Tuesday, 8 November 2016

'ಅರ್ಥಕ್ರಾಂತಿ' ಇದು ವಿಶ್ವಗುರು ಭಾರತದ ಹೊಸ ಕ್ರಾಂತಿ



ಸ್ವಾತಂತ್ರ್ಯದ ನಂತರದಿಂದ ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಕುಸಿತ ಕಾಣದ ಉದಾಹರಣೆಯೇ ಇಲ್ಲ, ಕಾಂಗ್ರೆಸ್ಸೇತರ ಸರ್ಕಾರಗಳಲ್ಲಿ ದೇಶದ ಆರ್ಥಿಕ ಸ್ಥಿತಿ ತೀರಾ ಹದಗೆಡಲಿಲ್ಲವೆಂಬುದನ್ನು ಹೊರತುಪಡಿಸಿದರೆ ಭಾರತದ ಆರ್ಥಿಕ ಸ್ಥಿತಿ-ಗತಿಗಳೂ ಸಹ ತೀರಾ ಹೇಳಿಕೊಳ್ಳುವ ಸ್ಥಿಯಲ್ಲಂತೂ ಇಲ್ಲವೇ ಇಲ್ಲ.

ಅಂದು ಗ್ರಾಮ ರಾಜ್ಯದ ಕನಸು ಕಂಡಿದ್ದ ಗುರುವಿಗೇ ತಿರುಮಂತ್ರ ಹಾಕಿದ ಭಾರತದ ಪ್ರಥಮ ಪ್ರಧಾನಿ  ನೆಹರುರವರ ರಷ್ಯನ್ ಸೊಷಿಯಲಿಸ್ಟ್ ಸಿದ್ಧಾಂತದ ಹೊಡೆತಕ್ಕೆ ಸಿಲುಕಿದರ ಪರಿಣಾಮ ಇಂದು ಭಾರತದ ಅರ್ಥ ವ್ಯವಸ್ಥೆಯೇ ’ಅನ’ರ್ಥವಾಗಿಬಿಟ್ಟಿದೆ. ಕೊನೆಗೆ ರೂಪಾಯಿ ಮೌಲ್ಯ, ರಾಜಕಾರಣಿಗಳ ಅದರಲ್ಲೂ ಪ್ರಮುಖವಾಗಿ ದೇಶದ ವಿತ್ತ ಸಚಿವರ ಕುಟುಂಬ ನಡೆಸುತ್ತಿರುವ ಉದ್ಯಮಕ್ಕೆ ಅನುಕೂಲಕರವಾಗಿ ಪರಿವರ್ತನೆಗೊಳ್ಳುವ ಸ್ಥಿತಿಗೆ  ಬಂದು ನಿಂತಿದೆ ಎಂದರೆ ನಮ್ಮ ದೇಶದ ಅರ್ಥ ವ್ಯವಸ್ಥೆ ಯಾವ ಮಟ್ಟಕ್ಕೆ ತಲುಪಿದೆ ಎಂಬುದು ಸ್ಫಷ್ಟವಾಗುತ್ತದೆ.

ಸುಮ್ಮನೆ ಯಾರನ್ನಾದರೂ ಭಾರತದ ಆರ್ಥಿಕತೆ ಬಗ್ಗೆ ಮಾತಿಗೆಳೆದು ನೋಡಿ... ಅರ್ಥವ್ಯವಸ್ಥೆಗೆ ಮೂಲಭೂತ ಕಂಟಕಗಳಾಗಿರುವ ’ಕಪ್ಪು ಹಣ’, ’ದಾವೂದ್ ಇಬ್ರಾಹಿಂ’ ರಂತಹ ಹಫ್ತಾ ವಸೂಲಿ, ಹೆಚ್ಚಿನ ತೆರಿಗೆ ವಿಧಿಸುವುದು ಇತ್ಯಾದಿಗಳ ಬಗ್ಗೆ ಧಾರಾಳ ಆಕ್ರೋಶ ವ್ಯಕ್ತವಾಗುತ್ತದೆ. ಒಂದಷ್ಟು ಟೀಕೆ ಟಿಪ್ಪಣಿಗಳು ಬಂದು ಹೋಗುತ್ತವೆ. ಇಲ್ಲವೇ ಈ ದೇಶದ ಹಣೆಬರಹವೇ ಇಷ್ಟು ಎನ್ನುತ್ತಾ ಹತಾಶ ಭಾವನೆಯಿಂದ ಕೈಚೆಲ್ಲಿ ಕುಳಿತುಬಿಡುತ್ತಾರೆ. ಭಾರತದ ಮಟ್ಟಿಗೆ ಇದೆಲ್ಲವೂ ಪ್ರತಿಯೊಬ್ಬ ಪ್ರಜೆಯ ಜನ್ಮಸಿದ್ಧ ಹಕ್ಕು ಎಂಬಂತಾಗಿಬಿಟ್ಟಿದೆ.

ಅದೃಷ್ಟವಶಾತ್, 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೇಶವಾಸಿಗಳಿಗೆ, ಭಾರತದ ಭವಿಷ್ಯದ ಬಗ್ಗೆ ಹೊಸದೊಂದು ಭರವಸೆ ಮೂಡುತ್ತಿದೆ. ರಾಜಕೀಯ ಬದಲಾವಣೆಯಾಗುವುದಂತೂ 100ಕ್ಕೆ 100 ಖಾತ್ರಿ ಎಂಬಂತಾಗಿದೆ. ಆದರೆ ರಾಜಕೀಯ ಬದಲಾವಣೆಯಷ್ಟೇ ಸಾಕೇ? ದೇಶದ ಆರ್ಥಿಕ ಸ್ಥಿತಿ ಬದಲಾದರೆ ತಾನೆ ದೇಶದಲ್ಲಿ ಸರ್ವಾಂಗೀಣ ಬದಲಾವಣೆಯಾಗಲು ಸಾಧ್ಯ..... ಲೋಕಸಭಾ ಚುನಾವಣೆಯಾದ ಬಳಿಕ ಸರ್ಕಾರ ಈಗಿರುವ ಸರ್ಕಾರ ಬದಲಾವಣೆಯಾಗುವುದರಲ್ಲಿ ಅನುಮಾನವೇ ಬೇಡ ಎಂಬ ರೀತಿಯ ವಾತಾವರಣ ನಿರ್ಮಾಣವಾಗಿದೆ. ಅಂದರೆ ದೇಶಕ್ಕೆ ಅಂಟಿಕೊಂಡಿದ್ದ ಗಾಂಧಿ, ನೆಹರೂ ಕುಟುಂಬದ ಮುಕ್ತಿ ಪಡೆದು ರಾಜಕಾರಣಕ್ಕೆ ಕಾಯಕಲ್ಪ ನೀಡಿದಂತಾಯಿತು. ಆದರೆ ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ದೃಷ್ಠಿಯಿಂದ ಅದೇ ನೆಹರೂ ಖಾನ್ ದಾನ್ ಸೃಷ್ಠಿಸಿದ್ದ ಅರ್ಥವ್ಯವಸ್ಥೆಗೂ ಕಾಯಕಲ್ಪ ನೀಡುವುದೂ ಅತ್ಯಗತ್ಯ.... ರಾಜಕೀಯ ವಲಯದಲ್ಲೇನೋ ಹೊಸ ಕ್ರಾಂತಿಯುಂಟಾಗಿದ್ದಾಗಿದೆ ಆದರೆ ಅದರೊಂದಿಗೆ ಸಹಕರಿಸಬೇಕಾದ ಆರ್ಥಿಕ ವಲಯದಲ್ಲೂ ಕ್ರಾಂತಿಯಾಗಬೇಕಲ್ಲವೇ...?

ಇತ್ತೀಚಿನ ದಿನಗಳಲ್ಲಿ ಇಂಥದ್ದೊಂದು ಮನಸ್ಥಿತಿ ಗೋಚರವಾಗುತ್ತಿದೆ. ಭಾರತ ವಿಶ್ವಗುರು ಸ್ಥಾನವನ್ನಲಂಕರಿಸಲು ’ಅರ್ಥಕ್ರಾಂತಿ’ಯೇ ಸರಿಯಾದ ಮಾರ್ಗ ಎಂಬ ಮನೋಭಾವನೆ ಪ್ರಲೋಭಿಸತೊಡಗಿದೆ. ಆರ್ಥಿಕ ನೀತಿಗಳಿಗೆ ಕಾಯಕಲ್ಪವಿತ್ತು ದೇಶ ಹಿಂದೆಂದೂ ಕಂಡಿರದ ನೀತಿಗಳನ್ನು ರಚಿಸಬೇಕು ಇದು ಸಾಧ್ಯವಾಗುವುದು ಮುಂದಿನ ಸರ್ಕಾರ ಬಂದಾಗಲೇ ಇದಕ್ಕಾಗಿ ಈಗಾಗಲೇ ಸಿದ್ಧತೆ ನಡೆದಿದ್ದು ಜನತೆಗೆ ಇದರ ಉದ್ದೆಶ ತಲುಪಿಸುವ ನಿಟ್ಟಿನಲ್ಲಿ ಬೆಂಗಳೂರು ಹಾಗೂ ಮಂಗಳೂರುನಗರಗಳಲ್ಲಿ ಇಂಥದ್ದೊಂದು ಪ್ರಯೋಗಾತ್ಮಕ ಕಾರ್ಯಕ್ರಮ ನಡೆದಿದೆ.

ಅರ್ಥಕ್ರಾಂತಿ, ದೇಶಕ್ಕೆ ಶಾಂತಿ: ಅರ್ಥಕ್ರಾಂತಿಯ ದೇಶದ ಆರ್ಥಿಕ ವ್ಯವಸ್ಥೆಯ ತಳಹದಿಯಿಂದ ಉಲ್ಬಣವಾಗಿರುವ ಖಾಯಿಲೆಗೆ ಸಂಜೀವಿನಿ ಸ್ವರೂಪವೇ ಸರಿ.  ತೆರಿಗೆ ಪದ್ಧತಿ ಬದಲಾವಣೆ, ಹೆಚ್ಚಿನ ಮುಖಬೆಲೆ ನೋಟುಗಳ ನಿಷೇಧ, ಹಾಗೂ ನಗದು ವಹಿವಾಟನ್ನು ಅತ್ಯಂತ ಕಡಿಮೆ ಬೆಲೆಗೆ ಇಳಿಸುವುದು... ಇದಿಷ್ಟನ್ನೇ ಪ್ರಧಾನ ಅಂಶಗಳನ್ನಾಗಿ ಪರಿಗಣಿಸಿ ರೂಪುಗೊಂದಿರುವ ಒಂದು ವಿನೂತನ ಆರ್ಥಿಕ ವ್ಯವಸ್ಥೆ. ಮತ್ತೊಂದು ಅರ್ಥದಲ್ಲಿ 1000, 500 ನೋಟುಗಳೇ ಜೀವನ ಎಂದು ಭಾವಿಸಿರುವ ಜೀವನ ಶೈಲಿಯನ್ನು ಸಾಮಾನ್ಯನ ಸ್ಥಿತಿಗೆ ಬದಲಾಯಿಸುವ ಯೋಜನೆ...

ಪ್ರತಿನಿತ್ಯ ನೂರಿನ್ನೂರು ರೂಪಾಯಿಗಾಳನ್ನು ದುಡಿಯುವ ವರ್ಗದ ಜನರೇ ಹೆಚ್ಚಿರುವ ಭಾರತದಲ್ಲಿ ಬಹುತೇಕ ಜನಕ್ಕೆ 1000, 500 ಅನಿವಾರ್ಯವೇನೂ ಅಲ್ಲ, ಆದರೂ ಸಹ ಆರ್.ಬಿ.ಐ 1000 500 ನೋಟುಗಳನ್ನು ಪರಿಚಯಿಸಿದೆ. ಇದರಿಂದ ಆಗುತ್ತಿರುವ ಅನಾಹುತ ಎಂತದ್ದು ಗೊತ್ತೇ? ಯಾವಗ ಹೆಚ್ಚಿನ ಮುಖಬೆಲೆ ನೋಟುಗಳು ಲಭ್ಯವಾಗುತ್ತದೋ ಆಗ ಹಣ ಕಾಸಿನ ವ್ಯವಹಾರ ಬಹುತೇಕ ನಗದು ರೂಪದಲ್ಲೇ ನಡೆಯುತ್ತದೆ. 1000 ರೂ ಮುಖಬೆಲೆಯ 10-11 ನೋಟುಗಳಿದ್ದರೆ ಸಾಕು ಲಕ್ಷಗಟ್ಟಲೆ ವಹಿವಾಟು ನಡೆಸುವವರಿಗೆ, ಅನಾಯಾಸವಾಗಿ ಕೆಲಸ ನಡೆದುಹೋಗುತ್ತದೆ. ಯಾರ ಕೈಯಿಂದ ಯಾರಿಗೆ ದುಡ್ಡು ಹೋಯಿತು ಎಂಬುದರ ಬಗ್ಗೆ  ಅಧಿಕೃತ ಮಾಹಿತಿ ಸಿಗುವುದೇ ಕಷ್ಟ, ಹಲವು ಹಣಕಾಸಿನ ವ್ಯವಹಾರಗಳು ಲೆಕ್ಕಕ್ಕೇ ಸಿಗುವುದಿಲ್ಲ.

1000 ರೂಪಾಯಿ ಮುಖ ಬೆಲೆ ಹೊಂದಿರುವ ನೋಟುಗಳ ಕಂತೆ ಹೋಗಿ ಸಂತರಿಗಾದರೂ ಸೆರಬಹುದು, ಅಥವಾ ಮತಾಂಧ ಭಯೋತ್ಪಾದಿಗಳ ಕಿಸೆಯಲ್ಲೂ ಅಡಗಿ ಕೂರಬಹುದು. ನೋಟಿನ ಮುಖಬೆಲೆ ಹೆಚ್ಚಿದಷ್ಟೂ ಸಹ ಲಕ್ಷ ಲಕ್ಷ ರೂಪಾಯಿಗಳನ್ನು ಸಾಗಿಸುವುದು ಕಷ್ಟದ ಮಾತೇನಲ್ಲ. ಇದರಿಂದ ಮೊಟ್ಟಮೊದಲು ಲಾಭಪಡೆಯುವುದೇ ಭಯೋತ್ಪಾನೆ ಮತ್ತು ಭ್ರಷ್ಟಾಚಾರ. ಭಯೋತ್ಪಾದಕ ಚಟುವಟಿಕೆಗಳಿಗೆ ಬ್ಯಾಂಕ್ ಮೂಲಕವಾಗಲಿ ಅಥವಾ ಇನ್ನಾವುದೋ ಲೆಕ್ಕಕ್ಕೆ ಸಿಗುವಂತಹ ಮಾರ್ಗಗಳಿಂದಾಗಲಿ ಹಣ ಕಳಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ರೂಪಾಯಿಯ ಮುಖಬೆಲೆ ಭಯೋತ್ಪಾದನೆಗೆ ಸದ್ದಿಲ್ಲದೇ ಕುಮ್ಮಕ್ಕು ನೀಡುತ್ತಿದೆ. ಅಥವಾ ರೂಪಾಯಿ ಮುಖಬೆಲೆಯನ್ನು ಗರಿಷ್ಟ 50ರೂಪಾಯಿಗೆ ಇಳಿಕೆ ಮಾಡಬೇಕು ಜೊತೆಗೆ ನಗದು ವಹಿವಾಟಿಗೆ ಮಿತಿ ಹಾಕಬೇಕು   ಒಂದೇ ಬಾರಿ ಹೆಚ್ಚು ಹಣ ಸಾಗಣೆ ಮಾಡಲು ಸಾಧ್ಯವಾಗುವುದಿಲ್ಲ,  ಬೃಹತ್ ಮೊತ್ತದ ಹಣ ವರ್ಗಾವಣೆಗೆ ಬ್ಯಾಂಕ್ ಗಳ ಮೊರೆ ಹೋಗಬೇಕಾಗುತ್ತದೆ. ಸ್ವಾಭಾವಿಕವಾಗಿಯೇ ದೇಶದ್ರೋಹ ಚಟುವಟಿಕೆಗೆ ಕಡಿವಾಣ ಬೀಳುತ್ತದೆ.   ಭಯೋತ್ಪಾದನೆಯೊಂದೇ ಅಲ್ಲ ದೇಶ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯಾಗಿರುವ ಭ್ರಷ್ಟಾಚಾರದ ನಿರ್ಮೂಲನೆ,ನಕಲಿ ನೋಟುಗಳ ಚಲಾವಣೆ ತಡೆಗೂ ಸಹ ಇದೇ ಸೂತ್ರ ಅನ್ವಯಿಸುತ್ತದೆ.

ನಗದು ರೂಪದಲ್ಲಿ  ನೇರ ವಹಿವಾಟು ನಡೆಯುತ್ತಿರುವುದರಿಂದ ಬ್ಯಾಂಕ್ ಗಳ ಆದಾಯಕ್ಕೂ ಸಹ ಹೊಡೆತ ಬೀಳುತ್ತಿದೆ. ಅಂದರೆ ಬ್ಯಾಂಕ್ ಗಳ ಮೇಲೆ ಹೊಡೆದ ಬಿದ್ದರೆ ದೇಶದ ಆರ್ಥಿಕ ಸ್ಥಿತಿಯ ಮೆಲೂ ಪರೋಕ್ಷ ಪರಿಣಾಮ ಇದ್ದೇಇರುತ್ತದೆ.  ದೇಶದ ಆರ್ಥಿಕತೆಗೆ ಪುನರುಜ್ಜೀವನ ಕಲ್ಪಿಸಿಕೊಡಲು ಬ್ಯಾಂಕ್ ಗಳ ಅಭಿವೃದ್ಧಿಯಲ್ಲಿಯೂ ವಿಶೇಷ ಗಮನ ಹರಿಸಬೇಕಾಗುತ್ತದೆ.  ಬ್ಯಾಂಕ್ ಗಳಲ್ಲಿ ವಹಿವಾಟು ಹೆಚ್ಚಾದರೆ ತೆರಿಗೆ ವರಮಾನ, ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ. ಬ್ಯಾಂಕ್ ಗಳಲ್ಲಿನ ವಹಿವಾಟು ಅಧಿಕಗೊಳಿಸಲು ರೂಪಾಯಿಯ ಹೆಚ್ಚಿನ ಮುಖಬೆಲೆ ಇಳಿಕೆ ಮಾಡಿದರೆ ಸಹಜವಾಗಿ ಬೃಹತ್ ಮೊತ್ತ ಪಾವತಿಸಬೇಕಾದರೆ ಬ್ಯಾಂಕ್ ಗಳ ಮೊರೆ ಹೋಗಲೇ ಬೇಕು, ತಮ್ಮ ವಹಿವಾಟಿನ ಮೊತ್ತಕ್ಕೆ ಸರಿಯಾದ ತೆರಿಗೆ ನೀಡಲೇ ಬೇಕು ಎಂಬುದು ಅರ್ಥಕ್ರಾಂತಿಯ ಮುಖ್ಯೋದ್ದೇಶ. ಇದರೊಂದಿಗೆ  ಸಂಗ್ರಹಣೆಯಾದ ತೆರಿಗೆ ಹಣವನ್ನು ಬ್ಯಾಂಕುಗಳು ತನ್ನ ಹಣಕಾಸು ವ್ಯವಹಾರದ ಪಾಲನ್ನು ಕಡಿತಗೊಳಿಸಿ ಕೇಂದ್ರ,ರಾಜ್ಯ ಮತ್ತು ಸ್ಥಳೀಯ ಆಡಳಿತಗಳಿಗೆ ನಿಗದಿ ಪಡಿಸಿ ಪಾಲನ್ನು ವರ್ಗಾಯಿಸುವ ವ್ಯವಸ್ಥೆ ಜಾರಿಗೆಯಾಗಬೇಕಿದೆ. ಇವೆಲ್ಲವೂ ಭಾರತದ ಆರ್ಥಿಕತೆಯ ಪುನರುತ್ಥಾನಕ್ಕೆ ನಾಂದಿಯಾಗಲಿದೆ.

ಅಮೆರಿಕಾ ಮೇಲೆ ಭಯೋತ್ಪಾದಕರು ದಾಳಿ ಮಾಡಿದ ಸಂದರ್ಭದಲ್ಲಿ ರಾಷ್ಟ್ರಕ್ಕೆ ಮುಳುವಾಗಿದ್ದ ಭಯೋತ್ಪಾದನೆಯನ್ನು ನಿರ್ಮೂಲನ ಮಾಡುವ ಉದ್ದೇಶದಿಂದ ಅಮೆರಿಕಾ ಸಹ ಕೈಗೊಂಡಿದ್ದು ಹೆಚ್ಚಿನ ಮುಖ ಬೆಲೆಯ ನೋಟುಗಳನ್ನು ಹಿಂಪಡೆದುಕೊಳ್ಳುವುದು. ಇಂದಿಗೂ ಸಹ ಅಮೆರಿಕಾದಲ್ಲಿ 100 ಡಾಲರ್ ನ ಮುಖಬೆಲೆಯ ನೋಟೇ ಅಂತಿಮ. ಅಮೆರಿಕಾದ ಈ ನಿರ್ಧಾರದಿಂದ ಇಂದು ಅಷ್ಟಾಗಿ ಭಯೋತ್ಪಾದನೆಯ ಬಿಸಿ ತಟ್ಟುತ್ತಿಲ್ಲ.

ಇನ್ನು ತೆರಿಗೆ ವಿಷಯದಲ್ಲಿಯೂ ಭಾರತದ ದೇಶ ಸಾಕಷ್ಟು ಬದಲಾವಣೆ ತರುವುದು ’ಅರ್ಥಕ್ರಾಂತಿ’ಯೋಜನೆಯ ಮುಖ್ಯ ಉದ್ದೇಶ,ಪ್ರಸ್ತುತ 32 ಬಗೆಯ ತೆರಿಗೆ ಪದ್ಧತಿ ಹೊಂದಿರುವ ಭಾರತವನ್ನು ಏಕರೂಪ ತೆರಿಗೆ ಹೊಂದುವಂತೆ ಮಾಡಬೇಕು... ಬ್ಯಾಂಕ್ ನಲ್ಲಿ ಹಣ ತೆಗೆಯುವವರಿಂದ ಒಂದು ಮಿತಿಯವರೆಗೆ ಕನಿಷ್ಠ ತೆರಿಗೆ ವಿಧಿಸಿ ಉಳಿದಂತೆ ಅಂತಾರಾಷ್ಟ್ರೀಯ ವ್ಯಾಪಾರ ನಿಯಂತ್ರಣಕ್ಕಾಗಿ ಸೀಮಾ ಸುಂಕ ವಿಧಿಸುವ ಪದ್ಧತಿ ಮಾತ್ರ ಉಳಿಸಿಕೊಳ್ಳಬೇಕು. ಇವೆಲ್ಲದರ ಪರಿಣಾಮದಿಂದಾಗಿ ಭಾರತದ ಆರ್ಥಿಕತೆಯ ಪುನರುತ್ಥಾನ ಸಾಧ್ಯ. ಹ್ಹಾ... ಇಷ್ಟೆಲ್ಲಾ ಮಾಡಿದ ಮೇಲೆ ಭಾರತ ಸಂಪೂರ್ಣ ಭ್ರಷ್ಟ ಮುಕ್ತವಾಗುತ್ತದೆ ಎಂದು ಖಾತ್ರಿ ಕೊಡಲು ಸಾಧ್ಯವಿಲ್ಲ. ಕಳ್ಳತನ ಮಾಡಲೇ ಬೇಕು ಎಂದು ನಿರ್ಧಸಿದವರನ್ನು ತಡೆಯಲು ಎಷ್ಟು ಪೊಲೀಸರಿದ್ದರೆ ಏನು ಪ್ರಯೋಜನ ಹಾಗೆಯೇ ಭ್ರಷ್ಟಾಚಾರ ನಡೆಸಲೇ ಬೇಕು ಎಂದು ಪಣತೊಟ್ಟರೆ ಅದನ್ನು ತಡೆಗಟ್ಟಲು ಯಾವ ವ್ಯವಸ್ಥೆಯಿಂದಲೂ ಸಾಧ್ಯವಿಲ್ಲ. ಆದರೆ ಒಂದಂತೂ ಸ್ಪಷ್ಟ, ’ಅರ್ಥಕ್ರಾಂತಿ’ ಎಂಬ ಹೊಸ ಅಧ್ಯಾಯದ ಮೂಲಕ ಭಾರತದಲ್ಲಿ ತಲೆದೋರಿರುವ ಭ್ರಷ್ಟಾಚಾರವನ್ನು ಬಹುತೇಕ ನಿರ್ಮೂಲನೆ ಮಾಡಬಹುದು.

ಮತ್ತೊಂದು ಮಜಬೂತಾದ ಸಂಗತಿಯೆಂದರೆ  ರೂಪಾಯಿಯ ಮುಖಬೆಲೆಯನ್ನು ಕಡಿತಗೊಳಿಸುವುದು ಸೇರಿದಂತೆ ಕೆಲ ವಿಷಯಗಳನ್ನು ಹೊರಪಡಿಸಿದರೆ ತೆರಿಗೆ ವಿಷಯದಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಗದ್ದುಗೆ ಏರಲು ಸಿದ್ಧತೆ ನಡೆಸಿರುವ ಬಿಜೆಪಿಯೂ ಸಹ ’ಅರ್ಥಕ್ರಾಂತಿಯ’ ತೆರಿಗೆ ವಿಷಯದಲ್ಲಿ ಸಮಾನ ಮನಸ್ಥಿ ಹೊಂದಿದೆ.  ದೇಶದ ಅರ್ಥವ್ಯವಸ್ಥೆಯನ್ನು ಪುನರ್ ಸ್ಥಾಪಿಸುವ ಅರ್ಥಕ್ರಾಂತಿ ಎಂಬ ಹೊಸ ಪ್ರಸ್ತಾವನೆಯತ್ತ  2014ರ ಲೋಕಸಭೆ ಚುನಾವಣೆಯ ನಂತರ ಅಧಿಕಾರಕ್ಕೆ ಬರಲಿರುವ ಸರ್ಕಾರ ಗಮನ ಹರಿಸಬೇಕಿದೆ. ಕಳೆದ 60 ವರ್ಷಗಳಿಂದ ನೆಹರೂ ಖಾನ್ ದಾನ್ ನೀಡಿರುವ ಅರ್ಥವ್ಯವಸ್ಥೆಯನ್ನೇ ಮುನ್ನಡೆಸಿಕೊಂಡು ಅನರ್ಥ ಮಾಡುವುದಕ್ಕಿಂತಲೂ ಅರ್ಥ ವ್ಯವಸ್ಥೆಗೇ ಮೇಜರ್ ಸರ್ಜರಿ ಮಾಡುವುದು ಒಳಿತು, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಅರ್ಥಕ್ರಾಂತಿ ಬಗ್ಗೆ ನೀಡಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿಯೂ ಜನತೆ ಅರ್ಥಕ್ರಾಂತಿ ಭಾರತಕ್ಕೆ ಅರ್ಹವಾದದ್ದು ಎಂಬ ಅಭಿಪ್ರಾಯ ತಳೆದಿದ್ದಾರೆ. ಅಂದಹಾಗೆ ಅರ್ಥಕ್ರಾಂತಿ ಎಂಬ ಹೊಸ ಕ್ರಾಂತಿ ರುವಾರಿಯನ್ನು ಪರಿಚಯಿಸಿರುವುದು ನಮೋ ಬ್ರಿಗೇಡ್ ಸಂಸ್ಥೆ, ಅನಿಲ್ ಬೋಕಿಲ್ ಅರ್ಥಕ್ರಾಂತಿಯ ರುವಾರಿ.  ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಭಾರತಕ್ಕೆ 2-3  ವರ್ಷಗಳಲ್ಲಿ ಹೊಸ ಆರ್ಥಿಕ ನೀತಿ ಸಿಕ್ಕಿರುತ್ತದೆ .  ಭಾರತ ವಿಶ್ವಗುರು ಸ್ಥಾನದಲ್ಲಿ ನಿಲ್ಲಲು ಪೂರಕವಾಗಿ ಕೆಲಸ ಮಾಡುತ್ತದೆ.

Friday, 15 July 2016

ಅಂದು ಸಿದ್ದರಾಮಯ್ಯನವರನ್ನು ಪ್ರೋತ್ಸಾಹಿಸಿದ್ದಕ್ಕೆ ಹೆಗಡೆ ಅವರ ಆತ್ಮ ಇಂದು ಅದೆಷ್ಟು ನೊಂದುಕೊಳ್ಳುತ್ತಿದೆಯೋ


ನಮ್ಮಲ್ಲಿ ವೀರರನ್ನು ಬಣ್ಣಿಸುವುದಕ್ಕೆ, ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಗುಣವನ್ನು ಬಣ್ಣಿಸಲು "ಹೇಳುವುದನ್ನೇ ಮಾಡುತ್ತಾನೆ" ಎಂಬ ಮಾತನ್ನು ಬಳಸುತ್ತೇವೆ, ಈಗ ಸಿದ್ದರಾಮಯ್ಯನವರನ್ನು ನೋಡಿದರೆ ಹಾಗೆಯೇ ಅನಿಸುತ್ತಿದೆ.  ಈಗ್ಗೆ ಮೂರು ವರ್ಷಗಳ ಹಿಂದೆ ನವನಿರ್ಮಾಣ ವೇದಿಕೆ ಆಯೋಜಿಸಿದ್ದ ರಾಮಕೃಷ್ಣ ಹೆಗಡೆ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ "ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಇದ್ದ ರಾಜಕಾರಣಕ್ಕೂ ಇಂದಿನ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ" ನಾನು ನೂರಕ್ಕೆ ನೂರರಷ್ಟು ಪ್ರಾಮಾಣಿಕನಾಗಿದ್ದೇನೆ ಎಂದು ಹೇಳಿದರೆ ನನಗೆ ನಾನೇ ಸುಳ್ಳು ಹೇಳಿಕೊಂಡಂತೆ" ಎಂಬ ಅಣಿ ಮುತ್ತುಗಳನ್ನು ಉದುರಿಸಿದ್ದರು. ಇತ್ತೀಚಿನ ದಿನಗಳಲ್ಲಿ ಅವರು ಅಂದು ಹೇಳಿದ ಮಾತನ್ನು ಸತ್ಯ ಎಂದು ನಿರೂಪಿಸಲು ಅದೆಷ್ಟು ಕಷ್ಟ ಪಡುತ್ತಿದ್ದಾರೆ ಎಂಬುದು ಬಹುಶಃ ಅವರೊಬ್ಬರಿಗೇ ಗೊತ್ತಿರಬೇಕು.

ಇಂದಿನ ರಾಜಕಾರಣ, ಸರ್ಕಾರದ ಬಗ್ಗೆ ಜನರಲ್ಲಿ ರೇಜಿಗೆ ಹುಟ್ಟಿಸುವಷ್ಟು ತಮ್ಮ ಮಾತನ್ನು ನಿರೂಪಿಸಲು ಸಿದ್ದರಾಮಯ್ಯ ಶ್ರಮಿಸಿದ್ದಾರೆ.  ಅವರೇ ಹೇಳಿದಂತೆ ರಾಜಕೀಯದಲ್ಲಿ  ತಮ್ಮ ಅಸ್ಥಿತ್ವಕ್ಕಾಗಿ ಹಾಗೂ ಹಣಬಲ ತೋಲ್ಬಕ್ಕಾಗಿ ಸಿದ್ದರಾಮಯ್ಯನವರು ತತ್ವ ಸಿದ್ಧಾಂತಗಳೊಂದಿಗೆ ಮಾತ್ರವೇ ಅಲ್ಲ, ಕಾನೂನು ಸುವ್ಯಸ್ಥೆ, ಆಡಳಿತ, ಅಧಿಕಾರಿಗಳ ಜೀವದ ರಕ್ಷಣೆಯೊಂದಿಗೂ ರಾಜೀ ಮಾಡಿಕೊಂಡುಬಿಟ್ಟಿದ್ದಾರೆ!. ತಮ್ಮ ಪಕ್ಷಕ್ಕೆ ಫಂಡ್ ನೀಡುವ ಸಚಿವನ ಕಪಿಮುಷ್ಠಿಯಲ್ಲಿ ಸಿಲುಕಿಹಾಕಿಕೊಂಡ ಅಧಿಕಾರಿಗಳು ಸಾವಿಗೆ ಶರಣಾಗುತ್ತಿದ್ದಾರೆ ಎಂಬ ಬಗ್ಗೆ ಸಿದ್ದರಾಮಯ್ಯನವರಿಗೆ ಅರಿವಿಲ್ಲದೆಯೇ ಇಲ್ಲ. ಆದರೆ ಏನು ಮಾಡೊದು, ಸಿದ್ದರಾಮಯ್ಯ ತಮ್ಮನ್ನು ತಾವು, ತಮ್ಮ ಸಿದ್ಧಾಂತಗಳನ್ನು ಹಣಕ್ಕಾಗಿ ಮಾರಿಕೊಂಡು ಬಿಟ್ಟಿದ್ದೇನೆ ಅಂತಾ ಮೂರು ವರ್ಷಗಳ ಹಿಂದೆಯೇ ಘೋಷಿಸಿಬಿಟ್ಟಿದ್ದಾರಲ್ಲಾ?.

ಇಷ್ಟಕ್ಕೂ ಸಿದ್ದರಾಮಯ್ಯನವರು ಸಹ ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಲ್ಲೇ ಇದ್ದ ವ್ಯಕ್ತಿ. ಸಚಿವರಾಗುವುದಕ್ಕೂ ಮುನ್ನ ಸಿದ್ದರಾಮಯ್ಯನವರು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದರು. ಹೆಗಡೆಯವರು ಪ್ರೋತ್ಸಾಹಿಸಿದ ಸಿದ್ದರಾಮಯ್ಯನವರಿಗೇಕೆ ರಾಮಕೃಷ್ಣ ಹೆಗಡೆಯವರ ಆಡಳಿತ ಸ್ಪೂರ್ತಿಯಾಗಲಿಲ್ಲ? ಇಂದು ಮಾತೆತ್ತಿದರೆ ರಾಮಕೃಷ್ಣ ಹೆಗಡೆವರ, ಅರಸು ಅವರ legacy claim ಮಾಡುತ್ತಾರಲ್ಲಾ ಇವರಿಗೆ ಅಂತಹ ನೈತಿಕತೆಯಾದರೂ ಎಲ್ಲಿದೆ? ಸಿದ್ದರಾಮಯ್ಯನವರು ಅಧಿಕಾರಿಗಳೊಂದಿಗೆ ಒರಟಾಗಿ ನಡೆದುಕೊಳ್ಳುತ್ತಾರೆ ಎಂಬ ಅಭಿಪ್ರಾಯವಿದೆಯಾದರೂ, ಸ್ವತಃ ಯಾವುದೇ ಅಧಿಕಾರಿಯ ಸಾವಿಗೆ ಕಾರಣರಾದವರಲ್ಲ. ಆದರೆ ಪಕ್ಷಕ್ಕೆ ಹಣದ ಹೊಳೆ ಹರಿಸುವ ಅವರ ಸಚಿವರ ಸಂಪುಟದ ಸಚಿವನೊಬ್ಬ ಕಳೆದ 2 ವರ್ಷಗಳಲ್ಲಿ ಅದೆಷ್ಟು ಅಧಿಕಾರಿಗಳ ಸಾವಿಗೆ, ಕಿರುಕುಳಕ್ಕೆ ಕಾರಣವಾಗಿಲ್ಲ? ಶುದ್ಧ ರಾಜಕಾರಣಕ್ಕೆರಾಮಕೃಷ್ಣ ಹೆಗಡೆ ಅವರನ್ನು ಉದಾಹರಣೆ ನೀಡುವ ಸಿದ್ದರಾಮಯ್ಯನವರು ಸಂಪುಟದ ಸಚಿವರ ವಿರುದ್ಧ ಕೊಲೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಕೇಳಿಬಂದಾಗ ಯಾವುದೇ ಮುಲಾಜಿಗೂ ಒಳಗಾಗದೇ ಅದೇ ರಾಮಕೃಷ್ಣ ಹೆಗಡೆಯವರ ನಡೆಯನ್ನೇಕೆ ಅನುಸರಿಸುವುದಿಲ್ಲ?

ನಿಮಗೆ 1987 ರ ಆಗಸ್ಟ್ 16 ರಂದು ನಡೆದ ವಕೀಲ ಅಬ್ದುಲ್ ರಶೀದ್ ಅಪಹರಣ, ಹತ್ಯೆಯ ಪ್ರಕರಣ ನೆನಪಿರಬಹುದು. ಕೋಲಾರದಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಿಸುವುದಕ್ಕೆ ಅನುಮತಿ ಪಡೆಯುವ ವಿಚಾರಕ್ಕೆ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದ ಕೇರಳದ ಪಿ. ಸದಾಶಿವನ್ ಹಾಗೂ ಅಂದು ಹೆಗಡೆ ಅವರ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಆರ್.ಎಲ್ ಜಾಲಪ್ಪ ಅವರ ನಡುವೆ ಪೈಪೋಟಿ ನಡೆದು ತಿಕ್ಕಾಟ ಪ್ರಾರಂಭವಾಗುತ್ತೆ. ಕೊನೆಗೆ ಸದಾಶಿವನ್ ಅವರ ಪ್ರಕರಣವನ್ನು ನಿರ್ವಹಿಸುತ್ತಿದ್ದ ವಕೀಲ ಅಬ್ದುಲ್ ರಶೀದ್ ನ್ನು ಅಪಹರಣ ಮಾಡಿ ಹತ್ಯೆ ಮಾಡಲಾಗುತ್ತದೆ. ರಶೀದ್ ಕೊಲೆಯ ಆರೋಪ ಅಂದಿನ ಗೃಹ ಸಚಿವ ಆರ್ ಎಲ್ ಜಾಲಪ್ಪ, ಓರ್ವ ಐಪಿಎಸ್ ಅಧಿಕಾರಿ ಹಾಗೂ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳ ಕೊರಳಿಗೆ ಸುತ್ತಿಕೊಳ್ಳುತ್ತದೆ. ಹತ್ಯೆಯ ಪ್ರಕರಣದಲ್ಲಿ ಆರ್ ಎಲ್ ಜಾಲಪ್ಪ, ಹಾಗೂ ಆರೋಪಿಗಳಾದ ಪೊಲೀಸ್ ಅಧಿಕಾರಿಗಳನ್ನು ನಿರಪರಾಧಿಗಳೆಂದು ಕೋರ್ಟ್ ತೀರ್ಪು ಪ್ರಕಟಿಸಿದ್ದು ಆ ನಂತರದ ಮಾತು. ಆದರೆ ಇದಕ್ಕೂ ಮುನ್ನ ಅರೋಪ ಕೇಳಿಬಂದ ತಕ್ಷಣವೇ, ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರು ಯಾವುದೇ ಮುಲಾಜಿಗೂ ಒಳಗಾಗದೇ ಜಾಲಪ್ಪ ನವರಿಂದ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸುತ್ತಾರೆ ಹಾಗೂ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುತ್ತಾರೆ. ಈಗ ಹೇಳಿ ಐಎಎಸ್ ಅಧಿಕಾರಿ ಡಿ.ಕೆ ರವಿ ನಿಗೂಢ ಸಾವು ಪ್ರಕರಣ, ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣ, ಡಿವೈಎಸ್ ಪಿ ಅನುಪಮಾ ಶೆಣೈ ಗೆ ಕಿರುಕುಳ ನೀಡಿದ ಪ್ರಕರಣಗಳಲ್ಲಿ ಸಿದ್ದರಾಮಯ್ಯ ಹೇಗೆ ನಡೆದುಕೊಳ್ಳಬೇಕಿತ್ತು? ಒಮ್ಮೆಯಾದರೂ ಸಿದ್ದರಾಮಯ್ಯನವರು ಆರೋಪ ಕೇಳಿಬಂದ ಸಚಿವರಿಂದ ರಾಜೀನಾಮೆ ಪಡೆದು ಸಿಬಿಐ ತನಿಖೆಗೆ ಸ್ವತಃ ಆದೇಶಿಸಿ ಸರ್ಕಾರದ ಘನತೆಯನ್ನು ಉಳಿಸಿದ ಉದಾಹರಣೆಗಳಿವೆಯಾ? ಸದನದಲ್ಲಿ ಉತ್ತರಿಸುತ್ತಾ,  ನಾನು ಈ ವರೆಗೂ 8 ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಿದ್ದೇನೆ, ನಾವು ವಿಪಕ್ಷದಲ್ಲಿ ಬೇಡಿಕೆ ಇಟ್ಟಾಗ ಬಿಜೆಪಿಯವರು ಒಂದೇ ಒಂದು ಪ್ರಕರಣವನ್ನು ಸಿಬಿಐಗೆ ಒಪ್ಪಿಸಿಲ್ಲ ಎಂದು ಲೆಕ್ಕ ಕೊಡುತ್ತೀರಲ್ಲಾ, ಡಿಕೆ ರವಿ ಅವರ ಪ್ರಕರಣದಲ್ಲಿ ಸಾಕಷ್ಟು ಜನಾಂದೋಲನವೇ ನಡೆದು, ಇನ್ನೇನು ಜನರ ಸಹನೆಯ ಕಟ್ಟೆಯೊಡೆಯುತ್ತದೆ ಎಂಬಂತಾದಾಗ ಸಿಬಿಐ ಗೆ ವಹಿಸಿದ ನಿಮ್ಮ ಸರ್ಕಾರ ಸಂವೇದನೆಯೇ ಇಲ್ಲದಂತೆ ನಡೆದುಕೊಂದಿರುವ ಬಗ್ಗೆ ಎಂದಾದರೂ ಪ್ರಶ್ನಿಸಿಕೊಂಡಿದ್ದೀರಾ ಸಿದ್ದರಾಮಯ್ಯನವರೇ? ಒಂದು ಪ್ರಕರಾಣವನ್ನು ಸಿಬಿಐಗೆ ವಹಿಸುವುದು ಅಥವಾ ವಹಿಸದೇ ಇರುವ ಮಾತು ಹಾಗಿರಲಿ, ಪ್ರತಿ ಬಾರಿಯೂ ರಾಜ್ಯದಲ್ಲಿ ಅಧಿಕಾರಿಗಳ ನಿಗೂಢ ಸಾವು, ಆತ್ಮಹತ್ಯೆ ಪ್ರಕರಾಣಗಳಲ್ಲಿ ಸರ್ಕಾರ ತೋರುವ ಸಂವೇದನೆ ಮುಖ್ಯವಾಗುತ್ತದೆ,  ಸಂವೇದನೆಯನ್ನೇ ಕಳೆದುಕೊಂಡ ನಿಮ್ಮಂತಹ ನಾಯಕರು ಸರ್ಕಾರದ ಮುಖ್ಯಸ್ಥರಾದಾಗ ರಾಜಕಾರಣ ತನ್ನ ಹೇಗೆ ತಾನೆ ಮೌಲ್ಯಗಳನ್ನು ಉಳಿಸಿಕೊಳ್ಳಲು ಸಾಧ್ಯ?

ಇನ್ನು ನನ್ನ ಮಗನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದವರನ್ನು ಸುಮ್ಮನೆ ಬಿಡಕ್ಕಾಗುತ್ತಾ? ಅಂತಾ ಸುಭಗರಂತೆ ಕೇಳುತ್ತಾರಲ್ಲಾ? ಮೆಡಿಕಲ್ ಸೀಟು(ಎಂಡಿ) ಕೊಡಿಸಿದ್ದಕ್ಕೆ ಪ್ರತಿಯಾಗಿ ಲಂಚಪಡೆದುಕೊಳ್ಳಲಾಗಿದೆ ಎಂದು ಎ.ಕೆ. ಸುಬ್ಬಯ್ಯನವರು ಆರೋಪ ಮಾಡಿದಾಗ ರಾಮಕೃಷ್ಣ ಹೆಗಡೆಯವರು ತಮ್ಮ ಸ್ವಂತ ಮಗನ ವಿರುದ್ಧವೇ ತನಿಖೆಗೆ ಆದೇಶ ಮಾಡಿದ್ದರು. ಸಹೋದರ ಗಣೇಶ್ ಹೆಗಡೆ ಅಂತರ್ರಾಜ್ಯ ಅಕ್ಕಿ ಸಾಗಾಣೆ, ದಾಸ್ತಾನಿನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದಾಗ ಅವರ  ವಿರುದ್ಧವೂ ತನಿಖೆ ಮಾಡಿಸಿದರು. ಹೇಳಿ ಸಿದ್ದರಾಮಯ್ಯನವರೇ "ನನ್ನ ಮಗನ ವಿರುದ್ಧ ವಿನಾಕಾರಣ ದೂರು ದಾಖಲಿಸಿದರೆ ಅವರನ್ನು ಸುಮ್ಮನೆ ಬಿಡೋಕಾಗುತ್ತಾ? ಅಂತ ಹೇಳುವ ಮೂಲಕ ನಿಮ್ಮ ಮಗನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಇನ್ಸ್ ಪೆಕ್ಟರ್ ವಿರುದ್ಧ ಸೇಡು ತೀರಿಸಿಕೊಳ್ಳುವ ಮಾತನಾಡಲು ನಿಮಗೆ ನಾಚಿಕೆಯಾಗುವುದಿಲ್ಲವಾ? ಹೆಗಡೆ ನೇತೃತ್ವದಲ್ಲಿ ಪಿಜಿಆರ್ ಸಿಂಧ್ಯಾ, ಜೀವರಾಜ್ ಆಳ್ವ, ರಾಚಯ್ಯ, ಬಿ. ಸೋಮಶೇಖರ್ ರಂತಹ ನಾಯಕರೊಂದಿಗೆ ಬೆಳೆದ ಸಿದ್ದರಾಮಯ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದಾಗ ಸಿದ್ದರಾಮಯ್ಯನವರೂ ಸೇರಿದಂತೆ ಕಾಂಗ್ರೆಸ್ ನಲ್ಲಿದ್ದ ಸಚಿವ ಸಂಪುಟದ ಬಹುತೇಕ ಜನರು ಮೂಲತಃ ಜನತಾ ಪರಿವಾದವರಾಗಿದ್ದರು ಹಾಗಾಗಿಯೇ ಕಾಂಗ್ರೆಸ್ ನಲ್ಲಿ ಸ್ವಲ್ಪ ಮಟ್ಟಿಗೆ ಮೂಲ ಕಾಂಗ್ರೆಸ್ಸಿಗ, ವಲಸೆ ಕಾಂಗ್ರೆಸ್ಸಿಗ ಎಂಬ ಭಿನ್ನಮತವೂ ಪ್ರಾರಂಭವಾಗಿತ್ತು. ಅಷ್ಟೇ ಅಲ್ಲದೇ ಹೆಗಡೆ ಸಂಪುಟದಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದ, ಸಿದ್ದರಾಮಯ್ಯನವರ ಸರ್ಕಾರದ ಮೇಲೆ ಅಪಾರ ನಿರೀಕ್ಷೆಗಳಿದ್ದವು.

ಆದರೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಹೆಗಡೆಯವರೇ ಪ್ರೋತ್ಸಾಹಿಸಿದ್ದ ವ್ಯಕ್ತಿಯೊಬ್ಬ ಹೆಗಡೆಯವರೇ ಪ್ರಾರಂಭಿಸಿದ ಲೋಕಾಯುಕ್ತವನ್ನು ಕತ್ತುಹಿಸುಕಿ ಸಾಯಿಸಿದರು, ಗೂಂಡಾಗಳನ್ನು ಮಟ್ಟಹಾಕಲು ಹೆಗಡೆಯವರು ಗೂಂಡಾ ವಿರೋಧಿ ಕಾಯ್ದೆ ತಂದರೆ, ಸಿದ್ದರಾಮಯ್ಯನವರು ಪೊಲೀಸರನ್ನು, ದಕ್ಷಅಧಿಕಾರಿಗಳನ್ನು ಮುಗಿಸಲು ಸಚಿವ ಸಂಪುಟದಲ್ಲೇ ಗೂಂಡಾಗಳನ್ನು ಬೆಳೆಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಮೂಲ ಕಾಂಗ್ರೆಸ್ಸಿಗರನ್ನೂ ನಾಚಿಸುವಂತೆ ಇಂದು ರಾಜಕೀಯ ಅಸ್ಥಿತ್ವ, ಲಾಭಕ್ಕಾಗಿ, ಪಕ್ಷಕ್ಕೆ ಹಣ ಪೂರೈಕೆ ಮಾಡುವ, ಅಧಿಕಾರಿಗಳನ್ನು ಸಾವಿನ ಕೂಪಕ್ಕೆ ತಳ್ಳುವ ಪಕ್ಕದ ರಾಜ್ಯದಿಂದ ಇಲ್ಲಿಗೆ ಬಂದು ಆಶ್ರಯ ಪಡೆದಿರುವ ಸಚಿವನ ಪರ ವಕಾಲತ್ತು ವಹಿಸಿಕೊಳ್ಳುತ್ತಿರುವುದನ್ನು ನೋಡಿದರೆ, ರಾಮಕೃಷ್ಣ ಹೆಗಡೆ ಅವರ ಆತ್ಮ ಇಂದು ಅದೆಷ್ಟು ನೊಂದಿರಬೇಡ? ಅಂದು ಸಚಿವರ ವಿರುದ್ಧ ಆರೋಪ ಕೇಳಿಬಂದಾಗ ಮುಲಾಜಿಲ್ಲದೇ ಸಂಪುಟದಿಂದ ವಜಾಗೊಳಿಸುತ್ತಿದ್ದ ಎದೆಗಾರಿಕೆ ಹೊಂದಿದ್ದ ನಾಯಕನ ಆಡಳಿತವನ್ನು ನೋಡಿದ್ದ ರಾಜ್ಯದ ಜನತೆ, ಇಂತಹ ದರಿದ್ರ, ಉಸಿರುಗಟ್ಟಿಸುವ ಆಡಳಿತದ ಬಗ್ಗೆ ಅದೆಷ್ಟು ರೋಸಿಹೋಗಿದ್ದಾರೋ, ಛೆ!.....

also read @: http://bit.ly/29QKpQ5(Published in www.kannadaprabha.com)

Sunday, 20 March 2016

ಕಾಂಗ್ರೆಸ್-ಕಮ್ಯುನಿಷ್ಟರ ಮೈತ್ರಿ, ಬಂಗಾಳಕ್ಕೆ ಸಿಕ್ಕಿದ್ದು ಕರಾಳ ರಾತ್ರಿ

ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಕೊಲೆ, ದಾಳಿ
_ಭಯೋತ್ಪಾದನೆಗೆ ಧರ್ಮವಿಲ್ಲ- ಕಮ್ಯುನಿಷ್ಟರು
26/11ರ ಮುಂಬೈ ದಾಳಿ, ದಾಳಿ ಮಾಡಿದ್ದು ಇಸ್ಲಾಮ್ ನ ಭಯೋತ್ಪಾದಕರು
-ಭಯೋತ್ಪಾದನೆಗೆ ಧರ್ಮವಿಲ್ಲ- ಬುದ್ಧಿಜೀವಿಗಳು, ಕಮ್ಯುನಿಷ್ಟರು
ಉಗ್ರ ಯಾಕೂಬ್ ಮೆಮನ್ ಗೆ ಗಲ್ಲು ಶಿಕ್ಷೆ
_ಭಯೋತ್ಪಾದನೆಗೆ ಧರ್ಮವಿಲ್ಲ!

ಭಾರತದಲ್ಲಾಗಲೀ ಅಥವಾ ವಿದೇಶಗಳಲ್ಲಿ ಇಸ್ಲಾಂ ನ ಮೂಲಭೂತವದಿಗಳು, ಮತಾಂಧ ಉಗ್ರರು ದಾಳಿ ನಡೆಸಿದಾಗಲೆಲ್ಲಾ ’ಭಯೋತ್ಪಾದನೆಗೆ ಧರ್ಮವಿಲ್ಲ’ವೆಂಬ ಹೇಳಿಕೆ (ready made statement) ಸಿದ್ಧವಾಗಿರುತ್ತದೆ. ಇಂಥದ್ದೊಂದು ಹೇಳಿಕೆಯನ್ನು coin(ಪರಿಚಯಿಸಿದ್ದೇ)ಮಾಡಿದ್ದೇ ಈ ಕಮ್ಯುನಿಷ್ಟರು ಹಾಗೂ ಕಮ್ಯುನಿಷ್ಟರ ಕೃಪಾಪೋಷಿತ ಬುದ್ಧಿಜೀವಿಗಳು. ಭಯೋತ್ಪಾದಕರ ದಾಳಿ ನಡೆದಾಗಲೆಲ್ಲಾ ಇವರಿಂದ ಇಂಥಹ ಹೇಳಿಕೆ ಬರುವುದಾದರೂ ಯಾಕೆ ಅಂದುಕೊಂಡಿದ್ದೀರಿ? ಇಸ್ಲಾಮ್ ಗೆ ಪರ್ಯಾಯವಾದ, ಅಂಥಹದ್ದೇ ಒಂದು ಭಯೋತ್ಪಾದನೆಯನ್ನು ಇವರೂ ಪರಿಚಯಿಸಿದ್ದಾರೆ ಆದ್ದರಿಂದ…

ಇಸ್ಲಾಮ್, ಭಯೋತ್ಪಾದನೆಯ ಹೊಸ ಆವಿಷ್ಕರವನ್ನು ಏನಾದರೂ ಕಲಿಯುವುದಿದ್ದರೆ ಅದು ಕಮ್ಯುನಿಷ್ಟರಿಂದ ಕಲಿಯಬೇಕು, ಭಯೋತ್ಪಾದನೆಯ ನವೀನ ಮಾದರಿಯ ಬಗ್ಗೆ ಪಾಠ ಹೇಳಿಕೊಡುವ ಗುರುವಿನ ಮಟ್ಟಕ್ಕೆ ಕಮ್ಯುನಿಷ್ಟರು ಬೆಳೆದಿದ್ದಾರೆ. ಅಂಥಹ ಭಯೋತ್ಪಾದನೆಯ ಮಾದರಿಯನ್ನು ಪಶ್ಚಿಮ ಬಂಗಾಳಕ್ಕೆ ಸತತ 20 ವರ್ಷಗಳ ಕಾಲ ಕಾಣಿಸಿರುವುದು ಕಾಮ್ರೆಡ್ ಗಳ ಹೆಗ್ಗಳಿಕೆ! ಇಸ್ಲಾಮ್ ಧರ್ಮದ ಮತಾಂಧರು ಮನುಷ್ಯತ್ವವನ್ನೇ ಮರೆತು ಕಾಫಿರರ ಕುತ್ತಿಗೆಗೆ ಕತ್ತಿ ಇಟ್ಟು ತಾನು ಹೇಳಿದಂತೆ ನಡೆಯಬೇಕೆಂದರೆ, ಕಾಮ್ರೆಡ್ ಗಳು ತಲೆ ಸವರುತ್ತಲೇ ಭಯೋತ್ಪಾದನೆ ಮಾಡಿರುತ್ತಾರೆ. ಮಾನವಿಯತೆಯ ಮೌಲ್ಯಗಳನ್ನು ಹೇಳಿಕೊಂಡೇ ಮಾರಣಹೋಮ ನಡೆಸುತ್ತಾರೆ. ಬಡತನದ ಹೆಸರಿನಲ್ಲೇ ಕಾಮ್ರೆಡ್ ಗಳು ತಮ್ಮ ಬಂಗಲೆಗಳನ್ನು ಕಟ್ಟಿಕೊಳ್ಳುತ್ತಾರೆ. ಅವರು ಹೇಳುವುದನ್ನು ಕೇಳದೇ ಇದ್ದರೆ, ಅವರ ಪಕ್ಷಕ್ಕೆ  ಮತ ಹಾಕದೇ ಇದ್ದರೆ, ಪ್ರಜಾಪ್ರಭುತ್ವ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿ ಕೈಯನ್ನೋ ಕಾಲನ್ನೋ ತುಂಡರಿಸುತ್ತಾರೆ. ಇವೆಲ್ಲಾ ಸುಖಾಸುಮ್ಮನೆ ಮಾಡುತ್ತಿರುವ ಆರೋಪಗಳಲ್ಲ. ಕಪೋಲಕಲ್ಪಿತವಂತೂ ಅಲ್ಲವೇ ಅಲ್ಲ. ಒಂದು ಕಾಲದಲ್ಲಿ ತಾನು ಇಂದು ಚಿಂತಿಸಿದ್ದನ್ನು ಮುಂದೊಂದು ದಿನ ಸಮಸ್ತ ಭಾರತ ಚಿಂತಿಸುತ್ತದೆ ಎಂಬ ಶ್ರೇಷ್ಠತೆ ಹೊಂದಿದ್ದ ಪಶ್ಚಿಮ ಬಂಗಾಳಕ್ಕೆ ಕಾಮ್ರೆಡ್ ಗಳು ಕಾಣಿಸಿದ ಕರಾಳ ರಾತ್ರಿಗಳು ಇವೆಲ್ಲವನ್ನೂ ಹೇಳುತ್ತವೆ.

ಕಮ್ಯುನಿಷ್ಟ್ ಕೈಗೆ ಸಿಲುಕಿ 1970ರಲ್ಲಿ ಹತ್ಯೆಗೀಡಾದ ಬರ್ದಮಾನ್ ನ ಸೈನ್ ಬಾರಿ ಕುಟುಂಬದ ಮೂವರು ಸಹೋದರರ ರಕ್ತದ ಕಲೆಗಳು, ಪಶ್ಚಿಮ ಬಂಗಾಳಕ್ಕೆ ಕಾಮ್ರೆಡ್ ಗಳು ಹಾಗೂ ಕಾಮ್ರೆಡ್ ಗಳ ಪಟಾಲಂ ಕರುಣಿಸಿದ ಕರಾಳ ರಾತ್ರಿಗಳನ್ನು ಸಾರಿ ಹೇಳುತ್ತವೆ. ಉಗ್ರತ್ವದಲ್ಲಿ ವರ್ಣನಾತೀತ ಸಾಹಸಗಾಥೆ ಹೊಂದಿರುವವರು ತಮ್ಮ ಪಾಲನ್ನು ಬಿಟ್ಟು  ಭಯೋತ್ಪಾದನೆಯ ಹೊಣೆಯನ್ನು ಹೇಗೆ ತಾನೆ ನಿರ್ದಿಷ್ಟ ಜನರಿಗೆ ಮೀಸಲಾಗಿಸಲು ಒಪ್ಪುತ್ತಾರೆ ಹೇಳಿ?
ಅಲ್ಲದೇ ಮತ್ತೇನು?

ದಿ ಸ್ಟೇಟ್ಸ್ ಮನ್ ಹಾಗೂ ಪಶ್ಚಿಮ ಬಂಗಾಳದ ಪತ್ರಕರ್ತರಾಗಿದ್ದ ಉದಯನ್ ನಂಬೂದರಿ ಬರೆದಿರುವ ’ಬೆಂಗಾಲ್ಸ್ ನೈಟ್ ವಿತೌಟ್ ಎಂಡ್’ ಪುಸ್ತಕದಲ್ಲಿ, ಕಾಮ್ರೆಡ್ ಗಳ ಕ್ರೌರ್ಯ, ಮಾನವೀಯತೆಯ ಬಗ್ಗೆಯೇ ಉಸಿರೆಂದು ಪೋಸು ಕೊಡುವ ಕಮ್ಯುನಿಷ್ಟರ ಕಪಟತೆ ಮುಖಕ್ಕೆ ರಾಚುತ್ತದೆ. “ಮಾನವೀಯತೆಯ ಬಗ್ಗೆ ಮಾತನಾಡುತ್ತಲೇ ಮಾರಣಹೋಮಗಳನ್ನು ನಡೆಸಿದ್ದೇವೆ, ಸಮಾನತೆ ಬಗ್ಗೆ ಮಾತನಾಡುತ್ತಲೇ ಭೂಮಿಯನ್ನು ಕಬಳಿಸಿ ಉಳ್ಳವರನ್ನೂ, ಉಳ್ಳವರ ಮೇಲೆ ಅವಲಂಬಿತರಾದ ಇಲ್ಲದವರನ್ನೂ ಬೀದಿಗೆ ತಂದಿದ್ದೇವೆ”. ನಮ್ಮ ಪಕ್ಷಕ್ಕೆ ಓಟು ಹಾಕದವರನ್ನು ಬೆದರಿಸಿದ್ದೇವೆ, ಆದ್ದರಿಂದಲೇ ಭಯೋತ್ಪಾದನೆಗೆ ಧರ್ಮವಿಲ್ಲ” ಎಂದು ಕಮ್ಯುನಿಷ್ಟ್ ಪ್ರಣೀತ ಭಯೋತ್ಪಾದನೆಯನ್ನು ನೇರಾ ನೇರವಾಗಿ ಹೇಳುತ್ತಲೇ ಇದ್ದಾರೆ. ಆದರೆ 2 ದಶಕಗಳ ಕಾಲ ಬಂಗಾಳದ ಜನತೆಗೆ ಅಸಹಾಯಕತೆಯಿಂದಲೂ ಮಂಕುಬುದ್ಧಿಯಿಂದಲೋ ಅರ್ಥವಾಗಿರಲಿಲ್ಲ, ಬಂಗಾಳದ ಹಾಗೆಯೇ ಇದು ಭಾರತದ ಜನರಿಗೂ ಅರ್ಥವಾಗುತ್ತಿಲ್ಲ.
ಕಮ್ಯುನಿಷ್ಟರ ಕ್ರೌರ್ಯವನ್ನು ವರ್ಣಿಸಲು ಸೈನ್ ಬಾರಿ ಕುಟುಂಬದ ಮೂವರು ಸಹೋದರರ ಮಾರಣಹೋಮದ ಕಥೆ, ಅಲ್ಲಿನ ಉಳುವವನಿಗೇ ಭೂಮಿ ಎಂಬ ಆದರ್ಶ ಯೋಜನೆಯಲ್ಲಿ ನಡೆದ ಅಕ್ರಮಗಳು, ಕೈಕತ್ತರಿಸಿ ಹೋಗುವ ಭಯದಿಂದ ವಿಧಿ ಇಲ್ಲದೇ ಸಿಪಿಐ(ಎಂ)ಗೆ ಓಟು ಹಾಕುವ ಮತದಾರರ ವ್ಯಥೆ, ಓಟ್ ರಿಗ್ಗಿಂಗ್ ಕಥೆಗಳೇ ಸಾಕು. ಇಸ್ಲಾಮ್ ನಲ್ಲಿ ಕಂಡುಬರುವ ಅಸಹನೆ, ತನ್ನದಲ್ಲದ ನಾಶ, ವಿನಾಕಾರಣ ಕೆಣಕುವುದು ಇವೆಲ್ಲವೂ; ಸುಮ್ಮನೆ ವೈಶಮ್ಯ ಬೆಳೆಸುವ, ಸುಮ್ಮನೆ ಇರುವವರನ್ನು ಕೆಣಕಿ ಬಂದ್ ಮಾಡಿಸುವ, ವಿನಾಕಾರಣ ಕ್ರಾಂತಿಯ ಹೆಸರಿನಲ್ಲಿ ಕ್ರೌರ್ಯ ಮೆರೆಯುವ ಕಮ್ಯುನಿಷ್ಟ್ ಕಾಮ್ರೆಡ್ ಗಳಲ್ಲೂ ಕಂಡುಬರುತ್ತದೆ. ಇವೆಲ್ಲವೂ ಮೇಲಿನ ಅಷ್ಟೂ ಘಟನೆಗಳಲ್ಲಿ ನಡೆದಿದೆ(ಈಗಲೂ ನಡೆಯುತ್ತಿವೆ). ಒಂದು ರೀತಿಯ ಟಿಪಿಕಲ್ ಇಸ್ಲಾಮಿಕ್ ಉಗ್ರವಾದದ ಮಾನಸಿಕತೆ ಎಂದುಕೊಳ್ಳಿ.

ಅದು ಡಿ.11, 1969, ಸೈನ್ ಬಾರಿ ಕುಟುಂಬದ ಸ್ನೇಹಿತನಾಗಿದ್ದ ಇಂದುಭೂಷಣ್ ಘಾರಿಯಾ ಅವರನ್ನು ಸಿಪಿಐ(ಎಂ) ಕಾರ್ಯಕರ್ತರು ರಾಜಕೀಯ ದ್ವೇಷಕ್ಕಾಗಿ ಹತ್ಯೆ ಮಾಡಿದ್ದರು. ಈ ಮೂಲಕ ಕಾಂಗ್ರೆಸ್ ನಾಯಕರಿದ್ದ ಸೈನ್ ಬಾರಿ ಕುಟುಂಬದ ಹಿರಿಯ ಪುತ್ರ ನಬಾ ಸೈನ್ ನ ಹತ್ಯೆಯ ಸುಳಿವು ಸಿಕ್ಕಿತ್ತು. ಕೊಲೆ ಮಾಡುವುದರೊಂದಿಗೆ ಸೈನ್ ಬಾರಿ ಕುಟುಂಬದವರು ಭಯಭೀತರಾಗಿ ತಾವಿರುವ ಮನೆಯನ್ನೇ ತೊರೆದರು. ನಂತರ ಅವರ ಕುಟುಂಬಕ್ಕೆ ಸೇರಿದ ಭೂಮಿಯನ್ನು  ಭೂ ಸುಧಾರಣಾ ಕಾಯ್ದೆಯ ಹೆಸರಿನಲ್ಲಿ ಕೃಷಿ ಭೂಮಿಯ ಮಾಲಿಕನಿಂದ ಕಸಿದುಕೊಂಡು ಕಬಳಿಸಿದ್ದರು ಈ ಕಮ್ಯುನಿಷ್ಟರು. ಇತ್ತ 1970 ರ ಮಾರ್ಚ್ ವೇಳೆಗೆ ಕಮ್ಯುನಿಷ್ಟರ ಅಟಾಟೋಪಗಳಿಂದ ಬೇಸತ್ತ ಪಶ್ಚಿಮ ಬಂಗಾಳದಲ್ಲಿ ಬಂಗಾಳ ಕಾಂಗ್ರೆಸ್- ಸಿಪಿಐ(ಎಂ) ಸಮ್ಮಿಶ್ರ ಸರ್ಕಾದ ಮುಖ್ಯಮಂತ್ರಿಯಾಗಿದ್ದ ಅಜೋಯ್ ಮುಖರ್ಜಿ ಮಾ.16ರಂದು ರಾಜೀನಾಮೆ ನೀಡಿದ್ದರು. ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಿತ್ತು. ಇದನ್ನೇ ನೆಪವಾಗಿಟ್ಟುಕೊಂಡ ಕಮ್ಯುನಿಷ್ಟರು ಮಾ.17ರಂದು ರಾಜ್ಯವ್ಯಾಪಿ ಬಂದ್ ಗೆ ಕರೆ ನೀಡಿದ್ದರು. ಇದೇ ದಿನ ಕಾಂಗ್ರೆಸ್ ನಾಯಕರಿದ್ದ ಸೈನ್ ಬಾರಿ ಕುಟುಂಬದಲ್ಲಿ ನಾಮಕರಣ ಸಮಾರಂಭವೊಂದು ನೆಡೆಯುತ್ತಿತ್ತು. ಪ್ರತಿಭಟನೆಯ ನೆಪದಲ್ಲಿ ರಾಜಕೀಯ ದ್ವೇಷವನ್ನು ತೀರಿಸಿಕೊಳ್ಳಲು, ಶ್ರೀಮಂತವಾಗಿದ್ದ ಸೈನ್ ಬಾರಿ ಕುಟುಂದ ಭೂಮಿಯನ್ನು ಕಬಳಿಸಲು ಮುಂದಾದ ಮಾನವತಾವಾದಿ ಕಮ್ಯುನಿಷ್ಟರು, ಸಮಾರಂಭ ನಡೆಯುತ್ತಿದ್ದ ಮನೆಗೇ ನುಗ್ಗಿದ್ದರು, ಸೈನ್ ಬಾರಿ ಕುಟುಂಬದ ಮಗಳ ಮಗುವನ್ನೂ ಲೆಕ್ಕಿಸದೇ ಸಿಕ್ಕಸಿಕ್ಕವರ ಮೇಲೆಲ್ಲಾ ಹಲ್ಲೆ ನಡೆಸಿದರು. ನಬಾ ಸೈನ್ ಹಾಗೂ ಆತನ ಇಬ್ಬರು ಸಹೋದರರು, ಮನೆಯ ಅಥಿತಿಗಳಿಗೆ ರಿಕ್ಷಾ ಸೌಲಭ್ಯ ಒದಗಿಸಲು ಬಂದಿದ್ದ ಮೊಲೋಯ್ ಸೈನ್ ನನ್ನು ಹತ್ಯೆ ಮಾಡಿದ್ದರು, ಸೈನ್ ಬಾರಿ ಕುಟುಂಬದ ಸಹೋದರರ ರಕ್ತವನ್ನು ಅವರ ತಾಯಿಗೇ ಕುಡಿಸಿ ವಿಕೃತಿ ಮೆರೆದ ಚರಿತ್ರೆ ಕಮ್ಯುನಿಷ್ಟರದ್ದೇ…ಇದು ಕೇವಲ ಒಂದು ಘಟನೆ, 1968 ರಲ್ಲಿ 575, 1969 ರಲ್ಲಿ 575, 1970 ರಲ್ಲಿ 640 ಜನರು ಕಮ್ಯುನಿಷ್ಟರ ಅಧಿಕಾರವಿದ್ದ ಪಶ್ಚಿಮಬಂಗಾಳದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ!. ಇದು ಕಾಮ್ರೆಡ್ ಗಳ ರಕ್ತಪಾತದ ಕಥೆ. ತಮ್ಮ ಪಕ್ಷದ ನಾಯಕರನ್ನು ಹತ್ಯೆ ಮಾಡಿದರೂ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಮಾತ್ರ ಪಶ್ಚಿಮ ಬಂಗಾಳದ ಸರ್ಕಾರದ ಮೇಲೆ ಕ್ರಮಕ್ಕೆ ಮುಂದಾಗಲಿಲ್ಲ, ಇದು, ಕಾಂಗ್ರೆಸ್-ಕಮ್ಯುನಿಷ್ಟರ ಮೈತ್ರಿಗೆ ಸಾಕ್ಷಿ.
ಇನ್ನು ಸ್ಥಳೀಯ ಸಂಸ್ಥೆ ಚುನಾವಣೆಯಿಂದ ಹಿಡಿದು ವಿಧಾನಸಭೆಯ ಚುನಾವಣೆಯಲ್ಲಿ ಯಾರಾದರೂ ಕಾಂಗ್ರೆಸ್ ಗೆ ಅಥವಾ ಅನ್ಯ ಪಕ್ಷಕ್ಕೆ ಮತ ನೀಡದಂತೆ ತಡೆಯುವ ಕೌಶಲ್ಯವೂ ಕಮ್ಯುನಿಷ್ಟರಿಗೆ ಕರತಲಾಮಲಕವಾಗಿತ್ತು. ಬೆಂಗಾಲ್ಸ್ ನೈಟ್ ವಿತೌಟ್ ಎಂಡ್ ಪುಸ್ತಕದಲ್ಲಿ ಕಾಂಗ್ರೆಸ್ ನಾಯಕ/ ಮಾಜಿ ಶಾಸಕ ಅಫ್ತಾಬುದ್ದೀನ್ ಮಂಡೋಲ್ ನೀಡಿರುವ ಮಾಹಿತಿಯ ಪ್ರಕಾರ ಕಮ್ಯುನಿಷ್ಟರು ಪಂಚಾಯತ್ ಚುನಾವಣೆಯಿಂದ ಹಿಡಿದು ವಿಧಾನಸಭಾ ಚುನಾವಣೆ ವೆರೆಗೂ ಓಟ್ ರಿಗ್ಗಿಂಗ್ ಮಾಡುವುದರಲ್ಲಿ ಮಹಾನಿಸ್ಸೀಮರು! ಅಸಲಿಯತ್ತೇನೆಂದರೆ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಗುತ್ತಿಗೆ ಪಡೆದವರಂತೆ ವರ್ತಿಸುವ ಕಮ್ಯುನಿಷ್ಟರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದವನ ಕೈ ಕತ್ತರಿಸಿದ ಉದಾಹರಣೆಯೂ ಇದೆ. ಹಾಗಂತ ಅವರೇನು ಭಾರಿ ಅಂತರದಿಂದ ಗೆಲ್ಲುವಂತೆ ಓಟ್ ರಿಗ್ಗಿಂಗ್ ಮಾಡುತ್ತಿರಲಿಲ್ಲ, ಯಾರಿಗೂ ಅನುಮಾನ ಬಾರದಂತೆಯೇ ಓಟ್ ರಿಗ್ಗಿಂಗ್ ಮಾಡಿ ಬಹುಮತ ಗಳಿಸುತ್ತಿದ್ದರು. ಪಶ್ಚಿಮ ಬಂಗಾಳದಲ್ಲಿ ಖಂಡುವಾ ಎಂಬ ಪ್ರದೇಶವಿದೆ ಅಲ್ಲಿ ಇರುವವರೆಲ್ಲಾ ಕಮ್ಯುನಿಷ್ಟರ ತಲೆ ಕಂಡರೆ ಆಗದವರೇ, ಆದರೂ ಗ್ರಾಮದ 5 ಕಿ.ಮಿ ಪ್ರದೇಶದಲ್ಲಿರುವ ಬೂತ್ ಗಳನ್ನು ರಿಗ್ ಮಾಡಿ ಮತ ಪಡೆಯುತ್ತಾರೆ. ಒಟ್ಟಿನಲ್ಲಿ ಓಟ್ ರಿಗ್ಗಿಂಗ್ ಮಾಡುವುದು ಕಮ್ಯುನಿಷ್ಟರ ಗೆಲುವಿನ ಗುಟ್ಟು.

ಇನ್ನು ಇವರು ಭೂ ಸುಧಾರಣಾ ಕಾಯ್ದೆಯಲ್ಲಿ ನಡೆಸಿರುವ ಅಕ್ರಮಗಳಿಗೆ ಕೊನೆಯೇ ಇಲ್ಲ!, ಕಮ್ಯುನಿಷ್ಟರ ವಿರುದ್ಧ ಮಾತನಾಡುವವರ ಭೂಮಿಯನ್ನು ಭೂಸುಧಾರಣಾ ಕಾಯ್ದೆಯ ಹೆಸರಿನಲ್ಲಿ ಬಡವರಿಗೆ ಹಂಚುತ್ತೇವೆ ಎಂದು ವಶಕ್ಕೆ ಪಡೆಯುವುದು ನಂತರ ಅದನ್ನು ಕಬಳಿಸುವುದು ಇವರಿಗೆ ಸಿದ್ಧಿಸಿರುವ  ಕಲೆ. ನೆಮ್ಮದಿಯಿಂದ ಇದ್ದ ಅದೆಷ್ಟೋ ಭೂಮಾಲಿಕರು ಇವರ ರಾಜಕೀಯ ವೈರಿ ಪಕ್ಷದ ಕಾರ್ಯಕರ್ತರೋ, ಸದಸ್ಯರೋ ಆಗಿದ್ದರೆಂದು ಅವರ ವಿರುದ್ಧ ಸುಳ್ಳು ಆರೋಪ ಹೊರೆಸಿ, ಟಿಎಂಸಿ ಸದಸ್ಯರು ಬಡವರ ಜಮೀನಿನನ್ನು ಅಕ್ರಮವಾಗಿ ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ, ಭೂಮಿ ಕಬಳಿಸುತ್ತಿದ್ದರು, ಇವೆಲ್ಲವೂ ಕಮ್ಯುನಿಷ್ಟರ ಕೃಪಾಪೋಷಿತ ಅಧಿಕಾರಿಗಳ ಸಹಕಾರದಿಂದಲೇ ನಡೆಯುತ್ತಿತ್ತು.
ಪ್ರತಿ ವರ್ಷದ ಏಪ್ರಿಲ್ ನ ಕೊನೆಯ ದಿನದಂದು ಪಶ್ಚಿಮ ಬಂಗಾಳದ ದಕ್ಷಿಣ ಕೋಲ್ಕತಾದಲ್ಲಿ ಸನ್ಯಾಸಿಗಳ ಗುಂಪೂಂದು ಮೌನ ಪ್ರತಿಭಟನಾ ಮೆರವಣಿಗೆ ನಡೆಸುತ್ತದೆ, ಈ ಪ್ರತಿಭಟನೆಯ ಕಾರಣದ ಹಿಂದಿರುವುದೂ ಕಮ್ಯುನಿಷ್ಟರ ಕೊಡುಗೆಯೇ. ಮಹಾನ್ ಮಾನವತಾವಾದಿಗಳಾಗಿರುವ ಕಮ್ಮಿನಿಷ್ಠರು ಗುಜರಾತ್ ನ ನರಮೇಧದ ಬಗ್ಗೆ ಈ ಕ್ಷಣಕ್ಕೂ ಎದೆಬಡಿದುಕೊಂಡು ಕಣ್ಣೀರಿಡುತ್ತಾರೆ, ತಪ್ಪೇ ಇಲ್ಲದವರನ್ನು ದೂಷಿಸುವುದನ್ನು ಇನ್ನೂ ಬಿಟ್ಟಿಲ್ಲ, ಹಾಗೆ ಮಾತನಾಡಿದಾಗಲೆಲ್ಲಾ  1982 ರಲ್ಲಿ ಪಶ್ಚಿಮ ಬಂಗಾಳದ ದಕ್ಷಿಣ ಕೋಲ್ಕತಾದ ಆನಂದ್ ಮಾರ್ಗ್ ನಲ್ಲಿ ಮಾರ್ಕ್ಸ್ ವಾದಿಗಳಾಗಿದ್ದ ಒಂದಷ್ಟು ಮಂದಿ ದುರುಳರು 16 ಜನ ಸನ್ಯಾಸಿಗಳು ಹಾಗೂ ಒಬ್ಬ ಸನ್ಯಾಸಿನಿಯನ್ನು ನಡು ರಸ್ತೆಯಲ್ಲೆ ಸಜೀವ ದಹನ( ಆನಂದ್ ಮಾರ್ಗ್ ನರಮೇಧ) ಮಾಡಿ, ಅವರ ದೇಹಗಳನ್ನು ಬಿಜೋನ್ ಸೇತುವೆಯ ರೈಲ್ವೆ ಟ್ರ್ಯಾಕ್ ಮೇಲೆ ನೇತು ಹಾಕಿದ್ದ ಘಟನೆಯನ್ನು ಕಾಮ್ರೆಡ್ ಗಳು ನೆನೆಸಿಕೊಳ್ಳಲಿ ಅವರ ಸಂಘಟನೆ ಬಗ್ಗೆ, ಅವರ ಬಗ್ಗೆ ಅವರಿಗೇ ಅಸಹ್ಯ ಹುಟ್ಟುವುದು ಖಂಡಿತ. ಉಹೂ ಅದೂ ಆಗುವುದಿಲ್ಲ ಯಾಕೆ ಗೊತ್ತೇನು,  ಆನಂದ್ ಮಾರ್ಗ್ ನರಮೇಧ ನಡೆದಾಗ ಈಗಿನಂತೆ ಟಿವಿಗಳಿರಲಿಲ್ಲ. ಬ್ರೇಕಿಂಗ್ ನ್ಯೂಸ್ ಗಳಿರಲಿಲ್ಲ, ಆದರೂ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಜವಾಬ್ದಾರಿಯುತವಾಗಿ ಹೇಳಿಕೆ ನೀಡಬೇಕಿದ್ದ ಮಾರ್ಕ್ಸ್ ವಾದವನ್ನು ಬೆಂಬಲಿಸುತ್ತಿದ್ದ ಸರ್ಕಾರದ ಮುಖ್ಯಸ್ಥ ಜ್ಯೋತಿ ಬಸು, “17 ಜನ ಸನ್ಯಾಸಿಗಳು ಮಕ್ಕಳ ಕಳ್ಳರೆಂಬ ವದಂತಿ ಇತ್ತು, ಆದ್ದರಿಂದ ಸನ್ಯಾಸಿಗಳನ್ನು ಬೆಂಕಿ ಹಚ್ಚಿ ಕೊಲ್ಲಲಾಗಿದೆ, ಅದೊಂದು ಸಾರ್ವಜನಿಕ ಆಕ್ರೋಶದಿಂದ ಉಂಟಾದ ಘಟನೆಯೆಂದು ನಾಚಿಕೆ ಇಲ್ಲದೇ” ಕ್ಷುಲ್ಲಕ ಘಟನೆ ಎಂಬಂತೆ ಹೇಳಿಕೆ ನೀಡಿದ್ದರು. ಗುಜರಾತ್ ಸರ್ಕಾರ ಭಯೋತ್ಪಾದಕಿ ಇಶ್ರಾತ್ ಜಹಾನ್ ಳನ್ನು ಎನ್ ಕೌಂಟರ್ ಮಾಡಿದ್ದಕ್ಕೆ ಎದೆಬಡಿದುಕೊಂಡು ಕಣ್ಣೀರಿಡುತ್ತಾ ಪ್ರಧಾನಿಗೆ ಶಪಿಸುತ್ತಿದ್ದಾರಲ್ಲಾ, ಆನಂದ್ ಮಾರ್ಗ್ ನರಮೇಧದಂತಹ ಘಟನೆಗಳಿಗೇಕೆ ಇವರು ಕಣ್ಣೀರಿಡುವುದಿಲ್ಲ?

ಕೊನೆಯದಾಗಿ ಜಮ್ಮು-ಕಾಶ್ಮೀರ, ಪಶ್ಚಿಮ ಬಂಗಾಳ ಎರಡೂ ರಾಜ್ಯಗಳು ಸಾಂಸ್ಕೃತಿಕ, ಆಧ್ಯಾತ್ಮಿಕವಾಗಿ ಭಾರತದಲ್ಲೇ ಅತ್ಯಂತ ಶ್ರೇಷ್ಠತೆ ಹೊಂದಿದೆ, ಭಾರತೀಯತೆಯನ್ನು ಪ್ರತಿಬಿಂಬಿಸುವ, ಪ್ರತಿನಿಧಿಸುವ ಎಲ್ಲವನ್ನೂ ಈ ರಾಜ್ಯಗಳಲ್ಲಿ ಕಾಣಬಹುದು, ಭಾರತದ ಮುಕುಟವಾಗಿರುವ ಜಮ್ಮು-ಕಾಶ್ಮೀರ ನೆಹರು ಕಪಿಮುಷ್ಟಿಗೆ ಸಿಲುಕಿ ತನ್ನತನವನ್ನೇ ಕಳೆದುಕೊಂಡಿತು, ನೆಹರು ಭಾರತೀಯತೆಯ ಪ್ರತೀಕವಾಗಿದ್ದ ರಾಜ್ಯವನ್ನು ನಿರ್ನಾಮ ಮಾಡಿದರು, ನೆಹರುವಿಗೆ ಪ್ರೀತಿಪಾತ್ರವಾಗಿದ್ದ ಕಮ್ಯುನಿಸಂ,(ಕಮ್ಮಿ ನಿಷ್ಠೆ) ಭಾರತೀಯತೆಯ ಪ್ರತೀಕವಾಗಿದ್ದ, ಹೆಮ್ಮೆಪಡಲು ಎಲ್ಲವನ್ನೂ ಹೊಂದಿದ್ದ ಪಶ್ಚಿಮ ಬಂಗಾಳವನ್ನು ನಿರ್ನಾಮ ಮಾಡಿದೆ. ಈಗ ದೇಶ ಮುನ್ನಡೆಯುತ್ತಿರುವ ಕಾರಣದಿಂದ ಅಸ್ಥಿತ್ವದ ಬಗ್ಗೆ ಚಿಂತಾಕ್ರಾಂತರಾಗಿರುವ ಕಾಂಗ್ರೆಸ್ಸಿಗರು- ಕಮ್ಯುನಿಷ್ಟರು ಪಶ್ಚಿಮ ಬಂಗಾಳದ ಚುನಾವಣೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್- ಕಮ್ಯುನಿಷ್ಟರು ಕಾಲಿಟ್ಟಲ್ಲೆಲ್ಲಾ ಅಲ್ಲಿ ಸಿಗುವುದು ಕರಾಳ ರಾತ್ರಿಯೇ ಹೊರತು ಭರವಸೆಯ ಬೆಳದಿಂಗಳಲ್ಲ. Die soon communism...

Friday, 22 May 2015

ಭಾರತಕ್ಕೆ ಅಪಮಾನ ಮಾಡಿದ್ದು ಮೋದಿಯೋ ಅಥವಾ ಕಾಂಗ್ರೆಸ್ಸೋ?

ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಜಿನೀವಾದಲ್ಲಿ ನಡೆಯಲಿದ್ದ ವಿಶ್ವಸಂಸ್ಥೆಯ ಶೃಂಗದಲ್ಲಿ ಭಾರತವನ್ನು ಖಂಡಿಸಿ ಗೊತ್ತುವಳಿಯೊಂದನ್ನು ಮಂಡಿಸಲು 1994ರಲ್ಲಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಸಿದ್ಧತೆ ನಡೆಸಲಾಗಿತ್ತು. 51 ಸದಸ್ಯ ರಾಷ್ಟ್ರಗಳ ‘ಆರ್ಗನೈಜೇಷನ್ ಆಫ್ ಇಸ್ಲಾಮಿಕ್ ಕಾನ್ಫೆರೆನ್ಸ್ (ಒ.ಐ.ಸಿ) ಬಹಿರಂಗವಾಗಿ ಬೆಂಬಲಿಸಿದ್ದ ಕಾರಣ  ಭಾರತಕ್ಕೆ ಮುಖಭಂಗವಾಗುವ ಎಲ್ಲ ಸಾಧ್ಯತೆಗಳಿತ್ತು. ಭಾರತವನ್ನು ಮುಖಭಂಗದಿಂದ ಪಾರು ಮಾಡಬೇಕಾದ ಬಹುದೊಡ್ಡ ಜವಾಬ್ದಾರಿ ಅಂದಿನ ಕಾಂಗ್ರೆಸ್ ಪ್ರಧಾನಿ ಪಿ.ವಿ ನರಸಿಂಹರಾವ್ ಅವರ ಹೆಗಲೇರಿತ್ತು. ಆಗ ಪಿ.ವಿ ನರಸಿಂಹ ರಾವ್ ಅವರ ಕಣ್ಣಿಗೆ ಕಂಡದ್ದು ವಿಪಕ್ಷ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು!  ಸ್ವಂತ ಪಕ್ಷದ ನಾಯಕರು, ಮಂತ್ರಿವರ್ಯರಿಗಿಂತ ವಿರೋಧ ಪಕ್ಷದ ನಾಯಕ ಅಟಲ್ ಬಿಹಾರಿ ವಾಜಪೇಯಿಯವರ ಮೇಲೆಯೇ ಹೆಚ್ಚು ವಿಶ್ವಾಸ, ನಂಬುಗೆ ತೋರಿಸಿಬಿಟ್ಟರು. ಅಟಲ್ ನೇತೃತ್ವದಲ್ಲಿ ವಿಶ್ವಸಂಸ್ಥೆಗೆ ತೆರಳಿದ್ದ ಭಾರತದ ನಿಯೋಗ ಭಾರತವನ್ನು ಸಂಭವನೀಯ ಮುಖಭಂಗದಿಂದ ಪಾರುಮಾಡಿತ್ತು. ಪರಸ್ಪರ ಹೊಂದಾಣಿಕೆ ಅಥವಾ ದೇಶಕ್ಕಾಗಿ ಒಗ್ಗಟ್ಟಿನಿಂದ ಇರುವ ಮನಸ್ಥಿತಿ ಭಾರತವನ್ನು ಅತ್ಯಂತ ಅಪಾಯಕಾರಿ ಸ್ಥಿತಿಯಿಂದ ಪಾರು ಮಾಡಿತ್ತು.

ಮತ್ತೊಮ್ಮೆ ಪಿ.ವಿ ನರಸಿಂಹ ರಾವ್ ಅವರು ಇಂತಹದ್ದೇ ಹೊಂದಾಣಿಕೆಗೆ ಮಾದರಿಯಾಗಿದ್ದರು. 1995 ರಲ್ಲಿ ಪೋಖ್ರಾನ್ ನಲ್ಲಿ ಅಣು ಪರೀಕ್ಷೆಯ ತಯಾರಿ ನಡೆಸುತ್ತಿದ್ದದ್ದು ಅಮೆರಿಕದ ಉಪಗ್ರಹಗಳ ಕಣ್ಣಿಗೆ ಬಿದ್ದ ಕಾರಣ ಅಂತಾರಾಷ್ಟ್ರೀಯ ಒತ್ತಡಕ್ಕೆ ನರಸಿಂಹರಾವ್ ಮಣಿದ ಕಾರಣ ಪರೀಕ್ಷೆ ನಿಂತುಹೋಯಿತು.  1996ರಲ್ಲಿ ಅಟಲ್ ಬಿಹಾರಿಯವರ ಅಲ್ಪಾವಧಿ ಸರ್ಕಾರ ಅಧಿಕಾರಕ್ಕೆ ಬಂತು. ಅಂದು ವಾಜಪೇಯಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುಕ್ಷಣವೇ,  ನರಸಿಂಹರಾವ್ ಅಣುಪರೀಕ್ಷೆಗೆ ಎಲ್ಲವೂ ಸಿದ್ಧವಾಗಿದೆ, ಕೂಡಲೇ ಮಾಡಿ ಮುಗಿಸಿಬಿಡಿ ಎಂದು ಗೌಪ್ಯ ಚೀಟಿಯೊಂದನ್ನು ಕಳಿಸಿಕೊಟ್ಟಿದ್ದರು. ಆಡಳಿತಾಕ್ಮಕ ದೃಷ್ಟಿ ಹಾಗೂ ದೇಶದ ಸಮಗ್ರತೆ ವಿಷಯದಲ್ಲಿ cohesiveness ಎಂಬುದು ಬಹುಪಕ್ಷೀಯ ರಾಜಕಾರಣದಲ್ಲಿ ತೀರಾ ಅಗತ್ಯ ಅನ್ನಿಸುವ ಸಂಗತಿ. ದೇಶದ ಅಭಿವೃದ್ಧಿಗೆ ಅಧಿಕಾರದಲ್ಲಿರುವ ಪ್ರಧಾನಿ ಶ್ರಮಿಸಿದರೆ ಸಾಲದು, ವಿರೋಧ ಪಕ್ಷಗಳೂ ಅದಕ್ಕೆ ಬೆಂಬಲ ನೀಡಬೇಕೆಂಬುದು ಅದೆಷ್ಟೋ ಬಾರಿ ಸಾಬೀತಾಗಿದೆ. ಹಾಗಾದರೆ ವಿರೋಧ ಪಕ್ಷಗಳು ಹೇಗೆ ನಡೆದುಕೊಳ್ಳಬೇಕಿತ್ತು? ಮೊದಲೇ ಅಧಿಕೃತ ವಿರೋಧ ಪಕ್ಷದ ಸ್ಥಾನವಿಲ್ಲ, ಇಂತಹ ಸ್ಥಿತಿಯಲ್ಲಿ ಸರ್ಕಾರದ ತಪ್ಪು ನಿರ್ಧಾರಗಳನ್ನು ಜನತೆಯ ಮುಂದಿಟ್ಟು ಜನರ ವಿಶ್ವಾಸ ಗಳಿಸುವ ಬದಲು ಕಾಂಗ್ರೆಸ್ ಹಿಡಿದಿರುವ ದಾರಿ ಎಂಥಹದ್ದು?

ಒಬ್ಬ ಪ್ರಧಾನಿ ಯಶಸ್ವಿಯಾಗಿ ವಿದೇಶ ಪ್ರವಾಸ ಮುಕ್ತಾಯಗೊಳಿಸಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಪ್ರಬಲ ರಾಷ್ಟ್ರವನ್ನಾಗಿ ಮಾಡಲು ಹಗಲಿರುಳು ಶ್ರಮಿಸುತ್ತಿರಬೇಕಾದರೆ, ಕಾಂಗ್ರೆಸ್ ಮಾತ್ರ ಎಳಸು ರಾಜಕೀಯ ಮಾಡುತ್ತಾ, ಕನಿಷ್ಠ ಸಂಸ್ಕಾರವನ್ನೂ ತೋರದೇ ಪ್ರಧಾನಿಯನ್ನು ಟೀಕಿಸಲು ತೊಡಗಿದೆ. ಪ್ರಧಾನಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ತರ್ಕಬದ್ಧವಾಗಿ ಮಾತನಾಡಲೂ ಯೋಗ್ಯತೆ ಇಲ್ಲದ ಕಾಂಗ್ರೆಸ್, ಮೋದಿ ಧರಿಸುವ ಬಟ್ಟೆ, ಬೂಟಿನ ಬಗ್ಗೆ ಎಳೆ ಮಕ್ಕಳಂತೆ ಅವಹೇಳನ ಮಾಡುತ್ತಾ ಭಾರತದ ಮರ್ಯಾದೆ ಹರಾಜು ಹಾಕುತ್ತಿದೆ. ಇಷ್ಟಾದರೂ ಭಾರತದ ಮರ್ಯಾದೆ ತೆಗೆಯುತ್ತಿರುವವರು ಪ್ರಧಾನಿ ಮೋದಿ ಎಂಬ ಆರೋಪ!

ಭಾರತದಲ್ಲೇನೋ ಕಾಂಗ್ರೆಸ್ ನವರ ಯೋಗ್ಯತೆ, ದುರಾಡಳಿತದ ಬಗ್ಗೆ ಎಲ್ಲರಿಗೂ ತಿಳಿದಿದ್ದಾರೆ, ಆದರೆ ಇತಿಹಾಸದ ಪಠ್ಯ ಪುಸ್ತಕಗಳು ಬದಲಾಗುವವರೆಗೆ ಹಾಗೂ ಜಾಗತಿಕ ಮಟ್ಟದಲ್ಲಿ ಸದ್ಯಕ್ಕೆ ಭಾರತದ ಬಗ್ಗೆ ಇರುವ ಪಾಶ್ಚಾತ್ಯ ದೃಷ್ಟಿಕೋನದ ಭಾವನೆ ಅಳಿದು, ವಾಸ್ತವದ ಭಾವನೆಯೊಂದು ಮೂಡುವವರೆಗಾದರೂ ಒಂದಷ್ಟು ಜನ 6 ದಶಕಗಳ ಕಾಲ ಆಳ್ವಿಕೆ ನಡೆಸಿರುವ, 120 ವರ್ಷಕ್ಕೂ ಮೀರಿದ ಇತಿಹಾಸ ಹೊಂದಿರುವ ಕಾಂಗ್ರೆಸ್ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೂ, ಸಂಪೂರ್ಣವಾಗಿ ಅಲ್ಲಗಳೆಯಲು ಸಾಧ್ಯವಿಲ್ಲ. ಹೀಗಿರುವಾಗ ಕಾಂಗ್ರೆಸ್ ನೀಡುತ್ತಿರುವ ಹೇಳಿಕೆ ಎಷ್ಟು ಸಮಂಜಸವಾಗಿದೆ?

ಭಾರತದ ಮರ್ಯಾದೆಯನ್ನು ಜಾಗತಿಕ ಮಟ್ಟದಲ್ಲಿ ಹರಾಜು ಹಾಕಿದವರು ಯಾರು? ಇಂಥದ್ದೊಂದು ಪ್ರಶ್ನೆ ಕೇಳಲೇಬೇಕಿದೆ. ಇದೇ ಕಾಂಗ್ರೆಸ್ ನ ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾಯರ ನೇತೃತ್ವದಲ್ಲಿ ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡಿದ ದೇಶ ಕಂಡ ಉತ್ತಮ ಅರ್ಥಶಾಸ್ತ್ರಜ್ನ ಡಾ.ಮನಮೋಹನ್ ಸಿಂಗ್ ಅವರನ್ನು ಕಾಂಗ್ರೆಸ್ ಮೇಡಂ ನ ಕೈಗೊಂಬೆಯಾಗಿಸಿದ್ದಾಗ ಭಾರತದ ಮರ್ಯಾದೆ ಹರಾಜಾಗಿರಲಿಲ್ಲವೇ? ಅಥವಾ ಅಂತಹ ಉತ್ತಮ ಅರ್ಥಶಾಸ್ತ್ರಜ್ನನಿಗೆ ಟೈಮ್ ಮ್ಯಾಗಜೀನ್ ನಲ್ಲಿ ಅಂಡರ್ ಅಚೀವರ್ ಎಂಬ ಪಟ್ಟ ಕೊಡಿಸಿದವರು, ಇಂದು ಅದೇ ಟೈಮ್ಸ್ ಮ್ಯಾಗಜೀನ್ ’ಮೋದಿ ಮೀನ್ಸ್ ಬಿಸಿನೆಸ್’ ಎಂದು ಹೊಗಳಿದ್ದ ವ್ಯಕ್ತಿ ಭಾರತದ ಮಾನ ಹರಾಜು ಹಾಕುತ್ತಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರಲ್ಲಾ, ಇವರ ಮಾನಸ್ಥಿಕ ಸ್ಥಿಮಿತತೆ ಬಗ್ಗೆ ಯಾರಿಗಾದರೂ ಅನುಮಾನ ಬರುವುದಿಲ್ಲವೇ ಹೇಳಿ? ಅದಿರಲಿ, ಇಂದು ಯಾವ ವ್ಯಕ್ತಿ ಭಾರತವನ್ನು ವಿದೇಶಗಳಲ್ಲಿ ಹೀಗಳೆಯುತ್ತಿದ್ದಾರೆ ಎಂದು ಎದೆ ಬಡಿದುಕೊಂಡು ಕೂಗುತ್ತಿದ್ದಾರಲ್ಲಾ, ಭಾರತದ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರಿಗೆ ಅಮೆರಿಕಾದೊಳಕ್ಕೆ ಪ್ರವೇಶ ನೀಡಬಾರದು ಎಂದು ಪತ್ರ ಬರೆದಿದ್ದ ಕಾಂಗ್ರೆಸ್ ಸಂಸದರು ಅಮೆರಿಕಾ ಅಧ್ಯಕ್ಷರ ಕಾಲು ಹಿಡಿದು ಮನವಿ ಮಾಡಿಕೊಂಡಿದ್ದಾಗ ಭಾರತದ ಗೌರವಕ್ಕೆ ಧಕ್ಕೆಯುಂಟಾಗಿರಲಿಲ್ಲವೇ? ಒಬ್ಬ ಪ್ರಧಾನಿ ಅಭ್ಯರ್ಥಿಗೆ ಕನಿಷ್ಠ ಗೌರವವನ್ನು ನೀಡದೇ ಇರುವಷ್ಟು ಸಂಸ್ಕಾರಹೀನರು ಈ ಕಾಂಗ್ರೆಸ್ಸಿನವರು!

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾಗಿದ್ದಾಗ ಕಾಂಗ್ರೆಸ್ ನವರು ಅವರ ವಿರುದ್ಧ ನಪುಂಕಸಕ, ನರಹಂತಕ, ಸಾವಿನ ವ್ಯಾಪಾರಿ ಇತ್ಯಾದಿಯಾಗಿ ಮಾಡಿದ್ದ ಅವಹೇಳನಗಳಿಗೆ ಲೆಕ್ಕವೇ ಇಲ್ಲ ಬಿಡಿ. ಭಾರತದ ಪ್ರಧಾನಿ ಹುದ್ದೆಗೆ ಸ್ಪರ್ಧಿಸಿದ್ದ ವ್ಯಕ್ತಿಯನ್ನು ತುಚ್ಛವಾಗಿ ಅವಹೇಳನ ಮಾಡಿದಾಗ ಆಗದ ಅವಮಾನ ಈಗ ತಮ್ಮನ್ನು ಹಾಗೂ ತಾವು ಮಾಡಿರುವ ಘನ ಕಾರ್ಯಗಳನ್ನು ಪರೋಕ್ಷವಾಗಿ ಟೀಕಿಸಿದರೆ ಮಾತ್ರ ಭಾರತಕ್ಕೆ ಅವಮಾನವಾಗಿಬಿಡುತ್ತದೆಯಂತೆ, ಇವರೇನು ಭಾರತವನ್ನು ಗುತ್ತಿಗೆ ಪಡೆದಿದ್ದಾರೋ ಅಥವಾ ತಾವೇ ಭಾರತ, ಭಾರತವೆಂದರೆ ತಾವು ಮಾತ್ರ ಎಂಬ ಅನ್ವರ್ಥವೆಂಬ ಭ್ರಮೆಯಲ್ಲಿದ್ದಾರೋ? ಭಾರತಕ್ಕೆ ಸ್ವಾತಂತ್ರ್ಯ ಬಂದು ಇನ್ನಷ್ಟ ಹೊಸ ಇತಿಹಾಸವನ್ನು ನಿರ್ಮಿಸಿ ಜಾಗತಿಕ ಮಟ್ಟದಲ್ಲಿ ವಿಶ್ವಾಸ ಮೂಡಿಸಬೇಕಿದ್ದ ಕಾಲದಲ್ಲಿ, ಕಾಂಗ್ರೆಸ್ ನ ಹಿರೋ, ನಮ್ಮ ದೇಶದ ಮೊದಲ ಪ್ರಧಾನಿ ಚೀನಾದ ವಿರುದ್ಧ ಯುದ್ಧ ಮಾಡಿ ಸೋತು ರಣಹೇಡಿ ಎಂಬ ಪಟ್ಟ ಗಿಟ್ಟಿಕೊಂಡು ವಿಶ್ವಸಂಸ್ಥೆಗೆ ಓಡಿಹೋಗಿದ್ದರಾಲ್ಲಾ ಆಗ, ಭಾರತದ ಮರ್ಯಾದೆ ಹರಾಜಾಗಿತ್ತೋ, ಉಜ್ವಲವಾಗಿ ಹೊಳೆದಿತ್ತೋ ಎಂಬ ಬಗ್ಗೆ ಕಾಂಗ್ರೆಸ್ ನವರು ಉತ್ತರಿಸಬೇಕಾಗುತ್ತದೆ. ಪಿ.ವಿ ನರಸಿಂಹ ರಾವ್ ಅವರನ್ನು ಹೊರತುಪಡಿಸಿ, ನೆಹರು ಯಿಂದ ಹಿಡಿದು ಪ್ರಧಾನಿ ಪಟ್ಟಕ್ಕೇ ಕಳಂಕ ತಂದ ಮನಮೋಹನ್ ಸಿಂಗ್ ವರೆಗೂ ಎಲ್ಲಾ ಪ್ರಧಾನಿಗಳು ಮಾಡಿದ ಭ್ರಷ್ಟಾಚಾರ, ದುರಾಡಳಿತದ ಒಂದೊಂದು ಘಟನೆಗೂ ಈ ದೇಶದ ಜನತೆಗೆ ಕಾಂಗ್ರೆಸ್ ನವರು ಉತ್ತರದಾಯಿಗಳಾಗಿದ್ದಾರೆ. ಹಾಗೆಯೇ ಮೂರನೇ ದರ್ಜೆ, ಕಳಪೆ ರಾಜಕಾರಣಕ್ಕೆ ಮೇಲ್ಪಂಕ್ತಿ ಹಾಕಿ ಕೊಟ್ಟು ಭಾರತದ ಕೀರ್ತಿಪಥಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸಿರುವುದಕ್ಕೂ ಕಾಂಗ್ರೆಸ್ ಕಾರಣವಾಗಿದೆ.

ಇವೆಲ್ಲವನ್ನೂ ಬಿಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ್ದ ಸುಭಾಷರನ್ನು ಅಮಾನವೀಯವಾಗಿ ನಡೆಸಿಕೊಂಡು, ನಿಗೂಢ ಕಣ್ಮರೆಯ ನಂತರವೂ ಅವರ ಕುಟುಂಬದವರ ಮೇಲೆ ನಿರಂತರ ಗೂಢಚಾರಿಕೆ ನಡೆಸಿದ್ದರು ಕಾಂಗ್ರೆಸ್ ನ ಪ್ರಧಾನಿ ನೆಹರು. ಆಗ ವಿದೇಶಿ ಮಾಧ್ಯಮಗಳು, ಸ್ವಾತಂತ್ರ್ಯ ಸೇನಾನಿಯ ನಿಗೂಢ ಸಾವಿನ ನಂತರವೂ ಗೂಢಾಚಾರಿಕೆ ನಡೆಸಿದ್ದ ಭಾರತದ ಪ್ರಧಾನಿ ಎಂಬ ಶೀರ್ಷಿಕೆ ಕೊಟ್ಟು ಸುದ್ದಿ ಮಾಡಿದಾಗ ತುಟಿ ಬಿಚ್ಚದ ನೈತಿಕತೆಯಿಲ್ಲದವರಿಂದ ಯಾವುದು ಭಾರತಕ್ಕೆ ಅವಮಾನ ಯಾವುದು ಭಾರತಕ್ಕೆ ಅವಮಾನವಲ್ಲ ಎಂಬುದನ್ನು ಕಲಿಯುವ ಹೀನಾಯ ಸ್ಥಿತಿ ಬಂದಿಲ್ಲ.

ತಾವು ನಡೆಸಿದ್ದ ಕೋಟಿ ಕೋಟಿ ರೂ ಮೌಲ್ಯದ ಹಗರಣಗಳಿಂದ ದೇಶದ ಬೊಕ್ಕಸಕ್ಕೆ ನಷ್ಟವಾದರೂ ಚಿಂತೆಯಿಲ್ಲ, ಅದರ ಬಗ್ಗೆ ಎಲ್ಲೂ ಮಾತನಾಡದೇ ಬಾಯಿ ಮುಚ್ಚಿಕೊಂಡಿದ್ದಿದ್ದರೆ ಪ್ರಧಾನಿ ಒಳ್ಳೆಯವರಾಗುತ್ತಿದ್ದರು, ಆದರೆ ಇವರು ನಡೆಸಿದ್ದ ಹಗರಣಗಳ ಬಗ್ಗೆ ಹೇಳುತ್ತಿರುವುದು ದೊಡ್ಡ ಅಪರಾಧವಾಗಿಬಿಟ್ಟಿದೆ. ನೈತಿಕ ಅಧಪಥನಕ್ಕೆ ಇದಕ್ಕಿಂತಲೂ ಉತ್ತಮ ಉದಾಹರಣೆ ಬೇಕೆ? ಕಾಂಗ್ರೆಸ್ ನ ದುರಾಡಳಿತ, ಸರ್ವಾಧಿಕಾರವನ್ನು ಮಟ್ಟಾ ಹಾಕುವ ಆವೇಗದಲ್ಲಿ, ಮಾಜಿ ಪ್ರಧಾನಿ ಮೋರಾರ್ಜಿ ದೇಸಾಯಿ ಸರ್ಕಾರ ಇಂದಿರಾಗಾಂಧಿಯನ್ನು ಜೈಲಿಗೆ ಕಳಿಸಿದಂತೆ, 10 ವರ್ಷಗಳ ಕಾಲ ಲೂಟಿ ಮಾಡುವವರಿಗಿಂತಲೂ ಕಡೆಯಾಗಿ ದೇಶದ ಖಜಾನೆಯನ್ನು ಕೊಳ್ಳೆ ಹೊಡೆದಿರುವ ಆಧುನಿಕ ಮಹಮದ್ ಘೋರಿ, ಘಜ್ನಿ ಮಹಮೂದ್ ಗಳನ್ನು, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕತ್ತು ಹಿಡಿದು ಜೈಲಿಗೆ ತಳ್ಳಿಲ್ಲವಲ್ಲ ಅದಕ್ಕೆ ಸಂತೋಷಪಡಬೇಕು. ದೇಶ ಕೊಳ್ಳೆಹೊಡೆದವರನ್ನು ಶಿಕ್ಷಿಸುವ ವಿಷಯದಲ್ಲೂ ರಾಜಕೀಯ ದ್ವೇಷ ತೋರದೇ ಕಾನೂನಿನ ಪ್ರಕಾರ ನಡೆದುಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ಅವಮಾನ ಮಾಡಲು ಸಾಧ್ಯವೇ?  ಗಡಿ ಭಾಗದಲ್ಲಿ ಸೈನಿಕರ ತಲೆ ಕಡಿದರೂ, ಜಾತ್ಯಾತೀತತೆಯ ಹೆಸರಿನಲ್ಲಿ ಭಯೋತ್ಪಾದಕರ ಪರವೇ ವಕಾಲತ್ತು ವಹಿಸಿ ದೇಶದ ಜನರಿಗೆ ಅವಮಾನ ಮಾಡುತ್ತಿದ್ದ ಇಂತಹವರ ಆಡಳಿತದಲ್ಲಿ ಬದುಕುತ್ತಿದ್ದ  ಜನತೆ ಭಾರತದಲ್ಲಿ ಹುಟ್ಟಿರುವುದು ದೌರ್ಭಾಗ್ಯ ಎಂದುಕೊಳ್ಳದೇ ಮತ್ತೇನು ಸೌಭಾಗ್ಯ ಎಂದುಕೊಳ್ಳಲು ಸಾಧ್ಯವೇ? ಕಳ್ಳರ ಆಳ್ವಿಕೆಗೆ ಒಳಪಟ್ಟ ಭೂಮಿಯ ಮೇಲೆ ಅಭಿಮಾನ ಮೂಡುವುದಾದರೂ ಹೇಗೆ?

ಮಾತೃಭೂಮಿ, ನನ್ನ ದೇಶ ಎಂಬ ಹೆಮ್ಮೆ ಪುಟಿದೇಳುವುದು, ಆ ಭೂಮಿಯನ್ನು ಶ್ರೀರಾಮ, ಕೃಷ್ಣ ದೇವರಾಯ, ರಾಣಾ ಪ್ರತಾಪ್ ಸಿಂಹ, ಶಿವಾಜಿಯಂತವರು ಆಳಿದರೆ ಮಾತ್ರ. ಅದನ್ನು ಬಿಟ್ಟು ದೇಶವನ್ನೇ ಕೊಳ್ಳೆ ಹೊಡೆಯುವ  ಮಹಮದ್ ಘೋರಿ, ಘಜ್ನಿ ಮಹಮೂದ್, ಬಾಬರ್, ಅಕ್ಬರ್ ನಂತಹ ದಾಳಿಕೋರರೆಲ್ಲಾ ದೇಶವನ್ನು ಆಳಿದಾಗ ತನ್ನ ಜನ್ಮಭೂಮಿಯ ಬಗ್ಗೆ ಯಾವ ಸತ್ಪ್ರಜೆ ತಾನೆ ಅಭಿಮಾನವಿಟ್ಟುಕೊಳ್ಳಬಲ್ಲ? ಇಂತಹವರ ಆಳ್ವಿಕೆಗೆ ಒಳಪಟ್ಟ ದೇಶದಲ್ಲಿ ಹುಟ್ಟಿರುವುದು ನಮ್ಮ ದೌರ್ಭಾಗ್ಯ ಎಂದುಕೊಳ್ಳದೇ ಹೇಗೆ ತಾನೆ ಇರಬಲ್ಲ? ಅದನ್ನೇ ಮೋದಿಯೂ ಹೇಳಿರುವುದು.

ಕೊನೆಯದಾಗಿ,  ಒಂದು ವರ್ಷದ ಹಿಂದೆಯೇ ಈ ದೇಶದ ಜನತೆ ಕಾಂಗ್ರೆಸ್ ಗೆ ತಮ್ಮ ಸ್ಥಾನವನ್ನು ತೋರಿಸಿ ನಿಮ್ಮ ಯೋಗ್ಯತೆ ಇಷ್ಟೇ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ವಾಸ್ತವದ ನೆಲೆಗಟ್ಟಿನಲ್ಲಿ ರಾಷ್ಟ್ರದ ಅಭ್ಯುದಯಕ್ಕೆ ಕಾರಣವಾಗುವಂತೆ ತರ್ಕಬದ್ಧವಾಗಿ ಮೋದಿ ಸರ್ಕಾರದ ಆಡಳಿತ ವೈಖರಿ ಬಗ್ಗೆ ಮಾತನಾಡುವುದು ಒಳಿತು ಇಲ್ಲವಾದರೆ, ಭಾರತ ಅತಿ ಶೀಘ್ರವಾಗಿ ಕಾಂಗ್ರೆಸ್ ಮುಕ್ತವಾಗುವುದಕ್ಕೆ ಕಾಂಗ್ರೆಸ್ಸೇ ಪ್ರಮುಖ ಕೊಡುಗೆ ನೀಡಿದಂತಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೇಕಿರುವುದೂ ಅದೇ.  

Friday, 24 April 2015

ಶಂಕರಾಚಾರ್ಯರನ್ನು ಸ್ತುತಿಸಿದ್ದಾಯಿತು, ವಿದ್ಯಾರಣ್ಯರನ್ನೂ ಸ್ಮರಿಸೋಣ....



(ಚಿತ್ರ ಕೃಪೆ:http://www.sringeri.net)

                                             ||ಅವಿದ್ಯಾರಣ್ಯಕಾನ್ತಾರೇ ಭ್ರಮತಾಂ ಪ್ರಾಣಿನಾಂ ಸದಾ                                                                                         ವಿದ್ಯಾಮಾರ್ಗೋಪದೇಷ್ಟಾರಂ ವಿದ್ಯಾರಣ್ಯಗುರುಂ ಶ್ರಯೇ||


ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮಾರ್ಗದರ್ಶನ ನೀಡಿದರು. ದಕ್ಷಿಣಪಥದಲ್ಲಿ ಹಿಂದೂ ಧರ್ಮದ ಸಾಮ್ರಾಜ್ಯವನ್ನು ಸ್ಥಾಪಿಸುವ ಮೂಲಕ ಶೃಂಗೇರಿ ಪೀಠಾಧಿಪತಿಗಳ ಬಿರುದಾವಳಿಗೆ 'ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ’ ಎಂಬ ಬಿರುದನ್ನು ತಂದುಕೊಟ್ಟಿದ್ದೂ ಅವರೇ. ಶೃಂಗೇರಿಯ ಈಗಿನ ಪೀಠಾಧಿಪತಿಗಳಿಗೆ 'ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ' ಎಂದು ಬಿರುದಾವಳಿಗಳಲ್ಲಿ ಹೇಳಿದರೂ ನಮಗೆ ಆ ಯತಿಶ್ರೇಷ್ಠರೇ ನೆನಪಾಗುತ್ತಾರೆ. ಮನಸ್ಸು ಪುಟಿದೇಳುತ್ತದೆ. 'ವಿದ್ಯಾಶಂಕರ ಪಾದಪದ್ಮಾರಾಧಕ' ಎಂದಾಗಲೂ ವಿದ್ಯಾತೀರ್ಥರ ಶಿಷ್ಯರಾಗಿ-ಭಾರತೀ ತೀರ್ಥರ ಕರಕಮಲ ಸಂಜಾತರಾಗಿದ್ದ ಅವರನ್ನೇ ಮನಸ್ಸು ನೆನೆಯುತ್ತದೆ.

ವಿದ್ಯಾರಣ್ಯರು! ಶೃಂಗೇರಿಯ 12ನೇ ಪೀಠಾಧಿಪತಿಗಳೆಂದು ನೆನೆಸಿಕೊಳ್ಳುವುದಕ್ಕಿಂತಲೂ ಹೆಚ್ಚು ನಮ್ಮ ಮನಸ್ಸು, ಪ್ರಜ್ನಾವಂತ ಸಮಾಜ ಅವರನ್ನು ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯೊಂದಿಗೇ ಗುರುತಿಸುತ್ತೆ. ಸನ್ಯಾಸಾಶ್ರಮವನ್ನು ಲೋಕವಿಮುಖ, ನಿವೃತ್ತಮಾರ್ಗ, ಪಾರಮಾರ್ಥಿಕಕ್ಕಷ್ಟೇ ಸೀಮಿತ ಎಂದು ಕಾಣಲಾಗುತ್ತದೆ. ಧರ್ಮ ರಕ್ಷಣೆಗಾಗಿ ಸಾತ್ವಿಕ ಮಾರ್ಗವನ್ನು ಹೊರತುಪಡಿಸಿ ಕ್ಷಾತ್ರಗುಣವನ್ನು ಪ್ರಚೋದಿಸುವ ಯತಿಗಳನ್ನು ಕಾಣುವುದು ಅಪರೂಪ. ಅಂತಹ ಅಪರೂಪದ ಸಾಲಿಗೆ ವಿದ್ಯಾರಣ್ಯರು ಸೇರುತ್ತಾರೆ. ಶೃಂಗೇರಿಯಲ್ಲಿ ಅವರು ಪೀಠಾಧಿಪತಿಗಳಾಗಿದ್ದದ್ದು ಕೇವಲ 6 ವರ್ಷ ಮಾತ್ರ. ಸನಾತನ ಧರ್ಮದ ಮೌಲ್ಯವುಳ್ಳ ಸಾಮ್ರಾಜ್ಯ ಸ್ಥಾಪನೆಯಲ್ಲಿ ವಿದ್ಯಾರಣ್ಯರ ಕೊಡುಗೆ ಅನನ್ಯವಾದದ್ದು.  ಹಾಗೆಂದು ಆ ಸಾಮ್ರಾಜ್ಯ ಸ್ಥಾಪನೆಯ ಹಾದಿಯೇನು ಸುಗಮವಾಗಿರಲಿಲ್ಲ. ದಕ್ಷಿಣ ಭಾರತದ ಮೇಲೆ ಮೊದಲ ಬಾರಿಗೆ ದಂಡಯಾತ್ರೆ ಕೈಗೊಂಡ ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ (1296-1316) ಕ್ರೌರ್ಯ, ಹಿಂದೂ ರಾಜ್ಯಗಳ ಅಧಃಪತನ, ದೇವಾಲಯಗಳ ನಾಶ, ಮಸೀದಿಗಳ ನಿರ್ಮಾಣ, ಮತಾಂತರ ಮೊದಲಾದ ದೌರ್ಜನ್ಯಗಳೇ ಮೊದಲಾದ ಹೀನ ಕೃತ್ಯಗಳೊಂದಿಗೆ ಪರ್ಯವಸಾನ ಕಂಡಿತು. ಮುಂದೆ, ಖಿಲ್ಜಿ ವಂಶಸ್ಥರು ಅಳಿದು ಮಹಮ್ಮದ್-ಬಿನ್-ತುಘಲಕ್ ನ ಆಳ್ವಿಕೆ ಬಂತಾದರೂ (1325- 1351) ದುರಾಕ್ರಮಣ, ಅತ್ಯಾಚಾರ-ಅನಾಚಾರಗಳಿಗೆ, ಹಿಂದೂ ದೊರೆಗಳ ಮೇಲಿನ ದಬ್ಬಾಳಿಕೆ, ದೌರ್ಜನ್ಯಕ್ಕೆ ಯಾವುದೇ ರೀತಿಯಲ್ಲೂ ಕೊರತೆ ಉಂಟಾಗಲಿಲ್ಲ. ಒಟ್ಟಾರೆ ಸನಾತನ ಧರ್ಮದ ಮೇಲೆ ಬಲವಾದ ಪೆಟ್ಟು ಬಿದ್ದಿತ್ತು.

ವಿದ್ಯಾರಣ್ಯರು ಸ್ವತಂತ್ರ ಹಿಂದೂ ಸಾಮ್ರಾಜ್ಯವನ್ನು ನಿರ್ಮಿಸಬೇಕೆಂದು ಸಿದ್ಧತೆ ನಡೆಸಿಕೊಳ್ಳುತ್ತಿದ್ದ ಸಂದರ್ಭದ್ಲಲ್ಲಿ, ಹಿಂದೂರಾಜರು ಅಕ್ಷರಶಃ ನಾಮಾವಶೇಷವಾಗಿದ್ದರು.  ದಕ್ಷಿಣದ ರಾಜಮನೆತನಗಳೂ ಸಂಪೂರ್ಣವಾಗಿ ನಿಸ್ತೇಜವಾಗಿದ್ದವು, ಕ್ಷಾತ್ರ ಗುಣ ಸಂಪೂರ್ಣವಾಗಿ ಕುಗ್ಗಿತ್ತು. ಸಾಮ್ರಾಜ್ಯವನ್ನು ಮತ್ತೆ ಸ್ಥಾಪಿಸಿದರೂ, ಆ ಸಿಂಹಾಸನವನ್ನೇರಿ ಸಮರ್ಥವಾಗಿ ಮುನ್ನಡೇಸುವ ಪ್ರಭುವೇ ಇರಲಿಲ್ಲ. ಅಂಥಹ ವ್ಯಕ್ತಿಯನ್ನು ತಯಾರು ಮಾಡಬೇಕಿತ್ತು. ಇವೆಲ್ಲವನ್ನೂ ಒಗ್ಗೂಡಿಸುವ ಹೊತ್ತಿಗೆ ಸಂಪತ್ತಿನ ಕೊರತೆಯೂ ಎಥೇಚ್ಛವಾಗಿತ್ತು. ಇಂತಹ ನಿರ್ಜೀವ ಸ್ಥಿತಿಯಲ್ಲಿದ್ದ ಪ್ರದೇಶದಲ್ಲಿ ಹೊಸ ಸಾಮ್ರಾಜ್ಯವನ್ನು ಸ್ಥಾಪಿಸುವುದೇ ಅಸಾಮಾನ್ಯ ಸಂಗತಿ. ಇನ್ನು ಸ್ಥಾಪಿತವಾಗಿ ಅಲ್ಪಕಾಲದಲ್ಲೇ ಪರಕೀಯರ ಆಕ್ರಮಣವನ್ನು ಮೆಟ್ಟಿ, ರಾಷ್ಟ್ರದ ಜನತೆಗೆ ಸುವರ್ಣ ಯುಗವನ್ನು ಪರಿಚಯಿಸಿ, ಸುಮಾರು 310 ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯ ಆಳ್ವಿಕೆ ನಡೆಸಿತ್ತು ಎಂದರೆ ಅದಕ್ಕಾಗಿ ಮಾರ್ಗದರ್ಶನ ನೀಡಿದ ವಿದ್ಯಾರಣ್ಯರ ದೂರದೃಷ್ಠಿತ್ವದ ಬಗ್ಗೆ ಹೆಮ್ಮೆ ಎನಿಸುತ್ತದೆ.

ಭಾರತದಲ್ಲಿ ಇಂದಿಗೂ ಶ್ರೇಷ್ಠ ಆಡಳಿತಕ್ಕೆ ಎರಡು ಉಪಮೇಯಗಳನ್ನು ಕೊಡುವ ರೂಢಿಯಿದೆ. ಒಂದು ಯುಗಯುಗಗಳಷ್ಟು ಹಳೆಯ ಕಾಲದ ರಾಮರಾಜ್ಯ, ಮತ್ತೊಂದು ನಮ್ಮದೇ ಯುಗದ ಸ್ವಲ್ಪ ಪುರಾತನ ಕಾಲಘಟ್ಟದ 'ಸುವರ್ಣಯುಗ'ದ ವಿಜಯನಗರ ಸಾಮ್ರಾಜ್ಯ. ರಾಮರಾಜ್ಯ ಎಂದರೆ ಹೀಗೇ ಇದ್ದಿರಬಹುದು ಎಂದು ಸುವರ್ಣಯುಗದ ಜನರು ಹೇಳಿಕೊಳ್ಳುತ್ತಿದ್ದರೇನೋ, ಅಷ್ಟರಮಟ್ಟಿಗೆ ವಿಜಯನಗರ ಸಾಮ್ರಾಜ್ಯ, ಸಂಪತ್ತು, ಸಂಸ್ಕೃತಿಯ ಶ್ರೀಮಂತಿಕೆಗೆ ಅನ್ವರ್ಥವಾಗಿರುವುದು ಇತಿಹಾಸ ಪ್ರಸಿದ್ಧ. ಆದ್ದರಿಂದಲೇ ವಿಜಯನಗರ ಸಾಮ್ರಾಜ್ಯವಳಿದರೂ, ಭೌತಿಕವಾಗಿ ವಿದ್ಯಾರಣ್ಯರು ಇಲ್ಲದೇ ಅದೆಷ್ಟೋ ದಶಕಗಳು ಕಳೆದರೂ ಶ್ರೇಷ್ಠ ಸಾಮ್ರಾಜ್ಯದ ಸ್ಥಾಪನೆಯಲ್ಲಿ ಅವರ ಯೋಗದಾನ ಇಂದಿಗೂ ಅವರನ್ನು ನೆನೆಸಿಕೊಳ್ಳುವಂತೆ ಮಾಡಿದೆ. ಇಷ್ಟಕ್ಕೂ ಧರ್ಮಕ್ಕೆ ಗ್ಲಾನಿ ಬಂದಾಗವಲ್ಲದೇ ಆ ಯಾವ ಯತಿಗಳು ತಾನೇ ವೇದ-ಶಾಸ್ತ್ರ, ಪಾರಮಾರ್ಥಿಕ ಜೀವನವನ್ನು ಬಿಟ್ಟು, ಸಾಮ್ರಾಜ್ಯ ಕಟ್ಟುವುದಕ್ಕೆ ಕುರುಬ ಯುವಕರಲ್ಲಿ ಕ್ಷಾತ್ರ ಗುಣವನ್ನು ತುಂಬಿ ಪ್ರಚೋದಿಸುತ್ತಾರೆ ಹೇಳಿ? ಧರ್ಮ ರಕ್ಷಣೆ ಎಂದಾಗಲೆಲ್ಲಾ ನಾವು ಸಾಮಾನ್ಯವಾಗಿ ಸನಾತನ ಧರ್ಮದಲ್ಲಿದ್ದ ನ್ಯೂನತೆಗಳನ್ನು ಸರಿಪಡಿಸಿ ಉದ್ಧರಿಸಿದ ಆದಿ ಶಂಕರಾಚಾರ್ಯರನ್ನು ಮಾತ್ರ ಬಹುಬೇಗನೆ ನೆನೆಯುತ್ತೇವೆ. ಅದು ನಮ್ಮ ಕರ್ತವ್ಯ ಕೂಡ. ಆದರೆ ಕಾಲ ಉರುಳಿದಂತೆ ಇಸ್ಲಾಮ್ ಬರ್ಬರತೆ ತುತ್ತಾಗಿದ್ದ ಸನಾತನ ಧರ್ಮದ ಉಳಿವಿಗೆ  ಸಾಮ್ರಾಜ್ಯ ಸ್ಥಾಪನೆಯ ತುರ್ತು ಅಗತ್ಯವನ್ನು ಮನಗಂಡು, ಪರಕೀಯರ ದಾಳಿಗೆ ಸಿಲುಕಿ ನಶಿಸುತ್ತಿದ್ದ ಧರ್ಮವನ್ನು ಉಳಿಸಿದ ಯತಿವರೇಣ್ಯ ವಿದ್ಯಾರಣ್ಯರು ಗೌಣವಾಗಿ ನಮ್ಮ ಮನಸಿನಲ್ಲಿದ್ದಾರೆಯೇ ಹೊರತು ಯಾರಾದರೂ ಅವರನ್ನು ಸ್ಮರಿಸಿಕೊಳ್ಳುವ ಸಾರ್ವಜನಿಕರು ಆಚರಿಸುವ ದಿನವಿದೆಯೇ? ವಿದ್ಯಾರಣ್ಯರನ್ನು ಸ್ಮರಿಸುವುದೂ ಕಮ್ಮ ಆದ್ಯ ಕರ್ತವ್ಯಗಳಲ್ಲಿ ಒಂದು.  ಧರ್ಮದ ಉಳಿವಿಗಾಗಿ ಬ್ರಹ್ಮ-ಕ್ಷತ್ರ ಸಾಮರಸ್ಯವನ್ನು ನಮ್ಮ ಸನಾತನ ಧರ್ಮ ಪದೇ ಪದೇ ಸಾರಿದೆ. ಪಾಂಡವರು ಜಯಗಳಿಸುವ ಮೂಲಕ ಧರ್ಮದ ಪುನರುತ್ಥಾನಕ್ಕೆ ಶ್ರೀಕೃಷ್ಣ ಪರಮಾತ್ಮ, ಮಗಧ ಸಾಮ್ರಾಜ್ಯದಲ್ಲಿ ಯವನರ ದಾಳಿ ಮೇರೆ ಮೀರಿ ವೈದಿಕ ಧರ್ಮಕ್ಕೆ ಚ್ಯುತಿಬಂದಾಗ ಚಂದ್ರಗುಪ್ತನ ಮೂಲಕ ಇತಿಹಾಸ ಪ್ರಸಿದ್ಧ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ ಚಾಣಕ್ಯ ಈ ಎರಡು ಪ್ರಕರಣಗಳನ್ನು ಹೊರತುಪಡಿಸಿದರೆ ಧರ್ಮದ ಉಳಿವಿಗಾಗಿ ಇತಿಹಾಸ ಎಂದಿಗೂ ಮರೆಯದ ಸಾಮ್ರಾಜ್ಯವೊಂದರ ಉಗಮಕ್ಕೆ ಗುರುವೊಬ್ಬರು ಕಾರಣೀಭೂತರಾದ ಉದಾಹರಣೆ ಸಿಗುವುದು ವಿದ್ಯಾರಣ್ಯರಲ್ಲಿ ಮಾತ್ರ. ವಿದ್ಯಾರಣ್ಯರು-ವಿಜಯನಗರ ಸಾಮ್ರಾಜ್ಯದ ಬಳಿಕ ಈವರೆಗೂ ಅವರಂತಹ ಮಹಾಪುರುಷರು ನಮ್ಮ ನಾಡಿನಲ್ಲಿ ಜನಿಸಿಲ್ಲವಾದ್ದರಿಂದ ಧರ್ಮ ರಕ್ಷಣೆಯ ದೃಷ್ಟಿಯಿಂದ ವಿದ್ಯಾರಣ್ಯರ ಸ್ಥಾನವು ಶಂಕರಾಚಾರ್ಯರಷ್ಟೇ ಮಹತ್ವ, ಶಂಕರಿಗಷ್ಟೇ ಎರಡನೆಯದಾಗಿದೆ. ಶಂಕರರು ಸನಾತನ ಧರ್ಮ ಸಂಕಟದಲ್ಲಿದ್ದಾಗ ಧರ್ಮವನ್ನು ಉದ್ಧರಿಸಲು ಅವತರಿಸಿದರು. ವಿದ್ಯಾರಣ್ಯರು ಹಿಂದೂ ಸಾಮ್ರಾಜ್ಯ ಸಂಕಟದಲ್ಲಿದ್ದಾಗ, ಸನಾತನ ಸಾಮ್ರಾಜ್ಯವನ್ನು ಉದ್ಧರಿಸಲು ಅವತರಿಸಿದರು. ಕಾಲಘಟ್ಟಗಳು ಬೇರಾದರೂ ಸಾಧಿಸಿದ ಕಾರ್ಯಗಳು ಒಂದೇ.

ಪರಾಶರಮಾಧವೀಯ, ವ್ಯವಹಾರ ಮಾಧವೀಯ ಬೃಹದಾರಣ್ಯಕ ಭಾಷ್ಯವಾರ್ತಿಕಸಾರದಂತಹ ಭಾಷ್ಯಗಳು, ವೇದಾಂತ ಪಂಚದಶೀ ಜೀವನ್ಮುಕ್ರಿವಿವೇಕದಂತಹ ಗ್ರಂಥಗಳೂ ಸೇರಿದಂತೆ ಅವರು ರಚಿಸಿದ ಅದೆಷ್ಟೋ ಗ್ರಂಥಗಳು, ಭಾಷ್ಯಗಳ ಬಗ್ಗೆ ತಿಳಿಸಿದರೆ ಅವರೊಬ್ಬ ಅದ್ಭುತ ಪಂಡಿತರು, ವಿದ್ವಾಂಸರೆಂಬುದು ತಿಳಿಯುತ್ತದೆ. ಆದರೆ ವಿಜಯನಗರ ಸಾಮ್ರಾಜ್ಯೋದಯಕ್ಕೆ ಬೆಂಬಲವಿತ್ತ ಹೊಯ್ಸಳ ಸಾಮ್ರಾಜ್ಯದ ಮೂರನೆ ಬಲ್ಲಾಳ,ತುಳುನಾಡಿನ ಶ್ರೀವೀರಕೆಕ್ಕಾಯಿತಾಯಿ, ಕಂಪಿಲ ಸಾಮ್ರಾಜ್ಯದ ಅರಸರು ಮುಂತಾದ ಅನೇಕ ಪ್ರಮುಖರನ್ನು ಅವರವರ ಪ್ರಾಂತೀಯ ಅಭಿಮಾನಗಳಿಗೆ ಅತೀತರಾಗಿ ವಿಜಯನಗರ ಸಾಮ್ರಾಜ್ಯದ ಉಗಮಕ್ಕೆ ದುಡಿಯುವಂತೆ ಮಾಡಿದ ವಿದ್ಯಾರಣ್ಯರು, ರಕ್ತಪಾತವಿಲ್ಲದೇ ಸಾಮ್ರಾಜ್ಯವನ್ನು ಗೆಲ್ಲುವ ಚಾಣಕ್ಯನನ್ನು ಮತ್ತೆ ಮತ್ತೆ ನೆನಪಿಸುತ್ತಾರೆ. ಸಾಮ್ರಾಜ್ಯವೊಂದನ್ನು ಸ್ಥಾಪನೆ ಮಾಡುವುದಕ್ಕಿಂತ ಅತ್ಯಲ್ಪ ಕಾಲದಲ್ಲೇ ಅಳಿಯದಂತೆ ಎಚ್ಚರ ವಹಿಸುವುದೂ ಸವಾಲಿನ ವಿಷಯವೇ. ಅಧಿಕಾರ ಕೈಗೆ ಬಂದರೆ ಸಾಕು ಸೋದರ ಕಲಹ-ದಾಯಾದಿ ಮಾತ್ಸರ್ಯಗಳಲ್ಲಿ ಸಾಮ್ರಾಜ್ಯಗಳು ನಿರ್ನಾಣವಾಗಿರುವ ಅದೆಷ್ಟೋ ಉದಾಹರಣೆಗಳಿವೆ. ವಿಜಯನಗರದ ಅರಸ ಹರಿಹರ ಮತ್ತವನ ನಾಲ್ಕು ಸಹೋದರರ ನಡುವೆ ಸಾಮರಸ್ಯ ತುಂಬಿ, ಅದೇ ನಾಲ್ಕು ಸಹೋದರರನ್ನು ಪೂರ್ವ, ಪಶ್ಚಿಮ ಉತ್ತರದ ಗಡಿಗಳಲ್ಲಿ ದೃಢರಕ್ಷಣೆಗಾಗಿ ವಿನಿಯೋಗಿಸಿದ ವಿದ್ಯಾರಣ್ಯರು ಓರ್ವ ಅಪೂರ್ವ ರಾಜಗುರುಗಳಾಗಿಯೂ ವಿಜೃಂಭಿಸಿದರು. ಸ್ವತಃ ಅದ್ವೈತಿಗಳಾಗಿ, ಸಾಮ್ರಾಜ್ಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ ತಮ್ಮ ಮತವನ್ನು ಸಾಮ್ರಾಜ್ಯದ ಮೇಲೆ ಹೇರುವುದಾಗಲೀ, ಪರಮತ ಖಂಡನೆಯಾಗಲಿ ಮಾಡದೇ ಇದ್ದದ್ದು  ವಿದ್ಯಾರಣ್ಯರ ಉದಾರ ಧಾರ್ಮಿಕ ನೀತಿ ಹಾಗೂ ಹೃದಯ ವೈಶಾಲ್ಯಗಳನ್ನು ಸ್ಪಷ್ಟವಾಗಿಸುತ್ತವೆ.

ಬಹಮನಿ ಸಾಮ್ರಾಜ್ಯಸ್ಥಾಪಕ ಜಾಫರ್ ಖಾನ್ ಅಲ್ಲಾವುದ್ದೀನ್ ಹಸನ್ ಗಂಗೂ ಬಹಮನಿ ಎಂಬ ಹೆಸರಿನಲ್ಲಿ ಗದ್ದುಗೆಯೇರಿದಾಗ ವಿದ್ಯಾರಣ್ಯರ ಸಲಹೆ ಮೇರೆಗೆ ಬುಕ್ಕ ರಾಯ ಸ್ನೇಹಾಭಿಮಾನ ಸೂಚಕವಾಗಿ ಅಮೂಲ್ಯಮಾಣಿಕ್ಯವನ್ನು ಕಳಿಸಿಕೊಟ್ಟಿದ್ದ. ಇದು ವಿದ್ಯಾರಣ್ಯ ಪ್ರಣೀತ ವಿಜಯನಗರ ಸಾಮ್ರಾಜ್ಯದ ಹೃದಯ ವೈಶಾಲ್ಯತೆಯೂ ಹೌದು. ಪರಮತ ಖಂಡಿಸದೇ ಇರುವುದರಿಂದ ಸನಾತನ ಧರ್ಮವನ್ನು ಮೇಲೆ ಅವಹೇಳನ ಮಾಡುವುದು, ಪ್ರಹಾರ ಮಾಡುವುದು ಅತಿ ಸುಲಭದ ಕೆಲಸವಾಗಿದೆ ಆದ್ದರಿಂದಲೇ ಇಂದಿಗೂ ಹಿಂದೂಗಳಲ್ಲಿ ಕಂಡುಬರುವ ದೌರ್ಬಲ್ಯವೂ ಹೌದೆಂದು ತೋರುತ್ತದೆ. ಆದರೆ ಎಂತಹ ಸ್ಥಿತಿಯಲ್ಲೂ ಪರಮತ ಖಂಡನೆಗೆ ಅವಕಾಶ ನೀಡದ ಯತಿಶ್ರೇಷ್ಠ ವಿದ್ಯಾರಣ್ಯರ ತತ್ವಗಳು ಲೋಕಮಾನಿತ, ಪ್ರಶ್ನಾತೀತ. ಇನ್ನು ಭಾರತದ ರಾಜಪ್ರಭುತ್ವ-ಧರ್ಮವೆಂದರೆ ಮೂಲಭೂತವಾದಿಗಳೆಂಬ ಹಣೆಪಟ್ಟಿ ಕಟ್ಟಿಬಿಡುತ್ತಾರೆ. ರಾಜರನ್ನು ಶೋಷಣೆಯ ಪ್ರತೀಕವೆಂದೇ ಪುಕಾರು ಹಬ್ಬಿಸಲಾಗಿದೆ. ಅರಸನಾದವನು ಧರ್ಮಕ್ಕೆ ಅತೀತನಲ್ಲ, ಸಾಮ್ರಾಜ್ಯ ಬರಿಯ ಮರ್ತ್ಯರಾಜರದಲ್ಲವೆಂದು ಹೇಳಲು ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯದ ರಾಜಮುದ್ರೆಯನ್ನು ವಿರೂಪಾಕ್ಷನ ಹೆಸರಿನಲ್ಲೇ ರೂಪಿಸಿದರು. ಈ ಮೂಲಕ ರಾಜನೂ ಧರ್ಮದ ಚೌಕಟ್ಟಿನಲ್ಲೇ ಇರಬೇಕೆಂದು ಸಾರಿದರು. ಇನ್ನು ವಿಜಯನಗರ ಸಾಮ್ರಾಜ್ಯದ ವರಾಹಲಾಂಛನ ಮತ್ತು ವಿರೂಪಾಕ್ಷಾಂಕಿತಗಳು ಹರಿಹರ ಸಮನ್ವಯಕ್ಕೆ ಸುಂದರ ನಿದರ್ಶನ. ಸಾಮ್ರಾಜ್ಯದಲ್ಲಿ ಹರಿಹರರ ಸಮನ್ವಯವಿದ್ದ ಮೇಲೆ ಶೈವ ವೈಷ್ಣವ ಮತಗಳ ಕಲಹ ಎಲ್ಲಿಂದ ಬರಬೇಕು? ಶಾಸ್ತ್ರ, ವೇದ  ವಾಂಗ್ಮಯವೂ, ಸಾಮ್ರಾಜ್ಯ ಸ್ಥಾಪನೆ ಹೀಗೆ ಅದೆಷ್ಟು ಆಯಾಮಗಳಿಂದ ನೋಡಿದರು, ವಿದ್ಯಾರಣ್ಯರು ಯತಿಶ್ರೇಷ್ಟರಾಗಿ ಮಾತ್ರವಲ್ಲದೇ ಪ್ರತಿಯೊಬ್ಬರಿಗೂ ಆದರ್ಶ ಪುರುಷರಾಗಿ ಕಾಣುತ್ತಾರೆ. ವಿಜಯನಗರ ಸಾಮ್ರಾಜ್ಯವನ್ನು ಕೇವಲ ಒಂದು ಸಾಮ್ರಾಜ್ಯವನ್ನಾಗಿ ನಿರ್ಮಿಸದೇ ಭಾರತೀಯರ ರಾಜಕೀಯ-ಆರ್ಥಿಕ ಪುನರುತ್ಥಾನದ ಸಾಮ್ರಾಜ್ಯವನ್ನಾಗಿಸಿದ ವಿದ್ಯಾರಣ್ಯರದ್ದು ವರ್ಣನೆಗೆ ನಿಲುಕದ ಆದರ್ಶ ವ್ಯಕ್ತಿತ್ವ.

ವಿಪರ್ಯಾಸವೆಂದರೆ, ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಮಾಡಿದ್ದು ಇದೇ ವಿದ್ಯಾರಣ್ಯರ ಎಂಬ ಪ್ರಶ್ನೆಗಳೂ ಈಗಾಗಲೇ ಉದ್ಭವಿಸಿಯಾಗಿದೆ. ಚಿತ್ತ ಸ್ವಾಸ್ಥ್ಯವನ್ನು ಕಳೆದುಕೊಂಡವರು ಮಾತ್ರ ಇಂತಹ ಅಸಂಬದ್ಧ ಪ್ರಶ್ನೆಗಳನ್ನು ಮುಂದಿಡಲು ಸಾಧ್ಯ. ಸುವರ್ಣಯುಗವನ್ನು ಕಂಡ ಭವ್ಯ ಸಾಮ್ರಾಜ್ಯ ಅಧಃಪತನಗೊಳ್ಳಲು, ಸುಂದರ ಶಿಲ್ಪಕಲಾಕೃತಿಗಳು ನಾಶವಾಗಲು ಇದೇ ಶೈವ-ವೈಷ್ಣವರ ಕಲಹ ಕಾರಣ ಎಂದು ಕೆಲವರು ಷರಾ ಎಳೆದು ಸುಳ್ಳು ಪ್ರಮಾಣಪತ್ರಗಳನ್ನು ನೀಡಿದ್ದಾರೆ. ಇಂತಹ ಆಧುನಿಕ ಇತಿಹಾಸಕಾರರು ವಿದ್ಯಾರಣ್ಯರನ್ನು ಮರೆಸುವ ಜೊತೆಗೇ ಏನೆಲ್ಲಾ ಮಾಡಿದರು. ನಮ್ಮ ಸೂಪ್ತಪ್ರಜ್ನೆಯಿಂದ ವಿದ್ಯಾರಣ್ಯರನ್ನು ನಿಧಾನವಾಗಿ ಜಾರಿಸಿದರೆ, ವಿಜಯನಗರ ಸ್ಥಾಪನೆ ಮಾಡಿದ ವಿದ್ಯಾರಣ್ಯರು ಇವರೇನಾ? ಎಂದು ಪ್ರಶ್ನೆ ಮಾಡುತ್ತಿರುವವರು,  ನಾಳೆ ವಿಜಯನಗರ ಸಾಮ್ರಾಜ್ಯವೂ ಸೇರಿದಂತೆ  ವಿದ್ಯಾರಣ್ಯರೂ ಕಾಲ್ಪನಿಕ, ನಿಜವಾಗಿ ಅಂತಹ ವ್ಯಕ್ತಿಗಳೇ ಇರಲಿಲ್ಲ ಎಂದೂ ಷರಾ ಎಳೆಯುತ್ತಾರೆ ಎಚ್ಚರ. ಅಂದಹಾಗೆ ಇಂದು ವೈಶಾಖ ಶುದ್ಧ ಸಪ್ತಮಿ ವಿದ್ಯಾರಣ್ಯರ ಜಯಂತಿ. ಮೊನ್ನೆಯಷ್ಟೇ ಶಂಕರಾಚಾರ್ಯರ ಜಯಂತಿಯನ್ನು ಆಚರಿಸಿ ಶಂಕರರನ್ನು ಸ್ತುತಿಸಿದ್ದೇವೆ, ಇಂದು ವಿದ್ಯಾರಣ್ಯರನ್ನೂ ಸ್ಮರಿಸೋಣ.



Thursday, 23 April 2015

ಶಂಕರಾಚಾರ್ಯರ ಜಯಂತಿ: ವಿಶ್ವಮಟ್ಟದಲ್ಲಿ ತತ್ವಜ್ನಾನಿಗಳ ದಿನಾಚರಣೆ ನಡೆಯಲಿ





ಅವರು ಹರಿದು ಹಂಚಿಹೋಗುತ್ತಿದ್ದ ಧರ್ಮವನ್ನು ಪುನರ್ ಪ್ರತಿಷ್ಠಾಪಿಸಿದರು, ವಾಹನಗಳ ಸೌಲಭ್ಯದ ಕಲ್ಪನೆಯೂ ಇಲ್ಲದ ಸಂದರ್ಭದಲ್ಲಿ ದೇಶದ ಉದ್ದಗಲ ಕಾಲ್ನಡಿಯಲ್ಲಿ ಸಂಚರಿಸಿ ವಿಘಟಿಸಿ ಹೋಗಿದ್ದ ಭೂಪಟಕ್ಕೆ ದೇಶವೆಂಬ ಕಾನ್ಸೆಪ್ಟ್ ನೀಡಿದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಸನಾತನ ಧರ್ಮವನ್ನು ರಕ್ಷಿಸಿ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ಜಗದ್ಗುರು ಶಂಕರಾಚಾರ್ಯರನ್ನು ಜನರು ತತ್ವಜ್ನಾನಿ ಎಂದು ಗೌರವಿಸಿ, ಶಂಕರನ ಅವತಾರವೆಂದೆ ಪೂಜಿಸಿದರು.

ವೈದಿಕ ಮತ ಪ್ರತಿಪಾದಕರಾದ ಶಂಕರಾಚಾರ್ಯರು, ಸನಾತನ ಧರ್ಮದಲ್ಲಿನ ಅನೇಕ ತಪ್ಪು ಆಚರಣೆಗಳನ್ನು ಸರಿಪಡಿಸಿ, ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗು ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು. ಆದಿಶಂಕರರು ಭಗವದ್ಗೀತೆ, ಉಪನಿಷತ್ ಹಾಗು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾದರು. ಶಂಕರಾಚಾರ್ಯರು ಭೇಟಿ ನೀಡಿದ ಸ್ಥಳಗಳೆಲ್ಲ ಇದೀಗ ಆಧ್ಯಾತ್ಮಿಕ ಕೇಂದ್ರಗಳಾಗಿ ಜಗತ್ತಿಗೇ ಮಾರ್ಗದರ್ಶನ ಮಾಡುವುದರ ಜತೆ ಜತೆಯಲ್ಲಿ ಅಪಾರವಾದ ಜ್ನಾನ ಸಂಪತ್ತನ್ನು, ವಿದ್ಯಾ ಸಂಪತ್ತನ್ನು, ತತ್ತ್ವ ಜ್ಞಾನವನ್ನು ಧಾರೆ ಎರೆಯುವ ಕೇಂದ್ರಗಳಾಗಿ ರೂಪುಗೊಂಡಿವೆ. ಶಂಕರರ ಹೆಸರು ತತ್ವಜ್ನಾನಕ್ಕೆ ಅನ್ವರ್ಥವಾಗಿ ಉಳಿದುಕೊಂಡಿದೆ.
ಜಗತ್ತಿನ ಅಂಧಕಾರವನ್ನು ತೊಡೆದು ಜ್ಞಾನದ ಬೆಳಕನ್ನು ಚೆಲ್ಲಿದ ದೇವತಾ ಸ್ವರೂಪಿಯಾದ ಶಂಕಾರಾಚಾರ್ಯರು ಇಂದಿಗೂ ಆರಾಧಿಸಲ್ಪಡುತ್ತಿರುವುದು ಇದೇ ಕಾರಣಕ್ಕಾಗಿ. ಮಹಾನ್ ದೈವಭಕ್ತರಾಗಿದ್ದ ಅವರು ಎಲ್ಲ ದೇವರುಗಳೂ ಒಂದೇ ಮಾನವಕುಲವೆಲ್ಲ ಒಂದೇ ಎನ್ನುವ ಮೂಲಕ ಸಾಮಾಜಿಕ ನ್ಯಾಯದ ಬಗ್ಗೆ ಜನತೆಗೆ ಸಾರಿ ಹೇಳಿದ್ದರು. ಯಾವ ಪಂಥವನ್ನೂ ಹುಟ್ಟುಹಾಕದೆ ಎಲ್ಲ ಜಾತಿ ವರ್ಗಗಳನ್ನು ಸಮನಾಗಿ ಕಾಣಿರಿ. ಭಗವಂತನ ನಾಮಸ್ಮರಣೆಯಲ್ಲಿ ಜಾತಿ, ಭೇದಗಳು ಕೂಡದು. ಎಲ್ಲರಿಗೂ ಭಗವಂತನ ಪ್ರಾರ್ಥಿಸುವ ಪ್ರೀತಿಸುವ ಹಕ್ಕಿದೆ ಎಂಬ ಮಂತ್ರವನ್ನು ಜಗತ್ತಿಗೆ ಸಾರಿದ್ದಾರೆ.

ಏಳನೇ ಶತಮಾನದಲ್ಲಿ ಜಾತಿ ಹಾಗೂ ದೇವರುಗಳ ಹೆಸರಿನಲ್ಲಿ ನಡೆಯುತ್ತಿದ್ದ ಕಲಹ, ಘರ್ಷಣೆ ಹಾಗೂ ನರಬಲಿಗಳನ್ನು ತಡೆಯುವ ನಿಟ್ಟಿನಲ್ಲಿ ಜನರಿಗೆ ತಿಳಿ ಹೇಳಿದ ಶಂಕರರು ಈ ಮೂಲಕ ಸಮಾಜೋದ್ಧಾರಕರಾಗಿಯೂ ಸಮಾಜ ಸುಧಾರಕರಾಗಿಯೂ ಗುರುತಿಸಿಕೊಳ್ಳುತ್ತಾರೆ. ನರಬಲಿ ನೀಡುತ್ತಿದ್ದ ಕಾಪಾಲಿಗಳನ್ನೂ ತಮ್ಮ ಜ್ನಾನದಿಂದ ಬದಲಿಸಿದ ಶಂಕರಾಚಾರ್ಯರು, ಅವರಿಗೆ ಅರಿವು ಮೂಡಿಸಿದ್ದಲ್ಲದೆ ಕಾಪಾಲಿಗಳಿಗೂ ಗುರುಗಳಾಗಿ ಜಗವನ್ನು ಬೆಳಗಿದರು. ಇಡೀ ವಿಶ್ವಕ್ಕೇ ಬೆಳಕನ್ನು ನೀಡಿ ಜಗದ್ಗುರುಗಳೆನಿಸಿಕೊಂಡ ಶಂಕರಾಚಾರ್ಯರು ಇಂದು ಏಕೆ ಯಾವುದೋ ಒಂದು ವರ್ಗಕ್ಕೆ, ಅಥವಾ ಒಂದು ದೇಶಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಅವರು ಸೀಮಿತಗೊಂಡಿಲ್ಲ, ಸೀಮಿತಗೊಳಿಸಲಾಗಿದೆ. ಅವಕಾಶ ಸಿಕ್ಕಾಗಲೆಲ್ಲಾ ಶಂಕರರನ್ನು ಅವಹೇಳನ ಮಾಡುವ ಮೂಲಕ ಅವರನ್ನು ಒಂದು ವರ್ಗಕ್ಕೆ ಮಾತ್ರ ಸೀಮಿತಗೊಳಿಸುವ ವ್ಯವಸ್ಥಿತ ಹುನ್ನಾರ ನಡೆದಿದೆ. ಇಂದಿಗೂ ಲೆಕ್ಕವಿಲ್ಲದಷ್ಟು ವಿದೇಶಿಗರು ತತ್ವಜ್ನಾನದ ಸಾರವನ್ನು ತಿಳಿಯಲು ಇದೇ ಶಂಕರಾಚಾರ್ಯರು ಸ್ಥಾಪಿಸಿರುವ ನಾಲ್ಕು ಆಮ್ನಾಯ ಪೀಠಗಳಿಗೆ ಭೇಟಿ ನೀಡುತ್ತಾರೆ. ತತ್ವಜ್ನಾನದ ಬಗ್ಗೆ ಶಂಕರರ ನಾಲ್ಕು ಆಮ್ನಾಯಪೀಠಗಳ ಪೀಠಾಧಿಪತಿಗಳನ್ನು ಸಂದರ್ಶಿಸಿ ಜ್ನಾನವೃದ್ಧಿಗೊಳಿಸಿಕೊಳ್ಳುತ್ತಿದ್ದಾರೆ. ಶಂಕರರಿಗೆ ಶರಣಾಗುತ್ತಿದ್ದಾರೆ. ಆದರೆ ಭಾರತದಲ್ಲೇ ಇರುವ ಮೂಢರಿಗೆ ಇನ್ನೂ ಜ್ನಾನೋದಯವಾಗಿಲ್ಲ. ಶಂಕರಾಚಾರ್ಯರ ಹೆಸರು ಕೇಳಿದರೇನೆ ಹೌಹಾರುತ್ತಾರೆ. ವಿನಾಕಾರಣ ಅವರ ವಿರುದ್ಧ ಮಾತನಾಡುತ್ತಾರೆ. ಬೌದ್ಧ ಧರ್ಮ ನಾಶವಾಗುವುದರಿಂದ ಹಿಡಿದು ಇಂದಿನ ಸಮಸ್ಯೆಗಳವರೆಗೆ ಪ್ರತಿಯೊಂದಕ್ಕೂ ಅವರೇ ಕಾರಣ ಎಂದು ದೂರಲಾಗುತ್ತದೆ. Don't answer the foolish arguments of fools, or you will become as foolish as they are ಎಂಬ ಮಾತಿನಂತೆ ಜಗತ್ತೇ ಪೂಜಿಸುವ ಶಂಕರಾಚಾರ್ಯರನ್ನು ನಿಂದಿಸುವವರ ಬಗ್ಗೆ ಪ್ರತಿಕ್ರಿಯೆ ನೀಡದೇ, ನಿರ್ಲಕ್ಷಿಸಿ, ಆಚಾರ್ಯರು ತೋರಿದ ಮಾರ್ಗದಲ್ಲೇ ಮುನ್ನಡೆದರೆ ಅದೇ ನಾವು ಶಂಕರಾಚಾರ್ಯರಿಗೆ ತೋರುವ ಗುರುಭಕ್ತಿಯಾಗಿದೆ.

ಇಷ್ಟಕ್ಕೂ ನಿಂದಿಸಿದರೆ ಅವರ ವಿದ್ವತ್ಪೂರ್ಣ ವ್ಯಕ್ತಿತ್ವಕ್ಕೆ ಕಿಂಚಿತ್ತೂ ಕುಂದುಂಟಾಗುವುದಕ್ಕೆ ಶಂಕರಾಚಾರ್ಯರೇನು ಸಾಮಾನ್ಯರೇ? ಅವರ ಕೀರ್ತಿ, ದೇಶೋವಿಶಾಲವಾದದ್ದು, ದೇಶೋವಿಶಾಲವೇ ವಿಶ್ವಕ್ಕೇ ತಿಳಿದಿರುವಂಥಹದ್ದು, ಆದರೂ ಏಕೆ ಆಚಾರ್ಯರು ಭಾರತಕ್ಕೆ ಸೀಮಿತಗೊಂಡಿದ್ದಾರೆ. ಈ ಹಿಂದಿನ ಸರ್ಕಾರವೇನೋ ಶೃಂಗೇರಿ ಗುರುಗಳ ಆಜ್ನೆಯಂತೆ ಕರ್ನಾಟಕದಲ್ಲಿ ಶಂಕರಾಚಾರ್ಯರ ಜನ್ಮದಿನವನ್ನು ತತ್ವಜ್ನಾನಿಗಳ ದಿನಾಚರಣೆ ಎಂದು ಆಚರಿಸಲು ಆದೇಶ ಹೊರಡಿಸಿ, ಇಂದಿಗೂ ಮುಂದುವರೆದುಕೊಂಡು ಬಂದಿದೆ. ಇದನ್ನು ವಿಶ್ವದ ಮಟ್ಟಲ್ಲೇಕೆ ಆಚರಿಸಬಾರದು? ಆ ಮೂಲಕ ಜಗತ್ತಿಗೇ ತತ್ವಜ್ನಾನದ ಬೆಳಕನ್ನು ನೀಡಿದ ಪ್ರಖರ ವ್ಯಕ್ತಿತ್ವವನ್ನು ಮತ್ತಷ್ಟು ಏಕೆ ಮೆರೆಸಬಾರದು? ಹೌದು, ಕಳೆದ ಬಾರಿಗಿಂತಲೂ ಸನಾತನ ಧರ್ಮಕ್ಕೆ ಸಂಬಂಧಿಸಿದ ವಿಶೇಷ ದಿನಗಳ ಆಚರಣೆಗಳಲ್ಲಿ ಹುರುಪು ಮೂಡಿದೆ.
ಅಂತಹ ನಾಯಕತ್ವ ದೇಶಕ್ಕೆ ದೊರೆತಿದೆ. ಈ ಬಾರಿಯಿಂದ ಪ್ರತಿ ಆಚರಣೆಯಲ್ಲೂ ಹೊಸ ಆಶಾಕಿರಣಗಳು ಮೂಡುತ್ತಿವೆ. ಭಾರತವೂ ಜಗದ್ಗುರುವಾಗಲು ತುದಿಗಾಲಲ್ಲಿ ನಿಂತಿದೆ. ಇತಿಹಾಸ ಮರುಕಳಿಸುವ ಸೂಚನೆ ದೊರೆತಿದೆ. ಭಾರತದ ಕೊಡುಗೆಯಾದ ಯೋಗವನ್ನು ವಿಶ್ವಮಟ್ಟದಲ್ಲಿ ಕೊಂಡೊಯ್ದು, ವಿಶ್ವ ಸಂಸ್ಥೆಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಘೋಷಿಸಿದ್ದಾಯಿತು. ಶಾಲೆಗಳಲ್ಲಿ ವೈದಿಕ ಗಣಿತ ಕಲಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಜರ್ಮನ್ ಭಾಷೆಗಿಂತಲೂ ಈ ವರ್ಷದಿಂದ ಸಂಸ್ಕೃತಕ್ಕೆ ಅದೇನೋ ಹೊಸ ಹೊಳಪು ಬಂದಂತೆ ಕಾಣುತ್ತಿದೆ. ದೇಶದ ನಾಯಕತ್ವ ಹೊತ್ತವರೂ ಹೋದಲ್ಲೆಲ್ಲಾ, ಭಾರತದ ಸನಾತನ ಸಂಶೋಧನೆಗಳು ಅತಿ ಪುರಾತನವಾದದ್ದು ಎಂದು ಮೌಲ್ಯಗಳನ್ನು ಕೊಂಡಾಡುತ್ತಿದ್ದಾರೆ. ರಾಜಕಾರಣಿಗಳಿಗೆ, ಎಡಪಂಥೀಯರಿಗೆ ವರ್ಜ್ಯವಾಗಿದ್ದ ಸಂತರನ್ನು ನೆನೆಸಿಕೊಳ್ಳುತ್ತಿದ್ದಾರೆ. ಸಂಸತ್ ನಲ್ಲೇ ನಿಂತು ದೇಶ ಕಟ್ಟಿರುವವರು ರಾಜಕಾರಣಿಗಳಲ್ಲಿ ಭಾರತದ ಋಷಿ ಮುನಿಗಳು, ಸಾಧು-ಸಂತರು ಎಂದು ನಿರ್ಬಿಢೆಯಿಂದ ಹೇಳುತ್ತಿದ್ದಾರೆ. ಅಲ್ಲದೇ ಏಕಂ ಸತ್ ವಿಪ್ರಾಃ ಬಹುದಾವದಂತಿಃ ಎಂಬಂತಹ ಸಂಸ್ಕೃತದ ಉದ್ಘಾರಗಳನ್ನು ಉದಾಹರಿಸುತ್ತಿದ್ದಾರೆ. ಕಾನ್ವೊಕೇಷನ್ ಗಳಿಗೆ ಹೋದರೆ, ಈ ಪದ್ಧತಿ ನಮ್ಮಲ್ಲಿ, ಅನ್ಯರಾಷ್ಟ್ರಗಳ ನಾಗರಿಕತೆ ಕಣ್ಣುಬಿಡುವುದಕ್ಕಿಂತಲೂ ಮೊದಲೇ ಇತ್ತು, ಬೇಕಾದರೆ ತೈತ್ತರೀಯ ಉಪನಿಷದ್ ಓದಿ ಎಂದು ವಿದ್ಯಾರ್ಥಿಗಳಿಗೆ ದೇಶಪ್ರೇಮವನ್ನು ತುಂಬುತ್ತಿದ್ದಾರೆ. ಎಷ್ಟೆಲ್ಲಾ ಸಕಾರಾತ್ಮಕ ಬೆಳವಣಿಗೆಗಳು! ಇದರಲ್ಲಿ ಶಂಕರಾಚಾರ್ಯರ ಜಯಂತಿಯನ್ನು ವಿಶ್ವಮಟ್ಟದಲ್ಲಿ ತತ್ವಜ್ನಾನಿಗಳ ದಿನವನ್ನಾಗಿ ಆಚರಿಸಲು ಘೋಷಣೆ ಮಾಡುವುದರತ್ತ ಕೇಂದ್ರ ಸರ್ಕಾರ ಗಮನ ಹರಿಸಲಿ, ಯೋಗವಾಯಿತು, ಶಂಕರಾಚಾರ್ಯರ ಜಯಂತಿಯನ್ನೂ ತತ್ವಜ್ನಾನಿಗಳ ದಿನವನ್ನಾಗಿ ಯು.ಎನ್ ಘೋಷಣೆ ಮಾಡಲಿ. ಹೇಗಿದ್ದರೂ ಭಾರತ ಜಗದ್ಗುರುವಾಗಬೇಕೆಂದು ಹೊರಟಿದೆ. ಜಗದ್ಗುರಿವಿನ ಜನ್ಮದಿನಾಚರಣೆಯ ಮೂಲಕವೇ ಇದು ಸಾಕಾರಗೊಳ್ಳಲಿ!

Monday, 13 April 2015

ಶೃಂಗೇರಿ ಶಿವಗಂಗಾ ಶಾರದಾ ಪೀಠದ 'ಪುರುಷೋತ್ತಮ' ಭಾರತೀ ಸ್ವಾಮಿಗಳು




ಟಾರು ಕಾಣದ ರಸ್ತೆಗಳು, ವಾಹನಗಳ ಸೌಕರ್ಯ ಇರದಿದ್ದ 16ನೇ ಶತಮಾನದ ಕಾಲ.  ಬೆಂಗಳೂರು, ಮೈಸೂರು, ತುಮಕೂರು ಪ್ರದೇಶಗಳಲ್ಲಿದ್ದ ಕೆಲವರನ್ನು ಹೊರತುಪಡಿಸಿ ಎಲ್ಲಾ ಆಸ್ತಿಕ ಜನರಿಗೆ ಅದ್ವೈತ ಪ್ರತಿಪಾದನೆಯ ನೆಲೆಬೀಡಾಗಿರುವ ಶೃಂಗೇರಿಯ ಗುರುಗಳನ್ನು ದರ್ಶಿಸುವುದೆಂದರೆ ಕೊಂಚ ಪ್ರಯಾಸದ ಮಾತೇ ಆಗಿತ್ತು. ಶೃಂಗೇರಿ ಗುರುಗಳು ಅಲ್ಲಿಗೆ ಬಂದರಷ್ಟೇ ದರ್ಶನ ಭಾಗ್ಯ, ಇಲ್ಲದೇ ಇದ್ದರೆ ತಾವಾಗಿಯೇ ದೂರದ ಶೃಂಗೇರಿಗೆ ಹೋಗುವುದು ದಿನಗಟ್ಟಲೆಯ ಮಾತಾಗಿತ್ತು.

ಶೃಂಗೇರಿ ಜಗದ್ಗುರುಗಳು ತಮ್ಮ ಹತ್ತಿರದಲ್ಲೇ ಇದ್ದ ಶಿಷ್ಯ ಸಮೂಹವನ್ನು ಆಶೀರ್ವದಿಸುವಂತೆಯೇ, ತಮ್ಮ ಜಿಗ್ನಾಸೆಗಳನ್ನು ಬಗೆಹರಿಸಿ, ಧರ್ಮಮಾರ್ಗದಲ್ಲಿ ಮುನ್ನಡೆಸಿ ಆಶೀರ್ವದಿಸುವ ಯತಿಗಳಿಗಾಗಿ ಶೃಂಗೇರಿಗೆ ದೂರವಿದ್ದ ಬೆಂಗಳೂರಿನ ಸುತ್ತಮುತ್ತಲ ಪ್ರದೇಶದಲ್ಲಿರುವವರು ಕಾದಿದ್ದರು.  ಶೃಂಗೇರಿಯ 24ನೇ ಜಗದ್ಗುರುಗಳಾಗಿದ್ದ ಅಭಿನವ ನೃಸಿಂಹ ಭಾರತೀ ಸ್ವಾಮಿಗಳು 1615ರಲ್ಲಿ ಸಂಚಾರ ಕೈಗೊಂಡಿದ್ದಾಗ ಮೈಸೂರು ಅರಸರಾಗಿದ್ದ ರಾಜ ಒಡೆಯರು, ಮೈಸೂರು ಸಂಸ್ಥಾನದಲ್ಲಿ ಶೃಂಗೇರಿಯ ಒಂದು ಶಾಖಾಮಠವನ್ನು ಸ್ಥಾಪಿಸಬೇಕೆಂದು ಜಗದ್ಗುರುಗಳಲ್ಲಿ ಪ್ರಾರ್ಥಿಸಿದ್ದರು. ಮಹಾರಾಜರ ಪ್ರಾರ್ಥನೆಯನ್ನು ಒಪ್ಪಿದ ಗುರುಗಳು ತಮ್ಮ ಶಿಷ್ಯ ಪರಿವಾರದಲ್ಲಿದ್ದ ಶಂಕರ ಭಾರತಿಗಳೆಂಬ ಸಂನ್ಯಾಸಿಗಳನ್ನು ರಾಜರೊಂದಿಗೆ ಕಳಿಸಿ ಶಾಖಾಮಠವನ್ನು ಅನುಗ್ರಹಿಸಿದರು.

ಅಭಿನವ ನೃಸಿಂಹ ಭಾರತೀ ಸ್ವಾಮಿಗಳವರ ಅಪ್ಪಣೆಯಂತೆ ಶಂಕರ ಭಾರತೀ ಸ್ವಾಮಿಗಳು ಶೃಂಗೇರಿ ಶಿವಗಂಗಾ ಪೀಠದ ಪ್ರಥಮ ಪೀಠಾಧಿಪತಿಗಳಾಗಿ ಪೀಠಾರೋಹಣ ಮಾಡಿದರು. ಬೆಂಗಳೂರಿನ ನೆಲೆಮಂಗಲದ ಬಳಿಯ ಶಿವಗಂಗೆಯಲ್ಲಿ ಶೃಂಗೇರಿಯ ಶಾಖಾ ಮಠದ ಸ್ಥಾಪನೆಯಾಗಿದ್ದು ಹೀಗೆ. ಅಂದಿನಿಂದ ಇಂದಿನವರೆಗೂ ಶೃಂಗೇರಿ ಶಿವಗಂಗಾ ಮಠದ ಗುರುಪರಂಪರೆ ನಡೆದುಕೊಂಡುಬಂದಿದೆ. ಆದ್ದರಿಂದಲೇ ಶೃಂಗೇರಿ ಪರಂಪರೆಯಲ್ಲಿ ಶೃಂಗೇರಿ ಶಿವಗಂಗಾ ಪೀಠಕ್ಕೂ ವಿಶೇಷ ಸ್ಥಾನಮಾನಗಳಿವೆ. 1799ರಲ್ಲಿ ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರು ಅಪ್ರಾಪ್ತರಾದುದರಿಂದ ಪೂರ್ಣಯ್ಯನವರು ರಾಜಪ್ರತಿನಿಧಿಯಾಗಿ ರಾಜ್ಯದ ಚುಕ್ಕಾಣಿಯನ್ನು ಹಿಡಿದರು. ಶೃಂಗೇರಿ ಮಠಕ್ಕೆ ಗೌರವಾದರಗಳಿಂದ ನಡೆದುಕೊಳ್ಳುತ್ತಿದ್ದ ಪೂರ್ಣಯ್ಯನವರು, ಮೈಸೂರು ಸಂಸ್ಥಾನದಲ್ಲಿ ನಡೆಯುತ್ತಿದ್ದ, ಶುಭ-ಸಮಾರಂಭಗಳಲ್ಲಿ ಅಗ್ರ ತಾಂಬೂಲವನ್ನು ಮುಂಚಿತವಾಗಿ ಶೃಂಗೇರಿ ಮಠಕ್ಕೂ ತರುವಾಯ ಶೃಂಗೇರಿ ಶಿವಗಂಗೆ ಮಠಕ್ಕೂ ಕೊಡುವಂತೆ ಆಜ್ಞಾಪಿಸಿದ್ದರ ಬಗ್ಗೆ,  ಉಲ್ಲೇಖಗಳಿವೆ. ಶೃಂಗೇರಿಯ ಶಾಖಾಮಠಗಳಲ್ಲಿ  ಶಿವಗಂಗೆಪೀಠ ಹೆಚ್ಚು ಮಹತ್ವಪಡೆದಿದೆ ಎಂಬುದಕ್ಕೆ ಇಂತಹ ಅನೇಕ ಉದಾಹರಣೆಗಳಿವೆ. 

ಆಧ್ಯಾತ್ಮಿಕ ಶ್ರೀಮಂತಿಕೆಯನ್ನು ಒಡಲಲ್ಲಿಟ್ಟುಕೊಂಡತಹ ಶಿವಗಂಗೆ ಕ್ಷೇತ್ರ ಶೃಂಗೇರಿಯ ಶಾಖಾ ಮಠ ಸ್ಥಾಪನೆಯಾಗುವುಕ್ಕೂ ಮುನ್ನವೇ ದಕ್ಷಿಣ ಕಾಶಿ ಎಂದು ಸುಪ್ರಸಿದ್ಧ. ಅಗಸ್ತ್ಯರು ತಪಸ್ಸು ಮಾಡಿದ, ಅಗಸ್ತ್ಯ ತೀರ್ಥದ ಸುತ್ತ ನೂರೆಂಟು ಶಿವಲಿಂಗಳಿರುವ ಈ ಕ್ಷೇತ್ರದ ಪ್ರತಿಯೊಂದು ಚರಾಚರಗಳಲ್ಲೂ ಅದ್ವೈತವೇ ಗೋಚರಿಸುತ್ತದೆ.  ಪೂರ್ವಕ್ಕೆ ವೃಷಭಾಕೃತಿ, ಪಶ್ಚಿಮಕ್ಕೆ ಗಣಪತಿ, ಉತ್ತರಕ್ಕೆ ಸರ್ಪದ ಆಕೃತಿ, ದಕ್ಷಿಣಕ್ಕೆ ಲಿಂಗಾಕೃತಿ ಕಾಣುವುದು ಶಿವಗಂಗೆಯ ಬೆಟ್ಟದ ವೈಶಿಷ್ಟ್ಯ. ಗೆರೆ ಎಳೆದಂತೆ ಬೆಟ್ಟದ ಎದುರು ನಿಂತರೆ ಕಾಣುವುದೇ ಶೃಂಗೇರಿ ಶಿವಗಂಗಾ ಶಾರದಾಪೀಠ.  ಶೃಂಗೇರಿ ಪರಂಪರೆಯ ಯತಿಗಳನ್ನು ಭಗವಾನ್ ಶಂಕರನ ಸ್ವರೂಪವೆಂದೇ ತಿಳಿಯಲಾಗುತ್ತದೆ. ಶಿವಗಂಗಾ ಮಠದಲ್ಲಿ ನಿಂತು ಬೆಟ್ಟವನ್ನು ನೋಡಿದರೆ ಬೃಹದಾಕಾರದ ಬೆಟ್ಟ ನಂದಿಯ ಆಕಾರದಲ್ಲಿ ಕಾಣುತ್ತದೆ. ಹಾಗೆ ಕಂಡಾಗಲೆಲ್ಲಾ ಶಂಕರರ ಸ್ವರೂಪದಲ್ಲಿರುವ ಯತಿಗಳ ಮುಂದೆ ಶ್ರದ್ಧೆಯಿಂದ ಕುಳಿತ ನಂದಿ ಏನನ್ನೋ ಆಲಿಸುತ್ತಿದೆ ಎಂದೆನಿಸದೇ ಇರದು. ಆಧ್ಯಾತ್ಮ ಸಾಧನೆಗೆ ಪ್ರಶಸ್ತವೆಂಬಂತಿರುವ ಶೃಂಗೇರಿ ಶಿವಗಂಗಾ ಪೀಠ, ಶಂಕರ ಭಾರತೀ ಸ್ವಾಮಿಗಳಿಂದ, ಈಗಿನ ಪೀಠಾಧಿಪತಿಗಳಾದ ಪುರುಷೋತ್ತಮ ಭಾರತೀ ಸ್ವಾಮಿಗಳವರೆಗೆ ಸವಿಶೇಷ ಗುರು ಪರಂಪರೆಯನ್ನು ಹೊಂದಿದೆ.  ಲೋಕೋತ್ತರ ಪ್ರತಿಭಾ ಸಂಪನ್ನರನ್ನು, ತಪಶ್ಚಕ್ರವರ್ತಿಗಳನ್ನೂ ಕಂಡಿದೆ. ಈ ಪೀಠವನ್ನು ಅಲಂಕರಿಸಿದ್ದ ಈ  ಹಿಂದಿನ ಪೀಠಾಧಿಪತಿಗಳು, ಪುರುಶೋತ್ತಮ ಭಾರತೀ ಸ್ವಾಮಿಗಳ ಗುರುಗಳು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳಂತೂ ಸನ್ಯಾಸ ಧರ್ಮಕ್ಕೆ ಅನ್ವರ್ಥವೆಂಬಂತಿದ್ದರು.  ಶೃಂಗೇರಿಯ ಭಾರತೀ ತೀರ್ಥ ಸ್ವಾಮಿಗಳಿಂದ ತಪಶ್ಚಕ್ರವರ್ತಿ ಎಂಬ ಬಿರುದನ್ನು ಪಡೆದರು.  ಮಹಾಪ್ರಾಜ್ಞರೂ, ಔದಾರ್ಯಾದಿ ಗುಣಾನ್ವಿತರೂ ಆಗಿದ್ದ ಗುರುಗಳು, ಪುಂಖಾನುಪುಂಖ ವಿಷಯೇಕ್ಷಣ ತತ್ಪರೋಪಿ ಬ್ರಹ್ಮಾವಲೋಕನ ಧಿಯಂ ನ ಜಹಾತಿ ಯೋಗಿ ( ಲೌಕಿಕ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದರೂ ಜ್ಞಾನಿಗಳು ತಮ್ಮ ಲಕ್ಷ್ಯವನ್ನು ಸದಾ ಬ್ರಹ್ಮದ ಮೇಲೆಯೇ ಸ್ಥಿರೀಕರಿಸಿರುತ್ತಾರೆ ಎಂಬ ಮಾತಿನಂತೆ ಲೌಕಿಕ ವಿದ್ಯೆಯಲ್ಲೂ, ಅಲೌಕಿಕದಲ್ಲೂ ಅನನ್ಯ ಸಾಧನೆ ಮಾಡಿದ್ದರು.  

ಶೃಂಗೇರಿ ಶಿವಗಂಗಾ ಪೀಠಾಧಿಪತಿ ಪುರುಷೋತ್ತಮ ಭಾರತೀ ಸ್ವಾಮಿಗಳು:

ಇಂತಹ ಯತಿಪುಂಗವರಿದ್ದ ಗುರುಪರಂಪರೆಯಲ್ಲಿ 19ನೇ ಪೀಠಾಧಿಪತಿಗಳಾಗಿರುವವರು ಶ್ರೇಷ್ಠ ವಿದ್ವಾಂಸರಾದ ಪುರುಶೋತ್ತಮ ಭಾರತೀ ಸ್ವಾಮಿಗಳು. ಪೂರ್ವಾಶ್ರಮದಲ್ಲಿ  ಕಮ್ಮಂಬಾಟಿ ನಾಗೇಶ್ವರ ಅವಧಾನಿಗಳು. ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಜೀಕೊಂಡೂರು ಮಂಡಲಂನ ವೆಲ್ಲಟೂರು ಗ್ರಾಮದಲ್ಲಿ ಕಮ್ಮಂಬಾಟಿ ಸೇತುಮಾಧವ ಅವಧಾನಿ ಮತ್ತು ಜಗನ್ಮಂಗಳ ಕಲ್ಯಾಣಿ ಬಾಲಾ ತ್ರಿಪುರಸುಂದರಮ್ಮ ದಂಪತಿಗಳ ದ್ವಿತೀಯ ಪುತ್ರನಾಗಿ 9ನೇ ಸೆಪ್ಟೆಂಬರ್ 1953 ಜನಿಸಿದರು.  ವಿಜಯವಾಡಗಳಲ್ಲಿ ತಮ್ಮ ಲೌಕಿಕ ವಿದ್ಯಾಭ್ಯಾಸವನ್ನು ಪೂರೈಸಿದ ನಂತರ ವಿಜಯವಾಡದ ಶೃಂಗೇರಿ ಮಠದಲ್ಲಿ ತಮ್ಮ ತಂದೆಯವರಿಂದಲೇ ವೇದ ವಿದ್ಯೆಯನ್ನು ಅಭ್ಯಾಸ ಮಾಡಿದರು. ಕೃಷ್ಣ ಯಜುರ್ವೇದ, ಕ್ರಮಂತಗಳನ್ನು ಪೂರ್ಣಗೊಳಿಸಿ ರಾಜಮಹೇಂದ್ರಿ, ಶೃಂಗೇರಿ ಮುಂತಾದ ಕಡೆಗಳಲ್ಲಿ ನಡೆದ ಹಲವಾರು ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ವಿದ್ವಾನ್ ಮಂಕಾಬೂಡಿ ಸುಬ್ರಹ್ಮಣ್ಯ ಶಾಸ್ತ್ರಿಗಳು ಹಾಗೂ ವೇಮೂರಿ ವೆಂಕಟೇಶ್ವರ ಸಿದ್ಧಾಂತಿ ಅವರ ಮಾರ್ಗದರ್ಶನದಲ್ಲಿ ಪಂಚ ಕಾವ್ಯ, ಜೋತಿಷ್ಯ ಶಾಸ್ತ್ರವನ್ನು ಕರತಲಾಮಲಕಗೊಳಿಸಿಕೊಂಡರು.

ಇಂದು ಸನಾತನದ ಧರ್ಮದ ಗಣಿತ ಶಾಸ್ತ್ರದ (ವೇದಿಕ್ ಮ್ಯಾಥ್ಸ್) ಬಗ್ಗೆ ಅತಿ ಹೆಚ್ಚು ಚರ್ಚೆ ನಡೆಯುತ್ತಿದೆ. ಆದರೆ ಅದರ ಬಗ್ಗೆ ಅಧಿಕಾರಯುತವಾಗಿ ಮಾತನಾಡುವವರಾಗಲಿ, ಅದರ ಮೇಲೆ ಪ್ರಭುತ್ವ ಸಾಧಿಸಿದವರನ್ನು ಕಾಣುವುದು ಅತಿ ವಿರಳ.   ಲೀಲಾವತಿ ಗಣಿತ ಶಾಸ್ತ್ರದಲ್ಲಿ ಪ್ರಾವೀಣ್ಯತೆ ಹೊಂದಿರುವುದು ಪುರುಶೋತ್ತಮ ಭಾರತೀ ಸ್ವಾಮಿಗಳ ಮತ್ತೊಂದು ವೈಶಿಷ್ಟ್ಯ.  ಇನ್ನು ಶೃಂಗೇರಿ ಪೀಠದ ಶಾಖೆಗೆ ಪೀಠಾಧಿಪತಿಗಳಾಗುವವರಿಗೆ ತರ್ಕ ಶಾಸ್ತ್ರ, ವೇದಾಂತವೇ ಮೊದಲಾದ ವಿಷಯಗಳ ಬಗ್ಗೆ ಪಾಂಡಿತ್ಯವಿರಬೇಕು.  ಮಹಾಮಹೋಪಾಧ್ಯಾಯ ಮುದ್ದುಲಪಲ್ಲಿ ಮಾಣಿಕ್ಯಶಾಸ್ತ್ರಿಗಳ ಬಳಿ ತರ್ಕ ಪ್ರಕರಣ, ವೇದಾಂತ ಶಾಸ್ತ್ರ ಗ್ರಂಥ, ಗೀತಾ ಭಾಷ್ಯ, ಉಪನಿಷತ್ ಭಾಷ್ಯ, ಸೂತ್ರ ಭಾಷ್ಯ, ಪ್ರಸ್ಥಾನ ತ್ರಯ ಮುಂತಾದವುಗಳಲ್ಲಿ ಅದ್ಭುತ ಜ್ನಾನ ಸಂಪಾದಿಸಿಕೊಂಡಿರುವುದು ಪುರುಶೋತ್ತಮ ಭಾರತೀ ಸ್ವಾಮಿಗಳ ಹಿರಿಮೆ. ಜ್ಞಾನ ಸಂಪನ್ನರಾದ ಶ್ರೀಗಳು ಶ್ರೀ ಶೃಂಗೇರಿ ಶಂಕರ ಮಠದ ವೇದ ಪಾಠಶಾಲೆಯಲ್ಲಿ ವೇದ ವಿದ್ಯೆಯನ್ನು ಅನೇಕಾನೇಕ ವಿದ್ಯಾರ್ಥಿಗಳಿಗೆ ಕಲಿಸಿದರು. ಅಷ್ಟೇ ಅಲ್ಲದೇ ತಮ್ಮ ಪುತ್ರರಾದ ಕಮ್ಮಂಬಾಟಿ ಆಂಜನೇಯಶರ್ಮ ಘನಪಾಠಿ ಮತ್ತು ಕಮ್ಮಂಬಾಟಿ ಸೇತುಮಾಧವಶರ್ಮ ಅವಧಾನಿ ಅವರಿಗೂ ಸಹ ವೇದ, ಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಪ್ರವೀಣರಾಗುವಂತೆ ತರಬೇತಿ ನೀಡಿ ಸ್ಮಾರ್ತ ಪರೀಕ್ಷಾಧಿಕಾರಿಯಾಗಿ ಸಲ್ಲಿಸಿದ್ದಾರೆ. 

ಮೈಸೂರಿನೊಂದಿಗೆ ಉತ್ತಮ ಒಡನಾಟ:

ಪುರುಶೋತ್ತಮ ಭಾರತೀ ಸ್ವಾಮಿಗಳು ವಿಜಯವಾಡದವರಾಗಿದ್ದರೂ ಪೂರ್ವಾಶ್ರಮದಲ್ಲಿ ಶ್ರೀಗಳಿಗೂ ಮೈಸೂರಿಗೂ ಅವಿನಾಭಾವ ಸಂಬಂಧವಿದೆ. ಮೈಸೂರಿನಲ್ಲಿರುವ ಅವಧೂತ ದತ್ತಪೀಠಾಧಿಪತಿಗಳಾದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಅವರ ಉತ್ತರಾಧಿಕಾರಿಗಳಾಗಿರುವ ದತ್ತ ವಿಜಯಾನಂದತೀರ್ಥ ಸ್ವಾಮೀಜಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಶ್ರೀಗಳು ಅಲ್ಲಿನ ವೇದ ಪಾಠಶಾಲೆಯಲ್ಲಿ ಬೋಧನಾ ಕಾರ್ಯವನ್ನು ಸಫಲವಾಗಿ ಕೈಗೊಂಡಿದ್ದರು.  ಸನಾತನದ ಧರ್ಮಕ್ಕೆ ಅವಿಸ್ಮರಣೀಯ ಸೇವೆ ಸಲ್ಲಿಸಿ ವಿಷಯ ಸುಖಗಳಲ್ಲಿ ವಿರಕ್ತಿ ಹೊಂದಿ, ತುರೀಯಾಶ್ರಮವನ್ನು ಸ್ವೀಕರಿಸುವುದರ ಬಗೆಗೆ ಶೃಂಗೇರಿ ಜಗದ್ಗುರುಗಳಲ್ಲಿ ನಿವೇದಿಸಿಕೊಂಡರು. ಇತ್ತ ಶಿವಗಂಗೆಯ 18ನೇ ಪೀಠಾಧಿಪತಿಗಳಾಗಿದ್ದ ಸಚ್ಚಿದಾನಂದ ಭಾರತೀ ಸ್ವಾಮಿಗಳ ಆರೋಗ್ಯವೂ ಹದಗೆಟ್ಟೆತ್ತು. ಶ್ರೀಗಳು 2013ರ ಫೆ.23ರಂದು ಬ್ರಹ್ಮೈಕ್ಯರಾದರು. ಶೃಂಗೇರಿ ಜಗದ್ಗುರುಗಳಾದ ಭಾರತಿ ತೀರ್ಥ ಸ್ವಾಮಿಗಳು ವಿಶಾಖ ಪಟ್ಟಣದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳ ಮೂಲಕ 2014ರ ಮಾ.3ರಂದು ಕಮ್ಮಂಬಾಟಿ ನಾಗೇಶ್ವರ ಅವಧಾನಿಗಳಿಗೆ ತುರಿಯಾಶ್ರಮವನ್ನು ಅನುಗ್ರಹಿಸಿ, ಶ್ರೀ ಪುರುಶೋತ್ತಮ ಭಾರತೀ ಸ್ವಾಮಿಗಳೆಂಬ ಯೋಗಪಟ್ಟವನ್ನು ನೀಡಿದರು. ಪುರುಷೋತ್ತಮ ಭಾರತೀ ಸ್ವಾಮಿಗಳು ತಮ್ಮ ಪರಂಪರೆಯ ಗುರುಗಳಾದ ಸಚ್ಚಿದಾನಂದ ಭಾರತೀ ಸ್ವಾಮಿಗಳಿಂದ ವಿಧಿವತ್ತಾಗಿ ಸನ್ಯಾಸಾಶ್ರಮವನ್ನು ಸ್ವೀಕರಿಸಲು ಸಾಧ್ಯವಾಗದೇ ಇದ್ದರೂ, ತಮ್ಮ ಗುರುಗಳ ಅಭಿದಾನವನ್ನೇ ಪಡೆದಿದ್ದ ಯತಿಗಳಿಂದ ಸನ್ಯಾಸಾಶ್ರಮ ಸ್ವೀಕರಿಸಿದ್ದೂ ವಿಶೇಷ ಸಂಗತಿ. 2014ರ ಏಪ್ರಿಲ್ 24ರಂದು(ವಿಜಯ ಸಂವತ್ಸರ ಫಾಲ್ಗುಣ ಶುದ್ಧ ಬಿದಿಗೆ ) ಪುರುಶೋತ್ತಮ ಭಾರತೀ ಸ್ವಾಮಿಗಳಿಗೆ ಶೃಂಗೇರಿ ಶಿವಗಂಗಾಪೀಠದ 19ನೇ ಪೀಠಾಧಿಪತಿಗಳಾಗಿ ಪಟ್ಟಾಭಿಷೇಕ ನೆರವೇರಿತು. ನವಯತೀಶ್ವರರನ್ನು ಎದುರು ನೋಡುತ್ತಿದ್ದ ಶೃಂಗೇರಿ ಶಿವಗಂಗೆಯ ಶಾರದಾಪೀಠಕ್ಕೆ 'ಪುರುಷೋತ್ತಮ'ರಾದ ಪುರುಷೋತ್ತಮ ಭಾರತೀ ಸ್ವಾಮಿಗಳು ಪೀಠಾಧಿಪತಿಗಳಾದರು. ಅಂದು ಪುರುಶೋತ್ತಮ ಭಾರತೀ ಸ್ವಾಮಿಗಳ ಪೀಠಾರೋಹಣದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರೀಮಠದಲ್ಲಿ ನಡೆದಿತ್ತು. 2015ರ ಏ.14ಕ್ಕೆ ಈ ಅವಿಸ್ಮರಣೀಯ ಘಟನೆಗೆ ಒಂದು ವರ್ಷ. ವಾರ್ಷಿಕೋತ್ಸವದ ಅಂಗವಾಗಿ ಈ ವರ್ಷ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತವೃಂದ ಎದುರು ನೋಡುತ್ತಿದೆ.