅಭಿವೃದ್ಧಿ ಪಥದಲ್ಲಿ ನಡೆದಿರುವ ಕೆಲಸಗಳ ಬಗ್ಗೆ ಅದೆಷ್ಟೇ ನಿದರ್ಶನಗಳಿದ್ದರೂ ಅದನ್ನು ನಿರಾಕರಿಸಿ, ತರ್ಕಬದ್ಧವಾಗಿ ವಾದಿಸದೇ, ತಲೆಗೆ ತೋಚಿದನ್ನೇ ಹರಟುತ್ತಾ ದೇಶದ ಜನರನ್ನು ದಾರಿ ತಪ್ಪಿಸಿ ಮೂರ್ಖರನ್ನಾಗಿಸುವುದು ಮಾತ್ರ. ಮೋದಿ ಸರ್ಕಾರದ ವಿಚಾರವಾಗಿ ಯಾವುದೇ ಕೋರ್ಟುಗಳು ಏನನ್ನೇ ಹೇಳಲಿ, ಎಸ್.ಐ.ಟಿ ಏನೇ ತೀರ್ಪು ನೀಡಲಿ, ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಅಭಿವೃದ್ಧಿಗಾಗಿ ಯಾರು ಏನೇ ಹೇಳಲಿ ಕಾಂಗ್ರೆಸ್ ನದ್ದು ಇರುವುದು ಒಂದೇ ನಿರಾಕರಣೆ.

ಕಾಂಗ್ರೆಸ್ ಗೆ ವಾದಿಸಲು ಉಳಿದಿರುವುದು ಎರಡೇ ವಿಷಯ, ಗುಜರಾತ್ ನಲ್ಲಿ ಈಗಾಗಲೇ ಅನುಸರಿಸುತ್ತಿರುವ ಮೋದಿಯ ಕಾಯ್ದೆಯ ಪರಿಣಾಮ ರೈತರೂ ಇಲ್ಲ, ಕೃಷಿ ಚಟುವಟಿಕೆಯೂ ನಡೆಯುತ್ತಿಲ್ಲ. ಇಲ್ಲವೇ ಅಲ್ಲಿನ ಸರ್ಕಾರ ಯುಪಿಎ ಸರ್ಕಾರದ 2013ರ ಕಾಯ್ದೆಗಿಂತಲೂ ಮುಂಚೆ ಅನುಸರಿಸುತ್ತಿದ್ದ ಭೂಸ್ವಾಧೀನಾ ಕಾಯ್ದೆ ಸರಿಯಾಗಿದ್ದು ರೈತರಿಗೆ ಯಾವುದೇ ಸಮಸ್ಯೆಯಾಗುತ್ತಿಲ್ಲ ಎಂಬುದು. ಮೋದಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಅನುಸರಿಸುತಿದ್ದ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಈಗ್ಗೆ 4 ವರ್ಷಗಳ ಹಿಂದೆ (2011ರಲ್ಲೇ) ಸುಪ್ರೀಂ ಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್ ಗೆ ಮೆಚ್ಚುಗೆಯಾಗಿರುವ ಸಂಗತಿ ದೇಶದ್ಯಂತ ಜಾರಿಗೆ ಬಂದರೆ ತಪ್ಪೇನು, ಸರ್ವೋಚ್ಛ ನ್ಯಾಯಾಲಯಕ್ಕೂ ಸಮ್ಮತವಾಗಿರುವುದು ಕಾಂಗ್ರೆಸ್ ಗೆ ಸಮ್ಮತವಾಗುವುದಿಲ್ಲ ಎಂದರೆ ಸಮಸ್ಯೆ ಇರುವುದು ಕಾಂಗ್ರೆಸ್ಸಿನಲ್ಲೋ ಅಥವಾ ಕಾಯ್ದೆ ಮಾಡಿರುವ ಮೋದಿ ಸರ್ಕಾರದಲ್ಲೋ?

Wednesday 11 February 2015

ಬಿಜೆಪಿಗೆ ದೆಹಲಿಯಲ್ಲಿ ವಿಪಕ್ಷ ಸ್ಥಾನ ಇಲ್ಲ, ಕರ್ನಾಟಕದಲ್ಲಿ ಇದ್ದರೂ ಪ್ರಯೋಜನವಿಲ್ಲ!



ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ, ಆಂತರಿಕ ಭಿನ್ನಮತ.

ಇಂಥದ್ದೇ ಅಂಶಗಳನ್ನು ಮುಂದಿಟ್ಟುಕೊಂಡು 2013ರಲ್ಲಿ ದೆಹಲಿ ಬಿಜೆಪಿಗೆ ಪೂರ್ಣ ಬಹುಮತ ದೊರೆಯದೇ ಇದ್ದ ಪ್ರಮುಖ ಕಾರಣಗಳನ್ನು  ವಿಶ್ಲೇಷಿಸಲಾಗಿತ್ತು. ಯಾವುದೇ ಪಕ್ಷಗಳಾದರೂ ಪ್ರತಿ ಚುನಾವಣೆಯಲ್ಲೂ ಆದ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ಚುನಾವಣೆ ಎದುರಿಸಲು ಯತ್ನಿಸುತ್ತವೆ. ವಿಪರ್ಯಾಸವೆಂದರೆ ದೆಹಲಿ ಚುನಾವಣೆ ಮಟ್ಟಿಗೆ ಬಿಜೆಪಿ ಮಾತ್ರ ಹೊಸ ತಪ್ಪುಗಳೊಂದಿಗೆ ಹಿಂದಿನ ಚುನಾವಣೆಯ ತಪ್ಪುಗಳನ್ನೇ ಮುಂದುವರೆಸಿತ್ತು! ಪರಿಣಾಮ 2015ರ ದೆಹಲಿ ಚುನಾವಣೆಯಲ್ಲಿ ಕೇವಲ 3 ಸ್ಥಾನಗಳನ್ನು ಗಳಿಸಿದೆ.

ದೆಹಲಿ ಒಂದು ರಾಜ್ಯವೇ ಅಲ್ಲ, ಅಲ್ಲಿ ನಡೆಯುವ ಚುನಾವಣೆ ದೇಶದ ರೆಫರೆಂಡಮ್ ಅಲ್ಲ, ದೆಹಲಿ ಚುನಾವಣೆ ಫಲಿತಾಂಶದಿಂದ ಮೋದಿ ಇಮೇಜ್  ಡ್ಯಾಮೇಜ್ ಆಗಿಲ್ಲ ಎಂದು ಎಷ್ಟೇ ಸಮರ್ಥನೆ ನೀಡಬಹುದು. ಆದರೆ ದೆಹಲಿ ಚುನಾವಣೆಯನ್ನು ಗೆಲ್ಲಲು ಇದ್ದ ಅವಕಾಶವನ್ನು ಬಿಜೆಪಿ ಹಾಳುಮಾಡಿಕೊಂಡಿತ್ತು ಎಂಬುದನ್ನಂತೂ ತಳ್ಳಿಹಾಕಲು ಸಾಧ್ಯವಿಲ್ಲ. ಮೋದಿ ಹೆಸರಿನಲ್ಲಿ ಮಹಾರಾಷ್ಟ್ರ ಗೆದ್ದದ್ದಾಯಿತು, ಹರ್ಯಾಣದಲ್ಲೂ ಅಧಿಕಾರಕ್ಕೆ ಬಂದಾಗಿದೆ. ಜಾರ್ಖಂಡ್ ನಲ್ಲೂ ಜಯಭೇರಿ ಭಾರಿಸಿದ್ದೇವೆ, ಮೋದಿ ಅವರ ವರ್ಚಸ್ಸನ್ನೇ ಮುಂದಿಟ್ಟುಕೊಂಡು ಜಮ್ಮು-ಕಾಶ್ಮೀರದಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವ ಮಟ್ಟಕ್ಕೆ ಬೆಳೆದದ್ದಾಗಿದೆ, ಮೋದಿ ಹೆಸರಿನ ಮೂಲಕವೇ ಗೆಲುವೆಂಬುದನ್ನು ಸುಲಭವಾಗಿ ದಕ್ಕಿಸಿಕೊಳ್ಳಬಹುದೆಂಬ ಭ್ರಮೆ ಬಿಜೆಪಿಯ ಕೆಲವು ಘಟಕಗಳಿಗೆ ನೆತ್ತಿಗೇರತೊಡಗಿದೆ. ದೆಹಲಿಯ ನಂತರದ ಸ್ಥಾನದಲ್ಲಿ ಕರ್ನಾಟಕವೂ ನಿಂತಿದೆ!

ಕರ್ನಾಟಕದ ಬಿಜೆಪಿ ಘಟಕವನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ. ಅಲ್ಲಿ ದೆಹಲಿಯ ಮಿನಿ ಬಿಜೆಪಿ ಘಟಕ ಕಾಣಿಸುತ್ತದೆ. ಒಳಗೊಳಗೇ ಇರುವ ಭಿನ್ನಾಭಿಪ್ರಾಯ. ಚುನಾವಣೆ ತಯಾರಿ, ಕೇಂದ್ರ ಸರ್ಕಾರದ ಯೋಜನೆಗಳನ್ನಾಗಲೀ ಮತದಾರರಿಗೆ ತಲುಪಿಸುವ ವಿಚಾರದಲ್ಲಿ ಎಚ್ಚರ ವಹಿಸುವ ನಾಯಕರನ್ನು ನೋಡಿದರೆ ಕರ್ನಾಟಕ ಬಿಜೆಪಿ ಘಟಕವೂ ದೆಹಲಿಯ ಮಿನಿ ಬಿಜೆಪಿ ಘಟಕವನ್ನೇ ನೆನಪಿಸುತ್ತಿದೆ.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಬಂದ ನಂತರ ಜಾರಿಯಾದ  ಜನ್-ಧನ್ ಯೋಜನೆ, ಬೆಲೆ ಇಳಿಕೆ, ಹಣದುಬ್ಬರ ಇಳಿಕೆ, ದೆಹಲಿ ಗದ್ದುಗೆಯನ್ನೇ ಅಲ್ಲಾಡಿಸಲು ಸಾಮರ್ಥ್ಯವಿರುವ ಈರುಳ್ಳಿ-ಆಲೂಗೆಡ್ಡೆ ಬೆಲೆ ಇಳಿಕೆ, ತರಕಾರಿ ಬೆಲೆ ಇಳಿಕೆಯಂತಹ, ದೆಹಲಿ ಜನರನ್ನು ಸುಲಭವಾಗಿ ತಲುಪಬಲ್ಲ, ಅನೇಕ ಕ್ರಮ ಕೈಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊರತುಪಡಿಸಿ, ಉಳಿದ ಯಾವ ನಾಯಕರಾದರೂ ಅದನ್ನು ಜನರಿಗೆ ಮನವರಿಕೆ ಮಾಡಲು ಯತ್ನಿಸಿರುವ ಉದಾಹರಣೆಗಳಿವೆಯೇ?

ಬಿಜೆಪಿಯ ಉಳಿದ ನಾಯಕರಿಗೆ ಗೆಲುವಿನ ಮದ ಎಷ್ಟಿತ್ತೆಂದರೆ ದೆಹಲಿಯಲ್ಲಿ ಚುನಾವಣೆ ನಡೆಯಲಿದೆ ಎಂದು ತಿಳಿದಿದ್ದರೂ ಪಕ್ಷವನ್ನು ಯಾರು ಮುನ್ನಡೆಸಬೇಕು, ಯಾರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಬೇಕೆಂಬ ಯೋಚನೆಗಳಿಗೆ ತಿಲಾಂಜಲಿಯಿತ್ತಿದ್ದರು. ಅತ್ತ ಆಮ್ ಆದ್ಮಿ ಪಕ್ಷದವರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿ, ಮೋದಿ ಅವರನ್ನು ತೆಗೆಳುವುದರ ಜೊತೆಗೆ ತಮ್ಮ ಪ್ರಚಾರದ ಕೆಲಸವನ್ನು ಸಾಂಗವಾಗಿ ನಡೆಸುತ್ತಿದ್ದರು. ಆದರೆ ಇತ್ತ ಸಾಲು ಸಾಲು ವಿಧಾನಸಭೆ ಚುನಾವಣೆ ಗೆದ್ದು ಮೋದಿ ಅಲೆಯಲ್ಲೇ ತೇಲುತ್ತಿದ್ದ  ಬಿಜೆಪಿ ನಾಯಕರು ಮೋದಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಜನರಿಗೆ ಅಪ್ ಡೇಟ್ ಮಾಡುವ ಬದಲು ಅರವಿಂದ್ ಕೇಜ್ರಿವಾಲ್ ಅವರನ್ನು ಟೀಕಿಸುವುದನ್ನೇ ಪೂರ್ಣಾವಧಿ ಕೆಲಸವಾಗಿಸಿಕೊಂಡರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನಕ್ಕೆ ಇನ್ನೊಂದು ತಿಂಗಳಿರಬೇಕಾದರೆ ಡಾ.ಹರ್ಷವರ್ಧನ್ ಅವರನ್ನು ಸಿ.ಎಂ ಅಭ್ಯರ್ಥಿಯೆಂದು ಘೋಷಿಸಲಾಗಿತ್ತು. ಆದರೆ ಈ ಬಾರಿ ಪಕ್ಷದವರನ್ನು ಕಡೆಗಣಿಸಿ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ಸಂಬಂಧವೇ ಇಲ್ಲದವರನ್ನು ಕರೆತಂದು ಪಕ್ಷದ ಸದಸ್ಯತ್ವದ ಜೊತೆಯಲ್ಲೇ ಸಿ.ಎಂ ಅಭ್ಯರ್ಥಿ ಹುದ್ದೆಯನ್ನೂ ದಯಪಾಲಿಸಿದ್ದರು.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದಿದ್ದ ಶೇ.29ರಷ್ಟು ಮತಗಳು ಈಬಾರಿ ಆಮ್ ಆದ್ಮಿ ಪಕ್ಷದತ್ತ ಹೊರಳಿದ್ದು ಬಿಜೆಪಿಯೇತರ ಮತಗಳು ಒಗ್ಗೂಡಿರುವ ಕಾರಣ ಪಕ್ಷಕ್ಕೆ ಸೋಲುಂಟಾಗಿದೆ ಎಂಬ ಸಿದ್ಧ ಉತ್ತರವಟ್ಟುಕೊಂಡು ಬಿಜೆಪಿ ಸೋಲಿನ ವಿಮರ್ಶೆಯನ್ನು ಒಂದೇ ಏಟಿಕೆ ಮುಗಿಸಿ ಬಿಡಬಹುದು.  ಆದರೆ ಬಿಜೆಪಿಗೆ ಇಂಥದ್ದೊಂದು ಅಪಾಯ ಎದುರಾಗುವ ಲಕ್ಷಣಗಳು ಗೋಚರಿಸಿದ್ದು ಇದೇ ಮೊದಲೇ? ಲೋಕಸಭಾ ಚುನಾವಣೆಯಲ್ಲೇ ಈ ಪ್ರಯೋಗ ನಡೆದಿತ್ತು. ಬಿಹಾರದಲ್ಲಿ ಆರ್.ಜೆ.ಡಿ. ಜೆಡಿಯು, ಕಾಂಗ್ರೆಸ್ ಒಗ್ಗೂಡಿತ್ತು. ಆದರೆ ಬಿಜೆಪಿ ಎಚ್ಚೆತ್ತುಕೊಳ್ಳಲಿಲ್ಲ.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಹಗರಣದ ಆರೋಪ ಹೊತ್ತಿದ್ದ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ಮೂರನೇ ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್ ಅವರನ್ನು ಅಧಿಕಾರಕ್ಕೇರಿಸುವವರೆಗೂ ಬಿಜೆಪಿ ರಾಷ್ಟ್ರೀಯ ನಾಯಕರ ವಿಳಂಬ ಹಾಗೂ ತಪ್ಪು ನಿರ್ಧಾರಗಳನ್ನು ಹೀನಾಯವಾಗಿ ಜರಿಯುವ ಕಾಲವಿತ್ತು. ಈಗ ಮಾಜಿ ಬಿಜೆಪಿ ವರಿಷ್ಠರಿಗೂ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡಲು ಹೊರಟಿರುವ ಬಿಜೆಪಿ ವರಿಷ್ಠರಿಗೂ ಇರುವ  ವ್ಯತ್ಯಾಸವಾದರೂ ಏನು?

ರಾಷ್ಟ್ರ ರಾಜಧಾನಿ ಎಂಬ ಕಾರಣಕ್ಕೆ ಬಿಜೆಪಿಗೆ ದೆಹಲಿ ಎಷ್ಟು ಪ್ರತಿಷ್ಠೆಯ ಕಣವಾಗಿತ್ತೋ, ದಕ್ಷಿಣ ಭಾರತದ ವಿಚಾರಕ್ಕೆ ಬಂದರೆ ಕರ್ನಾಟಕವೂ ಅಷ್ಟೇ ಪ್ರತಿಷ್ಠೆಯ ಕಣವಾಗಿದೆ. ಇಡೀ ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದು ಪಣತೊಟ್ಟಿರುವ ಅಮಿತ್ ಶಾ ಗೆ ದಕ್ಷಿಣ ಭಾರತವನ್ನು ಕಾಂಗ್ರೆಸ್ ಮುಕ್ತ ಭಾರತ ಮಾಡುವುದಕ್ಕೆ ಬಿಜೆಪಿಯನ್ನು ಅಧಿಕಾರಕ್ಕೆ ತರಲೇಬೇಕಾದ ಅನಿವಾರ್ಯತೆ ಇದೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಎಲ್ಲಾ ಅವಕಾಶಗಳಿರುವುದು ಸಧ್ಯದ ಮಟ್ಟಿಗೆ ಕರ್ನಾಟಕದಲ್ಲಿ ಮಾತ್ರ. ಆದರೆ ಬಿಜೆಪಿ ಪಾಲಿಗೆ ಎರಡನೇ ದೆಹಲಿ ಘಟಕವಾಗಿರುವ ಕರ್ನಾಟಕದಲ್ಲೂ ಆ ಅವಕಾಶಗಳನ್ನು ಗಾಳಿಗೆ ತೂರುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ.

ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕರ್ನಾಟಕದಲ್ಲಿ ವಿರೋಧ ಪಕ್ಷ ಇರುವುದು ಗೋಚರವಾಗುವಂತಹ ಘಟನೆಗಳು ನಡೆದಿದೆಯಾ ಹೇಳಿ? ಮೂಢನಂಬಿಕೆ ನಿಷೇಧ ಕಾಯ್ದೆ, ಗೋಹತ್ಯಾ ನಿಷೇಧ ಮಸೂದೆ ವಾಪಸ್, ಮಠಗಳ ಮೇಲೆ ನಿಯಂತ್ರಣ ಮಸೂದೆಯಂತಹ ಭಾವನಾತ್ಮಕ ವಿಷಯಗಳಲ್ಲಿ ಎದುರಾದ ಪ್ರತಿರೋಧಗಳಿಂದ ಸರ್ಕಾರ ಕೆಲವು ಸಂದರ್ಭಗಳಲ್ಲಿ ತನ್ನ ನಿರ್ಧಾರಗಳನ್ನು ಬದಲಿಸಿಕೊಂಡಿದ್ದಿದೆ. ಸಿದ್ದರಾಮಯ್ಯ ಸರ್ಕಾರ ಏನಾದರೂ ಮಣಿದಿದ್ದರೆ ಅದು ಈ ವಿಷಯಗಳಿಗೆ ಎಂಬುದು ಗಮನಾರ್ಹ. ಆದರೆ ಅದು ಸಂಪೂರ್ಣವಾಗಿ ಬಿಜೆಪಿಯ ಹೋರಾಟದ ಫಲ ಎಂದು ಹೇಳಲು ಖಂಡಿತಾ ಸಾಧ್ಯವಿಲ್ಲ. ಮೂಢನಂಬಿಕೆ ಕಾಯ್ದೆ, ಮಠಗಳ ಮೇಲೆ ನಿಯಂತ್ರಣ ಮಸೂದೆಯಂತಹ ವಿಷಯಗಳಲ್ಲಿ ಸಾರ್ವಜನಿಕ ವಲಯದಲ್ಲೇ ಒಂದು pressure group ಕ್ರಿಯೇಟ್ ಆಗಿತ್ತು. ಸಿದ್ದರಾಮಯ್ಯ ಸರ್ಕಾರ ಮಣಿದಿದ್ದು ಆ pressure groupಗೆ.  ಸಿದ್ದರಾಮಯ್ಯ ಸರ್ಕಾರ ಶಾದಿ ಭಾಗ್ಯ ಹೆಸರಿನಲ್ಲಿ ಧರ್ಮಾಧಾರಿತ ರಾಜಕಾರಣ ಮಾಡಿ ಕೇವಲ ಒಂದು ವರ್ಗಕ್ಕೆ ಮಾತ್ರ ಯೋಜನೆಯನ್ನು ಮೀಸಲಿಟ್ಟಿತ್ತು. ಕೆಂಡಾಮಂಡಲರಾಗಿದ್ದ ಯಡಿಯೂರಪ್ಪ ಸಿದ್ದರಾಮಯ್ಯ ಸರ್ಕಾರಕ್ಕೆ ನೀರಿಳಿಸಿದ್ದರು. ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರಕ್ಕೆ ವಿಪಕ್ಷದಲ್ಲಿ ಗಟ್ಟಿ ಧ್ವನಿ ಎತ್ತುವ ನಾಯಕನೇ ಇಲ್ಲದಂತಾಯಿತು.  ಅದಾದ ನಂತರ ಎಷ್ಟೋ ಸಂದರ್ಭದಲ್ಲಿ ಮಾಧ್ಯಮಗಳೇ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದೆ. ರಾಜ್ಯದ್ಲಲಿ ಬಿಜೆಪಿಯ ಜಡತ್ವ ಯಾವ ಮಟ್ಟದಲ್ಲಿದೆ ಎಂದರೆ ಕೇಂದ್ರದಲ್ಲಿ ತಮ್ಮದೆ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಿದರೆ ರಾಜ್ಯ ಸರ್ಕಾರ ಬಸ್ ದರ ಇಳಿಕೆ ಮಾಡಲು ಮಾಧ್ಯಮಗಳು  ಒತ್ತಡ ಹೇರಬೇಕಾಯಿತು!.

ಕರ್ನಾಟಕದಲ್ಲಿ ಸರ್ಕಾರ-ವಿರೋಧ ಪಕ್ಷ ಎರಡೂ ಇಲ್ಲದಂತಾಗಿದೆ ರಾಜ್ಯದ ಪರಿಸ್ಥಿತಿ. ಅಧಿಕಾರದಲ್ಲಿರುವವರು ತೂಕಡಿಸುತ್ತಿರಬೇಕಾದರೆ  ರಾಜ್ಯದಿಂದ ಹಿರೋ ಕಂಪನಿ ಘಟಕ ಆಂಧ್ರದತ್ತ ನಡೆಯಿತು, ಎಸ್.ಐ ಮಲ್ಲಿಕಾರ್ಜುನ ಬಂಡೆ ಹತ್ಯೆಯಾಯಿತು, ಕಾನೂನು ಸುವ್ಯವಸ್ಥೆ ಹದಗೆಟ್ಟಿತು. ಲೆಕ್ಕವಿಲ್ಲದಷ್ಟು ಅತ್ಯಾಚಾರಗಳು ನಡೆದವು. ಅನ್ನ ಭಾಗ್ಯದಲ್ಲಿ ಅದೆಷ್ಟು ಮಂದಿ ಕನ್ನಾ ಹೊಡೆದರೋ ಗೊತ್ತಿಲ್ಲ. ಭಟ್ಕಳದಲ್ಲಿ ಉಗ್ರವಾದ ಬೆಳೆಯಿತು. ರಾಜ್ಯದ ಮುಖ್ಯಮಂತ್ರಿಗಳ ಹೊಣೆಗೇಡಿ ನೀತಿಯನ್ನು ರಾಷ್ಟ್ರೀಯ ಮಾಧ್ಯಮಗಳು ಕಟುವಾಗಿ ಟೀಕಿಸಿದವು. ಕೊನೆಗೆ ನಿದ್ದೆ ಮಾಡುವವರ ಸರ್ಕಾರದ ಸರ್ವಾಧಿಕಾರ ಒಂದು ಮಾಧ್ಯಮದ ಪ್ರಸಾರವನ್ನೇ ನಿಲ್ಲಿಸುವ ಮಟ್ಟಕ್ಕೆ ಬೆಳೆಯಿತು. ಇಷ್ಟೆಲ್ಲಾ ಆದರೂ ಸಿದ್ದರಾಮಯ್ಯಗಿಂತ ಜೋರಾಗಿ ನಿದ್ದೆ ಮಾಡುತ್ತಿದ್ದ ಬಿಜೆಪಿ ಎಚ್ಚರಗೊಂಡು ಜನರ ಮನಸ್ಸಿನಲ್ಲಿ ಉಳಿಯುವಂತಹ ಒಂದೇ ಒಂದು ಪ್ರತಿಭಟನೆಯನ್ನೂ ಮಾಡಲಿಲ್ಲ. ವಿರೋಧ ಪಕ್ಷ ಎಂಬ ಹಣೆಪಟ್ಟಿ ಹೊತ್ತಿರುವ ಬಿಜೆಪಿ ನಾಮ್ ಕೇ ವಾಸ್ತೆ ಪ್ರತಿಭಟನೆ ನಡೆಸಿತ್ತೇ ಹೊರತು. ಸರ್ಕಾರದ ಹುಚ್ಚುತನಕ್ಕೆ ಅಂಕುಶ ಹಾಕಿದ ಒಂದೇ ಒಂದು ಉದಾಹರಣೆಯನ್ನು ಕೊಡಿ ನೋಡೋಣ. ಇನ್ನು ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ರಾಜ್ಯಪಾಲರ ಅನುಮತಿ ಕೇಳುವುದಕ್ಕೂ ಬಿಜೆಪಿ ಮೀನಾ-ಮೇಷ ಎಣಿಸುತ್ತಿದೆ. ಇವೆಲ್ಲವೂ ಏನನ್ನು ಸೂಚಿಸುತ್ತದೆ?

ರಾಜ್ಯ ಬಿಜೆಪಿಯನ್ನು ನೋಡಿದರೆ ದೆಹಲಿಯಲ್ಲಿ ಯುಪಿಎ ಸರ್ಕಾರವಿದ್ದಾಗ ವಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ನೆನೆಪಿಗೆ ಬರುತ್ತಿದೆ. 2009ರ ನಂತರ ಕಾಂಗ್ರೆಸ್ ಅದೆಷ್ಟೇ ಹಗರಣಗಳನ್ನು ಮಾಡಿದರೂ ದುರಾಡಳಿತ ನಡೆಸಿದ್ದರೂ ಬಿಜೆಪಿ ನಾಯಕರು ಯಾವತ್ತೂ ಕಾಂಗ್ರೆಸ್ ವಿರುದ್ಧ ಒಂದು ಗಟ್ಟಿ ಧ್ವನಿಯೆತ್ತಲಿಲ್ಲ. ಕಾಂಗ್ರೆಸ್- ಬಿಜೆಪಿಯ ನಿಲುವು ನೀನು ಹೊಡೆದಂಗೆ ಮಾಡು, ನಾ ಅತ್ತಂಗೆ ಮಾಡ್ತೀನಿ ಎಂಬಂತ್ತಿದ್ದವು. ರಾಜ್ಯ ಬಿಜೆಪಿಯದ್ದೂ ಅದೇ ಕಥೆಯಾಗಿದೆ. ಕಾಂಗ್ರೆಸ್ ನ ದೌರ್ಬಲ್ಯಗಳನ್ನು, ದುರಾಡಳಿತವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ಸರ್ಕಾರದ ವಿರುದ್ಧ

ಇನ್ನು ದೆಹಲಿಯ ಐತಿಹಾಸಿಕ ಚುನಾವಣೆ ನಂತರ ಆಮ್ ಆದ್ಮಿ ಪಕ್ಷದ ದೃಷ್ಟಿ ಬಿಬಿಎಂಪಿ ಚುನಾವಣೆ ಮೇಲೆ ಬಿದ್ದಿದೆ. ಕಾಂಗ್ರೆಸ್ ಗೆ ತನ್ನ ಭವಿಷ್ಯದ ಬಗ್ಗೆ ಅರಿವಾಗಿದೆ. ದೆಹಲಿಯಲ್ಲಾದಂತೆ ಕಾಂಗ್ರೆಸ್ ನ ಸಾಂಪ್ರದಾಯಿಕ ಮತದಾರರಿಗೆ  ಕಾಂಗ್ರೆಸ್ ಬಿಟ್ಟರೆ ಬಿಜೆಪಿಯೇ ಬೇರೆ ದಾರಿ ಇಲ್ಲದ ಆಯ್ಕೆ ಎಂಬ ಭಾವನೆ ಹೋಗಿ ಮತ ಹಾಕಲು ಪರ್ಯಾಯ ಪಕ್ಷವೊಂದು ದೊರೆತಿದೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆದರೂ ಅಚ್ಚರಿಯಿಲ್ಲ. ಇಂತಹ ಸಂದರ್ಭದಲ್ಲೇ  ಮೋದಿ ಅಲೆ ಇಲ್ಲ ಎಂಬುದನ್ನು ನಿರೂಪಿಸುವುದಕ್ಕದರೂ ಬಿಜೆಪಿಯನ್ನು ಸೋಲಿಸಲು ಉಳಿದ ಎಲ್ಲಾ ಪಕ್ಷಗಳು ಕೈಜೋಡಿಸುವ ತಂತ್ರ ಅನುಸರಿಸಲು ಸಿದ್ಧವಾಗಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಬಿಜೆಪಿ ಇನ್ನೂ ತಾನು ಏನನ್ನೂ ಮಾಡದೇ ಮೋದಿ ಅಲೆಯನ್ನೇ ಮುಂದಿಟ್ಟುಕೊಂಡು ಗೆಲುವನ್ನು ಸುಲಭವಾಗಿ ದಕ್ಕಿಸಿಕೊಳ್ಳಬಹುದೆಂಬ ಭ್ರಮೆಯಲ್ಲಿದ್ದಂತಿದೆ. ದೆಹಲಿ ಬಿಜೆಪಿಯ ಬೇಜವಾಬ್ದಾರಿತನದಿಂದ ಈಗ ವಿಪಕ್ಷ ಸ್ಥಾನವೂ ಇಲ್ಲದಂತಾಗಿದೆ. ರಾಜ್ಯದಲ್ಲಿ ಬಿಜೆಪಿಗೆ ವಿಪಕ್ಷ ಸ್ಥಾನ ಇದ್ದೂ ಇಲ್ಲದಂತಾಗಿದೆ. ಎಚ್ಚೆತ್ತುಕೊಳ್ಳದಿದ್ದರೆ ದೆಹಲಿಯಂತೆಯೇ ಅಧಿಕಾರಕ್ಕೆ ಬರಲು ಸಾಧ್ಯವಿದ್ದರೂ ಬೇಜವಾಬ್ದಾರಿತನದಿಂದ ಅವಕಾಶ ಕೈತಪ್ಪುವ ಸಾಧ್ಯತೆ ಇದೆ ಎಚ್ಚರ!

Friday 30 January 2015

ಶೃಂಗೇರಿ ಶಿವಗಂಗಾ ಪೀಠದ ಶ್ರೀಸಚ್ಚಿದಾನಂದ ಭಾರತೀ ಸ್ವಾಮಿಗಳವರ ಆರಾಧನಾ ಮಹೋತ್ಸವ




ಬೆಂಗಳೂರಿನಿಂದ ಸುಮಾರು 54 ಕಿಮಿ ದೂರದಲ್ಲಿ ಬೃಹದಾಕಾರದ ಬೆಟ್ಟದಿಂದ ಸುತ್ತುವರೆದ ಪ್ರದೇಶ. ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದು ಶಿವನ ಸಾನ್ನಿಧ್ಯದಲ್ಲಿ ಅಗಸ್ತ್ಯರು ಸ್ಥಾಪಿಸಿದ ಗಂಗೆ ಇರುವ ಪವಿತ್ರ ಕ್ಷೇತ್ರ. ಯೋಗಿಗಳ ತಪಸ್ಸಿಗೆ ಹೇಳಿ ಮಾಡಿಸಿದ ಸ್ಥಳ, ವಾಹನ ಸಂಚಾರವೇ ಇರದ ಕಾಲಘಟ್ಟ, ಆಗಲೇ ನೆಲಮಂಗಲದ ಬಳಿ ಇರುವ ಶಿವಗಂಗೆಯಲ್ಲಿ ಪ್ರಾರಂಭವಾಗಿದ್ದು ಶೃಂಗೇರಿಯ ಶಾಖಾ ಮಠವಾದ ಶೃಂಗೇರಿ ಶಿವಗಂಗಾ ಮಠ.

ಶೃಂಗೇರಿ ಶಿವಗಂಗಾ ಮಠ ಸ್ಥಾಪನೆಯಾಗಿದ್ದು, 1599ರಿಂದ 1622ರವರೆಗೆ ಶೃಂಗೇರಿ ಪೀಠಾಧಿಪತಿಗಳಾಗಿದ್ದ ಜಗದ್ಗುರು ಶ್ರೀ ಅಭಿನವ ನರಸಿಂಹ ಭಾರತೀ ಸ್ವಾಮಿಗಳವರ ಕಾಲದಲ್ಲಿ. ಜಗದ್ಗುರುಗಳು 1615ರಲ್ಲಿ ಸಂಚಾರ ಕೈಗೊಂಡಿದ್ದಾಗ ಮೈಸೂರು ಅರಸರಾಗಿದ್ದ ರಾಜ ಒಡೆಯರು, ಮೈಸೂರು ಸಂಸ್ಥಾನದಲ್ಲಿ ಶೃಂಗೇರಿಯ ಒಂದು ಶಾಖಾಮಠವನ್ನು ಸ್ಥಾಪಿಸಬೇಕೆಂದು ಜಗದ್ಗುರುಗಳಲ್ಲಿ ಪ್ರಾರ್ಥಿಸಿದ್ದರು. ಮಹಾರಾಜರ ಪ್ರಾರ್ಥನೆಯನ್ನು ಒಪ್ಪಿದ ಗುರುಗಳು ತಮ್ಮ ಪರಿವಾರದಲ್ಲಿದ್ದ ಶ್ರೀ ಶಂಕರ ಭಾರತಿಗಳೆಂಬ ಸಂನ್ಯಾಸಿಗಳನ್ನು ರಾಜರೊಂದಿಗೆ ಕಳಿಸಿದರು. ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದು,ನಾಲ್ಕು ದಿಕ್ಕಿನಿಂದಲೂ ನಾಲ್ಕು ಆಕಾರಗಳಾಗಿ(ಗಣೇಶ, ಲಿಂಗ, ನಂದಿ, ಸರ್ಪ) ಕಾಣುವ ಬೆಟ್ಟ ಇರುವ ಶಿವಗಂಗಾ ಕ್ಷೇತ್ರದಲ್ಲಿ ಶಂಕರ ಭಾರತಿ ಸ್ವಾಮಿಗಳು 1656ರಲ್ಲಿ ವಿದ್ಯಾಶಂಕರ ಎಂಬ ಯೋಗಪಟ್ಟ ನೀಡಿ ತಮ್ಮ ಶಿಷ್ಯರೊಬ್ಬರನ್ನು ಈ ಮಠದ ಪ್ರಥಮ ಪೀಠಾಧಿಪತಿಯನ್ನಾಗಿ ನೇಮಿಸಿದರು.ಅದಕ್ಕಾಗಿಯೇ ಶೃಂಗೇರಿ ಪರಂಪರೆಯಲ್ಲಿ ಶೃಂಗೇರಿ ಶಿವಗಂಗಾ ಪೀಠಕ್ಕೂ ವಿಶೇಷ ಸ್ಥಾನಮಾನಗಳಿವೆ. ಇತ್ತೀಚೆಗಷ್ಟೇ ನಡೆದ ಶೃಂಗೇರಿ ಮಹಾಸ್ವಾಮಿಗಳವರ ಶಿಷ್ಯ ಸ್ವೀಕಾರ ಸಮಾರಂಭವೂ ಸೇರಿದಂತೆ ಈ ಹಿಂದೆ ಅದೆಷ್ಟೋ ಸಂದರ್ಭದಲ್ಲಿ ಇದು ಪ್ರಕಟವೂ ಆಗಿದೆ. ಶೃಂಗೇರಿ ಶಾಖಾ ಮಠದ ಈ ಗುರುಪರಂಪರೆಯಲ್ಲಿ 18ನೇ ಪೀಠಾಧಿಪತಿಗಳಾಗಿ ರಾರಾಜಿಸಿದವರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು.


ಸೀತಾರಾಮ ಶರ್ಮ ಎಂಬುದು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳ ಪೂರ್ವಾಶ್ರಮದ ಹೆಸರು. 1953ರ ವೈಶಾಖ ಶುದ್ಧ ದ್ವಾದಶಿಯಂದು ವೇದ ಬ್ರಹ್ಮ ವೆಂಕಟಸುಬ್ಬಯ್ಯ, ಸುಬ್ಬಲಕ್ಷಮ್ಮ ದಂಪತಿಗಳ ಪುತ್ರರಾಗಿ ಜನಿಸಿದ ಶ್ರೀಗಳು ಪೂರ್ವಾಶ್ರಮದಲ್ಲಿ ಬಿ.ಎಸ್ಸಿ, ಎಲ್.ಎಲ್.ಬಿ ಬಿ.ಐ.ಎಂ.ಎಸ್(ದೆಹಲಿ ವಿಶ್ವವಿದ್ಯಾನಿಲಯ) ಪದವೀಧರರು. ಪುಂಖಾನುಪುಂಖ ವಿಷಯೇಕ್ಷಣ ತತ್ಪರೋಪಿ ಬ್ರಹ್ಮಾವಲೋಕನ ಧಿಯಂ ನ ಜಹಾತಿ ಯೋಗಿ ( ಲೌಕಿಕ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದರೂ ಜ್ಞಾನಿಗಳು ತಮ್ಮ ಲಕ್ಷ್ಯವನ್ನು ಸದಾ ಬ್ರಹ್ಮದ ಮೇಲೆಯೇ ಸ್ಥಿರೀಕರಿಸಿರುತ್ತಾರೆ) ಎಂಬಂತೆ ಗುರುಗಳು ತಮ್ಮ ಪೂರ್ವಾಶ್ರಮದಲ್ಲಿ ಲೌಕಿಕ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರಾದರೂ ಅವರ ಲಕ್ಷ್ಯ ಇದ್ದದ್ದು ಮಾತ್ರ ಬ್ರಹ್ಮಜ್ನಾನಕ್ಕೆ ರಾಜಮಾರ್ಗವಾದ ಆಧ್ಯಾತ್ಮ ಚಿಂತನೆಯಲ್ಲಿ. ಸನಾತನ ಧರ್ಮದ ಆಚರಣೆ ಬಗ್ಗೆ ಅತೀವ ಆಸಕ್ತಿ, ವೇದಗಳ ಬಗ್ಗೆ ಅಚಲ ನಂಬಿಕೆ, ಶ್ರದ್ಧೆ, ಭಕ್ತಿ ಶ್ರೀಗಳವರಿಗೆ ವಿದ್ಯಾರ್ಥಿ ಜೀವನದಿಂದಲೂ ಕೌಟುಂಬಿಕ ವಾತಾವರಣದಲ್ಲೇ ಲಭಿಸಿತ್ತು. ಬಿ.ಎಸ್ಸಿ, ಎಲ್.ಎಲ್.ಬಿ ಹಾಗೂ ದೆಹಲಿಯ ವಿಶ್ವವಿದ್ಯಾನಿಲಯದಿಂದ ಬಿ.ಐ.ಎಂ.ಎಸ್ ಪದವಿ ಪಡೆದ ನಂತರ ಕೆಲಕಾಲ ಪ್ರತಿಷ್ಠಿತ ಏಷಿಯನ್ ಪೇಂಟ್ಸ್ ಕಂಪನಿಯಲ್ಲಿ ಕೆಲಕಾಲ ವೃತ್ತಿ ಜೀವನ ನಡೆಸಿದರು. ಈ ಸಂದರ್ಭದಲ್ಲೇ ಗುರುಗಳಿಗೆ ಶೃಂಗೇರಿ ಶಿವಗಂಗಾ ಪೀಠಾಧಿಪತಿಗಳಾಗಿದ್ದ ಶ್ರೀ ವಿಶ್ವೇಶ್ವರಾನಂದ ಭಾರತೀ ಸ್ವಾಮಿಗಳವರ ಸಂಶ್ರಯ ಪ್ರಾಪ್ತವಾಗಿತ್ತು.ವೃತ್ತಿ ಜೀವನದ ಪ್ರಾರಂಭದ ದಿನಗಳಲ್ಲಿ ಶ್ರೀಗಳ ಮನಸ್ಸು ವೇದಾಧ್ಯಯನಕ್ಕಾಗಿ ಶೃಂಗೇರಿಯ ಶಾರದಾಂಬೆಯ ಸಾನ್ನಿಧ್ಯದತ್ತ ಹೊರಳಿತ್ತು. ತಂದೆ ತಾಯಿಯರ ಅನುಮತಿ ಪಡೆದು, ಶೃಂಗೇರಿಯಲ್ಲಿ ವೇದಾಧ್ಯಯನ ಮುಂದುವರೆದಿತ್ತು. ಇತ್ತ ಶಿವಗಂಗಾ ಶೃಂಗೇರಿ ಪೀಠಾಧಿಪತಿಗಳಾಗಿದ್ದ ಶ್ರೀ ವಿಶ್ವೇಶ್ವರಾನಂದ ಭಾರತೀ ಸ್ವಾಮಿಗಳವರ ಆರೋಗ್ಯ ಹದಗೆಟ್ಟಿತ್ತು, ಪೀಠಕ್ಕೆ ಉತ್ತರಾಧಿಕಾರಿ ನೇಮಕ ತುರ್ತಾಗಿ ನಡೆಯಬೇಕಿತ್ತು. ಶೃಂಗೇರಿಯಲ್ಲಿ ವೇದಾಧ್ಯಯನ ಮಾಡುತ್ತಿದ್ದ ಸೀತಾರಾಮ ಶರ್ಮರೇ ತಮ್ಮ ಉತ್ತರಾಧಿಕಾರಿಗಳೆಂದು ವಿಶ್ವೇಶ್ವರಾನಂದ ಭಾರತೀ ಸ್ವಾಮಿಗಳವರು ನಿಶ್ಚಯಿಸಿದ್ದರು.ಹಿರಿಯ ಶ್ರೀಗಳ ಆರೋಗ್ಯ ತೀವ್ರವಾಗಿ ಹದಗೆಟ್ಟ ಕಾರಣ ಸೀತಾರಾಮ ಶರ್ಮರನ್ನು ಬೆಂಗಳೂರಿಗೆ ಕರೆಸಲಾಯಿತು. 7-08-1982, ಆಶ್ವಯುಜ ಶುದ್ಧ ಪಂಚಮಿಯಂದು ಆತುರದ ಸಂನ್ಯಾಸ ನೀಡಿ ಸಚ್ಚಿದಾನಂದ ಭಾರತೀ ಸ್ವಾಮಿಗಳೆಂಬ ಯೋಗಪಟ್ಟವನ್ನೂ ನೀಡಲಾಯಿತು. ಕ್ರಮ ಸನ್ಯಾಸ ಸ್ವೀಕಾರದ ನಂತರ 26-10-1982ರಲ್ಲಿ ಶ್ರೀಗಳು ಶೃಂಗೇರಿ ಶಾಖಾ ಮಠ ಶಿವಗಂಗೆಯ 18ನೇ ಪೀಠಾಧಿಪತಿಗಳಾಗಿ ಪಟ್ಟಾಭಿಷಿಕ್ತಗೊಂಡರು. ನಂತರ  31 ವರ್ಷಗಳ ಕಾಲ ಶಿವಗಂಗಾ ಪೀಠವನ್ನಲಂಕರಿಸಿದ್ದರು.


ಸಂನ್ಯಾಸ ಧರ್ಮಕ್ಕೆ ಅನ್ವರ್ಥ ನಾಮದಂತಿದ್ದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಶೃಂಗೇರಿಯ 34ನೇ ಪೀಠಾಧಿಪತಿಗಳಾಗಿದ್ದ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳವರಿಂದ ಪ್ರಭಾವಿತರಾಗಿದ್ದರು. ಶ್ರೀರಾಮ ಅವರ ಆರಾಧ್ಯ ದೈವ. ಗುರುಗಳ ಪೂರ್ವಾಶ್ರಮದ ತಂದೆ-ತಾಯಿಯರಿಗೆ ಚಂದ್ರಶೇಖರ ಭಾರತೀ ಸ್ವಾಮಿಗಳವರು ಉಪದೇಶ ನೀಡಿದ್ದರು ಎಂಬುದು ವಿಶೇಷ. ಅದರ ಫಲವೆಂಬಂತೆ ಸಂನ್ಯಾಸಾಶ್ರಮ ಸ್ವೀಕರಿಸಿದ ನಂತರ ಸಚ್ಚಿದಾನಂದ ಭಾರತೀ ಸ್ವಾಮಿಗಳವರು, ತಪಸ್ಸು ವೈರಾಗ್ಯ, ಧರ್ಮಾಚರಣೆ, ಗುರುಭಕ್ತಿ, ಭಕ್ತಜನರನ್ನು ಆಶೀರ್ವದಿಸುವ ವಿಷಯದಲ್ಲಿ, ಅಷ್ಟೇ ಏಕೆ ಸಂನ್ಯಾಸಾಶ್ರಮ ಸ್ವೀಕಾರದಿಂದ ವಿದೇಹ ಮುಕ್ತಿವರೆಗೂ ಚಂದ್ರಶೇಖರ ಭಾರತೀ ಸ್ವಾಮಿಗಳ ಪ್ರತಿರೂಪದಂತಿದ್ದರು. ಚಂದ್ರಶೇಖರ ಭಾರತೀ ಸ್ವಾಮಿಗಳವರ ಜೀವನ ಚರಿತ್ರೆಯನ್ನು ಓದಿ, ಶಿವಗಂಗಾ ಗುರುಗಳ ದರ್ಶನ ಪಡೆದ ಅದೆಷ್ಟೋ ಭಕ್ತರಿಗೆ ಸಚ್ಚಿದಾನಂದ ಭಾರತೀ ಸ್ವಾಮಿಗಳವರಲ್ಲಿ ಚಂದ್ರಶೇಖರ ಭಾರತೀ ಸ್ವಾಮಿಗಳೇ ಆವಿರ್ಭವಿತರಾಗಿದ್ದದ್ದು ನಿಸ್ಸಂದೇಹವಾಗಿ ಗೋಚರಿಸುತ್ತಿತ್ತು. ಚಂದ್ರಶೇಖರ ಭಾರತೀ ಸ್ವಾಮಿಗಳು ಹೀಗೆ ಇದ್ದಿರಬೇಕು ಎಂದೆನಿಸುತ್ತಿತ್ತು. ತಪಸ್ಸಿನಲ್ಲಂತೂ ಚಂದ್ರಶೇಖರ ಭಾರತೀ ಸ್ವಾಮಿಗಳ ಮತ್ತೊಂದು ಅವತಾರದಂತೆಯೇ ಇದ್ದರು. ಶ್ರೀಗಳವರ ಅನುಷ್ಠಾನ ಎಷ್ಟೋ ದಿನಸಗಳ ಕಾಲ ಆಹಾರಗಳಿಲ್ಲದೇ ಸಾಗುತ್ತಿತ್ತು. ಈ ಎಲ್ಲಾ ಗುಣಗಳಿಂದಾಗಿಯೇ ತಮ್ಮ ವಿಜಯಯ ಯಾತ್ರೆಯ ಸಂದರ್ಭದಲ್ಲಿ ಶಿಷ್ಯ ಸಮೂಹವನ್ನುದ್ದೇಶಿಸಿ ಮಾತನಾಡಿದ್ದ ಶೃಂಗೇರಿ ಜಗದ್ಗುರುಗಳಾದ ಭಾರತೀ ತೀರ್ಥ ಮಹಾಸ್ವಾಮಿಗಳವರು ಸಚ್ಚಿದಾನಂದ ಭಾರತೀ ಸ್ವಾಮಿಗಳವರಿಗೆ ಅನುಷ್ಠಾನ(ತಪಸ್ಸು) ಚಕ್ರವರ್ತಿಗಳೆಂಬ ಬಿರುದು ನೀಡಿದ್ದರು. ಸಚ್ಚಿದಾನಂದ ಭಾರತೀ ಸ್ವಾಮಿಗಳವರ ಅಲೌಕಿಕ ಸಾಧನೆ ಅಂತಹ ಶ್ರೇಷ್ಠವಾದದ್ದು. ಭಾರತೀ ತೀರ್ಥ ಮಹಾಸ್ವಾಮಿಗಳವರಿಗೆ ಚಂದ್ರಶೇಖರ ಭಾರತೀ ಸ್ವಾಮಿಗಳ ಬಗ್ಗೆ ಅದೆಷ್ಟು ಗೌರವವಿತ್ತೋ ಸಚ್ಚಿದಾನಂದ ಭಾರತೀ ಸ್ವಾಮಿಗಳವರ ಬಗ್ಗೆಯೂ ಅಷ್ಟೇ ಗೌರವಾದರಗಳಿದೆ. ಚಂದ್ರಶೇಖರ ಭಾರತೀ ಸ್ವಾಮಿಗಳವರು ಶೃಂಗೇರಿ ಪೀಠದ ಮಾಣಿಕ್ಯವಾದರೆ, ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳವರು ಆ ಶೃಂಗೇರಿ ಶಾಖೆಯ ಶಿವಗಂಗಾ ಪೀಠದ ಮಾಣಿಕ್ಯ ಎಂಬುದು ನಿತ್ಯ ಸತ್ಯ ಹಾಗೆಯೇ ಸರ್ವವಿದಿತವಾದದ್ದು.ಇಂತಹ ಯತಿ ಶ್ರೇಷ್ಠರು ವಿದೇಹ ಮುಕ್ತಿ ಪಡೆದು ಈ ಮಾಘ ಶುದ್ಧ ತ್ರಯೋದಶಿ ಅಂದರೆ ಈ ಫೆ.1ಕ್ಕೆ 2ವರ್ಷವಾಗಲಿದೆ. ಜ.31 ಹಾಗೂ ಫೆ.1ರಂದು ಶೃಂಗೇರಿ ಶಿವಗಂಗಾ ಮಠದಲ್ಲಿ ಗುರುಗಳ ಆರಾಧನೆ ನಡೆಯಲಿದೆ. ಸಚ್ಚಿದಾನಂದ ಭಾರತೀ ಸ್ವಾಮಿಗಳವರ ಉತ್ತರಾಧಿಕಾರಿಗಳಾದ ಶ್ರೀ ಪುರುಷೋತ್ತಮ ಭಾರತೀ ಸ್ವಾಮಿಗಳವರು ಗುರುಗಳ ಆರಾಧನೆ ನಡೆಸಲಿದ್ದಾರೆ. ಆರಾಧನೆ ಹಿನ್ನೆಲಯಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ ಶೃಂಗೇರಿ ಶಾಖಾಪೀಠದಲ್ಲಿ ರಾರಾಜಿಸಿದ್ದ ಯತಿಶ್ರೇಷ್ಠರನ್ನು ಸ್ಮರಿಸೋಣ.

Wednesday 28 January 2015

ಉದುರುತ್ತಿದೆ ಸ್ಟ್ರಿಂಗ್ ಆಫ್ ಪರ್ಲ್ ನ ಒಂದೊಂದೇ ಮುತ್ತು: ಇಳಿಯುತ್ತಿದೆ ಚೀನಾದ ಗತ್ತು!





 ಸ್ಟ್ರಿಂಗ್ ಆಫ್ ಪರ್ಲ್ಸ್!

ದಕ್ಷಿಣ ಏಷ್ಯಾದಲ್ಲಿ ಏಕಚಕ್ರಾಧಿಪತ್ಯ ಮೆರೆಯಲು ಸಹಾಯಕಾರಿಯಾಗುವುದಕ್ಕೆ ಹಿಂದೂ ಮಹಾಸಾಗರದಲ್ಲಿ ಶಾಶ್ವತ ಅಸ್ತಿತ್ವವನ್ನು ಸ್ಥಾಪಿವುದಕ್ಕೆ ಚೀನಾ ರೂಪಿಸಿದ್ದ ಕಾನ್ಸೆಪ್ಟ್..

ಹಿಂದೂ ಮಹಾಸಾಗರದ ಜಲಪ್ರದೇಶದಲ್ಲಿ ಬೃಹತ್ ಪ್ರಮಾಣದ ನೌಕಾ ನೆಲೆಯನ್ನು ಸ್ಥಾಪಿಸಿ, ದಕ್ಷಿಣ ಏಷ್ಯಾದ ಶ್ರೀಲಂಕಾ, ಥೈಲ್ಯಾಂಡ್, ಬರ್ಮಾ, ಬಾಂಗ್ಲಾದೇಶ, ಪಾಕಿಸ್ತಾನ ಮಾಲ್ಡೀವ್ಸ್, ಮಾಯನ್ಮಾರ್, ವಿಯೆಟ್ನಾಮ್, ತೈವಾನ್ ರಾಷ್ಟ್ರಗಳನ್ನು ಹಿಡಿತದಲ್ಲಿಟ್ಟುಕೊಂಡು ಭಾರತವನ್ನು ನಿಯಂತ್ರಿಸುವುದು ಚೀನಾದ ಸ್ಟ್ರಿಂಗ್ ಆಫ್ ಪರ್ಲ್ಸ್ (ಮುತ್ತುಗಳ ಮಾಲೆ) ನ ಉದ್ದೇಶ. ಜಾಗತಿಕ ವ್ಯಾಪಾರ-ವಹಿವಾಟಿನಲ್ಲಿ ಹಿಂದೂ ಮಹಾಸಾಗರಕ್ಕೆ ತನ್ನದೇ ಮಹತ್ವವಿದ್ದು ಜಗತ್ತಿನ ಶೇ.80ರಷ್ಟು ತೈಲ ವಹಿವಾಟು ಹಿಂದೂ ಮಹಾಸಾಗರವನ್ನು ದಾಟಿಯೇ ಮುಂದೆ ಸಾಗುತ್ತದೆ. ಹಿಂದೂ ಮಹಾಸಾಗರದ ವ್ಯಾಪ್ತಿಯಲ್ಲಿ 35 ದೇಶಗಳು, 6 ದ್ವೀಪಗಳಿದ್ದು ಭಾರತವೇ ಇವುಗಳ ಪೈಕಿ ದೊಡ್ಡ ದೇಶ. ಕಳೆದ 10 ವರ್ಷಗಳಲ್ಲಿ ಭಾರತದಲ್ಲಿದ್ದ ರಾಜಕೀಯ ಸ್ಥಿತಿಗಳಿಂದ ಭಾರತ ಈ ಜಲಪ್ರದೇಶದ ಮೇಲಿದ್ದ ಹಿಡಿತ ಕಳೆದುಕೊಳ್ಳಬೇಕಾಗಿ ಬಂತು!

ಭಾರತದ ಗೊಂದಲಮಯ ಮತ್ತು ಕ್ಷೀಣ ವಿದೇಶಾಂಗ ನೀತಿಯ ಲಾಭ ಪಡೆದ ಚೀನಾ, ಹಿಂದೂ ಮಹಾಸಾಗರದ ವ್ಯಾಪ್ತಿಗೆ ಬರುವ ದೇಶಗಳ ಮೇಲೆ ಒಂದೊಂದಾಗಿಯೇ ತನ್ನ ಹಿಡಿತ ಸಾಧಿಸಿತ್ತು. ಶ್ರೀಲಂಕಾ, ಪಾಕಿಸ್ತಾನ, ಮಾಯನ್ಮಾರ್, ಬಾಂಗ್ಲಾ, ಕಾಂಬೋಡಿಯಾದ ಸಹಾಯದಿಂದ ಚೀನಾ ನೌಕಾ ನೆಲೆಗಳನ್ನು ಸ್ಥಾಪಿಸಿದ್ದೇ ಆದರೆ ತೈಲ ವಹಿವಾಟು, ವ್ಯಾಪಾರ-ವಹಿವಾಟು ತನ್ನಿಚ್ಚಿಗೆ ತಕ್ಕಂತೆ ನಡೆಯುತ್ತದೆ. ಭಾರತ ತಾನು ಹೇಳಿದಂತೆ ಕೇಳಿದರೆ ಸರಿ ಇಲ್ಲದೇ ಇದ್ದಲ್ಲಿ ತೈಲೋತ್ಪನ್ನಗಳು ಮತ್ತು ಇತರ ವಾಣಿಜ್ಯ ಸಾಮಾಗ್ರಿಗಳು ಹಿಂದೂ ಮಹಾಸಾಗರದಿಂದ ಭಾರತ ತಲುಪದಂತೆ ನೋಡಿಕೊಂಡರಾಯಿತು. ಹೇಗಿದ್ದರೂ ಹಿಂದೂ ಮಹಾಸಾಗರದಲ್ಲಿ ತನ್ನದೇ ಆಧಿಪತ್ಯವಿರಲಿದೆ, ಭಾರತದ ನೆರೆ ರಾಷ್ಟ್ರಗಳು ತಾನು ಹೇಳಿದಂತೆಯೇ ಕೇಳುತ್ತದೆ ಎಂಬುದು ಚೀನಾ ನಿಲುವಾಗಿತ್ತು. ಭಾರತ ಸರ್ಕಾರದ ಬೇಜವಾಬ್ದಾರಿತನವೂ ಚೀನಾದ ನಿಲುವಿಗೆ ಪೂರಕವಾಗಿತ್ತು. ಆದರೆ ಈಗ ಭಾರತದ ನಾಯಕತ್ವ ಹಾಗೂ ರಾಜಕೀಯ ಸ್ಥಿತಿ ಎರಡೂ ಬದಲಾಗಿದೆ. ಚೀನಾ ಎಂತಹ ಕೃತ್ರಿಮ ರಾಷ್ಟ್ರ ಎಂಬುದು ಎಲ್ಲರಿಗೂ ತಿಳಿದಿದೆ. ಅವಕಾಶವಾದಿ ಅಮೆರಿಕಾಗೆ ಚೀನಾವನ್ನು ಬಗ್ಗುಬಡಿಯುವ ಅನಿವಾರ್ಯತೆ ಇದೆ. ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷರೇ ಬಂದು ಭಾರತದ ಪ್ರಧಾನಿಯೊಂದಿಗೆ ಚೀನಾ ನೌಕಾ ನೆಲೆ ಸ್ಥಾಪಿಸುತ್ತಿರುವ ಬಗ್ಗೆ ಚರ್ಚೆ ನಡೆಸುತ್ತಾರೆ. ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಭಾರತದೊಂದಿಗೆ ಅಮೆರಿಕಾ ಮಾತನಾಡಿದ ನಂತರವಂತೂ ಸ್ಟ್ರಿಂಗ್ ಆಫ್ ಪರ್ಲ್ಸ್ ಬಿಡಿ, ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಅಧಿಪತ್ಯ ಸ್ಥಾಪಿಸುವುದಕ್ಕೂ ಅಡ್ಡಿ ಉಂಟಾಗಿದೆ.

ಭಾರತದ ನೆರೆ ರಾಷ್ಟ್ರಗಳಲ್ಲಿ ನೌಕಾ ನೆಲೆ ಸ್ಥಾಪಿಸಿ ಏಷ್ಯಾ ಭಾಗದ ಭದ್ರತೆಗೇ ಕುತ್ತು ತರುವ ಚೀನಾದ ಕುತಂತ್ರ ಗೊತ್ತಿದ್ದರಿಂದಲೇ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಮೊದಲ ವಿದೇಶ ಪ್ರವಾಸ, ದ್ವಿಪಕ್ಷೀಯ ಮಾತುಕತೆ ನಡೆಸಿದ್ದು ಭೂತಾನ್, ನೇಪಾಳ, ಫಿಜಿ, ಜಪಾನ್, ಮಾಯನ್ಮಾರ್ ನೊಂದಿಗೆ. ಓರ್ವ ಭಾರತದ ಪ್ರಧಾನಿ ಈ ಎಲ್ಲಾ ರಾಷ್ಟ್ರಗಳಿಗೂ ಭೇಟಿ ನೀಡಿ ಹಲವು ದಶಕಗಳೇ ಕಳೆದುಹೋಗಿದ್ದರೂ ಈ ಎಲ್ಲಾ ದೇಶಗಳಲ್ಲೂ ಅತ್ಯಾದರ ಸ್ವಾಗತ, ಯಶಸ್ಸು ಸಿಕ್ಕಿತು. . ಭಾರತ ಹಾಗೂ ಈ ನೆರೆ ರಾಷ್ಟ್ರಗಳ ಸಂಬಂಧ ಹೀಗಿರಬೇಕಾದರೆ ಮಧ್ಯದಲ್ಲಿ ಚೀನಾವೂ ತಲೆ ಹಾಕುತ್ತದೆ. ಅವಕಾಶ ಸಿಕ್ಕರೆ ಅದರ 'ಪರಮಮಿತ್ರ' ಪಾಕಿಸ್ತಾನವೂ ಈ ನೆರೆ ರಾಷ್ಟ್ರಗಳನ್ನು ಭಾರತದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತದೆ.

ಹಾಗೆ ನೋಡಿದರೆ ದ್ವಿಪಕ್ಷೀಯ ಮಾತುಕತೆಗಿಂತ ಮೋದಿ ಚೀನಾಕ್ಕೆ ನೀಡಿದ ಮೊದಲ ಬಹುದೊಡ್ಡ ಹೊಡೆತವೆಂದರೆ ನೇಪಾಳ ಹಾಗೂ ಜಪಾನ್ ಗೆ ತೆರಳಿ ಯಶಸ್ವಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು. ನೇಪಾಳ ಮೋದಿ ಭೇಟಿಗೂ ಮುನ್ನವೇ ಚೀನಾದ ಪರವಾಗಿ ವಾಲುತ್ತಿದ್ದ ದೇಶ. ನೇಪಾಳದಲ್ಲಿ ತನ್ನ ಅಧಿಪತ್ಯ ಸಾಧಿಸಲು ಚೀನಾ ಆ ದೇಶಕ್ಕೆ ಸಾಕಷ್ಟು ಆರ್ಥಿಕ ನೆರವು ನೀಡುತ್ತಾ ಬಂದಿದೆ ಹಾಗೂ ಮಾವೋವಾದಿಗಳನ್ನು ತನ್ನತ್ತ ಸೆಳೆದು ಮಾವೋ ಸರಕಾರ ಸ್ಥಾಪಿಸುವ ಹುನ್ನಾರವೂ ನಡೆಸಿತ್ತು. ಮೋದಿ ಭೇಟಿ ಬಳಿಕ ನೇಪಾಳ ಚೀನಾಕ್ಕಿಂತಲೂ ಭಾರತಕ್ಕೆ ಹತ್ತಿರವಾಗತೊಡಗಿದೆ. ಮೋದಿಯವರ ಜಪಾನ್ ಭೇಟಿ ಸಂದರ್ಭದಲ್ಲಂತೂ ಚೀನಾಕ್ಕೆ ದಿಕ್ಕೇ ತೋಚಿದಂತಾಗಿತ್ತು. ಮಯಾನ್ಮಾರ್, ಭೂತಾನ್, ಭೇಟಿಗಳಿಂದಲೂ ಚೀನಾಕ್ಕೆ ಆತಂತವಾಗಿತ್ತು. ನಿಮಗೆಲ್ಲಾ ನೆನಪಿರಬಹುದು, ಮೋದಿ ನೆರೆ ರಾಷ್ಟ್ರಗಳೊಂದಿಗೆ ಬೆಸೆಯುತ್ತಿದ್ದ ಸಂಬಂಧಗಳಿಂದ ತನ್ನ ಬಗ್ಗೆ ಆತಂತಗೊಂಡಿದ್ದ ಚೀನಾ ಡಿ.21ರಂದು ನಡೆದ ಜಿಎಂಎಸ್ ಸಮಿತ್ ಶೃಂಗಸಭೆಯಲ್ಲಿ ಕಾಂಬೋಡಿಯಾ, ವಿಯಾಟ್ನಾಂ, ಮ್ಯಾನ್ಮಾರ್, ಥಾಯ್‌ಲ್ಯಾಂಡ್ ಮತ್ತು ಲಾವೋಸ್‌ನಲ್ಲಿ ಮೂಲ ಸೌಲಭ್ಯ, ಉತ್ಪಾದನೆ ಸುಧಾರಣೆ ಮತ್ತು ಬಡತನ ನಿರ್ಮೂಲನೆ ಹೆಸರಿನಲ್ಲಿ 18 ಸಾವಿರ ಕೋಟಿ ನೆರವು ನೀಡುವುದಾಗಿ ಆಮಿಷವೊಡ್ಡಿತ್ತು.

ಇವೆಲ್ಲವೂ ಸಾಮಾನ್ಯ ಸಂಗತಿ. ವಾಸ್ತವವಾಗಿ ಚೀನಾಗೆ ತಡೆಯಲಾರದ ಪೆಟ್ಟು ಬಿದ್ದದ್ದು ತನ್ನ ಪರಮಾಪ್ತನಾಗಿದ್ದ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಸೋಲಿನಿಂದ. ರಾಜಪಕ್ಸೆ ಅಧಿಕಾರದಲ್ಲಿದ್ದಾಗಿನಿಂದ, ಸೋಲುವವರೆಗೂ ಚೀನಾದ ಹಿತಾಸಕ್ತಿಗೆ ತಕ್ಕಂತೆಯೇ ನಡೆಯುತ್ತಾ, ಪಾಕಿಸ್ತಾನವನ್ನೂ ಮಿತ್ರನಾಗಿಸಿಕೊಂಡು ಭಾರತಕ್ಕೆ ಈ ಎರಡೂ ರಾಷ್ಟ್ರಗಳಿಂದಾಗಬೇಕಿದ್ದ ಸಮಸ್ಯೆಗೆ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಹೀಗೇ ಬಿಟ್ಟರೆ ಭಾರತದ ಹಿತಾಸಕ್ತಿಗೇ ಧಕ್ಕೆಯುಂಟಾಗುತ್ತದೆ ಎಂಬುದನ್ನು ತಿಳಿದಿದ್ದ ಮೋದಿ ಸರ್ಕಾರ, ತನ್ನನ್ನು ಹಾಗೂ ಶ್ರೀಲಂಕಾವನ್ನು ಚೀನಾದ ಕೃತ್ರಿಮತೆಯಿಂದ ರಕ್ಷಿಸಿಕೊಳ್ಳಲು ರಾಜಪಕ್ಷೆಯನ್ನು ಸೋಲಿಸಲು ಅಗತ್ಯವಿದ್ದ ಕೆಲಸವನ್ನು ಸದ್ದಿಲ್ಲದೇ ಮಾಡಿ ಮುಗಿಸಿತ್ತು. ಸಧ್ಯಕ್ಕೆ ಶ್ರೀಲಂಕಾ ಚೀನಾದ ವಸಾಹತುಶಾಹಿಗೆ ವಿರುದ್ಧವಾಗಿರುವ ದೇಶವಾಗಿ ತಿರುಗಿಬಿದ್ದಿದೆ. ಬಾಂಗ್ಲಾದೇಶ ಭಾರತದ ದ್ವೇಷ ಕಟ್ಟಿಕೊಳ್ಳುವ ಸ್ಥಿತಿಯಲ್ಲಿಲ್ಲ. ನೇಪಾಳ ಹಾಗೂ ಶ್ರೀಲಂಕಾ ಭಾರತದ ಪರ ತಿರುಗಿರುವುದೇ ಈಗ ಚೀನಾಕ್ಕೆ ಎದುರಾಗಿರುವ ಬಹುದೊಡ್ಡ ಸವಾಲಾಗಿದೆ.

ಹೀಗೆ ಸ್ಟ್ರಿಂಗ್ ಆಫ್ ಪರ್ಲ್ಸ್ ಹೆಸರಿನಲ್ಲಿ ಒಂದೊಂದೇ ದೇಶಗಳನ್ನು ತನ್ನ ಮುಷ್ಠಿಯಲ್ಲಿ ಹಿಡಿದು ಭಾರತವನ್ನು ಕೈಗೊಂಬೆಯನ್ನಾಗಿ ಮಾಡಿಕೊಳ್ಳಬೇಕೆಂಬ ಚೀನಾದ ಕನಸು ಕಮರುತ್ತಿದೆ. ಸ್ಟ್ರಿಂಗ್ ಆಫ್ ಪರ್ಲ್ಸ್ ಗೆ ಪೋಣಿಸಿದ್ದ ಒಂದೊಂದೆ ಮುತ್ತುಗಳು ಈಗ ಚೀನಾದ ಹಿಡಿತದಿಂದ ಉದುರುತ್ತಿವೆ. ಸಧ್ಯಕ್ಕೆ ಚೀನಾಗೆ ಹೇಳಿಕೊಳ್ಳಬಹುದಾದ ಆಪ್ತ ರಾಷ್ಟ್ರವೆಂದು ಉಳಿದಿರುವುದು ಕೇವಲ ಪಾಕಿಸ್ತಾನ ಮಾತ್ರ. ಅಂದಹಾಗೆ ನೆರೆ ರಾಷ್ಟ್ರಗಳನ್ನು ದುಡ್ಡಿನಿಂದ ಕೊಂಡುಕೊಳ್ಳಬಹುದು ಎನ್ನುವುದಕ್ಕೆ ಚೀನಾದ ಆರ್ಥಿಕತೆಯೂ ಕುಸಿಯುತ್ತಿದೆ. ಆಂತರಿಕ ಭಯೋತ್ಪಾದನೆ ಹತ್ತಿಕ್ಕುವ ಕಾರಣ ಮುಂದಿಟ್ಟುಕೊಂಡು ಪಾಕಿಸ್ತಾನ ಕೇಳಿದಾಗಲೆಲ್ಲಾ ದುಡ್ದು ಸುರಿಯುವಷ್ಟು ಮೂರ್ಖತನ ಚೀನಾ ತೋರಲಾರದು. ಇತ್ತೀಚೆಗಷ್ಟೇ ಪ್ರಕಟವಾಗಿದ್ದ ಐಎಂಎಫ್ ವರದಿ ಪ್ರಕಾರ 2016ನೇ ಸಾಲಿನಲ್ಲಿ ಭಾರತದ ಆರ್ಥಿಕತೆ ಚೀನಾದ ಆರ್ಥಿಕತೆಯನ್ನು ಮೀರಿ ಬೆಳೆಯುತ್ತದೆ ಎಂದು ಹೇಳಿದೆ. ಇನ್ನು ಪಾಕಿಸ್ತಾನ ಹೊರತುಪಡಿಸಿ ಉಳಿದ ನೆರೆರಾಷ್ಟ್ರಗಳೇಕೆ ಆರ್ಥಿಕ ಸಹಾಯಕ್ಕಾಗಿ ಚೀನಾದತ್ತ ಮುಖಮಾಡುವ ಸ್ಥಿತಿ ಎದುರಾಗುತ್ತದೆ? ಇಷ್ಟೆಲ್ಲಾ ಒಂದೆಡೆ ಅಮೆರಿಕಾ ಭಾರತ ತನಗೆ ಬೆಸ್ಟ್ ಫ್ರೆಂಡ್ ಎಂದು ಹೆಮ್ಮೆಯಿಂದ ಹೇಳುತ್ತಿದ್ದರೆ, ಚೀನಾದ ಸ್ಥಿತಿ ಚೋರ ಗುರುವಿಗೆ ಚಂಡಾಲ ಶಿಷ್ಯ ಎಂಬಂತಾಗಿದೆ. ಅದಕ್ಕಾಗಿಯೇ ಚೀನಾ ಪಾಕಿಸ್ತಾನವನ್ನು ತನ್ನ ಸಾರ್ವಕಾಲಿಕ ಆಪ್ತಮಿತ್ರ ಎಂದು ಬಣ್ಣಿಸುತ್ತಿದೆ.

Tuesday 20 January 2015

ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರನ್ನು ಟೀಕಿಸಿದರೆ ಮಾತ್ರ ಚಾರಿತ್ರ್ಯವಧೆಯಾಗುತ್ತದೆಯೇ?

ಯಾವುದಾದರೂ ಕಾರ್ಯಕ್ರಮವೊಂದಕ್ಕೆ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಿ ಅವರನ್ನು ಪರಿಚಯಿಸಬೇಕಾದರೆ ಇವರಿಗೆ ಇಂತಿಷ್ಟು ರೋಗಗಳಿವೆ, ರೋಗಿಷ್ಠರು, ದಡ್ಡರು ಆದರೂ ಅವರು ಅಷ್ಟೊಂದು ಸಾಧನೆ ಮಾಡಿದ್ದಾರೆ ಎಂಬ ವ್ಯಕ್ತಿ  ಪರಿಚಯಕ್ಕೆ ಪ್ರತಿಕ್ರಿಯೆ ಹೇಗಿರಬಹುದು?  ದೇಶದ ಯುವಕರ ಆರಾಧ್ಯ ದೈವ ವಿವೇಕಾನಂದರನ್ನು ರೋಗಿಷ್ಠ, ಪೆದ್ದ ಎಂಬ ಪದಪುಂಜಗಳನ್ನು ಪ್ರಯೋಗಿಸಿದ್ದ ಮಾಜಿ ಪತ್ರಕರ್ತ, ಹಾಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಿಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ಈ ಪ್ರಶ್ನೆ ಕೇಳಬೇಕಿದೆ

3 ವರ್ಷಗಳ ಹಿಂದಿನ ಲೇಖನಕ್ಕೆ ಇಂದಿಗೂ ಆಕ್ಷೇಪಗಳ ಪ್ರತಿಕ್ರಿಯೆಗಳು ಬರುತ್ತಿದೆಯೆಂದರೆ, ಲೇಖನದಲ್ಲಿ ಸ್ವಾಮಿ ವಿವೇಕಾನಂದರನ್ನು ಎಷ್ಟರ ಮಟ್ಟಿಗೆ ಕೆಟ್ಟದಾಗಿ ಚಿತ್ರಿಸಿದ್ದರೆಂಬುದನ್ನು ಊಹಿಸಿಕೊಳ್ಳಿ. ಸಾಮಾನ್ಯ ನಾಗರಿಕನಿಗೇ ರೋಗಿಷ್ಠ, ಪೆದ್ದ, ದಡ್ಡ ಎಂದು ಸಂಬೋಧಿಸಿದರೆ ತಡೆಯಲಾರದ ಸಿಟ್ಟು ಬರುತ್ತದೆ. ಅಂಥದ್ದರಲ್ಲಿ ಇಡೀ ದೇಶದ ಯುವಚೈತನ್ಯದ ಮೂರ್ತರೂಪವನ್ನು ಅಂತಹ ಕನಿಷ್ಠ ಪದಗಳಿಂದ ಪರಿಚಯಿಸಿದರೆ ಪ್ರತಿಕ್ರಿಯೆಯೂ ಅಷ್ಟೇ ಕನಿಷ್ಠವಾಗಿರುವುದು ಸಹಜ. ಕನಿಷ್ಠ ಪದಗಳಿಂದ ಟೀಕಿಸುವವರು ಅದೇ ಮಟ್ಟದ ಪ್ರತಿಕ್ರಿಯೆಗಳನ್ನು ಸ್ವೀಕರಿಸಲು ಮಾನಸಿಕವಾಗಿಯೂ ಸಿದ್ಧರಿರಬೇಕಲ್ಲವೇ? 

ನಿಮಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅತ್ಯಂತ ಕೆಟ್ಟ ಆಡಳಿತ ದಿನಗಳು ನೆನಪಿರಬೇಕಲ್ಲವೇ? ಸರ್ಕಾರದ ಸಾಲು ಸಾಲು ಹಗರಣಗಳಿಂದ ರೋಸಿ ಹೋಗಿದ್ದ ಜನರು ಸರ್ಕಾರವನ್ನು ನೇರಾ ನೇರ ಟೀಕಿಸಲು ಮುಂದಾದರು, ಬರಹಗಾರರು, ವಿಶ್ಲೇಷಕರ ಆಕ್ರೋಶಗಳಿಗೆಲ್ಲಾ ವೇದಿಕೆಯಾಗಿದ್ದು ಪ್ರಿಂಟ್ ಅಥವಾ ದೃಷ್ಯ ಮಾಧ್ಯಮಗಳು, ಸಾಮಾನ್ಯ ಜನರಿಗೆ ಸರ್ಕಾರದ ವಿರುದ್ಧವಿದ್ದ ತಮ್ಮ ಆಕ್ರೋಶವನ್ನು ಹೊರಹಾಕಲು ಇದ್ದದ್ದು ಒಂದೇ ವೇದಿಕೆ ಅದೇ, ಈ ಸೋಷಿಯಲ್ ಮೀಡಿಯಾಗಳಾದ ಫೇಸ್ ಬುಕ್, ಟ್ವಿಟರ್, ಕಾಂಗ್ರೆಸ್ ನ ಹಗರಣಗಳು ಒಂದೆಡೆಯಾದರೆ ಅದನ್ನು ಸಮರ್ಥಿಸಿಕೊಳ್ಳಲು ಯಾವ ಮಟ್ಟಕ್ಕೂ ವಾದ ಮಂಡಿಸುತ್ತಿದ್ದ ಕಾಂಗ್ರೆಸ್ ನ ಮುಖಂಡರಾದ ದಿಗ್ವಿಜಯ್ ಸಿಂಗ್, ಸಂಜಯ್ ಝಾ ಮುಂದಾದವರ ಆಧಾರ ರಹಿತ ತರ್ಕಗಳಿಂದ ಜನರು ಹೈರಾಣಾಗಿದ್ದರು. ದಿಗ್ವಿಜಯ್ ಸಿಂಗ್, ಮನೀಶ್ ತಿವಾರಿ, ರಶೀದ್ ಆಲ್ವಿಗಳನ್ನು ಸೋನಿಯಾ ಗಾಂಧಿಯವರ ನಾಯಿಗಳೆಂಬಂತೆ ರೂಪಿಸಿರುವ ಚಿತ್ರಗಳೂ ಕಂಡುಬಂದಿತ್ತು. ಸೋನಿಯಾ ಗಾಂಧಿ, ಮನಮೋಹನ್ ಸಿಂಗ್  ವ್ಯಂಗ್ಯ ಚಿತ್ರಗಳಿಗಂತೂ ಲೆಕ್ಕವೇ ಇರಲಿಲ್ಲ.

ತನ್ನ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಅವರನ್ನು ಸಾಮಾಜಿಕ ಜಾಲತಾಣಗಳು ಟೀಕಿಸಿದ್ದೇ ತಡ, ಇದು ಸ್ವೀಕಾರಾರ್ಹವಲ್ಲ ಎಂದು ಯುಪಿಎ ಸರ್ಕಾರ ಗುಡುಗಿತ್ತು. ಫೇಸ್ ಬುಕ್, ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಮುಂತಾದ ಪ್ರಮುಖ ಇಂಟರ್ ನೆಟ್ ಸೇವಾ ಪೂರೈಕೆದಾರ ಕಂಪನಿಗಳ ಕಾನೂನು ಸಲಹೆಗಾರರನ್ನು ಹೊಸದಿಲ್ಲಿಯಲ್ಲಿರುವ ತಮ್ಮ ಕಚೇರಿಗೆ ಕರೆಸಿಕೊಂಡಿದ್ದ ಅಂದಿನ ಕೇಂದ್ರ ಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್, ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಕಪಿಲ್ ಸಿಬಲ್ ನೀಡಿದ್ದ ಎಚ್ಚರಿಕೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ ಕರ್ನಾಟಕದಲ್ಲಿ ಯುಪಿಎ ಸರ್ಕಾರದ ತದ್ರೂಪು ಕ್ರಮ ನಡೆಯುತ್ತಿದೆ! ಅಂದು ಸಚಿವರು ಲಾರ್ಜ್ ಸ್ಕೇಲ್ ನಲ್ಲಿ ಇಡೀ ಫೇಸ್ ಬುಕ್ ಗೇ ಎಚ್ಚರಿಕೆ ನೀಡಿದ್ದರು, ಇಂದು ಮುಖ್ಯಮಂತ್ರಿ ಸಲಹೆಗಾರರು ಸ್ಮಾಲ್ ಸ್ಕೇಲ್ ನಲ್ಲಿ ಫೇಸ್ ಬುಕ್ ನ ಗುಂಪು ಅಥವಾ ಅದರ ನಿರ್ವಾಹಕರಿಗೆ ಎಚ್ಚರಿಕೆ ನೀಡಿದ್ದಾರೆ. ಯುಪಿಎ ಸರ್ಕಾರ ರಾಷ್ಟ್ರಮಟ್ಟದಲ್ಲಿ ಮಾಡಿದ್ದನ್ನು ಮುಖ್ಯಮಂತ್ರಿ ಸಲಹೆಗಾರರು ರಾಜ್ಯಮಟ್ಟದಲ್ಲಿ ಮಾಡಿದ್ದಾರೆಂಬುದನ್ನು ಬಿಟ್ಟರೆ ಹೆಚ್ಚಿನ ವ್ಯತ್ಯಾಸವಿಲ್ಲ. 

ಸಾಮಾನ್ಯ ಜನರು ಅಪ್ ಲೋಡ್ ಮಾಡಿದ ಚಿತ್ರಗಳಿಗೆ ಫೇಸ್ ಬುಕ್ ಮೇಲೆ ಕ್ರಮ ಕೈಗೊಳ್ಳುವುದು ಸಾಧುವೇ ಎಂಬುದು ಅಂದಿನ ಪ್ರಶ್ನೆಯಾಗಿತ್ತು? ಇಂತಹ ಚಿತ್ರಗಳನ್ನು ಫೇಸ್ ಬುಕ್, ಗೂಗಲ್ ಪ್ಲಸ್ ಅಥವಾ ಬ್ಲಾಗ್ ಗಳಲ್ಲಿ ಹಾಕಿದ್ದು ಸರಿಯೋ ತಪ್ಪೋ ಎಂಬ ಚರ್ಚೆಗಿಂತ ಅಂದು ಜನರಲ್ಲಿದ್ದ ಹತಾಷ ಭಾವನೆಯೇ ಪ್ರಮುಖ ವಿಷಯವಾಗಿತ್ತು. ಮುಖ್ಯಮಂತ್ರಿ ಸಲಹೆಗಾರರ ಸೋಷಿಯಲ್ ಮೀಡಿಯಾ ನಿಯಂತ್ರಣ ಪ್ರಯತ್ನವನ್ನು ನೋಡಿದರೆ ಇಅವತ್ತು ಇಂತಹದ್ದೇ ಪ್ರಶ್ನೆ ಉದ್ಭವಿಸುತ್ತಿದೆ.

ಪಾಲಿಮೆಂಟ್ ನ್ನು ಕಮೋಡ್ ರೀತಿ ಚಿತ್ರಿಸಿದ್ದನ್ನು ಒಪ್ಪಲು ಸಾಧ್ಯವಿಲ್ಲ ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ ಎಂದವರು, ಇಂದು ವಿವೇಕಾನಂದರ ಲೇಖನದ ಬಗ್ಗೆ ಬಂದ ಪ್ರತಿಕ್ರಿಯೆಯಲ್ಲಿ ವ್ಯಕ್ತವಾದ ಪದಗಳನ್ನು ಒಪ್ಪಲು ಸಾಧ್ಯವಿಲ್ಲ ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ ಎಂದು ಸುಮ್ಮನಿದ್ದುಬಿಡಬಹುದಿತ್ತು ಯಾಕೆ ಹಾಗೆ ಮಾಡಲಿಲ್ಲ?

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರನ್ನು ಜರಿದದ್ದು ಬೆದರಿಕೆ, ಸಂಚು, ಶಾಂತಿ ಕಡದುವ ಪ್ರಯತ್ನ ಹೇಗಾಗುತ್ತದೆ? ವಿವೇಕಾನಂದರನ್ನು ರೋಗಿಷ್ಠ, ದಡ್ಡ ಎಂದೆಲ್ಲಾ ಜರಿದು ಯುವಜನತೆಯ ಶಾಂತಿಯನ್ನು ಕದಡಿದ್ದು ಯಾರು? ಲೇಖನಕ್ಕೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆಂದು ಬೊಬ್ಬೆ ಹೊಡೆದು ತಮ್ಮನ್ನು ಟೀಕಿಸಿದವರ ಮೇಲೆ ಕೇಸ್ ಹಾಕಿ ಅವರದ್ದು ನಾಯಿಪಾಪಾಡಾಗುವಂತೆ ಮಾಡುತ್ತೇನೆ ಎನ್ನುವುದೂ ಬೆದರಿಕೆಯ ಮತ್ತೊಂದು ರೂಪವಲ್ಲವೇ? ತಾವು ವಿವೇಕಾನಂದರನ್ನು ರೋಗಿಷ್ಠ ಎಂದು ಕರೆದರೆ ತಮ್ಮನ್ನು ಮತ್ತೊಬ್ಬರೂ ಅದೇ ರೀತಿಯ ಪದಗಳಿಂದ ಸಂಬೋಧಿಸಬಾರದು ಎನ್ನುವುದು ಯಾವ ರೀತಿಯ ನ್ಯಾಯ? ಯಾರೋ ಓರ್ವ ತನ್ನ ಕಾಮೆಂಟಿನಲ್ಲಿ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಂದು ಆರೋಪಿಸುವವರು  ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಕರಾವಳಿಯ ಮಧ್ಯಮ ವರ್ಗದ ಜನತೆಯನ್ನು ಷಂಡರೆಂದು ಕರೆಯುವುದರ ಮೂಲಕ, ಪ್ರಧಾನಿಯ ಬಗ್ಗೆ ನರಹಂತಕ, ಸಾವಿನ ವ್ಯಾಪಾರಿ ಎಂಬ ಪದಪುಂಜಗಳನ್ನು ಪ್ರಯೋಗಿಸುವುದರ ಮೂಲಕ ಯುವ ಜನತೆಗೆ ಯಾವ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದೀರಿ?

ಇಷ್ಟಕ್ಕೂ ಮಾಧ್ಯಮ ಸಲಹೆಗಾರರನ್ನು ಟೀಕಿಸಿದರೆ ಮಾತ್ರ ಚಾರಿತ್ರ್ಯವಧೆಯಾಗುತ್ತದೆಯೇ? ಇಂಥದ್ದೊಂದು ಪ್ರಶ್ನೆ ಖಂಡಿತಾ ಕೇಳಬೇಕಿದೆ. ನಿಮಗೆ ಪ್ರಭಾ ಬೆಳವಂಗಲಾ ಪ್ರಕರಣ ಖಂಡಿತಾ ನೆನಪಿರುತ್ತದೆ. ಅಂದೂ ಸಹ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರೇ ಕೇಸ್ ದಾಖಲಿಸಲು ಸಹಾಯ ಮಾಡಿದ್ದರು. ಇರಲಿ, ಅದಾದ ನಂತರ ಮುಖ್ಯಮಂತ್ರಿ ಸಲಹೆಗಾರರಿಗೆ ಅವಾಚ್ಯ ಶಬ್ದಗಳು ಕೇಳಿಸಿದ್ದು ತಮ್ಮನ್ನು ಟೀಕಿಸಿದ ನಂತರವೇ. ಹಾಗಾದರೆ ಫೇಸ್ ಬುಕ್ ನಲ್ಲಿ ಮುಖ್ಯಮಂತ್ರಿ ಸಲಹೆಗಾರರಿಗೆ ಹಾಗೂ ಅವರಿಗೆ ಬೇಕಾದರವ ವಿರುದ್ಧ ಅವಹೇಳನ ನಡೆದರೆ ಮಾತ್ರ ಅದು ಚಾರಿತ್ರ್ಯ ವಧೆಯಾಗುತ್ತದೆಯೋ? ವಿವೇಕಾನಂದರ ಬಗ್ಗೆ ಅವಹೇಳನಕಾರಿ ಪದಗಳಲ್ಲಿ ಲೇಖನ ಬರೆದಿದ್ದು ಅವರ ಚಾರಿತ್ರ್ಯವಧೆಯಾಗುವುದಿಲ್ಲವೇ? ಅದು ಶಾಂತಿ ಕದಡುವ, ಅಪರಾಧವಾಗುವುದಿಲ್ಲವೇ? ಕೇಸ್ ಯಾರ ಮೇಲೆ ದಾಖಲಿಸಬೇಕು ಹೇಳಿ? 

ತಮ್ಮನ್ನು ಕೆಟ್ಟ ಪದಗಳಿಂದ ಟೀಕಿಸಿರುವುದರ ಬಗ್ಗೆ ಪ್ರಕರಣ ದಾಖಲಿಸಿದ್ದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕ ಹುದ್ದೆಯಲ್ಲಿರುವುದರಿಂದ ಸ್ವಲ್ಪ ಇತರರ ವಿರುದ್ಧ ಬಳಕೆಯಾಗುತ್ತಿರುವ ಅವಾಚ್ಯ ಶಬ್ದಗಳ ಬಗ್ಗೆಯೂ ಗಮನ ಹರಿಸಲಿ, ಅಬರ ಪ್ರಭಾವಳಿಯಲ್ಲಿರುವವರೇ ಅನೇಕರು ಅಂತಹ ಶಬ್ದಗಳನ್ನು ಫೇಸ್ ಬುಕ್ ನಲ್ಲಿ ಮೆಸೇಜ್ ಮೂಲಕ ಬಳಸಿರಬಹುದು. ತಮ್ಮ ವಿರುದ್ಧ ಬಳಸಿದರೆ ಮಾತ್ರ ಅದು ಅವಾಚ್ಯ ಶಬ್ದ ಉಳಿದವರ ವಿರುದ್ಧ ಬಳಸಿದರೆ ಅದು ವಾಚ್ಯ ಎನ್ನಲು ಹೇಗೆ ಸಾಧ್ಯ? ಅವಾಚ್ಯ ಶಬ್ದಗಳ ಬಗ್ಗೆ ಅತೀವ ಕಾಳಜಿ ಇರುವವರು ತಮ್ಮ ನಿಂದನೆಗೆ ಸೇಡು ತೀರಿಸಿಕೊಳ್ಳುವುದಕ್ಕೆ ಮಾತ್ರ ಮುಂದಾಗದೇ ಯಾವುದೇ ಇಸಂ ಗಳಿಗೂ ಒಳಗಾಗದೇ ಯಾರೇ ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತಹ ಸ್ಥಿತಿ ನಿರ್ಮಿಸಲು ಅವರಿಗೆ ಸಾಧ್ಯವೇ? ಅಂತಹ ಸ್ಥಿತಿಯನ್ನು ನಿರ್ಮಿಸಿ ನರಹಂತಕ, ಸಾವಿನ ವ್ಯಾಪಾರಿ ಎಂಬ ಪದಗಳನ್ನು ಫೇಸ್ ಬುಕ್ ನಲ್ಲಿ ಅಲ್ಲ ಮಾಧ್ಯಮಗಳಲ್ಲೂ ಬಳಕೆಯಾಗದಂತೆ ನೋಡಿಕೊಳ್ಳಲಿ, 'ವಿವೇಕ'ವುಳ್ಳವರನ್ನು ಯಾರೂ ಟೀಕಿಸಿದಂತೆ ನೋಡಿಕೊಳ್ಳಲಿ, ಧರ್ಮಗಳ ಬಗ್ಗೆ ಅವಾಚ್ಯ ಪದಗಳನ್ನು ಬಳಸಿ ನಿಂದಿಸುವವರನ್ನು ನಿಯಂತ್ರಿಸಲಿ  ಹಾಗಾಗುವುದಿಲ್ಲ ಎಂದಾದರೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರನ್ನು ಟೀಕಿಸಿದರೆ ಮಾತ್ರ ಚಾರಿತ್ರ್ಯವಧೆಯಾಗುತ್ತದೆಯೇ? ಎಂದು ಕೇಳಬೇಕಾಗುತ್ತದೆ.

Tuesday 6 January 2015

ಶ್ರೀ ಭಾರತೀ ತೀರ್ಥ ಗುರು ಕರಕಮಲ ಸಂಜಾತ....






ಶಂಕರಾಚಾರ್ಯರು ಸ್ಥಾಪಿಸಿದ ದಕ್ಷಿಣಾಮ್ನಾಯ ಪೀಠ ತನ್ನ ಅನೂಚಾನ ಗುರುಪರಂಪರೆಯ ಆಚರಣೆಗಳನ್ನು ಮುಂದಿನ ತಲೆಮಾರಿಗೆ ವಹಿಸುವ ಪ್ರಕ್ರಿಯೆ ಕಾಲ ಸನ್ನಿಹಿತವಾಗಿದೆ. ಆ ಗುರುಪರಂಪರೆಗೆ ನೂತನ ಗುರುಗಳ ಸೇರ್ಪಡೆಯಾಗಲಿದೆ. ಶೃಂಗೇರಿ ಜಗದ್ಗುರುಗಳಾದ ಭಾರತೀ ತೀರ್ಥರು ತಮ್ಮ ಉತ್ತರಾಧಿಕಾರಿಯನ್ನು ಈಗಾಗಲೇ ಅಧಿಕೃತವಾಗಿ ಘೋಷಿಸಿ ಆಗಿದೆ. ಇನ್ನೇನಿದ್ದರೂ ತುರಿಯಾಶ್ರಮ ಸ್ವೀಕಾರವೊಂದೇ ಬಾಕಿ.

ತಿರುಪತಿ-ತಿರುಮಲ ದೇವಸ್ಥಾನ(ಟಿಟಿಡಿ) ವೇದಪಾಠಶಾಲೆಯ ಪ್ರಾಂಶುಪಾಲ ಹಾಗೂ ಧರ್ಮಪ್ರಚಾರ ಪರಿಷತ್ ನ ಯೋಜನಾ ಅಧಿಕಾರಿಯಾಗಿರುವ  ಕುಪ್ಪಾ ಶಿವಸುಬ್ರಹ್ಮಣ್ಯ ಅವಧಾನಿ-ಸೀತಾ ನಾಗಲಕ್ಷ್ಮಿ ದಂಪತಿಗಳ ದ್ವಿತೀಯ ಪುತ್ರರಾದ ಕುಪ್ಪಾ ವೆಂಕಟೇಶ್ವರ ಪ್ರಸಾದ್ ಶರ್ಮಾ(21) ಜ.22, 23ರಂದು ಶೃಂಗೇರಿಯಲ್ಲಿ ಯೋಗಪಟ್ಟ ಪಡೆಯಲಿದ್ದು ಶೃಂಗೇರಿ ಗುರುಗಳ ಉತ್ತರಾಧಿಕಾರಿಯಾಗಲಿದ್ದಾರೆ. ಕುಪ್ಪಾ ಕೌಂಡಿನ್ಯ ಶರ್ಮರು ವೆಂಕಟೇಶ್ವರ ಪ್ರಸಾದ ಶರ್ಮರ ಅಣ್ಣ, ಕೃಷ್ಣಪ್ರಿಯ ಅವರ ಅಕ್ಕ.

ವೆಂಕಟೇಶ್ವರ ಪ್ರಸಾದ ಶರ್ಮರಿಗೆ ಶೃಂಗೇರಿ ಉತ್ತರಾಧಿಕಾರಿಗಳಾಗಲು ಅಗತ್ಯವಿರುವ ವೇದಾಭ್ಯಾಸ, ಕುಟುಂಬದ ವಾತಾವರಣದಲ್ಲೇ ಧಾರಾಳವಾಗಿ ದೊರೆತಿತ್ತು. ಶೃಂಗೇರಿ ಪೀಠಕ್ಕೆ ನಡೆದುಕೊಳ್ಳುವ ಕುಟುಂಬ. ತಿಳುವಳಿಕೆ ಬಂದಾಗಿನಿಂದಲೂ ವೆಂಕಟೇಶ್ವರ ಪ್ರಸಾದ ಶರ್ಮರಿಗೆ ಸನ್ಯಾಸದಲ್ಲಿ ಅತೀವ ಆಸಕ್ತಿ. ಅಜ್ಜ ರಾಮಗೋಪಾಲ ಸೋಮಯಾಜಿಗಳ ಅಣ್ಣ ಕುಪ್ಪಾ ವೆಂಕಟಾಚಲಪತಿ ಸೋಮಯಾಜಿ ಅವರು ಶೃಂಗೇರಿ ಜಗದ್ಗುರುಗಳಾ ದ ಶ್ರೀ ಭಾರತೀ ತೀರ್ಥ ಸ್ವಾಮಿಗಳವರಿಂದ ಆಶೀರ್ವಾದ, ಅಪ್ಪಣೆ ಪಡೆದು ಸನ್ಯಾಸ ಸ್ವೀಕರಿಸಿ ಬ್ರಹ್ಮಾನಂದ ತೀರ್ಥರೆಂಬ ಯೋಗಪಟ್ಟ ಪಡೆದು ವಿಜಯವಾಡದಲ್ಲಿದ್ದರು ಎಂಬುದು ವಿಶೇಷ.

1993ರಲ್ಲಿ ತಿರುಪತಿಯಲ್ಲಿ ಜನಿಸಿದ ಕುಪ್ಪಾ ವೆಂಕಟೇಶ್ವರ ಶರ್ಮಾ ಅವರಿಗೆ 5ನೇ ವಯಸ್ಸಿನಲ್ಲೇ ಬ್ರಹ್ಮೋಪದೇಶ(ಉಪನಯನ)ವಾಗಿತ್ತು. ಸಂಸ್ಕೃತ ಪಂಡಿತರಾಗಿದ್ದ ಅಜ್ಜ ರಾಮಗೋಪಾಲ ವಾಜಪೇಯಯಾಜಿಗಳೇ ವೆಂಕಟೇಶ್ವರ ಶರ್ಮರಿಗೆ ವೇದಾಧ್ಯಯನದಲ್ಲಿ ಪ್ರಥಮ ಗುರುಗಳು. ಸಂಧ್ಯಾವಂದನೆ, ಪ್ರಾಥಮಿಕ ಪಾಠಗಳನ್ನು ಕಲಿತಿದ್ದು ಅಜ್ಜನಿಂದ  ತಂದೆ ಶಿವಸುಬ್ರಹ್ಮಣ್ಯ ಅವಧಾನಿಗಳ ಬಳಿ ವೇದಾಧ್ಯಯನವನ್ನು ಸಂಪೂರ್ಣವಾಗಿ ಮುಂದುವರೆಸಿದರು. ಶಿವಸುಬ್ರಹ್ಮಣ್ಯ ಅವಧಾನಿಗಳು ತಿರುಪತಿಯಲ್ಲೇ ನೆಲೆಸಿದ್ದು ಶಿಷ್ಯ ಸಮೂಹವನ್ನು ಹೊಂದಿದ್ದಾರೆ.

ವಿದ್ವತ್ ಕುಟುಂಬದ ಹಿನ್ನೆಲೆಯಿಂದ ಬಂದಿರುವ ವೆಂಕಟೇಶ್ವರ ಪ್ರಸಾದ್ ಶರ್ಮಾ ಅವರದ್ದು, ಶೃಂಗೇರಿ ಪೀಠಕ್ಕೆ ಹೇಳಿ ಮಾಡಿಸಿದಂತಹ ವ್ಯಕ್ತಿತ್ವ ಎನ್ನಬಹುದು. ವೇದವಿದ್ಯೆಯಲ್ಲಿ ಪ್ರಕಾಂಡ ಪಾಂಡಿತ್ಯ. ಮಿತ ಭಾಷಿ, ಸದಾ ಅಧ್ಯಯನ ನಿರತ, ಲೌಕಿಕ ವ್ಯವಹಾರಗಳಲ್ಲಿ ಹೆಚ್ಚು ಗಮನ ಕೊಡದೇ ಇರುವ ಇಂತಹ ಅಂಶಗಳೇ ಅವರನ್ನು ಶೃಂಗೇರಿ ಪೀಠಾಧಿಪತಿಯ ಉತ್ತರಾಧಿಕಾರಿ ಸ್ಥಾನದವರೆಗೂ ಕರೆತಂದಿದೆ. ಶಾಸ್ತ್ರಗಳಲ್ಲಿ ವೇದಾಂತವೇ ವೆಂಕಟೇಶ್ವರ ಪ್ರಸಾದ ಶರ್ಮ ಅವರ ನೆಚ್ಚಿನ ವಿಷಯ.  ವೆಂಕಟೇಶ್ವರ ಶರ್ಮರಿಗೆ ಭಾಗವತ ಸಪ್ತಾಹದಲ್ಲಿಯೂ ಆಸಕ್ತಿ ಇತ್ತು. ಆಂಧ್ರದಲ್ಲಿ ಕೃಷ್ಣಾನದಿ -ಬಂಗಾಳ ಕೊಲ್ಲಿ ಸಂಗಮವಾಗುವ ಹಂಸಲದೇವಿ ಎಂಬ ಪ್ರದೇಶದಲ್ಲಿ ರಾಮಗೋಪಾಲ ಸೋಮಯಾಜಿಗಳು ನಡೆಸುತ್ತಿದ್ದ ಭಾಗವತ ಸಪ್ತಾಹ ವೆಂಕಟೇಶ್ವರ ಶರ್ಮರು ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಶೃಂಗೇರಿಗೆ ಆಗಮಿಸಿದ ಬಳಿಕ ಜಗದ್ಗುರು ಭಾರತೀ ತೀರ್ಥ ಸ್ವಾಮಿಗಳವರು ದಿನ ನಿತ್ಯ ನಡೆಸುವ ಚಂದ್ರಮೌಳೇಶ್ವರ ಪೂಜೆಯ ಸಂದರ್ಭದಲ್ಲಿ ಕೃಷ್ಣ ಯಜುರ್ವೇದವನ್ನು ಪಾರಾಯಣ ಮಾಡಿ ಜಗದ್ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಿದ್ದಾರೆ.

ಶೃಂಗೇರಿ ಪೀಠದ ನಮ್ಮ ಮುಂದಿನ ಪೀಠಾಧಿಪತಿಗಳು ಶಾಸ್ತ್ರಾಭ್ಯಾಸ ಮಾಡಲು ಇಲ್ಲಿಗೆ ಆಗಮಿಸಿದ್ದು2009ರಲ್ಲಿ.  2006 ರಿಂದ 2009 ಸಮಯದಲ್ಲಿ  ಶಿವಸುಬ್ರಹ್ಮಣ್ಯ ಅವಧಾನಿಗಳು ಧಾರ್ಮಿಕ ಕಾರ್ಯಕ್ರಮಗಳ ನಿಮಿತ್ತ ಶೃಂಗೇರಿ ಮಠಕ್ಕೆ ಆಗಮಿಸುತ್ತಿದ್ದರು. ತಿರುಪತಿಯಲ್ಲಿ ವೇದಾಧ್ಯಯನ ಮಾಡುತ್ತಿದ್ದ  ವೆಂಕಟೇಶ್ವರ ಪ್ರಸಾದರು ತಂದೆಯ ಜೊತೆಯಲ್ಲಿ ಶೃಂಗೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಗದ್ಗುರುಗಳಾಗಿದ್ದ ಭಾರತೀ ತೀರ್ಥ ಸ್ವಾಮಿಗಳವರಿಂದ ಗಾಢ ಪ್ರಭಾವಕ್ಕೊಳಗಾದರು. ಒಂದಿನಿತೂ ತಡ ಮಾಡದೇ ಜಗದ್ಗುರುಗಳ ಸಾನಿಧ್ಯದಲ್ಲೇ ಶಾಸ್ತ್ರಗಳನ್ನು ಅಭ್ಯಸಿಸುವ ಇಂಗಿತ ವ್ಯಕ್ತಪಡಿಸಿದರು. ವಿದ್ಯಾರ್ಥಿಯ ಇಂಗಿತಕ್ಕೆ ಜಗದ್ಗುರುಗಳ ಅಂಕಿತವೂ ದೊರೆಯಿತು.  2009ರ ಜೂನ್ ನಿಂದ ಇತರ ವಿದ್ಯಾರ್ಥಿಗಳೊಂದಿಗೆ ಸಂಸ್ಕೃತ ಭಾಷೆ, ಶಾಸ್ತ್ರಾಧ್ಯಯನವೂ ಪ್ರಾರಂಭವಾಯಿತು. ಶೃಂಗೇರಿಯ ವಿದ್ವಾಂಸರಾದ ತಂಗಿರಾಲ ಶಿವಕುಮಾರ ಶರ್ಮ ಬಳಿ ಸಂಸ್ಕೃತ ಸಾಹಿತ್ಯ ಅಧ್ಯಯನ. ಸಂಸ್ಕೃತ ಪಾಂಡಿತ್ಯ ಪಡೆದ ಬಳಿಕ ಸ್ವತಃ ಜಗದ್ಗುರುಗಳೇ  ತರ್ಕಶಾಸ್ತ್ರವನ್ನು ಕಲಿಸಿದರು.

ಸತತ 5 ವರ್ಷಗಳು ನಡೆದ ಶಾಸ್ತ್ರ ಅಧ್ಯಯನದ ನಂತರ ಗುರುಭಕ್ತಿ, ವೇದಪಾಂಡಿತ್ಯ, ವೈರಾಗ್ಯವೇ ಮೊದಲಾದ  ಜಗದ್ಗುರುಗಳ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡ ವೆಂಕಟೇಶ್ವರ ಪ್ರಸಾದರು ಶೃಂಗೇರಿ ಪೀಠಕ್ಕೆ ಉತ್ತರಾಧಿಕಾರಿಯಾಗಲಿದ್ದಾರೆ.  ಶೃಂಗೇರಿ ಜಗದ್ಗುರುಗಳು ಆಸಕ್ತಿ ವಹಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ ಹಾಗೂ ಬಹುತೇಕ ಸಂದರ್ಭಗಳಲ್ಲಿ ಪೀಠಾಧಿಪತಿಗಳು ಸ್ವತಃ ಪಾಠ ಮಾಡುವ ವಿದ್ಯಾರ್ಥಿಗಳ ತಂಡದಲ್ಲೇ ಒಬ್ಬರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡುತ್ತಾರೆ. ಅಭಿನವ ವಿದ್ಯಾತೀರ್ಥರಿಂದ ಕಲಿತ ಸೀತಾರಾಮಾಂಜನೇಯಲು ಮುಂದೆ ಭಾರತೀ ತೀರ್ಥರಾಗಿ ಶೃಂಗೇರಿಯ ಉತ್ತರಾಧಿಕಾರಿಯಾದರು. ಈಗ ಭಾರತೀ ತೀರ್ಥರಿಂದಲೇ ಶಾಸ್ತ್ರಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಒಬ್ಬರು ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.  ಭಾರತೀ ತೀರ್ಥರಿಗೆ ಅವರ ಗುರುಗಳಾದ ಅಭಿನವ ವಿದ್ಯಾತೀರ್ಥರು ಸನ್ಯಾಸ ನೀಡುವ ಮೂಲಕ ಶೃಂಗೇರಿಯಲ್ಲಿ ಶಿಷ್ಯ ಪರಿಗ್ರಹ ಸಮಾರಂಭ ಬರೊಬ್ಬರಿ 40ವರ್ಷಗಳ ಹಿಂದೆ ನಡೆದಿತ್ತು. ಈಗ ಅಂಥದ್ದೇ ಒಂದು ಐತಿಹಾಸಿಕ ಘಟನೆಗೆ ಶೃಂಗೇರಿ ಭಕ್ತವೃಂದ ಸಾಕ್ಷಿಯಾಗಲಿದೆ.

ಪೀಠಾಧಿಪತಿಗಳಾಗುವವರಿಗೆ ನ್ಯಾಯ, ವಿಶೇಷ, ಸಾಂಖ್ಯ, ಯೋಗ, ಮೀಮಾಂಸ, ವೇದಾಂತವೇ ಮೊದಲಾದ ಭಾರತೀಯ ತತ್ತ್ವಶಾಸ್ತ್ರದ  6 ಬಗೆಯ ದರ್ಶನಗಳ ಸಂಪೂರ್ಣ ಅಧ್ಯಯನ ಕಡ್ಡಾಯ. ಶೃಂಗೇರಿಗೆ ಬಂದ ಆರಂಭದಲ್ಲಿ ನ್ಯಾಯಶಾಸ್ತ್ರ ಅಧ್ಯಯನ ಮಾಡಿರುವ ವೆಂಕಟೇಶ್ವರ ಪ್ರಸಾದರು, ಪ್ರಸ್ತುತ ಮೀಮಾಂಸೆ ವೇದಾಂತ ಶಾಸ್ತ್ರದ ಅಧ್ಯಯನದಲ್ಲಿ ತೊಡಗಿದ್ದಾರೆ. 22,23ರಂದು ನಡೆಯಲಿರುವ ಶಿಷ್ಯ ಸ್ವೀಕಾರ ಸಮಾರಂಭದಲ್ಲಿ ಸ್ವತಃ ಭಾರತೀ ತೀರ್ಥ ಸ್ವಾಮಿಗಳು ಪ್ರಣವ ಮಹಾವಾಕ್ಯೋಪದೇಶ ನೀಡುವ ಮೂಲಕ ಶಿಷ್ಯ ಪರಿಗ್ರಹ ನಡೆಯುತ್ತದೆ. ಶೃಂಗೇರಿ ಗುರುಗಳ ಬಿರುದಾವಳಿಯಲ್ಲಿ ಹೇಳುವ ವ್ಯಾಖ್ಯಾನ ಸಿಂಹಾಸನಾಧೀಶ್ವರ ಎಂಬಂತೆ ಪ್ರಣವ ಮಹಾವಾಕ್ಯೋಪದೇಶದ ನಂತರ ವ್ಯಾಖ್ಯಾನ ಸಿಂಹಾಸನದ ಮೇಲೆ ಉತ್ತರಾಧಿಕಾರಿಗಳನ್ನು ಕೂರಿಸಿ ಸ್ವತಃ ಭಾರತೀ ತೀರ್ಥ ಮಹಾಸ್ವಾಮಿಗಳವರು ಅಭಿಷೇಕ ಮಾಡುತ್ತಾರೆ. ಈ ರೀತಿ ವ್ಯಾಖ್ಯಾನ ಸಿಂಹಾಸನದ ಮೇಲೆ ಯತಿಗಳನ್ನು ಕುಳ್ಳಿರಿಸಿ ಅಭಿಷೇಕ ಮಾಡುವುದು ಎರಡೇ ಬಾರಿ ಒಂದು ಹಿರಿಯ ಗುರುಗಳು ಉತ್ತರಾಧಿಕಾರಿಗೆ ಸನ್ಯಾಸ ನೀಡಿದ ಸಂದರ್ಭದಲ್ಲಿ, ಮತ್ತೊಂದು ಅದೇ ಉತ್ತರಾಧಿಕಾರಿ ಮುಂದೆ ಪೀಠಾರೋಹಣ(ಪಟ್ಟಾಭಿಷೇಕ) ಮಾಡಿದ ಸಂದರ್ಭದಲ್ಲಿ. ಹಿರಿಯ ಶ್ರೀಗಳು ಉತ್ತರಾಧಿಕಾರಿಗೆ ಸನ್ಯಾಸ ನೀಡಿ ವ್ಯಾಖ್ಯಾನ ಸಿಂಹಾಸನ ಕೂರಿಸಿದ ವೇಳೆ ಉತ್ತರಾಧಿಕಾರಿಗೆ ಯೋಗಪಟ್ಟ(ಸನ್ಯಾಸ ಆಶ್ರಮದ ಹೆಸರು)ವೂ ದೊರೆಯಲಿದೆ. ಆ ಕ್ಷಣದಲ್ಲಿ ಹಿರಿಯ ಜಗದ್ಗುರುಗಳಿಗೆ ಪ್ರೇರಣೆಯಾಗುವ  ಭಾರತೀ, ಸರಸ್ವತೀ, ಆಶ್ರಮ, ಗಿರಿ, ತೀರ್ಥ, ಅರಣ್ಯ, ಪರ್ವತ, ಸಾಗರ, ಪುರಿ ವನ ಎಂಬ ದಶನಾಮಗಳಲ್ಲಿ ಒಂದು ಯೋಗಪಟ್ಟವನ್ನು  ನೀಡುತ್ತಾರೆ. ಸನ್ಯಾಸದ ನಂತರವೂ ವೆಂಕಟೇಶ್ವರ ಪ್ರಸಾದರ ಶಿಕ್ಷಣ ಮುಂದುವರೆಯಲಿದ್ದು ಪ್ರಸ್ತುತ ಅಧ್ಯಯನ ಮಾಡುತ್ತಿರುವ ವಿಷಯಗಳೊಂದಿಗೆ ಸನ್ಯಾಸ ಧರ್ಮ, ಗುಪರಂಪರೆ ಬಗ್ಗೆಯೂ ಅಧ್ಯಯನ ನಡೆಯಲಿದೆ. ಶಂಕರಾಚಾರ್ಯರ ಅವಿಚ್ಛಿನ್ನ ಪರಂಪರೆಯ ಉತ್ತರಾಧಿಕಾರಿಯಾಗಿ ನೇಮಗೊಂಡಿರುವ ವೆಂಕಟೇಶ್ವರ ಪ್ರಸಾದ ಶರ್ಮರ ಸನ್ಯಾಸ ದೀಕ್ಷೆಯ ಕಾರ್ಯಕ್ರಮವನ್ನು ಸಮಸ್ತ ಭಕ್ತವೃಂದ ಎದುರು ನೋಡುತ್ತಿದ್ದು, ಜಗದ್ಗುರುಗಳಾದ ಭಾರತೀ ತೀರ್ಥರ ಕರಕಮಲ ಸಂಜಾತರು(ಉತ್ತರಾಧಿಕಾರಿ) ಶೃಂಗೇರಿ ಪೀಠದ 37ನೇ ಪೀಠಾಧಿಪತಿಗಳಿಗೆ ಸಿಗುವ ಯೋಗಪಟ್ಟದ ಬಗ್ಗೆ ಭಕ್ತಾದಿಗಳಲ್ಲಿ ಕುತೂಹಲ ಮೂಡಿದೆ.

||ಸದಾಶಿವ ಸಮಾರಂಭಾಮ್ ಶಂಕರಾಚಾರ್ಯ ಮಧ್ಯಮಾಂ ಅಸ್ಮದಾಚಾರ್ಯ ಪರ್ಯಂತಾಮ್  ವಂದೇ ಗುರು ಪರಂಪರಾಮ್||